ಮಂಗಳೂರು : ಗರೋಡಿಯಲ್ಲಿ ನಡೆದಿರುವ ಭಯೋತ್ಪಾದಕ ಸ್ಪೋಟಕ್ಕೂ, ಪ್ರೇಮ್ ರಾಜ್ ಹುಟಗಿಯವರಿಗೂ ಯಾವುದೇ ಸಂಬಂಧವಿಲ್ಲ ಎಂದು ಕರ್ನಾಟಕದ ಡಿಜಿಪಿ ಸ್ಪಷ್ಟ ಪಡಿಸಿದ್ದಾರೆ.
ಆಟೋರಿಕ್ಷಾವೊಂದರಲ್ಲಿ ಶನಿವಾರ ಸಂಜೆ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು ಇಬ್ಬರು ಗಾಯಗೊಂಡಿದ್ದು, ʼಇದೊಂದು ಭಯೋತ್ಪಾದನಾ ಕೃತ್ಯʼ ಎಂದು ಕರ್ನಾಟಕದ ಡೆಪ್ಯೂಟಿ ಜನರಲ್ ಆಫ್ ಪೊಲೀಸ್(ಡಿಜಿಪಿ) ಭಾನುವಾರ ಸ್ಪಷ್ಟಪಡಿಸಿದ್ದರು.
ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಸಿದಾಗ ಪ್ರೇಮರಾಜ ಹುಟಗಿ ಹೆಸರಿನ ಆಧಾರ್ ಕಾರ್ಡ್ ಒಂದು ಸಿಕ್ಕಿದ್ದು, ಅದರ ವಿಳಾಸದ ಆಧಾರದಲ್ಲಿ ಪ್ರೇಮರಾಜ, ಅವರ ಸಹೋದರ ಲವರಾಜ ಮತ್ತು ತಂದೆ ತಾಯಿಯನ್ನು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ.
ಈ ಕುರಿತು ಮಾಹಿತಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿರುವ ಪ್ರೇಮ್ರಾಜ್ ಅವರ ತಂದೆ ಮಾರುತಿ ಹುಟಗಿ, ʼಪ್ರೇಮ್ರಾಜ್ ನನ್ನ ಮಗನಾಗಿದ್ದು, ಅವನ ಆಧಾರ್ ಕಾರ್ಡ್ ಕಳೆದ ಆರು ತಿಂಗಳ ಹಿಂದೆಯೇ ಕಳುವಾಗಿದೆʼ ಎಂದಿದ್ದಾರೆ.
ಸಹೋದರ ಲವರಾಜ, ʼಪ್ರೇಮ್ರಾಜ್ ಮೂರು ವರ್ಷಗಳಿಂದ ತುಮಕೂರಿನಲ್ಲಿಯೇ ಇದ್ದೇನೆ . ಈಗಾಗಲೇ ಈ ಘಟನೆಗೆ ಸಂಭದಿಸಿ ತುಮಕೂರಿನ ಠಾಣೆಗೆ ತೆರಳಿ ಮಾಹಿತಿ ಹಂಚಿಕೊಂಡಿದ್ದು, ಅವನ ಆಧಾರ್ ಕಾರ್ಡ್ ಅನ್ನು ಯಾರೋ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆʼ ಎಂದು ಹೇಳಿದ್ದಾರೆ.
ಪ್ರೇಮ್ರಾಜ್, ಹುಬ್ಬಳ್ಳಿ ವಿಳಾಸ ಇರುವ ಆಧಾರ್ಕಾರ್ಡ್ ತೋರಿಸಿ ಮೈಸೂರಿನ ಲೋಕನಾಯಕನಗರದ 10ನೇ ಕ್ರಾಸ್ ನ ಮೋಹನ್ ಕುಮಾರ್ ಅವರ ಬಳಿ 1800ರೂ. ಕೊಟ್ಟು ರೂಂ ಬಾಡಿಗೆಗೆ ಪಡೆದು ವಾಸವಾಗಿದ್ದನು ಎಂದು ಹೇಳಲಾಗುತ್ತಿದೆ.
ಅದಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು, ಪ್ರತಿಮೆ ಅನಾವರಣಗೊಳಿಸಲು ಶನಿವಾರದಂದು ಮಂಗಳೂರಿಗೆ ತೆರಳಿದ್ದಾಗಲೇ ಈ ರೀತಿಯ ಭಯೋತ್ಪಾದಕ ಸ್ಪೋಟ ಸಂಭವಿಸಿರುವುದು ಆತಂಕ ಸೃಷ್ಟಿ ಮಾಡುತ್ತಿದೆ.
ಘಟನೆಯ ಬಗ್ಗೆ ಹಲವಾರು ರೀತಿಯ ಮಾಹಿತಿಗಳು ಉಹಾಪೋಹಗಳು ಎಲ್ಲೆಡೆ ಹರಿದಾಡುತ್ತಿದ್ದು,ಈ ಎಲ್ಲದರ ಮಧ್ಯೆ ಹೆಚ್ಚಿನ ತನಿಖೆ ನಡೆಸುತ್ತಿರುವ ಪೊಲೀಸ್ ಅಧಿಕಾರಿಗಳು, ಪ್ರೇಮ್ರಾಜ್ ಬಗ್ಗೆಯೂ ಹೆಚ್ಚಿನ ತನಿಖೆ ನಡೆಸಿದ್ದಾರೆ.
ನಂತರ ಈ ಬಗ್ಗೆ ಮಾಹಿತಿ ನೀಡಿರುವ ಕರ್ನಾಟಕದ ಡಿಜಿಪಿ, ʼಪ್ರೇಮ್ರಾಜ್ಗೂ ನಡೆದಿರುವ ಭಯೋತ್ಪಾದಕ ಕೃತ್ಯ (act of terror)ಕ್ಕೂ ಯಾವುದೇ ಸಂಬಂಧವಿಲ್ಲʼ ಎಂದು ಸ್ಪಷ್ಟ ಪಡಿಸಿದ್ದಾರೆ.