Saturday, May 10, 2025

ಸತ್ಯ | ನ್ಯಾಯ |ಧರ್ಮ

ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕಿಸ್ತಾನ ರಾತ್ರೋರಾತ್ರಿ ನಡೆಸಿದ ಫಿರಂಗಿ ದಾಳಿಯಿಂದ ಹಲವರು ಸಾವನ್ನಪ್ಪಿರುವ ಶಂಕೆ

ವರದಿಗಳ ಪ್ರಕಾರ, ಶಂಕಿತ ಪಾಕಿಸ್ತಾನಿ ಡ್ರೋನ್‌ಗಳು ಸತತ ಎರಡನೇ ದಿನವೂ ಜಮ್ಮು ಮತ್ತು ಕಾಶ್ಮೀರದಲ್ಲಿರುವ ಕೆಲವು ವಾಯು ನೆಲೆಗಳ ಒಳ ನುಸುಳಿವೆ. ಒಂದು ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್‌ ದಾಳಿಗೊಳಗಾದವು. ದಾಳಿಯಲ್ಲಿ ನಾಗರೀಕರ ಮನೆಗಳು ಹಾನಿಗೊಳಗಾಗಿವೆ

ಮೇ 9 ಮತ್ತು 10 ರ ನಡುವಿನ ರಾತ್ರಿ ಪಾಕಿಸ್ತಾನವು ನಿಯಂತ್ರಣ ರೇಖೆ (ಎಲ್‌ಒಸಿ) ಮತ್ತು ಅಂತರರಾಷ್ಟ್ರೀಯ ಗಡಿ (ಐಬಿ)ಗಳ ಉದ್ದಕ್ಕೂ ಭಾರೀ ಫಿರಂಗಿ ದಾಳಿ ನಡೆಸಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ಸಾವು-ನೋವುಗಳು ಸಂಭವಿಸುವ ಭೀತಿಯ ವಾತಾವರಣವಿದೆ.

ಜಮ್ಮುವಿನ ʼಎಲ್‌ಒಸಿʼ ಉದ್ದಕ್ಕೂ ರಾಜೌರಿ ಜಿಲ್ಲೆಯನ್ನು ಗುರಿಯಾಗಿಸಿಕೊಂಡು ಪಾಕಿಸ್ತಾನ ಭಾರೀ ಫಿರಂಗಿ ಗುಂಡಿನ ದಾಳಿ ನಡೆಸಿತ್ತು. ಈ ಸಂಧರ್ಭದಲ್ಲಿ ಹಿರಿಯ ಸರ್ಕಾರಿ ಅಧಿಕಾರಿಯೊಬ್ಬರು ಸಾವನ್ನಪ್ಪಿದ್ದಾರೆ. ರಾಜೌರಿ ಜಿಲ್ಲೆಯಲ್ಲಿ ರಾತ್ರಿಯಿಡೀ ನಡೆದ ಶೆಲ್ ದಾಳಿಯಲ್ಲಿ ಬಿಹಾರದ ಒಬ್ಬಳು ಅಪ್ರಾಪ್ತ ಬಾಲಕಿ ಮತ್ತು ಓರ್ವ 35 ವರ್ಷದ ವ್ಯಕ್ತಿ ಕೂಡ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನವು ನಾಗರಿಕ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಭಾರೀ ಫಿರಂಗಿ ದಾಳಿಯಲ್ಲಿ, ಪೂಂಚ್‌ನ ಮೆಂಧರ್ ಪ್ರಾಂತ್ಯದ ʼರಶೀದಾ ಬಾನೋʼ ಮತ್ತು ಜಮ್ಮುವಿನ ಆರ್‌ಎಸ್ ಪುರ ನಿವಾಸಿಯಾದ ʼಅಶೋಕ್ ಕುಮಾರ್ʼ ಎಂದು ಗುರುತಿಸಲಾದ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಜಮ್ಮು ಮತ್ತು ಶ್ರೀನಗರದ ನಾಗರಿಕ ವಿಮಾನ ನಿಲ್ದಾಣಗಳು, ಉಧಮ್‌ಪುರ ವಾಯುನೆಲೆ, ಅವಂತಿಪೋರಾ ವಾಯುನೆಲೆ ಮತ್ತು ಕೆಲವು ವಸತಿ ಪ್ರದೇಶಗಳು ಸೇರಿದಂತೆ ʼಎಲ್‌ಒಸಿʼ ಹಾಗೂ ʼಐಬಿʼಯ ಉದ್ದಕ್ಕೂ ರಾತ್ರಿಯಿಡೀ ಮತ್ತು ಶನಿವಾರ ಬೆಳಿಗ್ಗೆ ಅಲ್ಲಿನ ನಿವಾಸಿಗಳು ಹಲವಾರು ಬಾಂಬ್‌ ಸ್ಫೋಟದ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.

