2013ರ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ‘ತೆಹಲ್ಕಾ’ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ಮುಂಬೈ ಹೈಕೋರ್ಟ್, ಅವರಿಗೆ 10 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿದೆ. ಈ ಮೂಲಕ 2021ರಲ್ಲಿ ಗೋವಾ ಸಷನ್ಸ್ ನ್ಯಾಯಾಲಯ ನೀಡಿದ್ದ ಖುಲಾಸೆ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ.
ನ್ಯಾಯಮೂರ್ತಿಗಳಾದ ನೀಲಾ ಗೋಖಲೆ ಮತ್ತು ಅಮಿತ್ ಜಾಂಸಂದೇಕರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ತೇಜ್ಪಾಲ್ ಅವರನ್ನು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 376(2)(f), 354A ಮತ್ತು 354B ಅಡಿಯಲ್ಲಿ ದೋಷಿ ಎಂದು ತೀರ್ಪು ನೀಡಿದೆ. ಶಿಕ್ಷೆ ಪ್ರಕಟಿಸಿದ ನ್ಯಾಯಾಲಯವು ಅವರಿಗೆ ಶರಣಾಗಲು ಎರಡು ವಾರಗಳ ಕಾಲಾವಕಾಶ ನೀಡಿದೆ.
ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಯ ಹೇಳಿಕೆ ಮತ್ತು ಪುರಾವೆಗಳನ್ನು ಪರಿಗಣಿಸುವ ಬದಲಿಗೆ ಅವರ ನಡವಳಿಕೆಯನ್ನೇ ತಪ್ಪಾಗಿ ವಿಶ್ಲೇಷಿಸಿ ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು ಎಂದು ವಾದಿಸಿ ಗೋವಾ ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿತ್ತು.
ತೇಜ್ಪಾಲ್ಗೆ 10 ವರ್ಷ ಶಿಕ್ಷೆ
ತೀರ್ಪಿನ ನಂತರ ಹೈಕೋರ್ಟ್ ಮುಂದೆ ವಿನಂತಿಸಿಕೊಂಡ ತರುಣ್ ತೇಜ್ಪಾಲ್, “ನನಗೆ ಈಗ 62 ವರ್ಷ. ನನಗೆ ಇಬ್ಬರು ಹೆಣ್ಣುಮಕ್ಕಳು ಹಾಗೂ ಪತ್ನಿ ಇದ್ದಾರೆ. ನಾನು ರಾಜಕೀಯ ಸಂಚಿಗೆ ಬಲಿಯಾಗಿದ್ದೇನೆ,” ಎಂದು ಹೇಳಿ ಶಿಕ್ಷೆಯ ಪ್ರಮಾಣ ತಗ್ಗಿಸುವಂತೆ ಕೋರಿದರು.
ತೇಜ್ಪಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ಆಬಾದ್ ಪೋಂಡಾ, ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕಾಲಾವಕಾಶ ನೀಡಲು ಮತ್ತು ಶಿಕ್ಷೆಯನ್ನು ಕೆಲವು ವಾರಗಳ ಕಾಲ ಅಮಾನತಿನಲ್ಲಿಡಲು ಮನವಿ ಮಾಡಿದರು. ವಿಚಾರಣೆಯ ಉದ್ದಕ್ಕೂ ತೇಜ್ಪಾಲ್ ಜಾಮೀನಿನ ಮೇಲಿದ್ದು, ನ್ಯಾಯಾಲಯದ ಎಲ್ಲಾ ಷರತ್ತುಗಳನ್ನು ಪಾಲಿಸಿದ್ದಾರೆ ಎಂದು ವಾದಿಸಿದರು. ಆದರೆ, ಹೈಕೋರ್ಟ್ ಅವರಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ಖಾಯಂಗೊಳಿಸಿತು.
ಗರಿಷ್ಠ ಶಿಕ್ಷೆಗೆ ಪಟ್ಟು ಹಿಡಿದಿದ್ದ ಗೋವಾ ಸರ್ಕಾರ
ಗೋವಾ ಸರ್ಕಾರದ ಪರವಾಗಿ ಹಾಜರಾಗಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಲೈಂಗಿಕ ದೌರ್ಜನ್ಯ ಎಸಗುವವರ ವಿರುದ್ಧ ಸಮಾಜಕ್ಕೆ ಪ್ರಬಲ ಸಂದೇಶ ರವಾನಿಸಲು ತೇಜ್ಪಾಲ್ಗೆ ಗರಿಷ್ಠ ಶಿಕ್ಷೆ ವಿಧಿಸಬೇಕೆಂದು ಪಟ್ಟು ಹಿಡಿದರು.
