ಲಖನೌ: ಲೋಕಸಭೆ ಚುನಾವಣೆಗಾಗಿ ನಮ್ಮ ಪಕ್ಷ ಮೈತ್ರಿ ಮಾಡಿಕೊಳ್ಳಲಿದೆ ಎಂದು ಕೆಲವು ವಿರೋಧ ಪಕ್ಷಗಳು ವದಂತಿಗಳನ್ನು ಹಬ್ಬಿಸುತ್ತಿವೆ. ಆದರೆ ಅದು ಸುಳ್ಳು. ನಮ್ಮ ಪಕ್ಷ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂದು ಬಹುಜನ ಸಮಾಜ ಪಕ್ಷವು (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಸ್ಪಷ್ಟಪಡಿಸಿದ್ದಾರೆ.
ಬಿಎಸ್ಪಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚಿಸುವ ಕುರಿತು ಸುಳ್ಳು ವದಂತಿಗಳನ್ನು ಹಬ್ಬಿಸಲಾಗುತ್ತಿದೆ. ಈ ವಿಚಾರದ ಬಗ್ಗೆ ಜನರು ಜಾಗರೂಕರಾಗಿರಬೇಕು. ಎಂದು ಅವರು ತಮ್ಮ ‘ಎಕ್ಸ್’ಯಲ್ಲಿ ಪೋಸ್ಟ್ ಮಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಸ್ಪರ್ಧಿಸುವುದರಿಂದ ವಿರೋಧ ಪಕ್ಷಗಳು ಸಾಕಷ್ಟು ಚಂಚಲಗೊಂಡಿವೆ. ಅದಕ್ಕಾಗಿಯೇ ವಿಪಕ್ಷ ನಾಯಕರು ಪ್ರತಿದಿನ ವಿವಿಧ ರೀತಿಯ ವದಂತಿಗಳನ್ನು ಹರಡುವ ಮೂಲಕ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಬಹುಜನ ಸಮುದಾಯದ ಹಿತಾಸಕ್ತಿಯಿಂದ ಬಿಎಸ್ಪಿ ಏಕಾಂಗಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ತೆಗೆದುಕೊಂಡಿದೆ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ ಎಂದು ನಾಗರಿಕರಲ್ಲಿ ಅವರು ಮನವಿ ಮಾಡಿಕೊಂಡಿದ್ದಾರೆ.