ದಾಳಿಯಿಂದ ಹಾನಿಗೊಳಗಾದ ಜಮ್ಮುವಿನ ಕೆಲವು ಭಾಗಗಳು
ಜಮ್ಮು ಮತ್ತು ಕಾಶ್ಮೀರದ ವಾಯು ನೆಲೆಗಳಿಗೆ ಸತತ ಎರಡನೇ ದಿನವೂ ಪಾಕಿಸ್ತಾನದ್ದೆಂದು ಶಂಕಿಸಲಾದ ಡ್ರೋನ್‌ಗಳು ನುಸುಳಿವೆ ಎಂದು ವರದಿಗಳು ತಿಳಿಸಿವೆ. ಚಳಿಗಾಲದ ರಾಜಧಾನಿಯಾದ ಜಮ್ಮುವಿನಲ್ಲಿ ಪ್ರಮುಖ ದೇವಾಲಯ ಮತ್ತು ಕೆಲವು ನಾಗರಿಕ ಪ್ರದೇಶಗಳು ರಾತ್ರೋರಾತ್ರಿ ಶೆಲ್ ದಾಳಿಗೆ ಒಳಗಾದವು. ಇದು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ. ಹಲವಾರು ಮನೆಗಳು ಹಾನಿಗೊಳಗಾಗಿವೆ.

ಜಮ್ಮು: ಮೇ 10, 2025 ರ ಶನಿವಾರ ಜಮ್ಮುವಿನ ವಸತಿ ಪ್ರದೇಶದಲ್ಲಿ ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ, ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ನಾಗರಿಕರು ಜಮಾಯಿಸಿರುವುದು. ಚಿತ್ರ: ಪಿಟಿಐ

ಜಮ್ಮು ಮತ್ತು ಕಾಶ್ಮೀರದ ಹಲವು ಸ್ಥಳಗಳಿಂದ ಶನಿವಾರ ಸ್ಪೋಟಕಗಳು ಮತ್ತು ಡ್ರೋನ್‌ಗಳ ಅವಶೇಷಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸುದ್ಧಿ ಮೂಲವೊಂದರ ಮೂಲಕ ತಿಳಿದು ಬಂದಿದೆ. ಆದರೆ ಅವಶೇಷಗಳು ಕಂಡುಬಂದ ಸ್ಥಳಗಳ ವಿವರಗಳನ್ನು ಅವರು ಸ್ಪಷ್ಟಪಡಿಸಿಲ್ಲ.

