<?xml version="1.0" encoding="UTF-8"?><rss version="2.0"
	xmlns:content="http://purl.org/rss/1.0/modules/content/"
	xmlns:wfw="http://wellformedweb.org/CommentAPI/"
	xmlns:dc="http://purl.org/dc/elements/1.1/"
	xmlns:atom="http://www.w3.org/2005/Atom"
	xmlns:sy="http://purl.org/rss/1.0/modules/syndication/"
	xmlns:slash="http://purl.org/rss/1.0/modules/slash/"
	>

<channel>
	<title>ಲೈಫ್‌ ಸ್ಟೈಲ್‌ &#8211; Peepal Media</title>
	<atom:link href="https://peepalmedia.com/category/more/life-style/feed/" rel="self" type="application/rss+xml" />
	<link>https://peepalmedia.com</link>
	<description>ಸತ್ಯ &#124; ನ್ಯಾಯ &#124;ಧರ್ಮ</description>
	<lastBuildDate>Sat, 22 Feb 2025 10:23:23 +0000</lastBuildDate>
	<language>en-GB</language>
	<sy:updatePeriod>
	hourly	</sy:updatePeriod>
	<sy:updateFrequency>
	1	</sy:updateFrequency>
	<generator>https://wordpress.org/?v=6.8.3</generator>

<image>
	<url>https://peepalmedia.com/wp-content/uploads/2022/07/cropped-cropped-WhatsApp-Image-2022-07-22-at-3.09.48-PM-32x32.jpeg</url>
	<title>ಲೈಫ್‌ ಸ್ಟೈಲ್‌ &#8211; Peepal Media</title>
	<link>https://peepalmedia.com</link>
	<width>32</width>
	<height>32</height>
</image> 
	<item>
		<title>ಕೊರೊನಾದಂಥ ಮತ್ತೊಂದು ಅಪಾಯಕಾರಿ ವೈರಸ್ ಹರಡಲಿದೆಯೇ? l ಚೀನಾದಲ್ಲಿ ಪತ್ತೆ!</title>
		<link>https://peepalmedia.com/will-another-dangerous-virus-like-corona-spread-l-detected-in-china/</link>
		
		<dc:creator><![CDATA[Peepal Media]]></dc:creator>
		<pubDate>Sat, 22 Feb 2025 10:22:46 +0000</pubDate>
				<category><![CDATA[ಆರೋಗ್ಯ]]></category>
		<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<category><![CDATA[writing]]></category>
		<guid isPermaLink="false">https://peepalmedia.com/?p=54301</guid>

					<description><![CDATA[ಬೆಂಗಳೂರು: ಕೊರೊನಾದಂತೆಯೇ ಸಾಂಕ್ರಾಮಿಕ ರೋಗವನ್ನು ಹರಡುವಂಥಹ ಹೊಸ ಬಗೆಯ ವೈರಸ್ ಒಂದು ಬಾವಲಿಯ ಮೂಲಕ ಮನುಷ್ಯನ ದೇಹ ಪ್ರವೇಶಿಸಿದೆ ಎಂದು ಚೀನಿ ಸಂಶೋಧಕರು ಕಂಡು ಹಿಡಿದಿದ್ದಾರೆ. ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಈ ಹೊಸ ಬಗೆಯ ವೈರಸ್‌ಗೆ ಚೀನಿ ಸಂಶೋಧಕರು HKU5-CoV-2 ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಬಗೆಯ ಅಪಾಯಕಾರಿ ವೈರಸ್ ಕೊರೊನಾವೈರಸ್‌ನಂತೆ ಮಾನವನ ಜೀವಕೋಶದ ಪ್ರೋಟಿನ್‌ಗಳನ್ನು ಹಾನಿ ಮಾಡಿ ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ರೋಗ ಹರಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. ಅದಾಗ್ಯೂ [&#8230;]]]></description>
										<content:encoded><![CDATA[
<p><strong>ಬೆಂಗಳೂರು</strong>: ಕೊರೊನಾದಂತೆಯೇ ಸಾಂಕ್ರಾಮಿಕ ರೋಗವನ್ನು ಹರಡುವಂಥಹ ಹೊಸ ಬಗೆಯ ವೈರಸ್ ಒಂದು ಬಾವಲಿಯ ಮೂಲಕ ಮನುಷ್ಯನ ದೇಹ ಪ್ರವೇಶಿಸಿದೆ ಎಂದು ಚೀನಿ ಸಂಶೋಧಕರು ಕಂಡು ಹಿಡಿದಿದ್ದಾರೆ. </p>



<p>ಬಾವಲಿ ಮೂಲಕ ಮಾನವನ ದೇಹ ಹೊಕ್ಕಿರುವ ಈ ಹೊಸ ಬಗೆಯ ವೈರಸ್‌ಗೆ ಚೀನಿ ಸಂಶೋಧಕರು HKU5-CoV-2 ಎಂದು ನಾಮಕರಣ ಮಾಡಲಾಗಿದೆ. ಈ ಹೊಸ ಬಗೆಯ ಅಪಾಯಕಾರಿ ವೈರಸ್ ಕೊರೊನಾವೈರಸ್‌ನಂತೆ ಮಾನವನ ಜೀವಕೋಶದ ಪ್ರೋಟಿನ್‌ಗಳನ್ನು ಹಾನಿ ಮಾಡಿ ಒಬ್ಬರಿಂದ ಮತ್ತೊಬ್ಬರಿಗೆ ಗಾಳಿಯ ಮೂಲಕ ರೋಗ ಹರಡಬಹುದು ಎಂದು ಸಂಶೋಧಕರು ಹೇಳಿದ್ದಾರೆ. </p>



<p>ಅದಾಗ್ಯೂ monoclonal antibodies ಎಂಬ ಪ್ರತಿಕಾಯಗಳು ಬಾವಲಿ ಮೂಲಕ ಹೊರ ಬಂದಿರುವ ವೈರಸ್‌ ಅನ್ನು ನಾಶಪಡಿಸಬಹುದು ಎಂಬ ಸತ್ಯವನ್ನು ಚೀನಿ ಸಂಶೋಧಕರು ಕಂಡುಕೊಂಡಿದ್ದಾರೆ ಎಂದು ರಾಯಿಟರ್ಸ್ ಸುದ್ದಿಸಂಸ್ಥೆ ವರದಿ ಮಾಡಿದೆ. ಮಿನ್ನೇಸೋಟ ವಿಶ್ವವಿದ್ಯಾಲಯದಲ್ಲಿ ಸಾಂಕ್ರಾಮಿಕ ರೋಗ ತಜ್ಞ ಡಾ. ಮೈಕೆಲ್ ಓಸ್ಟರ್‌ಹೋಮ್, ‘ಚೀನಿ ಸಂಶೋಧಕರ ವರದಿಯು ಹೊಸ ವೈರಸ್‌ ಬಗ್ಗೆ ಉತ್ಪ್ರೇಕ್ಷೆಯನ್ನು ಹೊರಹಾಕಿದೆ. ಅದಾಗ್ಯೂ ಕೋವಿಡ್–19 ನಂತರ ಜನರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿದೆ. ಹೀಗಾಗಿ ಹೊಸ ವೈರಸ್ ಯಾವುದೇ ಹಾನಿ ಮಾಡದು’ ಎಂದಿದ್ದಾರೆ. </p>



<p></p>



<p></p>
]]></content:encoded>
					
		
		
			</item>
		<item>
		<title>&#8220;ಬದುಕೆಂಬ ಸಾಗರದಲ್ಲೊಂದು ಜೇನಹನಿ&#8221;</title>
		<link>https://peepalmedia.com/a-drop-of-honey-in-the-ocean-of-life/</link>
		
		<dc:creator><![CDATA[Prasad Naik]]></dc:creator>
		<pubDate>Fri, 01 Dec 2023 11:33:58 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=33311</guid>

					<description><![CDATA[ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್, ಬಿಡುವಿಲ್ಲದ ದಿನಚರಿ, ಆಫೀಸು ಟೂರುಗಳು, ಟಾರ್ಗೆಟ್-ಅಪ್ರೈಸಲ್, ನೆಟ್ ಫ್ಲಿಕ್ಸ್-ಆಂಡ್-ಚಿಲ್, ಸಾಧ್ಯವಿದ್ದರೆ ಕುಟುಂಬದೊಂದಿಗೆ ಒಂದಷ್ಟು ಹೊತ್ತು, ಇಲ್ಲವಾದರೆ ಮತ್ತದೇ ಫೋನು-ವೈನು-ಮತ್ತು&#8230; ಇವೆಲ್ಲದರ ಮಧ್ಯೆ ನಮ್ಮ ಒಳದನಿಗೆ ಕಿವಿಯಾಗುವುದನ್ನೇ ನಾವು ಮರೆತುಬಿಟ್ಟಿರುತ್ತೇವೆ- ಪ್ರಸಾದ್‌ ನಾಯ್ಕ್‌, ದೆಹಲಿ ಮೆಟ್ರೋ ಟೈಮ್ಸ್-‌11 ಎಂದಿನಂತೆ ಅದೂ ಒಂದು ದಿನ. ನೀವು ಎಲ್ಲಿಗೋ ಡ್ರೈವ್ [&#8230;]]]></description>
										<content:encoded><![CDATA[
<p class="has-text-color has-background has-link-color wp-elements-cbf15e7fdcf05ccd9638bb5b0f0d988f" style="color:#c21414e8;background-color:#4da38517"><strong><sub>ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್, ಬಿಡುವಿಲ್ಲದ ದಿನಚರಿ, ಆಫೀಸು ಟೂರುಗಳು, ಟಾರ್ಗೆಟ್-ಅಪ್ರೈಸಲ್, ನೆಟ್ ಫ್ಲಿಕ್ಸ್-ಆಂಡ್-ಚಿಲ್, ಸಾಧ್ಯವಿದ್ದರೆ ಕುಟುಂಬದೊಂದಿಗೆ ಒಂದಷ್ಟು ಹೊತ್ತು, ಇಲ್ಲವಾದರೆ ಮತ್ತದೇ ಫೋನು-ವೈನು-ಮತ್ತು&#8230; ಇವೆಲ್ಲದರ ಮಧ್ಯೆ ನಮ್ಮ ಒಳದನಿಗೆ ಕಿವಿಯಾಗುವುದನ್ನೇ ನಾವು ಮರೆತುಬಿಟ್ಟಿರುತ್ತೇವೆ- <mark style="background-color:rgba(0, 0, 0, 0)" class="has-inline-color has-black-color">ಪ್ರಸಾದ್‌ ನಾಯ್ಕ್‌, ದೆಹಲಿ</mark></sub></strong></p>



<p><mark style="background-color:rgba(0, 0, 0, 0)" class="has-inline-color has-vivid-red-color"><strong>ಮೆಟ್ರೋ ಟೈಮ್ಸ್-‌11   </strong></mark></p>



<p>ಎಂದಿನಂತೆ ಅದೂ ಒಂದು ದಿನ.</p>



<p>ನೀವು ಎಲ್ಲಿಗೋ ಡ್ರೈವ್ ಮಾಡುತ್ತಿದ್ದೀರಿ. ಭಯಂಕರ ಟ್ರಾಫಿಕ್ಕು. ಕ್ಲಚ್ ಸತತವಾಗಿ ಒತ್ತಿದ್ದಕ್ಕೆ ಪಾದವೂ, ಕಾಲೂ ನೋಯುತ್ತಿದೆ. ಮನಸ್ಸಿನಲ್ಲೇನೋ ಯೋಚನೆ. ಈ ನಡುವಿಲ್ಲೊಂದು ಫೋನು. ಯಾರೆಂದು ನೋಡಿದರೆ ಅಪರಿಚಿತ ನಂಬರ್. ಏನೋ ತುರ್ತು ಕರೆಯಿರಬಹುದು ಎಂದು ಕಾಲ್ ರಿಸೀವ್ ಮಾಡಿದರೆ, ಮಾತಿಗೆ ಅಸಹಜ ರಾಗವೊಂದನ್ನು ಲೇಪಿಸಿ ಮಾತಾಡುತ್ತಿರುವ ಹುಡುಗಿಯೊಬ್ಬಳು ಕ್ರೆಡಿಟ್ ಕಾರ್ಡ್ ಮಾರುವ ಉತ್ಸಾಹದಲ್ಲಿದ್ದಾಳೆ. ನೀವು ಕೆಟ್ಟದಾಗಿ ಒಳಗೊಳಗೇ ಗೊಣಗಿ ಫೋನ್ ಕುಕ್ಕುತ್ತೀರಿ. ಇನ್ನೇನು ಸಿಗ್ನಲ್ಲಿನ ಕೆಂಪು ದೀಪವು ಹಸಿರಾಗಬೇಕು ಎನ್ನುವಷ್ಟರಲ್ಲಿ ಯಾರೋ ಒಬ್ಬ ಬೈಕಿನವನು ಬಂದು, ಸಿಕ್ಕ ಒಂದು ಸಪೂರ ಮೂಲೆಯಿಂದ ನುಸುಳಿ ನಿಮ್ಮ ಕಾರಿನೆದುರೇ ನಿಂತುಬಿಡುತ್ತಾನೆ. ಅಂತೂ ಹೊರಡಲು ಮತ್ತೊಂದು ನಿಮಿಷ ವಿಳಂಬವಾಗುತ್ತದೆ. ನಿಮಗೆ ಮೈಯೆಲ್ಲಾ ಉರಿದುಹೋಗುತ್ತದೆ.</p>



