Home ಬ್ರೇಕಿಂಗ್ ಸುದ್ದಿ ಚುನಾವಣಾ ರಾಜಕೀಯಕ್ಕೆ ಗುಡ್‌ ಬೈ ಹೇಳಿದ ಬಚ್ಚೇಗೌಡ! ಬಿಜೆಪಿ ವಿರುದ್ಧ ಬೆಂಕಿಯಾದ ಹಿರಿಯ ರಾಜಕಾರಣಿ

ಚುನಾವಣಾ ರಾಜಕೀಯಕ್ಕೆ ಗುಡ್‌ ಬೈ ಹೇಳಿದ ಬಚ್ಚೇಗೌಡ! ಬಿಜೆಪಿ ವಿರುದ್ಧ ಬೆಂಕಿಯಾದ ಹಿರಿಯ ರಾಜಕಾರಣಿ

0

ಹೊಸಕೋಟೆ/ಚಿಕ್ಕಬಳ್ಳಾಪುರ: ಹಿರಿಯ ರಾಜಕಾರಣಿ ಹಾಗೂ ಸಂಸದ ಬಿ ಎನ್‌ ಬಚ್ಚೇಗೌಡ ಚುನಾವಣಾ ರಾಜಕೀಯದಿಂದ ನಿವೃತ್ತರಾಗುವುದಾಗಿ ಘೋಷಿಸಿದ್ದಾರೆ.

ರಾಜಕೀಯ ಜೀವನ ಸಾಕಾಗಿದ್ದು, ಇದುವರೆಗೂ ರಾಜಕೀಯದಲ್ಲಿ ಬಹಳ ಶ್ರಮ ಪಟ್ಟಿದ್ದೇನೆ. ಮುಂದೆ ವಿಶ್ರಾಂತಿ ಜೀವನ ನಡೆಸಲು ಉದ್ದೇಶಿಸಿದ್ದು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿರುವುದಾಗಿ ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡ ಘೋಷಣೆ ಮಾಡಿದ್ದಾರೆ.

ಆದರೆ ಈ ನಿರ್ಧಾರಕ್ಕೆ ಕಾರಣ ಮುಂದಿನ ಚುನಾವಣೆಗೆ ಬಿಜೆಪಿ ಅವರಿಗೆ ಟಿಕೆಟ್‌ ನಿರಾಕರಿಸಿರುವುದೇ ಆಗಿದೆ ಎನ್ನಲಾಗುತ್ತಿದೆ.

ಈ ಕುರಿತು ಮಾತನಾಡಿರುವ ಅವರು “ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಾರ ಪಕ್ಷದಲ್ಲಿ 70 ವರ್ಷ ವಯಸ್ಸಿಗೆ ನಿವೃತ್ತಿಯಾಗಬೇಕು. ಈಗ ನನಗೆ 81 ವರ್ಷ ವಯಸ್ಸಾಗಿದೆ. ಅರ್ಥಪೂರ್ಣ ಸಮಾರಂಭವನ್ನೂ ಆಚರಣೆ ಮಾಡಿಕೊಂಡಿದ್ದೇವೆ. ನನಗೆ ಪಕ್ಷದಲ್ಲಿ ಟಿಕೆಟ್ ಕೊಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿಬಿಟ್ಟಿದ್ದಾರೆ. ಹೀಗಾಗಿ ಚುನಾವಣಾ ರಾಜಕಾರಣದಿಂದ ನಿವೃತ್ತಿಯಾಗುತ್ತಿದ್ದೇನೆ. ಪ್ರಧಾನಿ ಮೋದಿ ಅವರು ಬಿಜೆಪಿಯಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಘೋಷಣೆ ಮಾಡಿದ್ದಾರೆ. ತಂದೆ, ಮಗ, ಮೊಮ್ಮಗ, ಮೊಮ್ಮಗಳು ರಾಜಕಾರಣಕ್ಕೆ ಅವಕಾಶ ಇಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಚುನಾವಣಾ ರಾಜಕೀಯದಲ್ಲಿ ಇರದಿದ್ದರೂ ರಾಜಕಾರಣದಲ್ಲಿ ಸಕ್ರಿಯವಾಗಿ ಕೆಲಸ ಮಾಡಿಕೊಂಡು ಇರುತ್ತೇನೆ” ಎಂದು ಹೇಳಿದ್ದಾರೆ.

ಬಿ.ಎನ್ ಬಚ್ಚೇಗೌಡ ಅವರು ಜನತಾ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಆಗ ಎಚ್‌.ಡಿ ದೇವೇಗೌಡರ ಗುಂಪಿನ ಭಾಗವಾಗಿದ್ದರು. ನಂತರ ಬಿಜೆಪಿ ಸೇರಿದ ಅವರು 2008ರಿಂದ ಬಿಜೆಪಿ ಸದಸ್ಯರಾಗಿ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಅವರು 5 ಬಾರಿ (1978, 1985, 1994, 1999, 2008 ರಲ್ಲಿ) ಹೊಸಕೋಟೆ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದರು.