ಗಡಿಯಾಚೆಗಿನ ಭಯೋತ್ಪಾದಕ ನೆಲೆಗಳ ಮೇಲೆ ಮೇ 7 ರಂದು ಭಾರತ ಸರ್ಕಾರ ನಿಖರವಾದ ಕ್ಷಿಪಣಿ ದಾಳಿ ನಡೆಸಿದ ನಂತರ ಇದೇ ಮೊದಲ ಬಾರಿಗೆ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಿಗ್ಗೆ ಶ್ರೀನಗರದ ಏಕೈಕ ನಾಗರಿಕ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಭಯಭೀತ ನಿವಾಸಿಗಳು ಹಲವಾರು ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ.
“ಬೆಳಗಾದ ಸ್ವಲ್ಪ ಹೊತ್ತಿನಲ್ಲೇ, ವಿಮಾನ ನಿಲ್ದಾಣದ ಕಡೆಯಿಂದ ಕನಿಷ್ಠ ಐದರಿಂದ ಆರು ದೊಡ್ಡ ಸ್ಫೋಟಗಳು ಸಂಭವಿಸಿದವು. ಮನೆ ನಡುಗಿತು ಮತ್ತು ಮಕ್ಕಳು ನಿದ್ರೆಯಿಂದ ಎದ್ದು ಬೆಚ್ಚಿಬಿದ್ದರು” ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ, ಶ್ರೀನಗರದ ಹುಮ್ಹಾಮಾ ಪ್ರದೇಶದ ನಿವಾಸಿಯೊಬ್ಬರು ಹೇಳಿದರು.

ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಬಳಿಯ ರಕ್ಷಣಾ ವಾಯುನೆಲೆಯ ಸುತ್ತಮುತ್ತಲಿನ ನಿವಾಸಿಗಳು ಶುಕ್ರವಾರ ರಾತ್ರಿ ಸ್ಫೋಟಗಳ ಶಬ್ದಗಳನ್ನು ಕೇಳಿಸಿಕೊಂಡಿದ್ದಾರೆ. ಸ್ಫೋಟಗಳಲ್ಲಿ ಯಾವುದೇ ಗಾಯಗಳು ಅಥವಾ ಸಾವುನೋವುಗಳು ಆದ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಅಥವಾ ವರದಿಗಳು ಬಂದಿಲ್ಲ.

ಜಮ್ಮುವಿನ ಮೇಲೆ ಹಾರುತ್ತಿರುವ ಜೆಟ್‌ಗಳು ಜಮ್ಮು ವಿಮಾನ ನಿಲ್ದಾಣದ ಬಳಿ, ರಕ್ಷಣಾ ವಾಯುನೆಲೆಯ ಬಳಿ ಮತ್ತು ಉಧಂಪುರ್‌ನ ಗ್ಯಾರಿಸನ್ ಪಟ್ಟಣದ ವಾಯುನೆಲೆಯ ಬಳಿ ವಾಯುದಾಳಿಯ ಸೈರನ್‌ಗಳ ನಡುವೆ ಹಲವಾರು ಸ್ಫೋಟಗಳ ಭೀಕರ ಶಬ್ಧಗಳ ನಡುವೆ ಚಳಿಗಾಲದ ರಾಜಧಾನಿ ಜಮ್ಮುವಿನ ನಿವಾಸಿಗಳು ಎಚ್ಚರಗೊಂಡರು.
“ಜೆಟ್‌ಗಳು ಆಕಾಶದಲ್ಲಿ ಹಾರಾಡುತ್ತಿವೆ ಮತ್ತು ಆವಾಗಾವಾಗ ಬಾಂಬಿನ ಶಬ್ದಗಳು ಕೇಳಿಬರುತ್ತಿವೆ.ನನ್ನ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ಸಂಬಂಧಿಕರು ಮತ್ತು ಸ್ನೇಹಿತರಿಂದ ನನಗೆ ಉದ್ರಿಕ್ತ ಕರೆಗಳು ಬರುತ್ತಿವೆ” ಎಂದು ಶನಿವಾರ ಬೆಳಿಗ್ಗೆ ಹೆಸರು ಹೇಳಲು ಇಚ್ಛಿಸದ ಜಮ್ಮು ನಿವಾಸಿಯೊಬ್ಬರು ತಿಳಿಸಿದರು.

