ಖಾಸಗಿ ಬಸ್ ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ 26 ಮಂದಿ ಸಜೀವ ದಹನವಾಗಿರುವ ದುರಂತ ಘಟನೆ ಮುಂಬೈ-ನಾಗ್ಪುರ ಎಕ್ಸ್ಪ್ರೆಸ್ವೇಯಲ್ಲಿ ಶನಿವಾರ( ಜು. 1 ರಂದು) ನಡೆದಿದೆ.
ನಿನ್ನೆ ಬೆಳಗಿನ ಜಾವ ಎರಡು ಗಂಟೆ ಹೊತ್ತಿನಲ್ಲಿ ಯವತ್ಮಾಲ್ ಎನ್ನುವಲ್ಲಿಂದ ಮುಂಬಯಿಗೆ ಸಾಗುತ್ತಿದ್ದ ಬಸ್ಸು ಸಮೃದ್ಧಿ ಮಾರ್ಗ ಎಕ್ಸ್ಪ್ರೆಸ್ ವೇಯಲ್ಲಿ ಬೆಂಕಿ ಅವಘಡಕ್ಕೆ ಈಡಾಗಿದೆ. ಚಲಿಸುತ್ತಿದ್ದ ಬಸ್ಸಿನ ಟಯರ್ ಸ್ಫೋಟಗೊಂಡು ಬಸ್ಸು ಪಲ್ಟಿಯಾಗಿದ್ದು ಒಟ್ಟು 26 ಜನರು ಬಸ್ಸಿನೊಳಗೇ ಸುಟ್ಟು ಕರಕಲಾಗಿದ್ದಾರೆ. ಆರು ಜನರಿಗೆ ಗಾಯಗಳಾಗಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಾಲಕ ಜೀವಾಪಾಯವಿಲ್ಲದೆ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳಕ್ಕೆ ಮುಖ್ಯಮಂತ್ರಿ ಏಕನಾಥ ಶಿಂಧೆ ಭೇಟಿ ಕೊಟ್ಟಿದ್ದು, ಮೃತರ ಕುಟುಂಬಕ್ಕೆ ಐದು ಲಕ್ಷ ರೂಪಾಯಿಗಳ ಪರಿಹಾರ ಘೋಷಿಸಿದ್ದಾರೆ.