<p>ಅಲ್ಲಿಯ ರೆಡ್ ಲೈಟ್ ಕಳೆದು ಸ್ವಲ್ಪ ಮುಂದೆ ಹೋಗುವಷ್ಟರಲ್ಲಿ ಮತ್ತೊಂದು ಸಿಗ್ನಲ್ ಬಂತು ಎಂದಿಟ್ಟುಕೊಳ್ಳೋಣ. ನಿಧಾನವಾಗಿ ಚಲಿಸುತ್ತಿದ್ದ ಕಾರು ಈಗ ಮತ್ತೊಮ್ಮೆ ನಿಂತಿದೆ. ಸಿಗ್ನಲ್ ಎಂದರೆ ಬೇರೆಯದ್ದೇ ಜಗತ್ತು. ಕಾರುಗಳು ಸಾಲಾಗಿ ನಿಂತಾಗ ಹಲವರು ಎಲ್ಲಿಂದಲೋ ಥಟ್ಟನೆ ಪ್ರತ್ಯಕ್ಷರಾದಂತೆ ಏಕಾಏಕಿ ಮುಗಿಬೀಳುತ್ತಾರೆ. ಚೆಂಗುಲಾಬಿಯನ್ನು ಮಾರುತ್ತಿರುವ ಬಾಲಕ, ಅಗ್ಗದ ಪೈರೇಟೆಡ್ ಪುಸ್ತಕಗಳನ್ನು ಒಂದರ ಮೇಲೊಂದು ಇಟ್ಟಿಗೆಗಳಂತೆ ಪೇರಿಸಿಟ್ಟು ಮಾರುತ್ತಿರುವ ಯುವಕ, ಚಪ್ಪಾಳೆ ತಟ್ಟುತ್ತಾ ಕಾಸು ಕೇಳುತ್ತಿರುವ ತೃತೀಯಲಿಂಗಿ, ಕೈಯಲ್ಲಿ ನಾಣ್ಯದ ತಟ್ಟೆಯನ್ನು ಮತ್ತು ಕಣ್ಣಲ್ಲಿ ದೈನ್ಯವನ್ನು ಹಿಡಿದಿಟ್ಟಿರುವ ಭಿಕ್ಷುಕ&#8230; ಹೀಗೆ ಹತ್ತಾರು ಮಂದಿ. ನೀವೀಗ ಕಾರಿನ ಗಾಜನ್ನು ಭದ್ರವಾಗಿ ಮೇಲಕ್ಕೇರಿಸುತ್ತೀರಿ. ಜಿಪುಣತನ ಅಂತಲ್ಲ. ಕೊಟ್ಟರೂ ಯಾರಿಗೆ ಅಂತ ಕೊಡೋದು? ಎಷ್ಟೂಂತ ಕೊಡೋದು? ಥತ್!</p>



<figure class="wp-block-image size-full"><img fetchpriority="high" decoding="async" width="728" height="440" src="https://peepalmedia.com/wp-content/uploads/2023/12/68850.jpg" alt="" class="wp-image-33312" srcset="https://peepalmedia.com/wp-content/uploads/2023/12/68850.jpg 728w, https://peepalmedia.com/wp-content/uploads/2023/12/68850-300x181.jpg 300w, https://peepalmedia.com/wp-content/uploads/2023/12/68850-150x91.jpg 150w, https://peepalmedia.com/wp-content/uploads/2023/12/68850-696x421.jpg 696w" sizes="(max-width: 728px) 100vw, 728px" /><figcaption class="wp-element-caption"><strong><sup>ಚಿತ್ರ : ಗೂಗಲ್</sup></strong></figcaption></figure>



<p>ಈ ಮಧ್ಯೆ ಬಿಳಿಕೂದಲಿನ ಗಡ್ಡಧಾರಿ ವೃದ್ಧನೊಬ್ಬ ತಂಬೂರಿ ಮೀಟುತ್ತಾ ಎಲ್ಲಿಂದಲೋ ಬರುತ್ತಾನೆ. ನಿಮಗೆ ತಿಳಿಯದ ಭಾಷೆಯಲ್ಲಿ ಏನನ್ನೋ ಮೋಹಕವಾಗಿ ಹಾಡುತ್ತಿದ್ದಾನೆ. ನೀವು ಕಾರಿನ ಗಾಜನ್ನು ಒಂದಿಂಚು ಕೆಳಗಿಳಿಸುತ್ತೀರಿ. ಅವನ ಮಧುರ ಹಾಡಿಗೆ ಕಿವಿಯಾಗುತ್ತೀರಿ. ಜೊತೆಯಲ್ಲಿ ಅವನ ಮೊಮ್ಮಗಳೋ ಏನೋ! ಚಿಕ್ಕ ಟೊಪ್ಪಿಯೊಂದನ್ನು ಎಲ್ಲರ ಮುಂದೆ ಹಿಡಿಯುತ್ತಾ ಕಾಸು ಕೇಳುತ್ತಾಳೆ. ಸಿಕ್ಕರೆ ಸಿಕ್ಕಿತು. ಇಲ್ಲವಾದರೆ ಇಲ್ಲ. ಕೆಲವರು ಆ ಟೊಪ್ಪಿಯೊಳಗೆ ನಾಣ್ಯ ಎಸೆಯುತ್ತಾರೆ. ಇನ್ನು ಕೆಲವರು ಕೇಳಿಯೂ ಕೇಳದವರಂತೆ ನಟಿಸಿ ಬಿಮ್ಮನೆ ಮುನ್ನಡೆಯುತ್ತಾರೆ. ಮತ್ತೆ ಕೆಲವರು ತಾವು ಕೂತಲ್ಲೇ ವೃದ್ಧನದ್ದು ವೀಡಿಯೋ ಮಾಡುತ್ತಾರೆ. ಪುಟ್ಟ ರೀಲ್ಸ್ ಮಾಡಿ ಎಲ್ಲೆಲ್ಲೋ ಅಪ್ಲೋಡ್ ಮಾಡುತ್ತಾರೆ.</p>



<p>ಅದೇನೇ ಇರಲಿ. ಅಷ್ಟು ಹೊತ್ತು ಸೆಟೆದುಕೊಂಡಿದ್ದ ನಿಮ್ಮ ಮನಸ್ಸು ಆತನ ಹಾಡನ್ನು, ಆ ತಂಬೂರಿಯ ನಾದವನ್ನು ಕೇಳಿದಾಗ ಸುಮ್ಮನೆ ತಲೆದೂಗುತ್ತದೆ. ನಿತ್ಯವೂ ಹಿಂಸೆಯೆನಿಸುವ ಟ್ರಾಫಿಕ್ಕು ಆ ಕೆಲವೇ ಕೆಲವು ಕ್ಷಣಗಳಲ್ಲಿ ಮನಸ್ಸಿಗೆ ಭಾರವೆನಿಸದೆ ಹಾಡಿನ ಲಯದಲ್ಲಿ ಕಳೆದುಹೋಗುತ್ತದೆ. ರೆಡ್ ಲೈಟ್ ಇನ್ನೂ ಮೂವತ್ತು ಸೆಕೆಂಡು ಇರಲಿ, ಆತನ ಹಾಡೂ ಮುಗಿಯದಿರಲಿ ಎಂದು ಮನಸ್ಸು ನಮಗರಿವಿಲ್ಲದಂತೆಯೇ ಹಂಬಲಿಸ ತೊಡಗುತ್ತದೆ.</p>



<p>ಇದೊಂದು ಕಾಲ್ಪನಿಕ ಸನ್ನಿವೇಶವಾದರೂ ನಮ್ಮಲ್ಲಿ ಬಹುತೇಕರಿಗೆ ಪರಿಚಿತ ಸಂದರ್ಭವೂ ಹೌದು. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಆ ಆಗಂತುಕನೊಬ್ಬನ ಹಾಡು ಅದೆಂಥದ್ದೋ ಮಾಯಕದ ರೀತಿಯಲ್ಲಿ ನಮ್ಮನ್ನು ತಟ್ಟಿರುತ್ತದೆ. ಅದೊಂದು ಸಂಗೀತ ಕಛೇರಿಯಲ್ಲ. ಅದಕ್ಕೆಂದು ನಾವು ಒಂದು ಪೈಸೆ ಖರ್ಚು ಮಾಡಿಲ್ಲ. ಆತ ಅದ್ಯಾವ ಜನಪ್ರಿಯ ಗಾಯಕನೂ ಅಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಒಂದೂವರೆ-ಎರಡು ನಿಮಿಷಗಳಿಗಿಂತ ಹೆಚ್ಚು ಕಾಲ ನಾವು ಆ ಹಾಡನ್ನು ಕೇಳಿರುವುದೂ ಇಲ್ಲ. ನಿಮ್ಮ ಅದೃಷ್ಟ ಚೆನ್ನಾಗಿದ್ದರೆ ನಾಳೆ ಇದೇ ಹೊತ್ತಿಗೆ, ಇದೇ ಸರ್ಕಲ್ಲಿನಲ್ಲಿ ಅವನು ಸಿಗಬಹುದು. ಇಲ್ಲವಾದರೆ ಅದೂ ಇಲ್ಲ. ಆದರೆ ನಿಮ್ಮ ದಿನದ ಅಷ್ಟೂ ತಾಸುಗಳ ಸುಸ್ತಿಗೆ ಅವನ ಅನಾಮಿಕ ಹಾಡೊಂದು ವಿಶಿಷ್ಟ ರೀತಿಯಲ್ಲಿ ಸಾಂತ್ವನ ಹೇಳಿರುತ್ತದೆ.</p>



<p>ಸಂಗೀತದ ಈ ಮ್ಯಾಜಿಕ್ಕಿಗೆ ಏನೆಂದು ಹೆಸರಿಡುವುದು!</p>



<figure class="wp-block-image size-full is-resized"><img decoding="async" width="800" height="450" src="https://peepalmedia.com/wp-content/uploads/2023/12/ramya_badrinath.jpg" alt="" class="wp-image-33313" style="width:459px;height:auto" srcset="https://peepalmedia.com/wp-content/uploads/2023/12/ramya_badrinath.jpg 800w, https://peepalmedia.com/wp-content/uploads/2023/12/ramya_badrinath-300x169.jpg 300w, https://peepalmedia.com/wp-content/uploads/2023/12/ramya_badrinath-768x432.jpg 768w, https://peepalmedia.com/wp-content/uploads/2023/12/ramya_badrinath-150x84.jpg 150w, https://peepalmedia.com/wp-content/uploads/2023/12/ramya_badrinath-696x392.jpg 696w" sizes="(max-width: 800px) 100vw, 800px" /></figure>



<p>*************</p>



<p>ನಮ್ಮದು ಸತ್ಯ ಮತ್ತು ಭ್ರಮೆಗಳ ನಡುವಿನಲ್ಲಿ ಬೇಯುತ್ತಿರುವ ತ್ರಿಶಂಕು ಜೀವನ ಎಂದು ಅವನು ಹೇಳಿದಾಗ ನನಗೆ ಒಪ್ಪದಿರಲು ಕಾರಣವೇ ಇರಲಿಲ್ಲ.</p>