ಶುಕ್ರವಾರ ರಾತ್ರಿ 9 ಗಂಟೆಯಿಂದ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಇದಕ್ಕೆ ಪ್ರತಿಯಾಗಿ ಪ್ರತಿದಾಳಿ ನಡೆಸಲಾಗಿದೆ ಎಂದು ಬಿಎಸ್‌ಎಫ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ಬಿಎಸ್‌ಎಫ್ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದು, ಅಂತರರಾಷ್ಟ್ರೀಯ ಗಡಿಯುದ್ದಕ್ಕೂ ಪಾಕಿಸ್ತಾನದ ರೇಂಜರ್‌ಗಳ ಪೋಸ್ಟ್‌ಗಳು ಮತ್ತು ಆಸ್ತಿಗಳಿಗೆ ವ್ಯಾಪಕ ಹಾನಿಯಾಗಿದೆ. ಭಾರತದ ಸಾರ್ವಭೌಮತ್ವವನ್ನು ರಕ್ಷಿಸಲು ನಾವು ಕಂಕಣಬದ್ಧರಾಗಿದ್ದೇವೆ” ಎಂದು ಜಮ್ಮುವಿನ ಬಿಎಸ್‌ಎಫ್ ವಕ್ತಾರರು ʼಎಕ್ಸ್‌ʼನಲ್ಲಿ ತಿಳಿಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಂಡುಬರುವ ದೃಶ್ಯಗಳಲ್ಲಿ ಕೆಲವು ವಸತಿ ಪ್ರದೇಶಗಳ ಮೇಲೆ ಗಡಿಯಾಚೆಯಿಂದ ಸಿಡಿಸಲಾದ ಸ್ಪೋಟಕಗಳು ಬಿದ್ದಿರುವುದನ್ನು ತೋರಿಸಿವೆ. ದೃಶ್ಯವೊಂದರಲ್ಲಿ, ಹಿಂದೂಗಳ ಪ್ರಮುಖ ಧಾರ್ಮಿಕ ತಾಣವಾದ ʼಆಪ್ ಶಂಬುʼ ದೇವಾಲಯದಿಂದ ಸುಮಾರು 80 ಮೀಟರ್ ದೂರದಲ್ಲಿ ಸ್ಫೋಟಗೊಂಡ ಸ್ಪೋಟಕದ ಅವಶೇಷಗಳನ್ನು ಪೊಲೀಸ್ ತಂಡ ಪರಿಶೀಲಿಸುತ್ತಿರುವುದು ಕಂಡುಬಂದಿದೆ.

ವರದಿಗಳ ಪ್ರಕಾರ ರೆಹರಿ, ರೂಪ್ ನಗರ, ಜಾನಿಪುರ, ನಾಗಬಾನಿ ಮತ್ತು ಮುಥಿ ಸೇರಿದಂತೆ ಜಮ್ಮುವಿನ ಕೆಲವು ಭಾಗಗಳಲ್ಲಿ ಶೆಲ್ ದಾಳಿ ಮತ್ತು ಮೇಲಿನಿಂದ ಬೀಳುವ ಸ್ಪೋಟಕಗಳ ಅವಶೇಷಗಳಿಂದಾಗಿ ವಸತಿ ನಿವಾಸಗಳು ಹಾನಿಗೊಳಗಾಗಿವೆ. ಆದಾಗ್ಯೂ, ನಾಗರಿಕರಿಗೆ ಗಾಯಗಳಾದ ಬಗ್ಗೆ ಯಾವುದೇ ವರದಿಗಳಾಗಿಲ್ಲ. ಸಾಂಬಾ ಮತ್ತು ಕಥುವಾ ಜಿಲ್ಲೆಗಳ ಅಂತರರಾಷ್ಟ್ರೀಯ ಗಡಿಯಲ್ಲಿಯೂ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಜಮ್ಮು: ಪಾಕಿಸ್ತಾನದ ದಾಳಿಯಿಂದ ಹಾನಿಗೊಳಗಾದ ವಾಹನಗಳ ಬಳಿ ಜಮಾಯಿಸಿರುವ ಭದ್ರತಾ ಸಿಬ್ಬಂದಿ ಮತ್ತು ನಾಗರಿಕರು, ಶನಿವಾರ, ಮೇ 10, 2025. ಚಿತ್ರ: ಪಿಟಿಐ.



