ಸುಪ್ರೀಂ ಕೋರ್ಟ್ ಉತ್ತರ ಪ್ರದೇಶ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಬುಲ್ಡೋಜರ್ ಕ್ರಮಕ್ಕಾಗಿ ಪ್ರಯಾಗ್ರಾಜ್ ಆಡಳಿತವನ್ನು ಅದು ತೀವ್ರವಾಗಿ ಟೀಕಿಸಿದೆ.
ಅದು ಧ್ವಂಸ ಕ್ರಮವನ್ನು “ಅಸಂವಿಧಾನಿಕ” ಮತ್ತು “ಅಮಾನವೀಯ” ಎಂದು ಕರೆದಿದೆ. “ಬುಲ್ಡೋಜರ್ ಕ್ರಮವು ನಮ್ಮ ಆತ್ಮಸಾಕ್ಷಿಯನ್ನು ದಿಗ್ಭ್ರಾಂತಿಗೆ ದೂಡಿದೆ” ಎಂದು ನ್ಯಾಯಮೂರ್ತಿಗಳಾದ ಎ.ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರನ್ನೊಳಗೊಂಡ ಪೀಠ ಹೇಳಿದೆ. ಪರಿಣಾಮಕ್ಕೊಳಗಾದ ಮನೆಮಾಲೀಕರಿಗೆ ಪರಿಹಾರವಾಗಿ 10 ಲಕ್ಷ ರೂಪಾಯಿಗಳನ್ನು ಪಾವತಿಸುವಂತೆ ಆದೇಶಿಸುತ್ತಾ ಪೀಠ ಈ ಹೇಳಿಕೆಗಳನ್ನು ನೀಡಿದೆ.
ಕಾನೂನು ಪ್ರಕ್ರಿಯೆಗಳನ್ನು ಅನುಸರಿಸದೆ ವಕೀಲರು, ಪ್ರಾಧ್ಯಾಪಕರು ಮತ್ತು ಇತರರ ಮನೆಗಳನ್ನು ಕೆಡವಿದ್ದಕ್ಕಾಗಿ ನ್ಯಾಯಾಲಯವು ಯುಪಿ ಸರ್ಕಾರವನ್ನು ತೀವ್ರವಾಗಿ ಟೀಕಿಸಿತು. ವಕೀಲರಾದ ಜುಲ್ಫಿಕರ್ ಹೈದರ್, ಪ್ರೊಫೆಸರ್ ಅಲಿ ಅಹ್ಮದ್ ಮತ್ತು ಇತರ ಮೂವರು ಈ ಪ್ರಕರಣವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದರು, ಅವರ ಮನೆಗಳನ್ನು ಕೆಡವುವ ಹಿಂದಿನ ರಾತ್ರಿ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಅವರು ವಾದಿಸಿದ್ದರು.
2023 ರಲ್ಲಿ ಹತ್ಯೆಗೀಡಾದ ದರೋಡೆಕೋರ ಅತಿಕ್ ಅಹ್ಮದ್ಗೆ ಸೇರಿದ ಮನೆಗಳೆಂದು ತಪ್ಪಾಗಿ ಭಾವಿಸಿ ಅಧಿಕಾರಿಗಳು ತಮ್ಮ ಮನೆಗಳನ್ನು ಕೆಡವಿದ್ದಾರೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದರು.
ಕಟ್ಟಡ ಕೆಡವುವ ನೋಟಿಸ್ಗಳನ್ನು ನೀಡಿದ ರೀತಿಗೆ ನ್ಯಾಯಾಲಯವು ಅಧಿಕಾರಿಗಳನ್ನು ಖಂಡಿಸಿತು. ಆಸ್ತಿಗಳಿಗೆ ನೋಟಿಸ್ ಅಂಟಿಸಲಾಗಿದೆ ಎಂದು ರಾಜ್ಯದ ವಕೀಲರು ಹೇಳಿದರೆ, ನೋಂದಾಯಿತ ಅಂಚೆ ಮೂಲಕ ನೋಟಿಸ್ಗಳನ್ನು ಏಕೆ ಕಳುಹಿಸಲಾಗಿದೆ ಎಂದು ನ್ಯಾಯಾಲಯ ಪ್ರಶ್ನಿಸಿತು.
ಮನೆಗಳ ಧ್ವಂಸಕ್ಕೆ ಪ್ರತಿಕ್ರಿಯಿಸಲು ಸಂತ್ರಸ್ತರಿಗೆ ಸರಿಯಾದ ಅವಕಾಶ ನೀಡಲಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಆಶ್ರಯ ಪಡೆಯುವ ಹಕ್ಕು ಭಾರತೀಯ ಸಂವಿಧಾನದ 21 ನೇ ವಿಧಿಯ ಅವಿಭಾಜ್ಯ ಅಂಗವಾಗಿದೆ ಎಂಬುದನ್ನು ನೆನಪಿನಲ್ಲಿಡಬೇಕೆಂದು ಅದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತು.
ಈ ರೀತಿ ಮನೆಗಳನ್ನು ಕೆಡವುವುದಯ ಅಧಿಕಾರಿಗಳ ಅಸಮರ್ಥತೆಯನ್ನು ತೋರಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಉತ್ತರ ಪ್ರದೇಶದ ಅಂಬೇಡ್ಕರ್ ನಗರದಲ್ಲಿ ನಡೆದ ಕಟ್ಟಡ ಧ್ವಂಸ ಸಂದರ್ಭದಲ್ಲಿ ಹುಡುಗಿಯೊಬ್ಬಳು ತನ್ನ ಪುಸ್ತಕಗಳನ್ನು ಹಿಡಿದುಕೊಂಡಿದ್ದ ವೀಡಿಯೊವನ್ನು ನ್ಯಾಯಾಲಯವು ಉಲ್ಲೇಖಿಸಿತು. ಇಂತಹ ದೃಶ್ಯಗಳಿಂದ ಎಲ್ಲರೂ ನೋವಿಗೊಳಗಾಗುತ್ತಾರೆ ಎಂದು ನ್ಯಾಯಮೂರ್ತಿ ಭುಯಾನ್ ಹೇಳಿದರು.