<p>ಅದೊಂದು ದೊಡ್ಡ, ಪ್ರಖ್ಯಾತ ಸಂಸ್ಥೆ. ಅಲ್ಲಿ ಉದ್ಯೋಗಿಯಾಗಿ ಸೇರುವುದೇ ದೊಡ್ಡ ಸಂಗತಿ ಎಂಬ ಮಾತುಗಳು ಸಾಮಾನ್ಯವಾಗಿ ಎಲ್ಲೆಲ್ಲೂ ಕೇಳಿ ಬರುತ್ತಿದ್ದವು. ಚಂಡೀಗಢ ಮೂಲದ ಆ ಪ್ರತಿಭಾವಂತ ಹುಡುಗ ಅಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳುವುದರಲ್ಲಿ ಸಫಲನೂ ಆದ. ಆತನಿಗೆ ಸಿಕ್ಕ ನೇಮಕಾತಿ ಪತ್ರವೂ ಆಕರ್ಷಕವಾಗಿತ್ತು. ಎಲ್ಲದಕ್ಕಿಂತ ಮುಖ್ಯವಾಗಿ ಅದರಲ್ಲಿ ಬರೆದಿರುವಂತೆ ಆತ ಅಲ್ಲಿ ಒಂದೆರಡು ವರ್ಷಗಳ ಸೇವೆಯನ್ನು ಸಲ್ಲಿಸಿದ ನಂತರ, ಮುಂದಿನ ವಿದ್ಯಾಭ್ಯಾಸದ ವಿಶೇಷ ಸೌಲಭ್ಯವನ್ನೂ ಕೂಡ ಸಂಸ್ಥೆಯಿಂದ ಪಡೆಯಬಹುದಿತ್ತು.</p>



<p>ಇತ್ತ ಓದಿನ ಬಗ್ಗೆ ಅಪಾರ ಹಸಿವಿದ್ದ ನಮ್ಮ ಕಥಾನಾಯಕ ಕೆಲ ಕಾಲದ ನಂತರ ಉದ್ಯೋಗದಲ್ಲಿರುವಂತೆಯೇ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಒಂದು ಅರ್ಜಿಯನ್ನೂ ಹಾಕಿದ. ಈ ಕುರಿತಂತೆ ಸಂಸ್ಥೆಯ ಪಾಲಿಸಿಯಲ್ಲಿದ್ದ ಹಲವು ಷರತ್ತುಗಳಿಗೊಪ್ಪಿ ಸಂಬಂಧಿ ದಸ್ತಾವೇಜುಗಳಿಗೆ ಸಹಿಯನ್ನೂ ಹಾಕಿದ್ದ. ಆದರೆ ಅವನ ಅರ್ಜಿಯು ಅಲೆಮಾರಿಯಂತೆ ಅಧಿಕಾರಿಗಳ ಒಂದು ಮೇಜಿನಿಂದ ಮತ್ತೊಂದು ಮೇಜಿಗೆ ಸುಮ್ಮನೆ ಹಾರಿಕೊಂಡು ಹೋಯಿತೇ ಹೊರತು ಕೆಲಸ ಕೈಗೂಡಲಿಲ್ಲ. ಬಂದವರೆಲ್ಲ ಹೀಗೆ ಓದು-ಗೀದು ಅಂತ ಹೊರಟರೆ ಇಲ್ಲಿ ಕೆಲಸ ನಡೆಯುವುದು ಅಷ್ಟರಲ್ಲೇ ಇದೆ ಎಂದು ಓರ್ವ ಮೇಲಧಿಕಾರಿಯಂತೂ ಆತನ ಅರ್ಜಿಯನ್ನು ರಾಕೆಟ್ ಮಾಡಿ ಕಿಟಕಿಯಾಚೆಗೆ ಹಾರಿಸಿಬಿಟ್ಟ. ಅಲ್ಲಿಗೆ ಆತನ ಕನಸೊಂದು ಅರಳುವ ಮೊದಲೇ ಮುರುಟಿ ಹೋದಂತಾಗಿತ್ತು.</p>



<p>ಇದು ಇಲ್ಲಿಗೇ ಮುಗಿಯಲಿಲ್ಲ. ಈ ಘಟನೆಯ ನಂತರ ಅಗತ್ಯವಿಲ್ಲದ ಹತ್ತಾರು ಕೆಲಸಗಳನ್ನು ಉದ್ದೇಶಪೂರ್ವಕವಾಗಿ ಆತನ ಮೇಲೆ ತಂದು ಸುರಿಯುವುದು, ಸಾಧ್ಯವೇ ಇಲ್ಲದ ಟಾರ್ಗೆಟ್ಟುಗಳನ್ನು ಹೇರುವುದು&#8230; ಇಂಥದ್ದೆಲ್ಲಾ ನಿಧಾನವಾಗಿ ಪ್ರಾರಂಭವಾಯಿತು. ಒಟ್ಟಿನಲ್ಲಿ ಉದ್ಯೋಗವನ್ನು ಬಿಟ್ಟು ತನಗೊಂದು ಬದುಕೇ ಇಲ್ಲ ಎಂಬಂತಹ ಸ್ಥಿತಿಯನ್ನು ಸಂಸ್ಥೆಯು ಕ್ರಮೇಣ ಆತನಿಗೋಸ್ಕರ ಸೃಷ್ಟಿ ಮಾಡಿತು. ಇನ್ನೂ ಇಲ್ಲೇ ಇದ್ದರೆ ತಾನು ಈ ವಿಷಚಕ್ರದಲ್ಲಿ ಕಳೆದುಹೋಗುತ್ತೇನೆ ಎಂಬುದನ್ನು ಮನಗಂಡ ಆ ಹುಡುಗ ಹೆಚ್ಚು ತಡಮಾಡದೆ ರಾಜೀನಾಮೆ ಪತ್ರವನ್ನು ನೀಡಿ ಮುಂದೆ ಹೆಜ್ಜೆಯಿಟ್ಟಿದ್ದ. ಹಾಗೆ ನೋಡಿದರೆ ಅವನಿದ್ದ ಹುದ್ದೆಯು ಅದೆಷ್ಟೋ ಮಂದಿಯ ಕನಸಾಗಿರಬಹುದು. ಹಾಗಂತ ತನ್ನಿಡೀ ಬದುಕನ್ನು ಅದಕ್ಕಾಗಿ ಕಂದಾಯವಾಗಿ ತೆರುವುದು ಅವನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಅವನು ಅದನ್ನು ಸಾಧಿಸಿಯೂಬಿಟ್ಟಿದ್ದ.</p>



<p>ಕಾಲಾಂತರದಲ್ಲಿ ಇಷ್ಟಿಷ್ಟೇ ಬದಲಾಗುತ್ತಿರುವ ನಮ್ಮ ಬಯೋಡೇಟಾಗಳನ್ನು ನೋಡುತ್ತಿದ್ದರೆ ನನಗೆ ಆ ಹುಡುಗನದ್ದೇ ಮಾತು ನೆನಪಾಗುತ್ತದೆ. ಹೊಸ ಉದ್ಯೋಗಿಗಳ ಬಯೋಡೇಟಾಗಳಲ್ಲಿ ಹವ್ಯಾಸಗಳ ಕೆಟಗರಿಯಡಿಯಲ್ಲಿ ಸಂಗೀತ, ಚಿತ್ರಕಲೆ, ಕ್ರಿಕೆಟ್, ಓದು, ಬರವಣಿಗೆ&#8230; ಇತ್ಯಾದಿಗಳನ್ನು ಓದುತ್ತಿದ್ದರೆ ಇದು ಕಾಗದದ ಮೇಲಷ್ಟೇ ಕಾಣಸಿಗುವ ಸಂಗತಿಯೇನೋ ಎಂದು ದಿಗಿಲಾಗುತ್ತದೆ. ಏಕೆಂದರೆ ಬಾಲ್ಯದಲ್ಲಿ ನಾವೆಲ್ಲರೂ ಎಲ್ಲರಂತೆ ಒಂದಲ್ಲ ಒಂದು ಹವ್ಯಾಸಗಳಿಗೆ ಅಂಟಿಕೊಂಡಿದ್ದವರೇ. ಆದರೆ ನನಗೆ ತಿಳಿದಿರುವಂತೆ ಅದರಲ್ಲಿ ಸುಮಾರು ತೊಂಭತ್ತು ಪ್ರತಿಶತ ಮಂದಿ ತಮಗೂ, ತಮ್ಮ ನೆಚ್ಚಿನ ಆ ಹವ್ಯಾಸಗಳಿಗೂ ಸಂಬಂಧವೇ ಇಲ್ಲದಂತೆ ಸದ್ಯ ಬದುಕುತ್ತಿದ್ದಾರೆ. ಅವುಗಳೆಲ್ಲಾ ಅವರ ಬಾಲ್ಯದೊಂದಿಗೆ ಭೂತಕಾಲದ ನೆನಪಿನ ಓಣಿಯಲ್ಲಿ ಕಳೆದೇಹೋಗಿದೆ.</p>



<p>ಹಾಗಿದ್ದರೆ ನಾವೆಲ್ಲಾ ಆ ದಿನಗಳನ್ನು ಕೈಯಾರೆ ಕಳೆದುಕೊಂಡು ಬಿಟ್ಟೆವೋ? ಒಂದು ಕ್ಷಣಕ್ಕೆ ಹೌದೆನಿಸಿದರೂ ಅದು ಸಂಪೂರ್ಣವಾಗಿ ಸತ್ಯವೇನಲ್ಲ. ಏಕೆಂದರೆ ಸಹಜವಾಗಿ ಬದುಕಿನ ವಿವಿಧ ಹಂತಗಳಲ್ಲಿ ನಮ್ಮ ಆದ್ಯತೆಗಳೂ ಬದಲಾಗುತ್ತವೆ. ಹೀಗಾದಾಗ ಒಂದೊಮ್ಮೆ ತಮ್ಮ ಖುಷಿಗಾಗಿ ಮಾಡುತ್ತಿದ್ದ ಹಲವು ಚಿಕ್ಕಪುಟ್ಟ ಸಂಗತಿಗಳು ಒಂದೊಂದಾಗಿ ಹಿಂದಕ್ಕೆ ಸರಿಯತೊಡಗುತ್ತವೆ. ಅದಕ್ಕೆ ತ್ಯಾಗ ಅಂತೆಲ್ಲಾ ತೂಕದ ಪದಗಳನ್ನು ನೀಡಬೇಕಿಲ್ಲ. ಸರಳವಾಗಿ ಪ್ರಾಕ್ಟಿಕಲ್ ಭಾಷೆಯಲ್ಲಿ ಅನಿವಾರ್ಯತೆಯೆಂದೋ, ಹೊಂದಾಣಿಕೆಯೆಂದೂ ಹೇಳಿಕೊಳ್ಳಬಹುದು. ಆದರೆ ಆ ನಮ್ಮತನದಿಂದ ಶಾಶ್ವತವಾಗಿ ಸಂಬಂಧವನ್ನು ಕಡಿದುಕೊಳ್ಳುವುದಿದೆಯಲ್ಲಾ&#8230; ಅದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ.</p>



<figure class="wp-block-image size-full is-resized"><img decoding="async" width="700" height="525" src="https://peepalmedia.com/wp-content/uploads/2023/12/61b2185f89339a0019a1be5c.webp" alt="" class="wp-image-33315" style="width:704px;height:auto" srcset="https://peepalmedia.com/wp-content/uploads/2023/12/61b2185f89339a0019a1be5c.webp 700w, https://peepalmedia.com/wp-content/uploads/2023/12/61b2185f89339a0019a1be5c-300x225.webp 300w, https://peepalmedia.com/wp-content/uploads/2023/12/61b2185f89339a0019a1be5c-150x113.webp 150w, https://peepalmedia.com/wp-content/uploads/2023/12/61b2185f89339a0019a1be5c-696x522.webp 696w" sizes="(max-width: 700px) 100vw, 700px" /><figcaption class="wp-element-caption"><strong><sup>ಚಿತ್ರ : ಗೂಗಲ್</sup></strong></figcaption></figure>