“ಅಪರಾಧಿಯು ಸಂತ್ರಸ್ತೆಯ ಮೇಲೆ ಆಡಳಿತಾತ್ಮಕ ಅಧಿಕಾರ ಹೊಂದಿದ್ದ ವ್ಯಕ್ತಿ. ಸಂತ್ರಸ್ತೆ ಕೇವಲ ಸಹದ್ಯೋಗಿ ಮಾತ್ರವಲ್ಲ, ಆತನ ಮಗಳ ಸ್ನೇಹಿತೆಯೂ ಆಗಿದ್ದಳು. ಇಷ್ಟೆಲ್ಲಾ ಆದರೂ ಅಪರಾಧಿಯಲ್ಲಿ ಯಾವುದೇ ಪಶ್ಚಾತ್ತಾಪ ಕಾಣಿಸುತ್ತಿಲ್ಲ,” ಎಂದು ಮೆಹ್ತಾ ವಾದಿಸಿದರು. “ಲೈಂಗಿಕ ದೌರ್ಜನ್ಯದ ವಿಷಯದಲ್ಲಿ ‘ನೋ ಎಂದರೆ ನೋ’ (No means No) ಎಂಬ ಸ್ಪಷ್ಟ ಸಂದೇಶ ತಲುಪಿಸಲು ಇದು ಸೂಕ್ತ ಸಮಯ,” ಎಂದರು.
ಸಂತ್ರಸ್ತೆ ಲೈಂಗಿಕ ದೌರ್ಜನ್ಯದ ನಂತರ ಹೇಗೆ ನಡೆದುಕೊಳ್ಳಬೇಕಿತ್ತು ಎಂಬ ಕಲ್ಪನೆಗಳ ಆಧಾರದ ಮೇಲೆ ವಿಚಾರಣಾ ನ್ಯಾಯಾಲಯವು ಸಂತ್ರಸ್ತೆಯನ್ನೇ ಅಪರಾಧಿಯಂತೆ ವಿಚಾರಣೆಗೆ ಒಳಪಡಿಸಿತ್ತು. ಜೊತೆಗೆ, ತೇಜ್ಪಾಲ್ ಕಳುಹಿಸಿದ್ದ ಕ್ಷಮಾದಾನದ ಇಮೇಲ್ ಸೇರಿದಂತೆ ಪ್ರಮುಖ ಸಾಕ್ಷ್ಯಗಳನ್ನು ಕೆಳ ನ್ಯಾಯಾಲಯ ಸರಿಯಾಗಿ ಪರಿಗಣಿಸಿರಲಿಲ್ಲ ಎಂದು ಸರ್ಕಾರ ಮೇಲ್ಮನವಿಯಲ್ಲಿ ವಾದಿಸಿತ್ತು.
2013ರ ಥಿಂಕ್ಫೆಸ್ಟ್ ಘಟನೆ
2013ರ ನವೆಂಬರ್ನಲ್ಲಿ ಗೋವಾದಲ್ಲಿ ನಡೆದ ತೆಹಲ್ಕಾ ಪತ್ರಿಕೆಯ ‘ಥಿಂಕ್ಫೆಸ್ಟ್’ (ThinkFest) ಕಾರ್ಯಕ್ರಮದ ವೇಳೆ ಹೋಟೆಲ್ ಒಂದರ ಲಿಫ್ಟ್ನಲ್ಲಿ ತರುಣ್ ತೇಜ್ಪಾಲ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಎಸಗಿದ್ದಾರೆ ಎಂದು ಕಿರಿಯ ಸಹದ್ಯೋಗಿ ಮಹಿಳೆ ದೂರು ನೀಡಿದ್ದರು.
ಆರೋಪಗಳು ಕೇಳಿಬಂದ ತಕ್ಷಣ ತೇಜ್ಪಾಲ್ ಸಂಪಾದಕ ಹುದ್ದೆಗೆ ರಾಜೀನಾಮೆ ನೀಡಿದ್ದರು ಮತ್ತು ಗೋವಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಬಳಿಕ ಬಂಧನಕ್ಕೊಳಗಾಗಿದ್ದ ತೇಜ್ಪಾಲ್, ಸುಪ್ರೀಂ ಕೋರ್ಟ್ ಜಾಮೀನು ನೀಡುವ ಮೊದಲು ಹಲವು ತಿಂಗಳು ಜೈಲಿನಲ್ಲಿದ್ದರು.
2021ರಲ್ಲಿ ಗೋವಾದ ಸಷನ್ಸ್ ನ್ಯಾಯಾಲಯವು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಮತ್ತು ಸಂತ್ರಸ್ತೆಯ ಹೇಳಿಕೆಯಲ್ಲಿನ ಗೊಂದಲಗಳನ್ನು ಎತ್ತಿಹಿಡಿದು ತೇಜ್ಪಾಲ್ ಅವರನ್ನು ಖುಲಾಸೆಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು.
ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲಿರುವ ತೇಜ್ಪಾಲ್
ಹೈಕೋರ್ಟ್ ತೀರ್ಪಿನ ನಂತರ ಪ್ರತಿಕ್ರಿಯಿಸಿದ ತೇಜ್ಪಾಲ್, ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ. “ನಾವು ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುತ್ತೇವೆ. ನ್ಯಾಯಾಲಯದ ಆದೇಶ ತಪ್ಪಾಗಿದೆ ಎಂದು ಭಾವಿಸುತ್ತೇವೆ,” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.
