ವಿರೋಧ ಪಕ್ಷದ ನಾಯಕರ ವಿರುದ್ಧ ಕೇಂದ್ರೀಯ ಸಂಸ್ಥೆಗಳ ತನಿಖೆಯ ಬಗ್ಗೆ ಭಾರತೀಯ ಜನತಾ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, “ಶ್ರೀರಾಮ ಈ ಯುಗದಲ್ಲಿ ಬದುಕಿದ್ದಿದ್ದರೆ, ಬಿಜೆಪಿಯು ಇಡಿ ಮತ್ತು ಸಿಬಿಐ ತಂಡವನ್ನು ಅವನ ಬಳಿಗೆ ಕಳುಹಿಸಿ ತಲೆಗೆ ಬಂದೂಕು ಇಟ್ಟು ಬಿಜೆಪಿ ಸೇರುತ್ತೀಯೋ ಅಥವಾ ಜೈಲಿಗೆ ಹೋಗುತ್ತೀಯೋ ಎಂದು ಕೇಳುತ್ತಿದ್ದರು” ಎಂದು ಕಟುವಾಗಿ ಟೀಕಿಸಿದ್ದಾರೆ.
2024-25ರ ಬಜೆಟ್ ಕುರಿತು ದೆಹಲಿ ವಿಧಾನಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ, ಎಎಪಿ ಸರ್ಕಾರವು ‘ವಿಕಾಸ’ ಮಾದರಿಯನ್ನು ಅನುಸರಿಸುತ್ತಿದೆ, ಆದರೆ ಬಿಜೆಪಿಯು ಪಕ್ಷಗಳು ಮತ್ತು ಸರ್ಕಾರಗಳನ್ನು ಪತನಗೊಳಿಸುವ ಮೂಲಕ ‘ವಿನಾಶ’ ಮಾದರಿಯನ್ನು ಅನುಸರಿಸುತ್ತಿದೆ ಎಂದು ಹೇಳಿದರು.
ಅವರು ಮುಂದುವರಿದು ತಮ್ಮ ಸರ್ಕಾರವನ್ನು ಉರುಳಿಸಲು ಬಿಜೆಪಿ ವಿರೋಧ ಪಕ್ಷದ ಶಾಸಕರನ್ನು ಬೇಟೆಯಾಡುತ್ತಿದೆ ಎಂದು ಆರೋಪಿಸಿದರು. ಕೇಸರಿ ಪಕ್ಷವು ಆಮ್ ಆದ್ಮಿ ಪಕ್ಷವನ್ನು ಮುಗಿಸಲು ಬಯಸಿದೆ ಮತ್ತು ತನ್ನನ್ನು ಜೈಲಿಗೆ ಕಳುಹಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಏತನ್ಮಧ್ಯೆ, ಸಮಾಜದ ಪ್ರತಿಯೊಂದು ವಿಭಾಗದ ಕಾಳಜಿ ವಹಿಸುವ “ಅದ್ಭುತ” ಬಜೆಟ್ ಮಂಡಿಸಿದ್ದಕ್ಕಾಗಿ ಅವರು ಹಣಕಾಸು ಸಚಿವ ಅತಿಶಿ ಅವರನ್ನು ಶ್ಲಾಘಿಸಿದರು. ಮುಖ್ಯಮಂತ್ರಿಗಳು ಬಜೆಟ್ನಲ್ಲಿ ಘೋಷಿಸಿದ ಮುಖ್ಯಮಂತ್ರಿ ಮಹಿಳಾ ಸಮ್ಮಾನ್ ಯೋಜನೆಯಡಿ ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ತಲಾ 1,000 ರೂ. ನೀಡುವುದಾಗಿ ಘೋಷಿಸಿದರು.