<p>ಆದರೆ ಬದುಕು ಎಂದಾದ ಮೇಲೆ ಹಲವು ಹಂತಗಳಲ್ಲಿ ಒಂದಾದರೊಂದು ಆಯ್ಕೆಯನ್ನು ಮಾಡಲೇಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಹಳಷ್ಟು ಮಂದಿ &#8220;ಕಂಫರ್ಟ್ ಝೋನ್&#8221; ಇರುವ ಆಯ್ಕೆಗಳಿಗಷ್ಟೇ ಅಂಟಿಕೊಳ್ಳುತ್ತಾರೆ. ಒಂದಾನೊಂದು ಕಾಲದಲ್ಲಿ ನಿತ್ಯವೂ ರಿಯಾಜ್ ಮಾಡುತ್ತಿದ್ದ ಹುಡುಗಿ ಈಗ ಅಪರೂಪಕ್ಕೂ ಹಾಡುವುದಿಲ್ಲ. ಕಾಲೇಜು ದಿನಗಳಲ್ಲಿ ಚಂದಗೆ ಚಿತ್ರ ಬಿಡಿಸುತ್ತಿದ್ದ ಹುಡುಗನಿಗೀಗ ಬಣ್ಣಗಳ ವಾಸನೆಯೇ ಮರೆತುಹೋಗಿದೆ. ಶಾಪದಂತೆ ಕಾಡುವ ನಿತ್ಯದ ಡ್ರೈವಿಂಗ್, ಬಿಡುವಿಲ್ಲದ ದಿನಚರಿ, ಆಫೀಸು ಟೂರುಗಳು, ಟಾರ್ಗೆಟ್-ಅಪ್ರೈಸಲ್, ನೆಟ್ ಫ್ಲಿಕ್ಸ್-ಆಂಡ್-ಚಿಲ್, ಸಾಧ್ಯವಿದ್ದರೆ ಕುಟುಂಬದೊಂದಿಗೆ ಒಂದಷ್ಟು ಹೊತ್ತು, ಇಲ್ಲವಾದರೆ ಮತ್ತದೇ ಫೋನು-ವೈನು-ಮತ್ತು&#8230; ಇವೆಲ್ಲದರ ಮಧ್ಯೆ ನಮ್ಮ ಒಳದನಿಗೆ ಕಿವಿಯಾಗುವುದನ್ನೇ ನಾವು ಮರೆತುಬಿಟ್ಟಿರುತ್ತೇವೆ. ವಿಪರ್ಯಾಸವೆಂದರೆ &#8220;ಇದು ಸಹಜ&#8221; ಎಂದು ಕೂಡ ನಮಗೆ ನಾವೇ ಒಂದು ಚಂದದ ಸುಳ್ಳನ್ನು ಹೇಳಿ ನಂಬಿಸಿದ್ದೇವೆ.</p>



<p>ನಿಮ್ಮ ಉದ್ಯೋಗವನ್ನು ಹೊರತುಪಡಿಸಿ ನಿಮ್ಮ ವೈಯಕ್ತಿಕ ಖುಷಿಗಾಗಿ ಅಥವಾ ಕಲಿಕೆ-ಬೆಳವಣಿಗೆಯ ನಿಟ್ಟಿನಲ್ಲಿ ನೀವು ಏನೆಲ್ಲಾ ಮಾಡುತ್ತೀರಿ ಎಂದು ನಾನು ಹಲವರಲ್ಲಿ ಕೇಳುತ್ತಿರುತ್ತೇನೆ. ಈ ಪೈಕಿ ಬೆರಳೆಣಿಕೆಯ ಮಂದಿಯನ್ನು ಹೊರತುಪಡಿಸಿ ಉಳಿದವರೆಲ್ಲ ಏನೂ ಇಲ್ಲ ಎಂದೇ ಉತ್ತರಿಸುತ್ತಾರೆ. ಅದಕ್ಕೆಲ್ಲ ಸಮಯವೆಲ್ಲಿ ಎಂದು ನಿಟ್ಟುಸಿರಾಗುತ್ತಾರೆ. ಇನ್ನು ಕೆಲವು ಮಂದಿ ಕತೆ ಬರೆದರೆ, ಪೈಂಟಿಂಗ್ ಮಾಡಿದರೆ, ಚಂದದ ಕವಿತೆಯೊಂದನ್ನು ಓದಿದರೆ, ಜಗತ್ತನ್ನೇ ಮರೆತು ಕುಣಿದರೆ, ತಮ್ಮ ಪಾಡಿಗೆ ತಾವು ಸೈಕ್ಲಿಂಗ್ ಮಾಡಿದರೆ, ಒಂದೊಳ್ಳೆಯ ಚರ್ಚೆಗೆ ಕಿವಿಯಾದರೆ&#8230; ಏನು ಲಾಭ ಎಂಬ ಮಿಲಿಯನ್ ಡಾಲರ್ ಪ್ರಶ್ನೆಯೊಂದನ್ನೂ ಕೇಳುತ್ತಾರೆ. ಕಾಸು ಹುಟ್ಟದ ಯಾವ ಚಟುವಟಿಕೆಯೂ ತೊಡಗಿಸಿಕೊಳ್ಳಲು ಲಾಯಕ್ಕಲ್ಲ ಎಂಬ ವಿಚಿತ್ರ ಮನೋಭಾವವೊಂದು ನಮ್ಮ ನಡುವಿನಲ್ಲಿ ಕೊಂಚ ಬಲವಾಗಿಯೇ ಬೇರೂರಿಬಿಟ್ಟಿದೆ.</p>



<p>ಬಹುಷಃ ಲೇಖಕ ಜೇಕ್ ನಾಪ್ ಬರೆದಿದ್ದು ಎಂದನ್ನಿಸುತ್ತೆ. ಅವರು ಹೇಳುವಂತೆ ತಮ್ಮ ಪಾಡಿಗೆ ಹಾಯಾಗಿ ಹಾಡುತ್ತಲೋ, ಚಿತ್ರ ಬಿಡಿಸುತ್ತಲೋ ಖುಷಿಯಾಗಿದ್ದವರು ತಮ್ಮ ಹವ್ಯಾಸಕ್ಕೊಂದು ಪ್ರೈಸ್ ಟ್ಯಾಗ್ ಅಂಟಿಸಿದ ಕೂಡಲೇ, ಒಂದು ಬಗೆಯ ವಿಚಿತ್ರ ಒತ್ತಡದಲ್ಲಿ ಸಿಲುಕಿಕೊಂಡು ಒದ್ದಾಡುತ್ತಾರಂತೆ. ಏಕೆಂದರೆ ಹಿಂದೆ ಕಲಾತ್ಮಕ ಸೃಷ್ಟಿಯಷ್ಟೇ ಆಗಿದ್ದ ಸಂಗತಿಯೊಂದು ಈಗ ಮಾರುಕಟ್ಟೆಯ ಉತ್ಪನ್ನವಾಗಿ ಬದಲಾಗಿರುತ್ತದೆ. ಹಿಂದೆ ತಮ್ಮ ಖುಷಿಗಷ್ಟೇ ಸೀಮಿತವಾಗಿದ್ದ ಚಟುವಟಿಕೆಯೊಂದಕ್ಕೆ ಈಗ ಮಾರ್ಕೆಟ್ಟು, ಮಾರಾಟ, ಲಾಭ, ಖ್ಯಾತಿ&#8230; ಹೀಗೆ ಬಹಳಷ್ಟು ಸಂಗತಿಗಳು ಜೊತೆಯಾಗಿರುತ್ತವೆ. ಒಟ್ಟಾರೆಯಾಗಿ ಆ ಸೃಷ್ಟಿಯ ಪ್ರಕ್ರಿಯೆಯಲ್ಲಿರುವ ಅಪರೂಪದ ಸುಖಕ್ಕಿಂತ, ಅಂತಿಮ ಫಲಿತಾಂಶದ ಆತಂಕ-ಒತ್ತಡಗಳೇ ಈಗ ಮುನ್ನೆಲೆಗೆ ಬಂದಿರುತ್ತವೆ. ಹೀಗಿರುವಾಗ ನಿಮ್ಮ ಹವ್ಯಾಸವು ನಿಮ್ಮ ಸಂಪಾದನೆಗೂ ದಾರಿಯಾದರೆ ಒಳ್ಳೆಯದು. ಆದರೆ ಅದನ್ನೇ ನಿಮ್ಮ ಹವ್ಯಾಸದ ಅಂತಿಮ ಉದ್ದೇಶವನ್ನಾಗಿಸಬೇಡಿ ಎಂಬುದು ಅವರ ಕಳಕಳಿಯ ಸಲಹೆ.</p>



<p>ನೀವೇ ಹೇಳಿ. ನೀವು ಸಂಜೆಯ ಟ್ರಾಫಿಕ್ಕಿನಲ್ಲಿ ಒದ್ದಾಡಿಕೊಂಡಿದ್ದಾಗ ಆ ಅಪರಿಚಿತ ವೃದ್ಧನೊಬ್ಬ ಚಿಕ್ಕ ಹಾಡೊಂದನ್ನು ಹಾಡಿ, ಯಾವುದೇ ಮಹಾ ನಿರೀಕ್ಷೆ-ಉದ್ದೇಶಗಳಿಲ್ಲದೆ ನಿಮಗೆ ಆಹ್ಲಾದವನ್ನು ತಂದಿದ್ದನಲ್ಲ! ಅದಕ್ಕೆಷ್ಟು ಬೆಲೆ ಕಟ್ಟೋಣ?</p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p><sub><strong>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್, ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</strong></sub></p>



<p><strong>ಈ ಹಿಂದಿನ ಅಂಕಣ ಓದಿದ್ದೀರಾ?</strong> </p>



<p> <sub><a href="https://peepalmedia.com/metro-times-10/" data-type="post" data-id="32449">“ದುಡ್ಡೆಂಬ ದೊಡ್ಡಪ್ಪನ ತಾಪತ್ರಯಗಳು”</a>  <a href="https://peepalmedia.com/metro-times-10/" data-type="link" data-id="https://peepalmedia.com/metro-times-10/">https://peepalmedia.com/metro-times-10/</a></sub></p>



<p><sub><a href="https://peepalmedia.com/?page_id=32484">ಕಂಡಿದ್ದು, ಕೇಳಿದ್ದು, ದಕ್ಕಿದ್ದು”</a>&nbsp;<a href="https://peepalmedia.com/seen-heard-found/">https://peepalmedia.com/seen-heard-found/</a></sub></p>



<p><sub><a href="https://peepalmedia.com/a-life-story-of-a-metropolis/">ಮಹಾನಗರವೊಂದರ ಜೀವನ ಕಥನ</a>&nbsp;<a href="https://peepalmedia.com/a-life-story-of-a-metropolis/">https://peepalmedia.com/a-life-story-of-a-metropolis/</a></sub></p>



<p><a href="https://peepalmedia.com/?page_id=30259"><sub>ಬದುಕಿ</sub></a><sub><a href="https://peepalmedia.com/?page_id=30259">ನ ಕೊಲಾಜ್ ಚಿತ್ರಪಟಗಳು”</a>&nbsp;<a href="https://peepalmedia.com/collage-pictures-of-life/">https://peepalmedia.com/collage-pictures-of-life/</a></sub></p>



<p><sub><a href="https://peepalmedia.com/?page_id=30258">“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ”</a>&nbsp;<a href="https://peepalmedia.com/the-innovative-quest-of-networking/">https://peepalmedia.com/the-innovative-quest-of-networking/</a></sub></p>



<p><a href="https://peepalmedia.com/?page_id=27446"><sub>ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p><a href="https://peepalmedia.com/?page_id=28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>
]]></content:encoded>
					
		
		
			</item>
		<item>
		<title>&#8220;ದುಡ್ಡೆಂಬ ದೊಡ್ಡಪ್ಪನ ತಾಪತ್ರಯಗಳು&#8221;</title>
		<link>https://peepalmedia.com/metro-times-10/</link>
		
		<dc:creator><![CDATA[Prasad Naik]]></dc:creator>
		<pubDate>Fri, 17 Nov 2023 12:47:23 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=32449</guid>

