Tuesday, June 3, 2025

ಸತ್ಯ | ನ್ಯಾಯ |ಧರ್ಮ

ಸರಕಾರಿ ಶಾಲೆ ಉಳಿಸಿ ಬೆಳೆಸುವ ಅಭಿಯಾನ ಜಿಲ್ಲಾಡಳಿತಕ್ಕೆ ಮನವಿ


ಹಾಸನ : ಸರಕಾರಿ ಶಾಲೆಗಳನ್ನು ಉಳಿಸಿ ಬೆಳೆಸಬೇಕೆಂದು ಅಭಿಯಾನದಲ್ಲಿ ವಂದೇ ಮಾತರಂ ಸೇವಾ ಟ್ರಸ್ಟ್ ಹಾಗೂ ಯುವ ಸಂಘ ಮಾತೃಭೂಮಿ ಉಚಿತ ವೃದ್ಧಾಶ್ರಮದಿಂದ ಆಗ್ರಹಿಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಇದೆ ವೇಳೆ ಟ್ರಸ್ಟ್ ಸಂಸ್ಥಾಪಕ ನಾಗಣ್ಣ ಜೈಹಿಂದ್ ಮಾಧ್ಯಮದೊಂದಿಗೆ ಮಾತನಾಡಿ, ದಿನೇ ದಿನೇ ನಮ್ಮ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಕಡಿಮೆಯಾಗುತ್ತಿದ್ದು, ಕಲಿಯುವ ಮಕ್ಕಳಿಲ್ಲದೆ ಮುಚ್ಚುತ್ತಿದೆ. ವಿದ್ಯಾಭ್ಯಾಸ ಖಾಸಗಿಕರಣಗೊಳ್ಳುತ್ತಿದೆ, ಖಾಸಗಿ ಶಾಲೆಗಳಲ್ಲಿ ದುಡ್ಡಿದವರಿಗೆ ಮಾತ್ರ ವಿದ್ಯಾಭ್ಯಾಸ ಸಿಗುತ್ತಿದೆ, ಮಕ್ಕಳಿಲ್ಲದೇ ಹಲವಾರು ಶಾಲೆಗಳು ಮುಚ್ಚುವ ಹಂತದಲ್ಲಿದೆ, ಆದ್ದರಿಂದ ಸರಕಾರವು ಈಗಲೇ ಎಚ್ಚೆತ್ತು ಕ್ರಮಕೈಗೊಳ್ಳದಿದ್ದಲ್ಲಿ ಶೀಘ್ರದಲ್ಲಿ ಎಲ್ಲಾ ಸರ್ಕಾರಿ ಶಾಲೆಗಳನ್ನು ಮುಚ್ಚುವ ಪರಿಸ್ಥಿತಿ ಬರುತ್ತದೆ, ಶಾಲೆಗಳನ್ನು ಉಳಿಸಿ ಬಡಮಕ್ಕಳಿಗೂ ವಿದ್ಯಾಭ್ಯಾಸ ಮಾಡಲು ವ್ಯವಸ್ಥೆ ಮಾಡಬೇಕಾಗಿದೆ ಎಂದರು. ಸರ್ಕಾರದಿಂದ ಸಿಗುವಂತಹ ಉಚಿತ ಸವಲತ್ತುಗಳು ಬೇಕು. ಆದರೆ ನಿಮ್ಮ ಮಕ್ಕಳಿಗೆ ಸರ್ಕಾರಿ ಶಾಲೆ ಬೇಡವೇ! ರಾಜ್ಯದ ಪ್ರತಿ ಒಂದು ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಸೂರಿನಡಿ, ಎಲ್.ಕೆ.ಜಿ. ಯಿಂದ 10ನೇ ತರಗತಿವರೆಗೆ ಇಂಗ್ಲೀಷ್ ಮತ್ತ ಕನ್ನಡ ಮಾಧ್ಯಮದಲ್ಲಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪ್ರಾರಂಭವಾಗಬೇಕು. ಸರ್ಕಾರದಿಂದ ಬಿಟ್ಟಿ ಭಾಗ್ಯಗಳಾದಂತಹ ಕುಟುಂಬದ ಸದಸ್ಯರಿಗೆ ಸಿಗುವಂತಹ ಪಿಂಚಣಿ ಯೋಜನೆ, ವೃದ್ಧಾಪ್ಯ ವೇತನ, ಅಂಗವಿಕಲ ವೇತನ ಹಾಗೂ ಕುಟುಂಬ ಮಹಿಳಾ ಮುಖ್ಯಸ್ಥೆಗೆ ಪ್ರತಿ ತಿಂಗಳು 2000 ರೂ. ಉಚಿತ ಪಡಿತರ ಅಕ್ಕಿ, ಉಚಿತ ವಿದ್ಯುತ್, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಹಾಗೂ ಕುಟುಂಬದ ಪದವಿದರರಿಗೆ ನಿರುದ್ಯೋಗಿ ಭತ್ಯೆ. ಈ ಎಲ್ಲಾ ಬಿಟ್ಟಿ ಸವಲತ್ತುಗಳನ್ನು ತೆಗೆದುಕೊಂಡು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ, ಖಾಸಗಿ ಶಾಲೆಗೆ ಸೇರಿಸುವಂತವರ ಎಲ್ಲಾ ಸರ್ಕಾರಿ ಸವಲತ್ತುಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಪಂಚಾಯಿತಿ ವ್ಯಾಪ್ತಿಗೆ ಒಂದರಂತೆ ಇಂಗ್ಲೀಷ್ ಮತ್ತು ಕನ್ನಡ ವಸತಿ ಶಾಲೆ ಪ್ರಾರಂಭಿಸಿ, ಈ ಶಾಲೆಗಳಿಗೆ ಅತ್ಯುನ್ನತ್ತ ಪರಿಣಿತ ಶಿಕ್ಷಕರನ್ನು ನೇಮಿಸಿ ಹಾಗೂ ಮಕ್ಕಳನ್ನು ಶಾಲೆಗೆ ಕರೆತರಲು ಬಸ್ಸಿನ ವ್ಯವಸ್ಥೆ ಕಲ್ಪಿಸುವುದು. ಮೊದಲು ಸರ್ಕಾರದ ಅನ್ನ ತಿನ್ನುವಂತಹ (ನೌಕರರು) ಪ್ರತಿಯೊಬ್ಬ ನೌಕರರು, ಮೊದಲು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಓದಿಸುವಂತಾಗಲು ಸರ್ಕಾರ ಆದೇಶ ಮಾಡಬೇಕು, ಯಾರು ಸರ್ಕಾರಿ ಶಾಲೆಯಲ್ಲಿ ಓದಿಸುವುದಿಲ್ಲವೋ ಅಂತವರ ಮುಂಬಡ್ತಿ ಹಾಗೂ ಇಂಕ್ರಿಮೆಂಟ್ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.

ಇದೆ ವೇಳೆ ವಂದೇ ಮಾತರಂ ಸೇವಾ ಟ್ರಸ್ಟ್ ಕಾರ್ಯದರ್ಶಿ ವಿಕ್ರಂ ಜೈಹಿಂದ್, ಯುವ ಸಂಘದ ಪ್ರಧಾನ ಕಾರ್ಯದರ್ಶಿ ಸುಮಾ ವಿಕ್ರಂ, ರಂಗಭೂಮಿ ಕಲಾವಿದೆ ಲಕ್ಷ್ಮೀ ಇತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page