ಕೇಂದ್ರಾಡಳಿತ ಪ್ರದೇಶದಲ್ಲಿ ಸತತ ಮೂರನೇ ದಿನವೂ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟಿದ್ದವು ಆದ ಕಾರಣ, ಜಮ್ಮು ವಿಶ್ವವಿದ್ಯಾಲಯ ಮತ್ತು ಅಲ್ಲಿನ ಕೆಲವು ಕಾಲೇಜುಗಳಲ್ಲಿ ಓದುತ್ತಿರುವ ರಾಜೌರಿಯ ಡಜನ್‌ಗಟ್ಟಲೆ ವಿದ್ಯಾರ್ಥಿಗಳು ಶನಿವಾರ ಬೆಳಿಗ್ಗೆ ಜಮ್ಮು ಬಸ್ ನಿಲ್ದಾಣದಲ್ಲಿ ಅಧಿಕಾರಿಗಳ ಸಹಾಯಕ್ಕಾಗಿ ಕಾಯುತ್ತಿದ್ದರು.

ಸಾರ್ವಜನಿಕ ಸಾರಿಗೆ ವಾಹನಗಳು ನಮ್ಮನ್ನು ನಮ್ಮ ಊರಿಗೆ ಹಿಂತಿರುಗಲು ನಿರಾಕರಿಸುತ್ತಿವೆ ಎಂದು ಜಮ್ಮು ವಿಶ್ವವಿದ್ಯಾಲಯದ ವಿದ್ಯಾರ್ಥಿ ಉಮರ್ ಫಾರೂಕ್ ‘ದಿ ವೈರ್’ಗೆ ತಿಳಿಸಿದ್ದಾರೆ. ಅಲ್ಲಿ ನಿನ್ನೆ ರಾತ್ರಿ ಪಾಕಿಸ್ತಾನದಿಂದ ಭಾರೀ ಫಿರಂಗಿ ದಾಳಿ ನಡೆದು, ಜಮ್ಮು-ಕಾಶ್ಮೀರದ ಒಬ್ಬ ಹಿರಿಯ ಅಧಿಕಾರಿ ಮತ್ತು ಇಬ್ಬರು ನಾಗರಿಕರು ಸಾವನ್ನಪ್ಪಿದ್ದರು.”ನಾವು ಕೆಲವು ಖಾಸಗಿ ಪ್ರಯಾಣಿಕರ ಕ್ಯಾಬ್‌ಗಳ ಪ್ರಯಾಣಿಕರ ಸಂಖ್ಯೆಯನ್ನು ದ್ವಿಗುಣಗೊಳಿಸಲು ಕೇಳಿಕೊಂಡೆವು, ಆದರೆ ಅವರು ಸಹ ನಮಗೆ ಮನೆಗೆ ಹಿಂತಿರುಗಲು ಸಹಾಯ ಮಾಡಲು ನಿರಾಕರಿಸುತ್ತಿದ್ದಾರೆ” ಎಂದು ಅವರು ಹೇಳಿದರು.

