ಮಗುಚಿ ಬಿದ್ದ ಪ್ರವಾಸಿ ಬಸ್; ವಿದ್ಯಾರ್ಥಿಗಳಿಗೆ ಗಾಯ

ಗಂಗಾವತಿ: ಗುರುಮಿಠಕಲ್ ನಗರದಿಂದ ಕಿಷ್ಕಿಂದಾ ಹಾಗೂ ಹಂಪಿ ಪ್ರವಾಸಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಪಲ್ಟಿಯಾಗಿ ನಾಲ್ವರು ಮಕ್ಕಳಿಗೆ ಗಾಯವಾಗಿರುವ ಘಟನೆ ತಾಲೂಕಿನ ಪ್ರಗತಿ ನಗರದ ಬಳಿ ನಡೆದಿದೆ.

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ನಗರದಿಂದ ಶಾಲಾ ಪ್ರವಾಸದ ನಿಮಿತ್ತ ನ.27ರ ಬುಧವಾರ ರಾತ್ರಿ ಗುರುಮಿಠಕಲ್‌ನಿಂದ ಗಂಗಾವತಿ ತಾಲೂಕಿನ ಕಿಕ್ಕಿಂಧಾ ಅಂಜನಾದ್ರಿ ಹಾಗೂ ಹಂಪಿ ಶಾಲಾ ಪ್ರವಾಸಕ್ಕೆ ಹೊರಟಿತ್ತು.

ಈ ಸಂದರ್ಭ ಬಸ್ ಚಾಲಕನ ನಿಯಂತ್ರಣ ತಪ್ಪಿ ಗಂಗಾವತಿ ತಾಲೂಕಿನ ಪ್ರಗತಿ ನಗರದ ಬಳಿ ಪಲ್ಟಿಯಾಗಿದ್ದು, ಈ ಪರಿಣಾಮ ಬಸ್ ನಲ್ಲಿದ್ದ ನಾಲ್ವರು ಶಾಲಾ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 60 ವಿದ್ಯಾರ್ಥಿಗಳು, 7 ಶಿಕ್ಷಕರು ಇದ್ದ ಬಸ್ ಏಕಾಏಕಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ರಸ್ತೆ ಪಕ್ಕ ಇದ್ದ ತಗ್ಗಿಗೆ ಉರುಳಿದೆ. ಅದೃಷ್ಟವಶಾತ್ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೂಡಲೇ ಸ್ಥಳೀಯರು ಘಟನಾ ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಗಳನ್ನು ಮತ್ತು ಬಸ್‌ನಲ್ಲಿದ್ದ ಚಾಲಕ, ಶಿಕ್ಷಕರನ್ನು ಸಂರಕ್ಷಣೆ ಮಾಡಿ ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ಕೈಗೊಂಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು