ಲಖನೌ: ಈಗಾಗಲೇ ಬಾಬರಿ ಮಸೀದಿಯನ್ನು ಕಳೆದುಕೊಂಡಿದ್ದೇವೆ. ಅದೇ ರೀತಿ ಜ್ಞಾನವಾಪಿ ಮಸೀದಿಯನ್ನು ಕಳೆದುಕೊಳ್ಳಲು ಸಿದ್ದರಿಲ್ಲವೆಂದು ಕುರಿತಂತೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿವಾದಿತ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆ ಸಲ್ಲಿಸಲು ಹಿಂದೂ ಅರ್ಚಕರಿಗೆ ವಾರಾಣಸಿಯ ಜಿಲ್ಲಾ ಕೋರ್ಟ್ ಅವಕಾಶ ಕಲ್ಪಿಸಿರುವ ಹಿನ್ನೆಲೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.
ಇದು ಪೂಜಾ ಸ್ಥಳಗಳ ಕಾಯ್ದೆ–1991ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಸಂಪೂರ್ಣ ತಪ್ಪು ನಿರ್ಧಾರ.ಈ ತೀರ್ಪನ್ನು ಪ್ರಶ್ನಿಸಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮತ್ತು ಮಸೀದಿಗಳ ಸಮಿತಿ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಲು ಸಿದ್ಧತೆ ನಡೆಸಿವೆ ಎಂದು ಅವರು ಎಎನ್ಐಗೆ ತಿಳಿಸಿದ್ದಾರೆ.
ಇದೇ ರೀತಿ, ಸಮೀಕ್ಷೆಗಳು ಮುಂದುವರೆದರೆ ಮತ್ತು ಪ್ರಚೋದಿಸುವ ಕೆಲಸಗಳು ಹೆಚ್ಚಾದರೆ ಬಾಬರಿ ಮಸೀದಿಗೂ ಮುನ್ನ ಮತ್ತು ನಂತರದ ಘಟನೆಗಳು ಪುನರಾವರ್ತಿತವಾಗುತ್ತವೆ ಎಂದೂ ಅವರು ಎಚ್ಚರಿಕೆ ನೀಡಿದ್ದಾರೆ.
ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ನೇತೃತ್ವದ ಸರ್ಕಾರವು ಧಾರ್ಮಿಕ ಸ್ಥಳಗಳ ಸ್ಥಿತಿ ಬದಲಿಸಲು ಯತ್ನಿಸುವವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಜರುಗಿಸಬೇಕು. ಯಾವುದೇ ಧಾರ್ಮಿಕ ಸ್ಥಳಗಳಲ್ಲಿ ಬದಲಾವಣೆ ಮಾಡುವುದನ್ನು ಬಿಟ್ಟು ಆಗಸ್ಟ್ 15, 1947ರ ಯಥಾಸ್ಥಿತಿಯನ್ನು ಅನುಸರಿಸಬೇಕು ಎಂದು ಪೂಜಾ ಸ್ಥಳಗಳ ಕಾಯ್ದೆ –1991 ಹೇಳುತ್ತದೆ. ಅದನ್ನು ಮೀರಿದ್ದು ಕಂಡುಬಂದರೆ ನ್ಯಾಯಾಲಯ 3 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಈ ಕ್ರಮವನ್ನು ಯೋಗಿ ಆದಿತ್ಯನಾಥ ದಿಟ್ಟತನದಿಂದ ತೆಗೆದುಕೊಳ್ಳಲು ಎಂದು ಅವರು ಸೂಚಿಸಿದ್ದಾರೆ.