ಹಾನಿಗೊಳಗಾದ ಜೀವಗಳು
ಬಾರಾಮುಲ್ಲಾ, ಕುಪ್ವಾರಾ, ಬಂಡಿಪೋರಾ, ರಾಜೌರಿ ಮತ್ತು ಪೂಂಚ್‌ಗಳಲ್ಲಿನ ʼಎಲ್‌ಒಸಿʼ ಉದ್ದಕ್ಕೂ ಪಾಕಿಸ್ತಾನ ರಾತ್ರೋರಾತ್ರಿ ಭಾರೀ ಫಿರಂಗಿ ದಾಳಿ ನಡೆಸಿದ್ದು, ಇದರಲ್ಲಿ ಕನಿಷ್ಠ ನಾಲ್ಕು ನಾಗರಿಕರು ಮತ್ತು ರಾಜೌರಿಯ ಹೆಚ್ಚುವರಿ ಉಪ ಆಯುಕ್ತ ʼರಾಜ್‌ಕುಮಾರ್ ಥಪ್ಪಾʼ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ರಾಜೌರಿಯಿಂದ ಆಘಾತಕಾರಿ ಸುದ್ದಿ ಬಂದಿದೆ. ಜಮ್ಮು-ಕಾಶ್ಮೀರದ ರಕ್ಷಣೆಗಾಗಿ ತಮ್ಮನ್ನು ತಾವು ಸಮರ್ಪಿಸಿಕೊಂಡ ಆಡಳಿತ ಅಧಿಕಾರಿಯನ್ನು ನಾವು ಕಳೆದುಕೊಂಡಿದ್ದೇವೆ. ನಿನ್ನೆಯಷ್ಟೇ ಅವರು ಜಿಲ್ಲೆಯಾದ್ಯಂತ ಉಪ ಮುಖ್ಯಮಂತ್ರಿಯೊಂದಿಗೆ ಇದ್ದರು ಮತ್ತು ನಾನು ಅಧ್ಯಕ್ಷತೆ ವಹಿಸಿದ್ದ ಆನ್‌ಲೈನ್ ಸಭೆಯಲ್ಲಿ ಭಾಗವಹಿಸಿದ್ದರು” ಎಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ʼಎಕ್ಸ್‌ʼನಲ್ಲಿ ಪೋಸ್ಟ್ ಮಾಡಿದ್ದಾರೆ. “ಈ ಭಯಾನಕ ಸಾವಿನಿಂದ ನನಗೆ ಉಂಟಾದ ಆಘಾತ ಮತ್ತು ದುಃಖವನ್ನು ವ್ಯಕ್ತಪಡಿಸಲು ನನ್ನಲ್ಲಿ ಪದಗಳಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ” ಎಂದು ಪೋಸ್ಟ್‌ನಲ್ಲಿ ಸೇರಿಸಲಾಗಿದೆ.

ʼಎಲ್‌ಒಸಿʼಯಾದ್ಯಂತ ಸಿಡಿಸಿದ ಮಾರ್ಟರ್ ಶೆಲ್, ರಾಜೌರಿಯಲ್ಲಿರುವ ʼಥಾಪಾʼ ಅವರ ನಿವಾಸಕ್ಕೆ ಬಡಿದು ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಅವರ ಇಬ್ಬರು ಸಿಬ್ಬಂದಿಗಳು ಸ್ಫೋಟದಲ್ಲಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಭಾರೀ ಫಿರಂಗಿ ಶೆಲ್ ದಾಳಿಯ ಕಾರಣದಿಂದಾಗಿ ʼಎಲ್‌ಒಸಿʼ ಗಡಿಯ ಉದ್ದಕ್ಕೂ ಇರುವ ಅನೇಕ ಗ್ರಾಮಗಳನ್ನು ಸ್ಥಳಾಂತರಿಸಬೇಕಾಯಿತು, ಇದೇ ಸಮಯದಲ್ಲಿ, ಈ ಪ್ರದೇಶಗಳಲ್ಲಿ ವಾಸಿಸುವ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಮರಳಲು ಸಾರಿಗೆ ವ್ಯವಸ್ಥೆ ಕೂಡಾ ಮಾಡಲಾಗುತ್ತಿದೆ.

ವರದಿ: ಜಹಾಂಗೀರ್ ಅಲಿ, ದಿ ವೈರ್
ಅನುವಾದ: ಗುರು ಸುಳ್ಯ

Related Articles

ಇತ್ತೀಚಿನ ಸುದ್ದಿಗಳು

You cannot copy content of this page