ದಾವಣಗೆರೆ: ದೇವಸ್ಥಾನ, ಅರ್ಚಕರಿಂದ ವಶಪಡಿಸಿಕೊಂಡಿರುವ ಸುಮಾರು 8 ಸಾವಿರ ಎಕರೆ ‘ಇನಾಂ’ ಭೂಮಿಯನ್ನು (ಹಿಂದಿನ ಅರಸರು ವಿವಿಧ ಉದ್ದೇಶಗಳಿಗಾಗಿ ಜನರಿಗೆ ಮತ್ತು ಸಂಸ್ಥೆಗಳಿಗೆ ನೀಡಿರುವ ಭೂಮಿ) ಸರ್ಕಾರ ವಾಪಸ್ ನೀಡಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ ಹಾರ್ನಹಳ್ಳಿ ಒತ್ತಾಯಿಸಿದರು.
ಶನಿವಾರ ಇಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ಹಾರನಹಳ್ಳಿ, ‘ರಾಜರು ದೇಗುಲ, ಅರ್ಚಕರಿಗೆ ಇನಾಂ ಭೂಮಿ ಮಂಜೂರು ಮಾಡಿದ್ದು, ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸೇರಿದ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದ್ದರೂ ವಕ್ಫ್ ಬೋರ್ಡ್ ಆಸ್ತಿಯನ್ನು ಮುಟ್ಟಿಲ್ಲ. ಅದು ವಕ್ಫ್ ಭೂಮಿಯನ್ನು ಸಂರಕ್ಷಿಸುತ್ತಿದೆ, ಆದರೆ ಹಿಂದೂ ದೇವಾಲಯಗಳ ಬಗ್ಗೆ ಯಾವುದೇ ಕಾಳಜಿಯನ್ನು ತೋರಿಸುತ್ತಿಲ್ಲʼ ಎಂದು ಅವರು ಹೇಳಿದರು.
“ವಕ್ಫ್ ಮಂಡಳಿಗೆ ನೀಡಿರುವ ಸ್ವಾಯತ್ತತೆಯನ್ನು ಮುಜರಾಯಿ ಇಲಾಖೆಗೆ ವಿಸ್ತರಿಸಿಲ್ಲ. ‘ಎ’ ದರ್ಜೆಯ ದೇವಸ್ಥಾನಗಳ ಆದಾಯ ಸರ್ಕಾರಕ್ಕೆ ಹೋಗುತ್ತದೆ, ಆದರೆ ಹಣವನ್ನು ಹಿಂದೂ ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳಿಗೆ ಬಳಸುವುದಿಲ್ಲ. ದೇವಾಲಯಗಳು ನಿಯಮಗಳಿಗೆ ಒಳಪಟ್ಟಿವೆ. ಚರ್ಚುಗಳು ಮತ್ತು ಮಸೀದಿಗಳ ಮೇಲೆ ಅಂತಹ ನಿಯಮಗಳನ್ನು ಹೇರುವುದಿಲ್ಲ, ಸರ್ಕಾರ ಹಿಂದೂ ದೇವಾಲಯಗಳಿಗೂ ಸ್ವಾಯತ್ತತೆ ನೀಡಬೇಕಾಗಿದೆ” ಎಂದು ಅವರು ಹೇಳಿದ್ದಾರೆ.