ಅಲ್ಲದೆ ಇವರು 1989, 2004, 2013 ರಲ್ಲಿ ಹೊಸಕೋಟೆಯಲ್ಲಿ ಸೋತ ಅಭ್ಯರ್ಥಿಯಾಗಿದ್ದರು. ಅವರು 2013ರಲ್ಲಿ ಜಗದೀಶ್ ಶೆಟ್ಟರ್ ಅವರ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದರು ಹಾಗೂ ಅದೇ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹೊಸಕೋಟೆಯಿಂದ ಸೋತರು. ಅವರು 2014ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಚಿಕ್ಕಬಳ್ಳಾಪುರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತರು. ಬಳಿಕ 2019ರಲ್ಲಿ ಮರಳಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ರಾಜಕೀಯವಾಗಿ ಬಹಳಷ್ಟು ಅಧಿಕಾರದ ಖುರ್ಚಿಯನ್ನು ಹತ್ತಿಳಿದಿರುವ ಬಚ್ಚೇಗೌಡರು ಒಂದು ಕಾಲದಲ್ಲಿ ಹೊಸಕೋಟೆಯ ಪ್ರಶ್ನಾತೀತ ರಾಜಕೀಯ ನಾಯಕನಾಗಿ ಮೆರೆದಿದ್ದರು. ಪ್ರಸ್ತುತ ಅವರ ಶರತ್‌ ಬಚ್ಚೇಗೌಡ ಅವರು ಅಲ್ಲಿ ಕಾಂಗ್ರೆಸ್‌ ಪಕ್ಷದಿಂದ ಶಾಸಕನಾಗಿ ಅಧಿಕಾರ ಚಲಾಯಿಸುತ್ತಿದ್ದಾರೆ.

ಇತ್ತ ನಿವೃತ್ತಿ ಘೋಷಿಸುತ್ತಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಬಹಳವಾಗಿ ಹೊಗಳಿರುವ ಅವರು ರಾಮಕೃಷ್ಣ ಹೆಗಡೆಯವರ ನಂತರ ಸಿದ್ಧರಾಮಯ್ಯನವರೇ ಬಹಳ ಒಳ್ಳೆಯ ರಾಜಕಾರಣಿ. ಅವರಿಗೆ ಆಡಳಿತ ಹೇಗೆ ಮಾಡಬೇಕೆನ್ನುವುದು ಗೊತ್ತು ಎಂದು ಹೊಗಳಿದ್ದಾರೆ.

ಈ ಮೊದಲು ವಿಧಾನಸಭಾ ಚುನಾವಣೆಯ ಆಸುಪಾಸಿನಲ್ಲಿ ಬಚ್ಚೇಗೌಡರು ಕಾಂಗ್ರೆಸ್ಸಿಗೆ ಬರಲಿದ್ದಾರೆ ಹಾಗೂ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸಂಸದ ಸ್ಥಾನಕ್ಕೆ ಕಾಂಗ್ರೆಸ್‌ ಮೂಲಕ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿತ್ತು.

ಇನ್ನೊಂದೆಡೆ ಬಿಜೆಪಿ ಕುರಿತು ಕಿಡಿಕಾರಿದ ಅವರು “ಮೂರು ತಿಂಗಳ ಹತ್ತತ್ರ ನಾಲ್ಕನೇ ತಿಂಗಳಾಗ್ತಾ ಇದೆ, ಬಿಜೆಪಿ ಪ್ರತಿ ಪಕ್ಷದ ನಾಯಕನನ್ನು ಮಾಡಲು ಆಗಲಿಲ್ಲ. ಬಿಜೆಪಿಗೆ ಸೆಟ್ ಬ್ಯಾಕ್ ಆಗಿದೆ. ಕಾರ್ಯಕರ್ತರನ್ನು ಹಿಡಿದಿಟ್ಟುಕೊಳ್ಳಲು ಆಗುತ್ತಿಲ್ಲ. ಬಾಂಬೇ ಬಾಯ್ಸ್ ಬಿಜೆಪಿಯಲ್ಲಿ ಇರೋದು ಮೂಲ ಬಿಜೆಪಿ ಕಾರ್ಯಕರ್ತರಿಗೆ ಇಷ್ಟವಿಲ್ಲ. ಎಸ್ ಟಿ ಸೋಮಶೇಖರ್, ಹೆಬ್ಬಾರ್ ಇನ್ನೂ ಜೆಡಿಎಸ್ ನವರು ಬಿಜೆಪಿಯವರು ಕಾಂಗ್ರೆಸ್‌ಗೆ ಬರುತ್ತಾರೆ” ಎಂದರು.

You cannot copy content of this page

Exit mobile version