Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ನವೆಂಬರ್ ವೇಳೆಗೆ ಕರ್ನಾಟಕದ ಜಾತಿ ಗಣತಿ ಬಿಡುಗಡೆ!

ನವೆಂಬರ್ ವೇಳೆಗೆ ಕರ್ನಾಟಕದ ಜಾತಿ ಗಣತಿ ಬಿಡುಗಡೆ!

0

ಬಿಹಾರದ ನಿತೀಶ್ ಕುಮಾರ್ ಸರ್ಕಾರ ಬಿಡುಗಡೆ ಮಾಡಿರುವ ಜಾತಿ ಗಣತಿ ವರದಿ ಬೆನ್ನಲ್ಲೇ ಈಗ ಎಲ್ಲರ ಚಿತ್ತ ಕರ್ನಾಟಕ ಸರ್ಕಾರದ ಮೇಲೆ ನೆಟ್ಟಿದೆ. ಕರ್ನಾಟಕದಲ್ಲೂ ಜಾತಿ ಗಣತಿ ವರದಿ ಬಿಡುಗಡೆಗೆ ಒತ್ತಡಗಳು ಹೆಚ್ಚಿದ್ದು, ನವೆಂಬರ್ ತಿಂಗಳಲ್ಲಿ ಜಾತಿ ಗಣತಿ ವರದಿ ಸಿಎಂ ಸಿದ್ದರಾಮಯ್ಯ ಅವರ ಕೈ ಸೇರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಇದರ ಬೆನ್ನಲ್ಲೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು ಬಿಡುಗಡೆ ಮಾಡಬೇಕು ಎಂಬ ಒತ್ತಡ ಕೂಡಾ ಸಿದ್ದರಾಮಯ್ಯ ಸರ್ಕಾರಕ್ಕೆ ಬಂದಿದೆ. ನವೆಂಬರ್ ಅಥವಾ ಡಿಸೆಂಬರ್ ವೇಳೆಯಲ್ಲಿ ಕರ್ನಾಟಕ ಸರ್ಕಾರ ಜಾತಿ ಗಣತಿಯ ವರದಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ನವೆಂಬರ್‌ನಲ್ಲಿ ಸರ್ಕಾರಕ್ಕೆ ಆ ವರದಿ ಸಲ್ಲಿಸುವುದಾಗಿ ಮಂಗಳವಾರ ತಿಳಿಸಿದ್ದಾರೆ. ವರದಿಯ ಬಗ್ಗೆ ಇನ್ನು ಅಂತಿಮ ಹಂತದ ತಯಾರಿ ಇದ್ದು, ಪಟ್ಟಿ ಸಿದ್ಧತೆ ಕೂಡಾ ಅಂತಿಮ ಹಂತದಲ್ಲಿದೆ ಎಂದು ಕೆ.ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ. ಜಯಪ್ರಕಾಶ್ ಹೆಗ್ಡೆ ಅವರು ಹೇಳಿದಂತೆ ವರದಿ ನವೆಂಬರ್ ತಿಂಗಳಲ್ಲಿ ಸರ್ಕಾರಕ್ಕೆ ಸಲ್ಲಿಕೆಯಾದಲ್ಲಿ ಅದೇ ತಿಂಗಳು ವರದಿ ಸಾರ್ವಜನಿಕಗೊಳ್ಳುವ ಸಾಧ್ಯತೆ ಇದೆ ಎಂದಿದ್ದಾರೆ.

2015ರಲ್ಲಿ ಆಗಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ 170 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಚಾಲನೆ ನೀಡಿತ್ತು. ಅದರ ವರದಿ ಇನ್ನೂ ಬಹಿರಂಗವಾಗಿಲ್ಲ. ಆಗಿನ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಅಧ್ಯಕ್ಷರಾಗಿದ್ದ ಹೆಚ್. ಕಾಂತರಾಜ್ ಅವರ ನೇತೃತ್ವದಲ್ಲಿ ಜಾತಿಗಣತಿ ನಡೆಸಲಾಗಿತ್ತು.

ಕರ್ನಾಟಕದ ಜಾತಿ ಗಣತಿ ಅಂದಾಜಿನ ಪ್ರಕಾರ ಮೊದಲ ಸ್ಥಾನದಲ್ಲಿ ದಲಿತರು ಇರಬಹುದು ಎಂದು ಅಂದಾಜು ಮಾಡಲಾಗಿದೆ. ನಂತರದ ಸ್ಥಾನಕ್ಕೆ ಲಿಂಗಾಯತರು, ಮುಸಲ್ಮಾನರು, ಒಕ್ಕಲಿಗ ಸಮುದಾಯ ಬರಲಿದೆ ಎಂದು ಅಂದಾಜಿಸಲಾಗಿದೆ. ಅತ್ಯಂತ ಹಿಂದುಳಿದ ವರ್ಗಗಳಾದ ಈಡಿಗರು, ಕುಂಬಾರರು ಮತ್ತು ಇತರರು ಒಟ್ಟಾಗಿ ಜನಸಂಖ್ಯೆಯ 20% ರಷ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಕಾರಣಕ್ಕೆ ಒಕ್ಕಲಿಗ ಮತ್ತು ಲಿಂಗಾಯತ ಗುಂಪುಗಳು ಗಣತಿಯನ್ನು ಅವೈಜ್ಞಾನಿಕವಾಗಿ ಮಾಡಲಾಗಿದೆ ಎಂದು ಹೇಳುವ ಮೂಲಕ ವರದಿಯನ್ನು ತಡೆಯಲು ಪ್ರಯತ್ನಿಸುತ್ತಿವೆ. ಆದರೆ ಮೊದಲು ವರದಿ ಹೊರ ಬರಲಿ ಚರ್ಚೆಯಾಗಲಿ, ಭಾರತ ಮೈತ್ರಿಕೂಟದ ಪಾಲುದಾರ ಬಿಹಾರವನ್ನು ಅನುಸರಿಸುವುದು ಕರ್ನಾಟಕಕ್ಕೆ ಅಗತ್ಯ ಎಂದು ಕಾಂಗ್ರೆಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.

ಈ ಹಿಂದೆಯೇ ಜಾತಿ ಗಣತಿಯ ಪಟ್ಟಿ ವರದಿಯ ಕೆಲಸ ಅಂತಿಮಗೊಂಡಿದೆ. ಆದರೆ ಈ ವರೆಗೆ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಈ ವರದಿಯನ್ನು ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದರು. ಅಷ್ಟೆ ಅಲ್ಲದೆ ಕೇಂದ್ರ ಬಿಜೆಪಿ ಸರ್ಕಾರಕ್ಕೆ ಜಾತಿ ಗಣತಿ ಬಿಡುಗಡೆ ಮಾಡುವುದಕ್ಕೆ ಸ್ಪಷ್ಟ ವಿರೋಧ ಮಾಡಿರಬಹುದಾದ ಹಿನ್ನೆಲೆಯಲ್ಲಿ ಇದನ್ನು ಯಡಿಯೂರಪ್ಪ ಮತ್ತು ಬೊಮ್ಮಾಯಿ ಬಿಡುಗಡೆ ಮಾಡಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ.

You cannot copy content of this page

Exit mobile version