					<description><![CDATA[ನಮ್ಮ ಹಿರಿಯರು ವರ್ಷಕ್ಕೊಮ್ಮೆ ದಸರೆಗೋ, ದೀಪಾವಳಿಗೋ ಮನೆಯವರೆಲ್ಲರಿಗೂ ಬಟ್ಟೆ ಖರೀದಿ ಮಾಡುತ್ತಿದ್ದವರು. ಅವಶ್ಯಕತೆಯಿರದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮ್ಯೂಸಿಯಂ ಮಾಡುವ ಯಾವ ಹಂಬಲಗಳೂ ಇಲ್ಲದೆ ಬದುಕಿದ್ದವರು. ಮಿನಿಮಲಿಸಂ ಎಂಬ ಪದವೊಂದು ಹುಟ್ಟುವುದಕ್ಕೆ ಮುನ್ನವೇ ನಿಜವಾದ ಮಿನಿಮಲಿಸ್ಟ್ ಆಗಿ ಅರ್ಥಪೂರ್ಣವಾಗಿ ತಮ್ಮ ಜೀವನವನ್ನು ಸಾಗಿಸಿದವರು. ಇಂದು ಮಹಾನಗರಗಳಲ್ಲಿ ದುಡಿಯುವ ಮಂದಿಗೆ ಲಕ್ಷ ದುಡಿದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ. ಆಸೆಗಳು ಮುಗಿಯುವುದಿಲ್ಲ. ಮೆಟ್ರೋಸಿಟಿಗಳಲ್ಲಿ ಬಾಳುತ್ತಿರುವ ನಮ್ಮಂಥವರು ಈ ಬಗೆಯ ಜೀವನ ಶೈಲಿಯತ್ತ ಮತ್ತೆ ಮರಳ ಬೇಕಿದೆ &#8211; ಪ್ರಸಾದ್‌ ನಾಯ್ಕ್‌ [&#8230;]]]></description>
										<content:encoded><![CDATA[
<p class="has-background" style="background-color:#0f317a21"><sub><strong>ನಮ್ಮ ಹಿರಿಯರು ವರ್ಷಕ್ಕೊಮ್ಮೆ ದಸರೆಗೋ, ದೀಪಾವಳಿಗೋ ಮನೆಯವರೆಲ್ಲರಿಗೂ ಬಟ್ಟೆ ಖರೀದಿ</strong> <strong>ಮಾಡುತ್ತಿದ್ದವರು. ಅವಶ್ಯಕತೆಯಿರದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮ್ಯೂಸಿಯಂ ಮಾಡುವ ಯಾವ ಹಂಬಲಗಳೂ ಇಲ್ಲದೆ ಬದುಕಿದ್ದವರು. ಮಿನಿಮಲಿಸಂ ಎಂಬ ಪದವೊಂದು ಹುಟ್ಟುವುದಕ್ಕೆ ಮುನ್ನವೇ ನಿಜವಾದ ಮಿನಿಮಲಿಸ್ಟ್ ಆಗಿ ಅರ್ಥಪೂರ್ಣವಾಗಿ ತಮ್ಮ ಜೀವನವನ್ನು ಸಾಗಿಸಿದವರು. ಇಂದು ಮಹಾನಗರಗಳಲ್ಲಿ ದುಡಿಯುವ ಮಂದಿಗೆ ಲಕ್ಷ ದುಡಿದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ. ಆಸೆಗಳು ಮುಗಿಯುವುದಿಲ್ಲ. ಮೆಟ್ರೋಸಿಟಿಗಳಲ್ಲಿ ಬಾಳುತ್ತಿರುವ ನಮ್ಮಂಥವರು ಈ ಬಗೆಯ ಜೀವನ ಶೈಲಿಯತ್ತ ಮತ್ತೆ ಮರಳ ಬೇಕಿದೆ</strong></sub> &#8211;<sub><mark style="background-color:rgba(0, 0, 0, 0)" class="has-inline-color has-vivid-red-color"> <strong>ಪ್ರಸಾದ್‌ ನಾಯ್ಕ್‌ , ದೆಹಲಿ</strong></mark></sub></p>



<p>&#8220;ನಮ್ಮಲ್ಲಿ ಮಧ್ಯಮ ವರ್ಗ ಅನ್ನೋದೇ ಇಲ್ಲ&#8221;, ಎಂದರವರು.</p>



<p>ಹಾಗಂದರೇನಪ್ಪ ಎಂದು ತಲೆಕೆರೆದುಕೊಂಡು ನಾನು ಮೈಯೆಲ್ಲಾ ಕಿವಿಯಾಗಿ ಕೂತೆ. ನಾನಾಗ ಆಫ್ರಿಕಾ ಖಂಡದಲ್ಲಿರುವ ರಿಪಬ್ಲಿಕ್ ಆಫ್ ಅಂಗೋಲಾ ಎಂಬ ದೇಶದ ಅಜ್ಞಾತ ಮೂಲೆಯೊಂದರಲ್ಲಿದ್ದೆ. ಅಂದು ನನ್ನೊಂದಿಗೆ ಮಾತಾಡುತ್ತಿದ್ದಿದ್ದು ಡಿನಿಸ್ ಜೂಲಿಯೋ ಮಾರ್ಟಿನ್ಸ್ ಎಂಬ ಹೆಸರಿನ ಮಧ್ಯವಯಸ್ಕ. ನನ್ನ ಮತ್ತು ಡಿನಿಸ್ ಮಧ್ಯೆ ಅಂಗೋಲನ್ ತರುಣ ಮಿಗೆಲ್ ಎಂಬೋಸೋ ಕೂಡ ಕೂತಿದ್ದ. ಇಂಗ್ಲಿಷ್ ಮಾತಾಡುತ್ತಿದ್ದ ನನ್ನ ಮತ್ತು ಪೋರ್ಚುಗೀಸ್-ಕಿಕೋಂಗೊ ಮಾತಾಡುತ್ತಿದ್ದ ಡಿನಿಸ್ ಮಧ್ಯೆ ಕೂತಿದ್ದ ಮಿಗೆಲ್ ಮಹಾಶಯನ ಕೆಲಸವು ನಮ್ಮಿಬ್ಬರನ್ನು ಬೆಸೆಯುವುದಾಗಿತ್ತು. ಆ ದೃಶ್ಯವು ಮೇಲ್ನೋಟಕ್ಕೆ ಯಕ್ಷಗಾನ ತಾಳಮದ್ದಲೆಗಳಲ್ಲಿ ಕಾಣುವಂತೆ ಇಬ್ಬದಿಗಳಲ್ಲಿ ಕೂತಿದ್ದ ಅರ್ಥಧಾರಿಗಳು ಮತ್ತು ಮಧ್ಯದಲ್ಲಿ ಕೂತಿದ್ದ ಒಬ್ಬ ಭಾಗವತರ ಪ್ರಸ್ತುತಿಯಂತೆಯೂ ಇತ್ತು.</p>



<p>ತನ್ನ ಮಾತನ್ನು ಮುಂದುವರಿಸಿದ ಡಿನಿಸ್ ಅಂಗೋಲಾದಲ್ಲಿರುವ ಎರಡೇ ಎರಡು ಸೋಶಿಯಲ್ ಸ್ಟೇಟಸ್ ಬಗ್ಗೆ ನನಗೆ ಸಂಕ್ಷಿಪ್ತವಾಗಿ ಹೇಳಿದ್ದರು. ಅದೇನೆಂದರೆ ಕೂಡಿಟ್ಟ ಸಂಪತ್ತು ಹೇರಳವಾಗಿದ್ದ, ಬೋರಾದಾಗಲೆಲ್ಲಾ ಯೂರೋಪ್ ಪ್ರವಾಸಗಳನ್ನು ಮಾಡುತ್ತಿದ್ದ ಮತ್ತು ಸ್ವರ್ಣಲೇಪಿತ ಶೌಚಾಲಯಗಳಲ್ಲಿ ಹಗುರಾಗುತ್ತಿದ್ದ ಸಿರಿವಂತರ ಎಲೀಟ್ ವರ್ಗ ಒಂದು ಕಡೆ. ಇನ್ನು ದಿನಕ್ಕೆರಡು ಹೊತ್ತಿಗೆ ಅನ್ನ ನಸೀಬಾದರೆ ದಿನವು ಹೇಗೋ ಮುಗಿದು ಹೋಗುತ್ತಪ್ಪ ಎಂದು ಯೋಚಿಸುವ ಕಡುಬಡವರ ವರ್ಗ ಮತ್ತೊಂದು ಕಡೆ. ದೇಶವೊಂದರ ನಾಗರಿಕರ ಮಧ್ಯೆ ಸಂಪತ್ತಿನ ಹಂಚಿಕೆಯಲ್ಲಿ ಇಷ್ಟು ದೊಡ್ಡ ಕಂದಕಗಳು ಸೃಷ್ಟಿಯಾಗಿ ಬಿಟ್ಟಾಗ ಅಲ್ಲಿನ ಆರ್ಥಿಕತೆಯೂ ಕ್ರಮೇಣ ದೇವರಿಗಷ್ಟೇ ಪ್ರೀತಿ ಎಂಬಂತಾಗುತ್ತದೆ. ಅಂಗೋಲಾದ ಪರಿಸ್ಥಿತಿ ಹಾಗಿದ್ದಿದ್ದು ಕೂಡ ಸತ್ಯ.</p>



<p>ಸಂಪತ್ತಿನ ವಿಚಾರದಲ್ಲಿ ಈ ಪೀಠಿಕೆ ಏಕೆಂದರೆ ಮೊದಲಿಗೆ &#8220;ಹೇರಳ&#8221; ಮತ್ತು &#8220;ಅಭಾವ&#8221;ಗಳೆಂಬ ಎರಡು ಧ್ರುವಗಳನ್ನು ಸ್ಪಷ್ಟವಾಗಿ ಗುರುತಿಸುವುದು ಮತ್ತು ನಂತರ ಇವೆರಡು ಧ್ರುವಗಳ ನಡುವಿನಲ್ಲಿರುವ ಸೂಕ್ಷ್ಮ ಆಯಾಮಗಳನ್ನು ಗಮನಿಸುವುದು. ಬಡತನವು ಕವಿತೆಯ ಸಾಲುಗಳಲ್ಲಷ್ಟೇ ಚಂದ ಎಂಬ ಮಾತಿದೆ. ನಮ್ಮಲ್ಲಿ ಬಡತನವನ್ನು ಹೆಚ್ಚೇ ರೊಮ್ಯಾಂಟಿಸೈಸ್ ಮಾಡುತ್ತಿದ್ದೇವೆ ಎನ್ನುವುದರ ಜೊತೆಗೇ ಶ್ರೀಮಂತಿಕೆಯೆಂಬ ತಳವಿಲ್ಲದ ಮಡಕೆಯನ್ನು ತುಂಬಿಸಲು ನಾವು ಜಿದ್ದಿಗೆ ಬಿದ್ದಂತೆ ಹೆಣಗಾಡುತ್ತಲೇ ಇದ್ದೇವೆ ಎನ್ನುವುದನ್ನು ಕೂಡ ಒಪ್ಪಲೇಬೇಕಾಗುತ್ತದೆ. ಮಹಾನಗರಗಳಲ್ಲಂತೂ ಇದು ಅಕ್ಷರಶಃ ಸತ್ಯ.</p>



<p>ಹಾಗಾದರೆ ಮನುಷ್ಯನ ಬಳಿ ಎಷ್ಟು ದುಡ್ಡಿರಬೇಕು?</p>



<figure class="wp-block-image size-full"><img loading="lazy" decoding="async" width="800" height="450" src="https://peepalmedia.com/wp-content/uploads/2023/11/201432075711881734_20.jpg" alt="" class="wp-image-32471" srcset="https://peepalmedia.com/wp-content/uploads/2023/11/201432075711881734_20.jpg 800w, https://peepalmedia.com/wp-content/uploads/2023/11/201432075711881734_20-300x169.jpg 300w, https://peepalmedia.com/wp-content/uploads/2023/11/201432075711881734_20-768x432.jpg 768w, https://peepalmedia.com/wp-content/uploads/2023/11/201432075711881734_20-150x84.jpg 150w, https://peepalmedia.com/wp-content/uploads/2023/11/201432075711881734_20-696x392.jpg 696w" sizes="auto, (max-width: 800px) 100vw, 800px" /><figcaption class="wp-element-caption">ಕಲಾಂ ಮತ್ತು  ಖುಷ್ವಂತ್ ಸಿಂಗ್</figcaption></figure>



