Sunday, June 22, 2025

ಸತ್ಯ | ನ್ಯಾಯ |ಧರ್ಮ

ಚಾಮರಾಜನಗರದಲ್ಲಿ ಅಸ್ಪೃಶ್ಯತೆ ಆಚರಣೆ : FIR ದಾಖಲು

ಚಾಮರಾಜನಗರ: ಇಲ್ಲಿಗೆ ಸಮೀಪದ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಮೂರು ದಿನಗಳ ಹಿಂದೆ ಇಲ್ಲಿ ನಡೆದಿದ್ದ ಅಸ್ಪೃಶ್ಯತೆ ಆಚರಣೆಗೆ ಸಂಬಂಧಿಸಿದಂತೆ ಭಾನುವಾರ ಸಂಜೆ FIR ದಾಖಲಾಗಿದೆ. ಸೊಕಾಲ್ಡ್‌ ಮೇಲ್ಜಾತಿಗೆ ಸೇರಿದ ತೊಂಬೆ(ಟ್ಯಾಂಕರ್)‌ಯಲ್ಲಿ ದಲಿತರು ನೀರು ಕುಡಿದು ಮಲಿನ ಮಾಡಿದ್ದರು ಎಂದು ಆರೋಪಿಸಿ ಜಾತಿ ನಿಂದನೆ ಮಾಡಲಾಗಿತ್ತಲ್ಲದೆ, ಆ ಟ್ಯಾಂಕರನ್ನು ಗೋಮೂತ್ರ ಸಿಂಪಡಿಸಿ ಶುದ್ದೀಕರಿಸುವ ವೈದಿಕ ಆಚರಣೆಯನ್ನೂ ನಡೆಸಲಾಗಿತ್ತು. ಈ ಕುರಿತಂತೆ ಹೆಗ್ಗೋಠಾರ ಗ್ರಾಮದ ಗಿರಿಯಪ್ಪ ಎಂಬುವವರು ಚಾಮರಾಜನಗರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ಸಲ್ಲಿಸಿದ್ದು FIR ನಲ್ಲಿ ಕೆಳಗಿನಂತೆ ದಾಖಲಾಗಿದೆ.

FIR ನಲ್ಲಿ ಏನಿದೆ?

ಚಾಮರಾಜನಗರ ತಾಲ್ಲೂಕಿನ ಹೆಗ್ಗೋಠಾರ ಗ್ರಾಮದಲ್ಲಿ ದಲಿತ ಜನಾಂಗದ ಕುಟುಂಬದಲ್ಲಿ ನವೆಂಬರ್‌ 18ರಂದು ಮದುವೆ ಸಮಾರಂಭ ಏರ್ಪಡಿಸಲಾಗಿತ್ತು. ಈ ವೇಳೆ ಮದುವೆಗೆ ಆಗಮಿಸಿದ್ದ ಸಂಬಂಧಿಕರು ಸುಮಾರು ಒಂದು ಗಂಟೆಯ ಸಮಯದಲ್ಲಿ ಊಟ ಮುಗಿಸಿ, ಟೆಂಪೋ ಹತ್ತಲು ಹೊರಡುವಾಗ ಹುಡುಗಿ ಕಡೆಯ ಮಹಿಳೆ ಶಿವಮ್ಮ ಎಂಬುವವರು ಬಾಯಾರಿಕೆಯಾಗಿ ನೀರು ಕುಡಿಯಲು ಕೃಷ್ಣದೇವರಾಯ ದೇವಾಲಯದ ಬಳಿ ಇದ್ದ ಟ್ಯಾಂಕರ್‌ನಲ್ಲಿ ನೀರು ಕುಡಿದಾಗ ಮಹಿಳೆಗೆ ಜಾತಿ ನಿಂದನೆ ಆಗಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ.

ಮಹಿಳೆ ನೀರು ಕುಡಿಯುವುದು ಗಮನಿಸಿದ ವೀರಶೈವ ಮುಖಂಡನಾದ ಮಹದೇವಪ್ಪ(ಪಟ್ಟವಾಡಿ) ಎಂಬ ವ್ಯಕ್ತಿಯು, ʼನೀನು ಯಾವ ಜನಾಂಗದ ಮಹಿಳೆʼ ಎಂದು ಕೇಳಿದಾಗ ʼನಾನು ಪರಿಶಿಷ್ಟ ಜನಾಂಗದ ಮಹಿಳೆʼ ಎಂದು ಉತ್ತರಿಸಿದ್ದು, ʼಇದು ವೀರಶೈವರಿಗೆ ಸೇರಿದ ತೊಂಬೆ. ನೀವು ದಲಿತರು. ಇಲ್ಲಿಗೆ ಬಂದು ನೀರು ಕುಡಿದು ನಮ್ಮ ತೊಂಬೆಗಳನ್ನು ಮಲೀನ ಮಾಡಿದ್ದೀರಾʼ ಎಂದು ಗಲಾಟೆ ಮಾಡಿ ಜಾರಿ ನಿಂದನೆ ಮಾಡಿದ್ದಾರೆಂದು FIR ನಲ್ಲಿ ಪ್ರಸ್ತಾಪಿಸಿದ್ದಾರೆ.

ಇದರ ಬಗ್ಗೆ ಕಾನೂನು ರೀತಿಯ ಕ್ರಮ ಜರುಗಿಸಿ ಶೋಷಣೆಗೊಳಗಾದ ಮಹಿಳೆಗೆ ನ್ಯಾಯ ದೊರಕಿಸಿ ರಕ್ಷಣೆ ಕೊಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page