ಹೊಸದಿಲ್ಲಿ: ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸಲಾಗಿರುವ ಮಧ್ಯಂತರ ಬಜೆಟ್ ಅನ್ನು ಪ್ರಶಂಸಿಸಿರುವ ಪ್ರಧಾನಿ ನರೇಂದ್ರ ಮೋದಿ, ಬಂಡವಾಳ ವೆಚ್ಚವು ದಾಖಲೆಯ ರೂ. 11,11,111 ಕೋಟಿಗೆ ಏರಿಕೆಯಾಗಲಿದ್ದು, ವಿತ್ತೀಯ ಕೊರತೆಯನ್ನು ನಿಯಂತ್ರಿಸಿ, ಮುಂದಕ್ಕೆ ಹೆಜ್ಜೆ ಇಟ್ಟಿದೆ ಎಂದು ಹರ್ಷ ವ್ಯಕ್ತಪಡಿಸಿರುವುದಾಗಿ ಎಂದು ndtv.com ವರದಿ ಮಾಡಿದೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024ರ ಬಜೆಟ್ ಭಾಷಣವನ್ನು ಮುಕ್ತಾಯಗೊಳಿಸಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಜೆಟ್ ನಿರ್ಧಾರಗಳು ಕೇವಲ ಮುಂದುವರಿದ 21ನೇ ಶತಮಾನದ ಮೂಲಸೌಕರ್ಯಗಳ ಅಭಿವೃದ್ಧಿಗೆ ನಿಧಿ ಮಾತ್ರ ಒದಗಿಸುತ್ತಿಲ್ಲ. ಅಗಣಿತ ಹೊಸ ಉದ್ಯೋಗಾವಕಾಶಗಳನ್ನು ಹೆಚ್ಚಿಸಲಿವೆ. ನವೋದ್ಯಮಿಗಳಿಗೆ ತೆರಿಗೆ ವಿನಾಯತಿ ನೀಡಿರುವುದರಿಂದ ಭಾರತ ಹೊಸ ಹೆಜ್ಜೆ ಇಡಲಿದೆ ಎಂದಿದ್ದಾರೆ.
ಬಜೆಟ್ ಯುವ ಭಾರತವನ್ನು ಪ್ರತಿಫಲಿಸಿದೆ. ಯುವ ಭಾರತದಲ್ಲಿ ಉದ್ಯೋಗ ಮತ್ತು ಉದ್ದಿಮೆಗಳನ್ನು ಸ್ಥಾಪನೆಯ ಉದ್ದೇಶಕ್ಕಾಗಿ ಸಂಶೋಧನೆಗಾಗಿ ರೂ. ಒಂದು ಲಕ್ಷ ಕೋಟಿ ನಿಧಿಯನ್ನು ತೆಗೆದಿಟ್ಟಿರುವುದು ಮತ್ತು ನವೋದ್ಯಮಗಳಿಗೆ ತೆರಿಗೆ ವಿನಾಯಿತಿಯನ್ನು ಹೆಚ್ಚಿಸಿರುವುದು; ಈ ಎರಡು ಪ್ರಮುಖ ನಿರ್ಧಾರಗಳು ಭಾರತದ ದಿಕ್ಕನ್ನು ಬದಲಿಸಲಿವೆ ಎಂದಿದ್ದಾರೆ