<p>ಖ್ಯಾತ ಲೇಖಕ, ಪತ್ರಕರ್ತ ಸರ್ದಾರ್ ಖುಷ್ವಂತ್ ಸಿಂಗ್ ಇದರ ಬಗ್ಗೆ ಚಂದದ ಒಂದು ಲೇಖನವನ್ನೇ ಬರೆದಿದ್ದಾರೆ. ಬಡತನವನ್ನು ಅನಗತ್ಯ ಕಾವ್ಯಾತ್ಮಕ ಭಾಷೆಯಲ್ಲಿ ವರ್ಣಿಸಲು ಹೋಗದ ಸಿಂಗ್, ಸಿರಿವಂತಿಕೆಯ ಬಗ್ಗೆಯೂ ಭಾವೋದ್ರೇಕ ಗೊಂಡವರಂತೆ ಬರೆಯುವುದಿಲ್ಲ. ಹಾಗೆ ನೋಡಿದರೆ ಅವರ ಕೌಟುಂಬಿಕ ಹಿನ್ನೆಲೆಯು ಶ್ರೀಮಂತಿಕೆಯದ್ದೇ ಆಗಿತ್ತು. ಆದರೆ ಈ ಎಲೀಟ್ ವರ್ಗದ ಬಗೆಗಿನ ಮೋಹವು ಅವರ ಬರಹಗಳಲ್ಲಿ ಅಷ್ಟಾಗಿ ಕಾಣಸಿಗುವುದಿಲ್ಲ. ಬದಲಾಗಿ ಅಲ್ಲಿರುವ ಆಷಾಢಭೂತಿತನವನ್ನು ಅವರು ಟೀಕಿಸಿದ್ದೇ ಹೆಚ್ಚು. ಈ ಬಗೆಯ ನಿರ್ಲಿಪ್ತ ಮನಸ್ಥಿತಿಯು ಅವರ ಓದು-ಬರವಣಿಗೆಗೂ ಅನ್ವಯವಾಗುತ್ತಿತ್ತು ಎಂಬ ಮಾತಿದೆ. ಶಿಸ್ತಿನ ಜೀವನ ಶೈಲಿಯನ್ನು ಮೈಗೂಡಿಸಿ ಕೊಂಡಿದ್ದ ಸಿಂಗ್ ಶಿಸ್ತಾಗಿ ಕೂತು ತಣ್ಣಗೆ ಬರೆಯುತ್ತಿದ್ದರೇ ಕೊರತು, ಈ ಬಗ್ಗೆ ವಿಪರೀತ ಎಂಬಷ್ಟಿನ ಹಪಾಹಪಿಯು ಅವರಿಗಿರಲಿಲ್ಲವಂತೆ.</p>



<p>ಜೀವನೋಪಾಯಕ್ಕೆ ಆದಾಯದೊಂದಿಗೆ ತುರ್ತು ಅಗತ್ಯಕ್ಕೊಂದು ಚಿಕ್ಕ ಗಂಟು, ವರ್ಷಕ್ಕೊಂದು ಪ್ರವಾಸ ಹೋಗಲು, ಅಪರೂಪಕ್ಕೊಮ್ಮೆ ತಮ್ಮದೇ ಚಿಕ್ಕಪುಟ್ಟ ಆಸೆಗಳನ್ನು ಈಡೇರಿಸಲು ತಕ್ಕಮಟ್ಟಿನ ಒಂದು ಉಳಿತಾಯ, ಕೊನೆಗಾಲದಲ್ಲಿ ನೆರವಿಗೆ ಬರಬಲ್ಲ ಒಂದಿಷ್ಟು ಇಡುಗಂಟು, ಒಟ್ಟಾರೆಯಾಗಿ ವ್ಯಕ್ತಿಯೊಬ್ಬನಿಗೆ ಒಂದು ಸಾಮಾನ್ಯ ಬದುಕನ್ನು ಸಂತೃಪ್ತನಾಗಿ ಕಳೆಯುವಷ್ಟು ದುಡ್ಡಿದ್ದರೆ ಸಾಕು ಎಂದು ಸೊಗಸಾಗಿ ಮನಮುಟ್ಟುವಂತೆ ಬರೆಯುತ್ತಾರೆ ಖುಷ್ವಂತ್ ಸಿಂಗ್. ಸಂಪತ್ತಿನ ಬಗ್ಗೆ ಓದಲೇಬೇಕಾದ ಬೆರಳೆಣಿಕೆಯ ಅತ್ಯುತ್ತಮ ಲೇಖನಗಳಲ್ಲಿ ಇದೂ ಒಂದು.</p>



<p>ಆದರೆ ಖುಷ್ವಂತ್ ಸಿಂಗ್ ಹೇಳುವ ಸಾಮಾನ್ಯ ಮತ್ತು ಸಂತೃಪ್ತ ಬದುಕಿನ ಪರಿಕಲ್ಪನೆಗಳು ಇಂದು ಕೊಂಚ ಮಾಸಿದಂತೆ ಕಾಣುತ್ತದೆ. ಏಕೆಂದರೆ ಪರಿಸ್ಥಿತಿಗಳು ಬದಲಾಗಿವೆ. ಕೆಲ ವರ್ಷಗಳ ಹಿಂದೆ ನನ್ನ ಪುಂಡ ಸ್ನೇಹಿತನೊಬ್ಬ ಹೆಸರು ಹೇಳಲಿಚ್ಚಿಸದ ಪ್ರಖ್ಯಾತ ಕಂಪೆನಿಯೊಂದರ ವಿಶೇಷ ಸೆಷನ್ ಒಂದಕ್ಕೆ ಒತ್ತಾಯ ಪೂರ್ವಕವಾಗಿ ಕರೆದೊಯ್ದಿದ್ದ. ದೊಡ್ಡ ವೇದಿಕೆಯೊಂದರಲ್ಲಿ ರಾಕ್ ಕಾನ್ಸರ್ಟ್ ಒಂದನ್ನು ನಡೆಸುತ್ತಿರುವವರಂತೆ ಮೇಲ್ನೋಟಕ್ಕೆ ಕಾಣುತ್ತಿದ್ದ ಆ ಕಾರ್ಯಕ್ರಮವನ್ನು ಕನಿಷ್ಠ ಖರ್ಚಿನಲ್ಲಿ ವ್ಯವಸ್ಥಿತವಾಗಿ ಆಯೋಜಿಸಲಾಗಿತ್ತು. ಸಾಲದ್ದೆಂಬಂತೆ ಜನರ ಗಮನವನ್ನು ಸೆಳೆಯಲು ಅನಗತ್ಯ ರೋಚಕತೆ ಮತ್ತು ಗ್ಲಾಮರಸ್ ಅಂಶಗಳನ್ನು ಕೂಡ ಎಲ್ಲೆಂದರಲ್ಲಿ ತುರುಕಲಾಗಿತ್ತು. ಕೊನೆಗೆ ನಮ್ಮ ಆದಾಯದ ಬಗ್ಗೆ ನಾಲ್ಕೈದು ಪ್ರಶ್ನೆಗಳನ್ನು ಕೇಳಿದ ನಂತರ ಅಲ್ಲಿ ಎರಡು ತೀರ್ಪುಗಳನ್ನು ಹೊರಡಿಸಲಾಯಿತು. ಅವುಗಳು ಒಟ್ಟಾರೆಯಾಗಿ ಹೀಗಿದ್ದವು: 1) ನಾವೆಲ್ಲರೂ ಬಡವರಾಗಿದ್ದೆವು 2) ಲಕ್ಷ-ಕೋಟ್ಯಾಧಿಪತಿಗಳಲ್ಲದ ನಾವೆಲ್ಲ ಯಾವ ಕೆಲಸಕ್ಕೂ ಬಾರದ ದಂಡಪಿಂಡಗಳಾಗಿದ್ದೆವು.</p>



<p>ಕೆಲ ದಿನಗಳ ನಂತರ ಆ ಸೆಷನ್ನಿನಲ್ಲಿ ಸಭಿಕರಾಗಿ ಭಾಗವಹಿಸಿದ ಹಲವರನ್ನು ಹುಡುಕಿಕೊಂಡು ಹೋಗಿ, ಅವರ ಅನಿಸಿಕೆಯನ್ನು ಕೇಳಿದಾಗ ಹಲವು ಅಚ್ಚರಿಯ ಅಂಶಗಳನ್ನು ನಾನು ಕಂಡುಕೊಂಡಿದ್ದೆ. ಅದೇನೆಂದರೆ ಆ ಭಾಷಣವನ್ನು ಕೇಳುವವರೆಗೆ ಅಲ್ಲಿಗೆ ಬಂದಿದ್ದ ಬಹಳಷ್ಟು ಮಂದಿ ತಮ್ಮನ್ನು ತಾವು ಬಡವರು ಎಂದು ಭಾವಿಸಿಯೇ ಇರಲಿಲ್ಲ. ತಿಂಗಳಿಗೆ ಐವತ್ತು ಸಾವಿರ ಹುಟ್ಟುವ ಸಂಬಳದ ದುಡಿಮೆಯ ಬಗ್ಗೆ ಅವರಿಗೆ ಹೇಳಿಕೊಳ್ಳುವಂತಹ ದೂರುಗಳೇನೂ ಇರಲಿಲ್ಲ. ಆದರೆ ನೆರೆದಿದ್ದ ಮಂದಿಯ ಚರ್ಚೆಗಳು ಕೋಟಿಗಳಲ್ಲಾಗುತ್ತಿದ್ದಾಗ ಸಹಜವಾಗಿಯೇ ಸಾವಿರಗಳಲ್ಲಿ ದುಡಿಯುತ್ತಿದ್ದ ಮಂದಿಗೆ ಕೀಳರಿಮೆಯ ಭಾವನೆಯೊಂದು ಅಚಾನಕ್ಕಾಗಿ ಮೊಳಕೆಯೊಡೆದಿತ್ತು. ತಾವು ಈವರೆಗೆ ಕಳೆದ ಜೀವನವು ಮೂರನೆಯ ದರ್ಜೆಯದ್ದು ಎಂದು ಏಕಾಏಕಿ ಅನ್ನಿಸತೊಡಗಿತ್ತು. ಎಮ್.ಎಲ್.ಎಮ್ ಎಂದೇ ಹೆಸರಾಗಿರುವ ಮಲ್ಟಿ ಲೆವೆಲ್ ಮಾರ್ಕೆಟಿಂಗ್ ಐಡಿಯಾಗಳು, ಪಿರಮಿಡ್ ಸ್ಕೀಮುಗಳು, ಪಾಂಝಿ ಸ್ಕೀಮುಗಳು ಇವತ್ತಿಗೂ ನಮ್ಮ ನಡುವೆ ಸಲೀಸಾಗಿ ನಡೆಯುವುದು ಮಾನವ ಮನಸ್ಸಿನ ಇಂಥದ್ದೊಂದು ದುರ್ಬಲ ಎಳೆಯನ್ನಿಟ್ಟುಕೊಂಡೇ.</p>



<p>ಹಳ್ಳಿ ಅಥವಾ ಪುಟ್ಟ ಪಟ್ಟಣಗಳಲ್ಲಿ ತಕ್ಕಮಟ್ಟಿನ ವ್ಯವಹಾರವೊಂದನ್ನು ನಡೆಸುತ್ತಿರುವ ಪುಟ್ಟ ಉದ್ಯಮಿಯೊಬ್ಬನ ಕನಸಿನ ಬಂಡಿಯು ಸದಾ ಮಹಾನಗರದ ಆಸುಪಾಸೇ ಗಿರಕಿ ಹೊಡೆಯುತ್ತಿರುತ್ತದೆ. ಮುಖ್ಯವಾಗಿ ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ಮಹಾನಗರಗಳಿಗೆ ವಲಸೆ ಹೋಗುವ ಯುವಜನತೆಯು ಹಲವು ಅನಿವಾರ್ಯತೆಗಳ ಬಲೆಯಲ್ಲಿ ಸೆರೆಯಾಗಿ, ಕ್ರಮೇಣ ಅಲ್ಲೇ ಗಟ್ಟಿಯಾಗಿ ಬೇರೂರಬೇಕಾದ ಆಯ್ಕೆಗೆ ಜೋತುಬೀಳುತ್ತದೆ. ತಿಂಗಳ ಕೊನೆಯಲ್ಲಿ ಸಂಬಳ ಎಣಿಸುವಂತಹ ಉದ್ಯೋಗಿಯಂತೂ ತರಹೇವಾರಿ ದೀರ್ಘಾವಧಿಯ ಸಾಲಗಳು, ನಿಯಮಿತವಾಗಿ ಬಂದು ಕದ ತಟ್ಟುವ ಇ.ಎಮ್.ಐ ಗಳು, ಕುಟುಂಬದ ಪೋಷಣೆ, ಮಕ್ಕಳ ವಿದ್ಯಾಭ್ಯಾಸ-ವಿವಾಹದ ಖರ್ಚು&#8230; ಇತ್ಯಾದಿ ಮುಗಿಯದ ಓಟದಲ್ಲೇ ಕಳೆದುಹೋಗಿ ತನ್ನ ಆಯಸ್ಸನ್ನು ಮುಗಿಸಿಬಿಟ್ಟಿರುತ್ತಾನೆ. ಆತನ ಪಾಲಿಗೆ ಬದುಕು ಹಾಗೆ ಬಂದು ಹೀಗೆ ಹೋಗಿರುತ್ತದೆ. ಫಾಸ್ಟ್ ಫಾರ್ವರ್ಡ್ ಮಾಡಿಬಿಟ್ಟ ಒಂದು ಪುಟ್ಟ ಕನಸಿನಂತೆ.</p>



