ಬಾಂಬ್ ಬೆದರಿಕೆ: ಅಮೆರಿಕ ವಿಮಾನ ತುರ್ತು ಭೂಸ್ಪರ್ಶ, ದೆಹಲಿ ಪೊಲೀಸರಿಂದ ಎಫ್‌ಐಆರ್ ದಾಖಲು

ನ್ಯೂಯಾರ್ಕ್ ನಿಂದ ನವದೆಹಲಿಗೆ ಹೊರಟಿದ್ದ ಅಮೇರಿಕನ್ ಏರ್ಲೈನ್ಸ್ ವಿಮಾನವು ಬಾಂಬ್ ಬೆದರಿಕೆಯ ನಂತರ ರೋಮ್ ನಲ್ಲಿ ತುರ್ತು ನಿಲುಗಡೆ ಮಾಡಬೇಕಾಯಿತು. ಇದಾಗಿ ಒಂದು ದಿನದ ನಂತರ ದೆಹಲಿ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಭಾನುವಾರ ಇಮೇಲ್ ಮೂಲಕ ಬೆದರಿಕೆ ಕರೆ ಬಂದಿದೆ ಎಂದು ಉಪ ಪೊಲೀಸ್ ಆಯುಕ್ತ (ಐಜಿಐ ವಿಮಾನ ನಿಲ್ದಾಣ) ಉಷಾ ರಂಗಾನಿ ಹೇಳಿದ್ದಾರೆ ಎಂದು ಪತ್ರಿಕೆ ಉಲ್ಲೇಖಿಸಿದೆ.

ಭದ್ರತಾ ಶಿಷ್ಟಾಚಾರಕ್ಕೆ ಅನುಗುಣವಾಗಿ ವಿಮಾನವನ್ನು ಇಟಾಲಿಯ ರಾಜಧಾನಿಗೆ ತಿರುಗಿಸಲಾಯಿತು.

ವಿಮಾನಯಾನ ಸಂಸ್ಥೆ ಸಲ್ಲಿಸಿದ ದೂರಿನ ಆಧಾರದ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾರತೀಯ ನ್ಯಾಯ ಸಂಹಿತಾ ಕಾಯ್ದೆಯಡಿಯಲ್ಲಿ ಸುಳ್ಳು ಮಾಹಿತಿ ಮತ್ತು ಅನಾಮಧೇಯ ಸಂವಹನದ ಮೂಲಕ ಕ್ರಿಮಿನಲ್ ಬೆದರಿಕೆ ಹಾಗೂ ನಾಗರಿಕ ವಿಮಾನಯಾನ ಸುರಕ್ಷತೆಯ ವಿರುದ್ಧ ಕಾನೂನುಬಾಹಿರ ಕೃತ್ಯಗಳ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.‌

ಬೋಯಿಂಗ್ 787-9 ಡ್ರೀಮ್‌ಲೈನರ್ ವಿಮಾನದಲ್ಲಿ 199 ಪ್ರಯಾಣಿಕರು ಮತ್ತು 15 ಸಿಬ್ಬಂದಿ ಇದ್ದರು. ಕ್ಯಾಸ್ಪಿಯನ್ ಸಮುದ್ರದ ಮೇಲೆ ಹಾರುತ್ತಿದ್ದಾಗ, ವಿಮಾನವು ಹಿಮ್ಮುಖವಾಗಿ ಚಲಿಸಿ ಭಾನುವಾರ ಸಂಜೆ 5.15 ರ ಸುಮಾರಿಗೆ (ಸ್ಥಳೀಯ ಸಮಯ) ರೋಮ್‌ನ ಲಿಯೊನಾರ್ಡೊ ಡಾ ವಿನ್ಸಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿತು ಎಂದು ಫ್ಲೈಟ್‌ರಾಡರ್ 24 ದತ್ತಾಂಶವು ತೋರಿಸಿದೆ.

