ಬೆಂಗಳೂರು: ಕೇಂದ್ರ ಸಚಿವ ಅಮಿತ್ ಶಾ ಕರ್ನಾಟಕಕ್ಕೆ ಬಂದು ಹೋದ ಬೆನ್ನಲ್ಲೆ ಸಿಎಂ ಬದಲಾವಣೆಯ ವದಂತಿಗಳು ಹಬ್ಬಿವೆ. ಸದ್ಯ ಬಿಜೆಪಿಯಲ್ಲಿನ ಬೆಳವಣಿಗೆಗಳನ್ನು ಗಮನಿಸಿ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬಸವರಾಜ ಬೊಮ್ಮಾಯಿ ಅವರನ್ನ ಕೇಶವ ಕೃಪಾದವರು ‘ಸಂಘ ಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ ಎಂದು ಟೀಕಿಸಿದೆ.
‘ಪಪ್ಪೆಟ್ ಸಿಎಂ ಬಸವರಾಜ ಬೊಮ್ಮಾಯಿ ಅವರ ಬೊಂಬೆಯಾಟ ಮುಗಿಯುತ್ತಿದೆ, ಅವರ ಅಧಿಕಾರ ಮುಗಿಯುವ ಮುನ್ನವೇ ೩ನೇ ಸಿಎಂ ಸೀಟು ಹತ್ತುವ ಕಾಲ ಹತ್ತಿರದಲ್ಲಿದೆ’ ಎಂದು ಕಾಂಗ್ರೆಸ್ ಮಾಡಿರುವ ಟ್ವೀಟ್ ಈಗ ಸಂಚಲನ ಸೃಷ್ಟಿಸಿದೆ.
ಈ ಬದಲಾವಣೆಯಲ್ಲಿ ಸರ್ಕಾರದ ವೈಫಲ್ಯವೋ ಅಥವಾ ಹೈಕಮಾಂಡ್ನ ಸಿಎಂ ಬದಲಾವಣೆಯ ಸಂಪ್ರದಾಯವೋ ಎಂದು ಬಿಜೆಪಿಯವರೆ ಉತ್ತರಿಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
‘ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ, ಹಾಗಾದರೆ ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು, ನಿಮ್ಮ ಆಡಳಿತ ವೈಫಲ್ಯವೇ? ಅಥವಾ ಬಿಜೆಪಿ-ಬಿಜೆಪಿಯಲ್ಲಿನ ಕಾದಾಟವೇ ಅಥವಾ ಯಡಿಯೂರಪ್ಪನವರ ಕೋಪವೇ?’ ಎಂದು ಕಾಂಗ್ರೆಸ್ ಟ್ವಿಟರ್ನಲ್ಲಿ ಪ್ರಶ್ನಿಸಿದೆ.