<p>ಈ ಬೆಳವಣಿಗೆಗಳ ಪರಿಣಾಮವೋ ಏನೋ ಎಂಬಂತೆ &#8220;ಮಿನಿಮಲಿಸ್ಟ್&#8221; ಪರಿಕಲ್ಪನೆಯು ಕೆಲ ಪಾಶ್ಚಾತ್ಯ ದೇಶಗಳಲ್ಲಿ ನಿಧಾನವಾಗಿ ಜನಪ್ರಿಯವಾಯಿತು. ಚಂದದ ಬದುಕಿಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಇಟ್ಟುಕೊಂಡು ಸಂತೃಪ್ತಿಯಿಂದ ಬದುಕುವುದು ಇಲ್ಲಿನ ಧ್ಯೇಯ. ಹಟಕ್ಕೆ ಬಿದ್ದವರಂತೆ ಕಣ್ಣಿಗೆ ಬಿದ್ದಿದ್ದನ್ನೆಲ್ಲ ಖರೀದಿಸುವುದು, ಅದನ್ನು ಮನೆಯಲ್ಲಿ ತಂದು ರಾಶಿ ಹಾಕುವುದು, ಮತ್ತಷ್ಟು ಬೇಕೆಂದು ಹಂಬಲಿಸುವುದು&#8230; ಇತ್ಯಾದಿ ಮುಖ್ಯವಾಹಿನಿಯ ಕನ್ಸ್ಯೂಮರಿಸಂ ಮನಸ್ಥಿತಿಗೆ ವಿರುದ್ಧವಾಗಿದೆ ಈ ವಾದ. ಮಿನಿಮಲಿಸ್ಟ್ ಗಳು ಹೇಳುವ ಪ್ರಕಾರ ಈ ಬಗೆಯ ಜೀವನಶೈಲಿಯನ್ನು ಅಳವಡಿಸಿ ಕೊಂಡಾಗಿನಿಂದ, ಹಣಕಾಸಿಗೆ ಸಂಬಂಧಪಟ್ಟಂತೆ ಅವರ ಮೇಲಿದ್ದ ಅನಗತ್ಯ ಮಾನಸಿಕ ಒತ್ತಡಗಳು ಮರೆಯಾಗಿ ನಿರಾಳವಾಗಿದೆಯಂತೆ.&nbsp;</p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-1024x768.jpg" alt="" class="wp-image-32457" srcset="https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-1024x768.jpg 1024w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-300x225.jpg 300w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-768x576.jpg 768w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-150x113.jpg 150w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-696x522.jpg 696w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1-1068x801.jpg 1068w, https://peepalmedia.com/wp-content/uploads/2023/11/9f9ff41e-4c55-45e5-8b6e-a60bd07118b7-1.jpg 1152w" sizes="auto, (max-width: 1024px) 100vw, 1024px" /><figcaption class="wp-element-caption"><strong>ಬಾದಲ್‌ ಅವರೊಂದಿಗೆ ಲೇಖಕರು</strong></figcaption></figure>



<p>ಕೆಲ ವರ್ಷಗಳ ಹಿಂದೆ ನಾನು ದಿಲ್ಲಿಯಲ್ಲಿ ಬಾದಲ್ ಚಿತ್ರಕಾರ್ ಎಂಬ ಖ್ಯಾತ ಚಿತ್ರಕಲಾವಿದರೊಬ್ಬರನ್ನು ಆಕಸ್ಮಿಕವಾಗಿ ಭೇಟಿಯಾಗಿದ್ದೆ. ಹೀಗೆ ಶುರುವಾದ ಹರಟೆಯೊಂದು ನಂತರ ಚಂದದ ಸಂದರ್ಶನವೊಂದರಲ್ಲಿ ಕೊನೆಯಾಗಿತ್ತು. ಬಾದಲ್ ರವರ ಹಲವು ಕಲಾಕೃತಿಗಳು ಭಾರತದ ಪ್ರತಿಷ್ಠಿತ ಮ್ಯೂಸಿಯಂಗಳಲ್ಲಿ ಗತ್ತಿನಿಂದ ಕೂತಿವೆ. ಗೀತರಚನಾಕಾರ ನೀರಜ್ ಸೇರಿದಂತೆ ಹಲವು ಬಾಲಿವುಡ್ ದಿಗ್ಗಜರೊಂದಿಗೆ ಅವರಿಗೆ ನಿಕಟ ಸಂಪರ್ಕವಿತ್ತು. ಈ ದೇಶದ ಕೆಲ ಪ್ರಧಾನಮಂತ್ರಿಗಳು ಮತ್ತು ರಾಷ್ಟ್ರಪತಿಗಳಿಂದ ಬಾದಲ್ ತಮ್ಮ ಕಲಾಜಗತ್ತಿನ ಸಾಧನೆಗಾಗಿ ಸನ್ಮಾನಿಸಲ್ಪಟ್ಟವರೂ ಹೌದು.</p>



<p>ದೆಹಲಿ ನಿವಾಸಿಯಾಗಿರುವ ಬಾದಲ್ ಚಿತ್ರಕಾರ್ ಮನಸ್ಸು ಮಾಡಿದ್ದರೆ ಹಲವು ಅಕಾಡೆಮಿ, ಕಲ್ಚರಲ್ ಇನ್ಸ್ಟಿಟ್ಯೂಟ್ ಗಳ ಅಧ್ಯಕ್ಷರೋ, ನಿರ್ದೇಶಕರೋ ಆಗಿ ಐಷಾರಾಮಿ ಬದುಕನ್ನು ಸವಿಯಬಹುದಿತ್ತು. ಆದರೆ ಅವರು ಇದ್ಯಾವುದರ ಗೋಜೇ ಇಲ್ಲದವರಂತೆ ದಿಲ್ಲಿಯಲ್ಲಿರುವ ತಮ್ಮ ಚಿಕ್ಕದೊಂದು ಗೂಡಿನಂತಹ ಮನೆಯಲ್ಲಿ ಹಾಯಾಗಿದ್ದಾರೆ. ಎಂಭತ್ತರ ಸಾಲಿನಲ್ಲಿರುವ ಬಾದಲ್ ಇಂದಿಗೂ ಮನಸಾರೆ ನಗುತ್ತಾರೆ. ಯುವಕರನ್ನು ನಾಚಿಸುವಂತೆ ಬುದುಬುದು ಹೆಜ್ಜೆಹಾಕುತ್ತಾ ವೇಗವಾಗಿ ನಡೆಯುತ್ತಾರೆ. ಏನ್ಸಾರ್, ಫೋಟೋಗೆ ಪೋಸ್ ಕೂಡಲು ಕೂಡ ನಿಮಗೆ ಬರೋದಿಲ್ವಲ್ರೀ ಎಂದು ನನಗೆ ಕೀಟಲೆ ಮಾಡುತ್ತಾರೆ. ಆ ವಯಸ್ಸಿನಲ್ಲೂ ಚಿತ್ರಕಲೆಯೊಂದನ್ನು ಬಿಟ್ಟು ಅವರಿಗೆ ಬೇರೇನೂ ತಿಳಿದಿರಲಿಲ್ಲ. ಅವರ ಸುತ್ತಮುತ್ತ ಬಣ್ಣಗಳು, ಕ್ಯಾನ್ವಾಸುಗಳು ಮತ್ತು ಆಸಕ್ತ ವಿದ್ಯಾರ್ಥಿಗಳನ್ನು ಬಿಟ್ಟು ಬೇರೇನೂ ಇರಲಿಲ್ಲ. ವಿಶೇಷವೆಂದರೆ ಅವರು ಚಕಚಕನೆ ಬಿಡಿಸುತ್ತಿದ್ದ ಹಲವು ರೇಖಾಚಿತ್ರಗಳು ದಿಲ್ಲಿಯ ಮಾರ್ಕೆಟ್ಟುಗಳಲ್ಲಿ ಅತ್ಯಂತ ಕಡಿಮೆ ಬೆಲೆಗೆ ಬಿಕರಿಯಾಗುತ್ತಲೂ ಇತ್ತು. ಅದೂ ಖ್ಯಾತಿಯ ಭಾರವನ್ನು ಹೊತ್ತಿದ್ದ ಅವರ ಹೆಸರಿನ ಹಂಗಿಲ್ಲದೆ!</p>



<figure class="wp-block-image size-large"><img loading="lazy" decoding="async" width="1024" height="705" src="https://peepalmedia.com/wp-content/uploads/2023/11/BC1-1-1024x705.jpg" alt="" class="wp-image-32459" srcset="https://peepalmedia.com/wp-content/uploads/2023/11/BC1-1-1024x705.jpg 1024w, https://peepalmedia.com/wp-content/uploads/2023/11/BC1-1-300x207.jpg 300w, https://peepalmedia.com/wp-content/uploads/2023/11/BC1-1-768x529.jpg 768w, https://peepalmedia.com/wp-content/uploads/2023/11/BC1-1-1536x1058.jpg 1536w, https://peepalmedia.com/wp-content/uploads/2023/11/BC1-1-150x103.jpg 150w, https://peepalmedia.com/wp-content/uploads/2023/11/BC1-1-218x150.jpg 218w, https://peepalmedia.com/wp-content/uploads/2023/11/BC1-1-696x479.jpg 696w, https://peepalmedia.com/wp-content/uploads/2023/11/BC1-1-1068x735.jpg 1068w, https://peepalmedia.com/wp-content/uploads/2023/11/BC1-1-1920x1322.jpg 1920w, https://peepalmedia.com/wp-content/uploads/2023/11/BC1-1.jpg 2048w" sizes="auto, (max-width: 1024px) 100vw, 1024px" /><figcaption class="wp-element-caption"><strong>ಕಲಾಂ ಮತ್ತು ಬಾದಲ್</strong></figcaption></figure>



<p>ನಮ್ಮ ಹಿರಿಯರು ವರ್ಷಕ್ಕೊಮ್ಮೆ ದಸರೆಗೋ, ದೀಪಾವಳಿಗೋ ಮನೆಯವರೆಲ್ಲರಿಗೂ ಬಟ್ಟೆ ಖರೀದಿ ಮಾಡುತ್ತಿದ್ದವರು. ತಕ್ಕಮಟ್ಟಿನ ಸಂಪಾದನೆಯಲ್ಲೇ ಆರೇಳು ಮಂದಿಯ ಕುಟುಂಬವನ್ನು ಸಲೀಸಾಗಿ ನಡೆಸುತ್ತಿದ್ದವರು. ಅವಶ್ಯಕತೆಯಿರದ ವಸ್ತುಗಳನ್ನು ಖರೀದಿಸಿ ಮನೆಯನ್ನು ಮ್ಯೂಸಿಯಂ ಮಾಡುವ ಯಾವ ಹಂಬಲಗಳೂ ಇಲ್ಲದೆ ಬದುಕಿದ್ದವರು. ಮಿನಿಮಲಿಸಂ ಎಂಬ ಪದವೊಂದು ಹುಟ್ಟುವುದಕ್ಕೆ ಮುನ್ನವೇ ನಿಜವಾದ ಮಿನಿಮಲಿಸ್ಟ್ ಆಗಿ ಅರ್ಥಪೂರ್ಣವಾಗಿ ತಮ್ಮ ಜೀವನವನ್ನು ಸಾಗಿಸಿದವರು. ಇಂದು ಮಹಾನಗರಗಳಲ್ಲಿ ದುಡಿಯುವ ಮಂದಿಗೆ ಲಕ್ಷ ದುಡಿದರೂ ಕೈಯಲ್ಲಿ ಕಾಸು ಉಳಿಯುವುದಿಲ್ಲ. ಆಸೆಗಳು ಮುಗಿಯುವುದಿಲ್ಲ. ಸಂತೃಪ್ತಿಯಂತೂ ಕೈಗೆಟುಕದಿರುವ ದೂರದ ನಕ್ಷತ್ರ.</p>



<figure class="wp-block-image size-large"><img loading="lazy" decoding="async" width="1024" height="768" src="https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-1024x768.jpg" alt="" class="wp-image-32462" srcset="https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-1024x768.jpg 1024w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-300x225.jpg 300w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-768x576.jpg 768w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-150x113.jpg 150w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-696x522.jpg 696w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3-1068x801.jpg 1068w, https://peepalmedia.com/wp-content/uploads/2023/11/a442c090-e3d4-40e1-ab39-b45d2b91710f-3.jpg 1152w" sizes="auto, (max-width: 1024px) 100vw, 1024px" /><figcaption class="wp-element-caption"><strong>ಬಾದಲ್ ಚಿತ್ರಕಾರ್  ಅವರ ಕಲಾಕೃತಿ</strong></figcaption></figure>