ವಿಮಾನವು ಇಟಾಲಿಯನ್ ವಾಯುಪ್ರದೇಶವನ್ನು ಸಮೀಪಿಸಿದಾಗ ಸುರಕ್ಷತಾ ಶಿಷ್ಟಾಚಾರದ ಭಾಗವಾಗಿ ವಿಮಾನವನ್ನು ಬೆಂಗಾವಲು ಮಾಡಲು ಫೈಟರ್ ಜೆಟ್‌ಗಳನ್ನು ಓಡಿಸಲಾಯಿತು.

ಇಟಾಲಿಯನ್ ಭದ್ರತಾ ಪಡೆಗಳು ವಿಮಾನದ ಭದ್ರತಾ ಪರಿಶೀಲನೆ ನಡೆಸಿದ ನಂತರ, ವಿಮಾನವು ತನ್ನ ಪ್ರಯಾಣವನ್ನು ಪುನರಾರಂಭಿಸಲು ಅವಕಾಶ ನೀಡಲಾಯಿತು.

ಬದಲಿ ವಿಮಾನವು ಮಂಗಳವಾರ ದೆಹಲಿಗೆ ಹೊರಡಬೇಕಿತ್ತು. ಸೋಮವಾರದ ಬದಲಿ ವಿಮಾನ ರದ್ದಾಯಿತು. ಈ ಮಧ್ಯೆ, ಪ್ರಯಾಣಿಕರಿಗೆ ಸ್ಥಳೀಯ ಹೋಟೆಲ್‌ಗಳು ಮತ್ತು ವಿಮಾನ ನಿಲ್ದಾಣದ ವಿಶ್ರಾಂತಿ ಕೊಠಡಿಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿತ್ತು.

ಅಕ್ಟೋಬರ್‌ನಲ್ಲಿ, ಭಾರತೀಯ ವಿಮಾನಯಾನ ಸಂಸ್ಥೆಗಳು ನಿರ್ವಹಿಸುತ್ತಿದ್ದ ನೂರಾರು ವಿಮಾನಗಳಿಗೆ ಬಾಂಬ್ ಬೆದರಿಕೆಗಳು ಬಂದವು. ಹೆಚ್ಚಿನ ಬೆದರಿಕೆಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಲಾಗಿದ್ದವು. ಇದರ ಪರಿಣಾಮವಾಗಿ ಹಲವಾರು ವಿಮಾನಗಳ ಸಂಚಾರವನ್ನು ಬೇರೆಡೆಗೆ ತಿರುಗಿಸಲಾಯಿತು ಅಥವಾ ವಿಳಂಬಗೊಳಿಸಲಾಯಿತು.

ವಂಚನೆಗಳ ಬಗ್ಗೆ ಮುಂಬೈ ಮತ್ತು ದೆಹಲಿಯಲ್ಲಿ ಪೊಲೀಸರು ಒಂದು ಡಜನ್‌ಗೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ಅಕ್ಟೋಬರ್ ಅಂತ್ಯದಲ್ಲಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮ್ ಮೋಹನ್ ಕಿಂಜರಪು ನಾಯ್ಡು, ವಿಮಾನಗಳಿಗೆ ವಂಚನೆ ಬೆದರಿಕೆ ಹಾಕಿದ ತಪ್ಪಿತಸ್ಥ ವ್ಯಕ್ತಿಗಳನ್ನು ಹಾರಾಟ ನಿಷೇಧಿತ ಪಟ್ಟಿಗೆ ಸೇರಿಸಲು ಕೇಂದ್ರ ಸರ್ಕಾರವು ಶಾಸಕಾಂಗ ಕ್ರಮ ಕೈಗೊಳ್ಳುವ ಬಗ್ಗೆ ಪರಿಗಣಿಸುತ್ತಿದೆ ಎಂದು ಹೇಳಿದರು .

Related Articles

ಇತ್ತೀಚಿನ ಸುದ್ದಿಗಳು