ಲೋಕಸಭೆಯಲ್ಲಿ ಕೇಸರಿ ಪಕ್ಷದ ನಾಯಕರು ಜಾತಿ ಪ್ರಸ್ತಾಪಿಸಿದ್ದಕ್ಕೆ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿಯವರ ಜಾತಿಯ ಬಗ್ಗೆ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಈ ರೀತಿಯಾಗಿ ಖರ್ಗೆ ಪ್ರತಿಕ್ರಿಯಿಸಿದ್ದಾರೆ.
ಸಂಸತ್ತಿನಲ್ಲಿ ಜಾತಿ ಪ್ರಸ್ತಾಪಿಸುವುದು ಸರಿಯಲ್ಲ ಎಂದ ಅವರು, ಅನುರಾಗ್ ಠಾಕೂರ್ ಅವರು ರಾಹುಲ್ ಗಾಂಧಿಯನ್ನು ಅವಮಾನಿಸುವ ಮಾತನಾಡಿದ್ದು, ಇದು ಸರಿಯಲ್ಲ ಎಂದರು.
ಬಿಜೆಪಿಯ ಹಲವು ಹಿರಿಯ ನಾಯಕರು ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದು, ಈ ವಿಷಯವನ್ನು ಬಹಿರಂಗ ಪಡಿಸಬೇಕು ಎಂದರು. ಮೊದಲು ಅವರು ತಮ್ಮನ್ನು ಕನ್ನಡಿಯಲ್ಲಿ ನೋಡಿಕೊಂಡು ಬೇರೆಯವರ ಬಗ್ಗೆ ಮಾತನಾಡಲಿ ಎಂದು ಖರ್ಗೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದರು. ಅನುರಾಗ್ ಠಾಕೂರ್ ಅಪ್ರಬುದ್ಧತೆಯಿಂದ ಮಾತನಾಡುತ್ತಿದ್ದರೆ ಅವರೊಂದಿಗೆ ಪ್ರಧಾನಿ ಮೋದಿ ಸಹ ಟ್ವೀಟ್ ಮಾಡುವ ಅವಶ್ಯಕತೆ ಏನಿತ್ತು ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯ ಹಲವು ನಾಯಕರು ಇತರ ಜಾತಿ, ಧರ್ಮದವರನ್ನು ಮದುವೆಯಾಗಿದ್ದಾರೆ, ಹಾಗಿದ್ದರೆ ಅವರು ತಮ್ಮ ಪಕ್ಷದ ನಾಯಕರ ಜಾತಿಯ ಕುರಿತಾಗಿಯೂ ಅನುಮಾನವನ್ನು ಹೊಂದಿದ್ದಾರೆಯೇ? ಎಂದು ಖರ್ಗೆ ಕೇಳಿದ್ದಾರೆ.
ಪ್ರಧಾನಿ ಮೋದಿಯವರ ಟ್ವೀಟನ್ನು ಖಂಡಿಸಿದ ಅವರು ಪ್ರಧಾನಿ ಮೋದಿಯವರು ಎಲ್ಲಿ ಮಾತನಾಡಬೇಕು, ಯಾವುದನ್ನು ಬೆಂಬಲಿಸಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳಬೇಕು. ಅದನ್ನು ಬದಿಗಿಟ್ಟು ಪ್ರಧಾನಿ ಮೋದಿ ಭಾವನೆಗಳನ್ನು ಕೆರಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸಂಸತ್ತಿನಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂದು ಖರ್ಗೆ ಆಗ್ರಹಿಸಿದ್ದಾರೆ.