Tuesday, June 10, 2025

ಸತ್ಯ | ನ್ಯಾಯ |ಧರ್ಮ

ರಾಮನ ಅವಹೇಳನ ಪ್ರಕರಣ; ಸಾಹಿತಿ ಕೆಎಸ್ ಭಗವಾನ್ ಖುಲಾಸೆ, ಮೀರಾ ರಾಘವೇಂದ್ರಗೆ ತೀವ್ರ ಅವಮಾನ

ಹಿರಿಯ ಸಾಹಿತಿ ಕೆಎಸ್ ಭಗವಾನ್ ಅವರಿಗೆ ಮಸಿ ಬಳಿದ ಪ್ರಕರಣದಲ್ಲಿ ಇತ್ತೀಚೆಗೆ ಶಿಷ್ಟಾಚಾರ ಉಲ್ಲಂಘನೆ ಅಡಿಯಲ್ಲಿ ವಕೀಲೆ ಮೀರಾ ರಾಘವೇಂದ್ರಗೆ ಶಿಸ್ತು ಪಾಲನ ಸಮಿತಿ ವಿಧಿಸಿದ್ದ ನಿರ್ಬಂಧದ ನಂತರ ಈಗ ಮತ್ತೊಂದು ಪ್ರಕರಣದಲ್ಲಿ ಸಾಹಿತಿ ಕೆಎಸ್ ಭಗವಾನ್ ಅವರನ್ನು ಖುಲಾಸೆಗೊಳಿಸಿ, ಮೀರಾ ರಾಘವೇಂದ್ರಗೆ ಮುಖಭಂಗವಾಗಿದೆ.

ಕೆಎಸ್ ಭಗವಾನ್ ಅವರ ‘ರಾಮಮಂದಿರ ಏಕೆ ಬೇಡ’ ಎಂಬ ಪುಸ್ತಕದಲ್ಲಿ ಶ್ರೀರಾಮನನ್ನು ಅವಮಾನಕರವಾಗಿ ಬಿಂಬಿಸಲಾಗಿದೆ ಎಂದು ಆರೋಪಿಸಿ ವಕೀಲೆ ಮೀರಾ ರಾಘವೇಂದ್ರ ಕೋರ್ಟ್ ಮೆಟ್ಟಿಲೇರಿದ್ದರು. ಪುಸ್ತಕದಲ್ಲಿ ಕೆಎಸ್ ಭಗವಾನ್ ರಾಮನನ್ನು ಹೀಯಾಳಿಸಿ ಬರೆದಿದ್ದಾರೆ , ರಾಮನ ವಿರುದ್ಧ ಅವಹೇಳನಕಾರಿ ಪದ ಪ್ರಯೋಗ ಮಾಡಿದ್ದಾರೆ. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಕೃತ್ಯ ಎಂದು ಆರೋಪಿಸಿದ್ದರು.

ಈ ಸಂಬಂಧ ಮೀರಾ ರಾಘವೇಂದ್ರ ಅವರು, ದಾಖಲಿಸಿದ್ದ ಖಾಸಗಿ ಕ್ರಿಮಿನಲ್ ದೂರಿನ ವಿಚಾರಣೆ ನಡೆಸಿದ 37ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಎಂ.ಸೈಯದ್‌ ಅರಾಫತ್‌ ಇಬ್ರಾಹಿಂ ಅವರು ಸೋಮವಾರ ಭಗವಾನ್‌ ಅವರನ್ನು ಖುಲಾಸೆಗೊಳಿಸಿ ಆದೇಶಿಸಿದ್ದಾರೆ.

ಇತ್ತೀಚೆಗಷ್ಟೇ ಮೀರಾ ರಾಘವೇಂದ್ರ ಮತ್ತು ಕೆಎಸ್ ಭಗವಾನ್ ಅವರ ನಡುವಿನ ಮತ್ತೊಂದು ಪ್ರಕರಣದಲ್ಲೂ ಮೀರಾ ರಾಘವೇಂದ್ರಗೆ ವಕೀಲರ ಪರಿಷತ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ‘ಕೋರ್ಟ್‌ ಆವರಣದಲ್ಲಿ ಸಾಹಿತಿ ಕೆ.ಎಸ್‌.ಭಗವಾನ್‌ ಅವರ ಮುಖಕ್ಕೆ ಮಸಿ ಬಳಿಯುವ ಮೂಲಕ ವಕೀಲೆ ಮೀರಾ ರಾಘವೇಂದ್ರ ಅವರು ವೃತ್ತಿ ದುರ್ನಡತೆ ತೋರಿದ್ದು, ವಕೀಲರ ಶಿಷ್ಟಾಚಾರಗಳಿಗೆ ಅವಮಾನ ಉಂಟು ಮಾಡಿದ್ದಾರೆ. ಈ ಕಾರಣಕ್ಕಾಗಿ ಅವರು ಮೂರು ತಿಂಗಳ ಕಾಲ ದೇಶದ ಯಾವುದೇ ಕೋರ್ಟ್‌ಗಳಲ್ಲಿ ವಕೀಲಿಕೆ ನಡೆಸಬಾರದು’ ಎಂದು ರಾಜ್ಯ ವಕೀಲರ ಪರಿಷತ್‌ ಆದೇಶಿಸಿತ್ತು.

ಈ ಪ್ರಕರಣದ ನಂತರ ರಾಮನ ಅವಹೇಳನ ಪ್ರಕರಣದಲ್ಲಿ ಕೆಎಸ್ ಭಗವಾನ್ ಅವರನ್ನು ಖುಲಾಸೆಗೊಳಿಸಿ, ಮೀರಾ ರಾಘವೇಂದ್ರಗೆ ತೀವ್ರ ಮುಖಭಂಗವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page