<p>ಮೆಟ್ರೋಸಿಟಿಗಳಲ್ಲಿ ಬಾಳುತ್ತಿರುವ ನಮ್ಮಂಥವರು ಈ ಬಗೆಯ ಜೀವನಶೈಲಿಯತ್ತ ಮತ್ತೆ ಮರಳಬೇಕಿದೆ.</p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p><sub><strong>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</strong></sub></p>



<p><strong>ಇದನ್ನೂ ಓದಿ-</strong></p>



<p><sub><a href="https://peepalmedia.com/?page_id=32484" data-type="page" data-id="32484">“ಕಂಡಿದ್ದು, ಕೇಳಿದ್ದು, ದಕ್ಕಿದ್ದು”</a>  <a href="https://peepalmedia.com/seen-heard-found/" data-type="link" data-id="https://peepalmedia.com/seen-heard-found/">https://peepalmedia.com/seen-heard-found/</a></sub></p>



<p><sub><a href="https://peepalmedia.com/a-life-story-of-a-metropolis/">ಮಹಾನಗರವೊಂದರ ಜೀವನ ಕಥನ</a>&nbsp;<a href="https://peepalmedia.com/a-life-story-of-a-metropolis/">https://peepalmedia.com/a-life-story-of-a-metropolis/</a></sub></p>



<p><a href="https://peepalmedia.com/?page_id=30259"><sub>ಬದುಕಿ</sub></a><sub><a href="https://peepalmedia.com/?page_id=30259">ನ ಕೊಲಾಜ್ ಚಿತ್ರಪಟಗಳು”</a>&nbsp;<a href="https://peepalmedia.com/collage-pictures-of-life/">https://peepalmedia.com/collage-pictures-of-life/</a></sub></p>



<p><sub><a href="https://peepalmedia.com/?page_id=30258">“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ”</a>&nbsp;<a href="https://peepalmedia.com/the-innovative-quest-of-networking/">https://peepalmedia.com/the-innovative-quest-of-networking/</a></sub></p>



<p><a href="https://peepalmedia.com/?page_id=27446"><sub>ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p><a href="https://peepalmedia.com/?page_id=28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>
]]></content:encoded>
					
		
		
			</item>
		<item>
		<title>&#8220;ಕಂಡಿದ್ದು, ಕೇಳಿದ್ದು, ದಕ್ಕಿದ್ದು&#8221;</title>
		<link>https://peepalmedia.com/seen-heard-found/</link>
		
		<dc:creator><![CDATA[Prasad Naik]]></dc:creator>
		<pubDate>Fri, 03 Nov 2023 10:47:18 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=31082</guid>

					<description><![CDATA[ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು&#8230; ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ ಭಾಯಿ, ಗಲ್ಲಿಯಾದರೆ ಟಾಟಾ-ಬೈಬೈ ಎಂದು ಕ್ಯಾಬ್ ಚಾಲಕರೂ ಇಲ್ಲಿ ಹಿಂದೇಟು ಹಾಕುತ್ತಾರೆ. ಈ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು ಅಂತಾದಲ್ಲಿ ನಿಧಾನವಾಗಿ ಇಲ್ಲಿಯ ನೀರಿನಲ್ಲೂ ಇಳಿಯಬೇಕು. ಕಂಡುಕೇಳದ ಕತೆಗಳಿಗೆ ಎಡತಾಕಬೇಕು – ಪ್ರಸಾದ್‌ ನಾಯ್ಕ್‌, ದೆಹಲಿ ನಮಗೂ ಪೂರ್ವಾಗ್ರಹಗಳಿಗೂ ಹಳೆಯ ನಂಟು. ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮ್ಮೆಲ್ಲರಿಗೆ ಬಹುತೇಕ [&#8230;]]]></description>
										<content:encoded><![CDATA[
<p class="has-background" style="background-color:#6a8a7e2e"><strong>ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು&#8230; ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ ಭಾಯಿ, ಗಲ್ಲಿಯಾದರೆ ಟಾಟಾ-ಬೈಬೈ ಎಂದು ಕ್ಯಾಬ್ ಚಾಲಕರೂ ಇಲ್ಲಿ ಹಿಂದೇಟು ಹಾಕುತ್ತಾರೆ. ಈ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು ಅಂತಾದಲ್ಲಿ ನಿಧಾನವಾಗಿ ಇಲ್ಲಿಯ ನೀರಿನಲ್ಲೂ ಇಳಿಯಬೇಕು. ಕಂಡುಕೇಳದ ಕತೆಗಳಿಗೆ ಎಡತಾಕಬೇಕು – <mark style="background-color:rgba(0, 0, 0, 0)" class="has-inline-color has-vivid-red-color">ಪ್ರಸಾದ್‌ ನಾಯ್ಕ್‌, ದೆಹಲಿ</mark></strong></p>



<p>ನಮಗೂ ಪೂರ್ವಾಗ್ರಹಗಳಿಗೂ ಹಳೆಯ ನಂಟು.</p>



<p>ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ನಮ್ಮೆಲ್ಲರಿಗೆ ಬಹುತೇಕ ಎಲ್ಲದರ ಬಗ್ಗೆ ತರಹೇವಾರಿ ಪೂರ್ವಾಗ್ರಹಗಳಿವೆ. ಸರಳವಾಗಿ ಹೇಳುವುದಾದರೆ ಒಂದು ಸಂಗತಿಯ ಬಗ್ಗೆ ಎಲ್ಲೋ ಯಾರಿಂದಲೋ ಕೇಳಿದ್ದೋ, ಓದಿದ್ದೋ ನಮ್ಮ ಸುಪ್ತಪ್ರಜ್ಞೆಯಲ್ಲಿ ಭದ್ರವಾಗಿ ನೆಲೆಯೂರಿ, ಆ ಸಂಗತಿಯ ಬಗ್ಗೆ ನಂತರ ದಕ್ಕುವ ಅನುಭವಗಳೆಲ್ಲಾ ನಮ್ಮ ಆರಂಭಿಕ ಕಲ್ಪನೆಗಳ ತೆಳು ವಿಸ್ತರಣೆಯಷ್ಟೇ ಎಂಬಂತೆ ಭಾಸವಾಗುವ ಭ್ರಮೆ. ಇನ್ನು ಪೂರ್ವಾಗ್ರಹಗಳು ಸುರಕ್ಷಿತ ಮಿತಿಗಳನ್ನು ಮೀರಿದಾಗ ತಮಗೂ, ತಮ್ಮ ಸುತ್ತಮುತ್ತಲಿನವರಿಗೂ ಕಿರಿಕಿರಿಯಾಗುವಷ್ಟು ದೊಡ್ಡ ಪೆಡಂಭೂತವಾಗಿ ಬೆಳೆದು ಕೆಲವೊಮ್ಮೆ ಮಹಾಸಮಸ್ಯೆಯಾಗುವುದೂ ಇದೆ. ಇಸ್ಲಾಮೋಫೋಬಿಯಾ ಇದಕ್ಕೊಂದು ಒಳ್ಳೆಯ ನಿದರ್ಶನ. ನನಗೆ ಪೂರ್ವಾಗ್ರಹಗಳೇ ಇಲ್ಲ ಎನ್ನುವವನು ಒಂದೋ ಲೌಕಿಕ ಜಂಜಾಟಗಳಿಂದ ಕಳಚಿಕೊಂಡ ಸಂತನಾಗಿರುತ್ತಾನೆ. ಅಥವಾ ಅಪ್ಪಟ ಸುಳ್ಳುಗಾರನಾಗಿರುತ್ತಾನೆ. ಅಷ್ಟೇ.</p>



<p>ಇದು ನನ್ನದೇ ಸ್ನೇಹಿತರ ವಲಯದಲ್ಲಿ ನಡೆದ ಒಂದು ಘಟನೆ. ಅಂದು ಪುಟ್ಟ ಕವಿಗೋಷ್ಠಿಯ ಹೆಸರಿನಲ್ಲಿ ಎಲ್ಲರೂ ಸೇರಿದ್ದರು. ನಿಗದಿತ ಸಮಯಕ್ಕೆ ಕವಿತಾವಾಚನ, ಚರ್ಚೆಗಳು ಆರಂಭವಾಗಿದ್ದವು. ಈ ಮಧ್ಯೆ ತಮ್ಮ ಸರದಿ ಬಂದಾಗ ಯುವ ಬರಹಗಾರ್ತಿಯೊಬ್ಬರು ಎದ್ದು ನಿಂತು ಶಹರದಲ್ಲಿ ಕಳೆದ ತಮ್ಮ ಬಾಲ್ಯದ ಬಗ್ಗೆ ಕೆಲ ಸಾಲುಗಳನ್ನು ವಾಚಿಸಿದರು. ಅದೇನಾಯಿತೋ ಗೊತ್ತಿಲ್ಲ. ಈ ಯುವ ಲೇಖಕಿಯ ಮಾತುಗಳು ಮುಗಿದ ನಂತರ ಅಲ್ಲೇ ಉಪಸ್ಥಿತರಿದ್ದ ಹಿರಿಯ ಕವಯತ್ರಿಯೊಬ್ಬರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ ಶಹರದಲ್ಲಿ ಹುಟ್ಟಿ ಬೆಳೆದ ಮಕ್ಕಳು ಏನು ತಾನೇ ಬರೆಯಬಲ್ಲರು, ಅವರ ಬಾಲ್ಯಗಳು ಬಾಲ್ಯವೇ ಅಲ್ಲ ಎಂಬರ್ಥದಲ್ಲಿ ಕಹಿಯಾಗಿ ಏನೋ ಹೇಳಿದರಂತೆ. ಇದಾದ ನಂತರ ಹರಟೆಯಲ್ಲಿ ಕಳೆಯಬೇಕಾಗಿದ್ದ ಚಂದದ ಸಂಜೆಯೊಂದು ಕೆಲಹೊತ್ತು ಮಾತಿನ ಚಕಮಕಿಯಲ್ಲಿ ವ್ಯರ್ಥವಾಯಿತು ಎಂಬುದು ತಿಳಿದುಬಂದಿತ್ತು.</p>



<p>ನನ್ನ ಸಣ್ಣಕತೆಗಳನ್ನೋದಿಯೂ ಹಲವು ಮಂದಿ ಈ ಬಗ್ಗೆ ವಿಚಾರಿಸಿದ್ದುಂಟು. ಮಹಾನಗರಗಳ ಜೀವನಶೈಲಿ, ಅಲ್ಲಿನ ವಿಚಿತ್ರ ಘಟನೆಗಳು, ವಿಕ್ಷಿಪ್ತ ವಲಯಗಳು, ನಿಗೂಢ ಲೋಕ&#8230; ಹೀಗೆ ನನ್ನ ಬಹಳಷ್ಟು ಕತೆಗಳು ಈ ಲೋಕದ ಸುತ್ತಲೇ ಹೆಚ್ಚು ಗಿರಕಿ ಹೊಡೆಯುವುದರಿಂದ ಈ ಬಗೆಗಿನ ಹೆಚ್ಚಿನ ಪ್ರಶ್ನೆಗಳನ್ನು ನಾನು ಆಸಕ್ತ ಓದುಗರಿಂದ ಮತ್ತು ಕುತೂಹಲಿಗಳಿಂದ ಕೇಳಿದ್ದೇನೆ. ಸಾಮಾನ್ಯವಾಗಿ ನನ್ನ ಕತೆಗಳು ಮತ್ತು ಲೇಖನಗಳಲ್ಲಿ ಅಷ್ಟಾಗಿ ರೊಮ್ಯಾಂಟಿಕ್ ರೂಪದಲ್ಲಿ ಕಾಣಸಿಗದ ಬಾಲ್ಯದ ಬಗ್ಗೆಯೂ ಪ್ರಶ್ನೆಗಳು ಕೇಳಿಬರುತ್ತವೆ. ಅತ್ತ ಹಳ್ಳಿಯೂ ಅಲ್ಲದ, ಇತ್ತ ನಗರವೂ ಅಲ್ಲದ ಪುಟ್ಟ ಪಟ್ಟಣವೊಂದರಲ್ಲಿ ಬೆಳೆದವನು ನಾನು. ಹೀಗಾಗಿ ನನ್ನದು &#8220;ಸೆಮಿ ಅರ್ಬನ್ ಸಾಹಿತ್ಯ&#8221; ಎಂದು ನಾನು ನಗೆಯಾಡುವುದೂ ಇದೆ.</p>



<figure class="wp-block-image size-full"><img loading="lazy" decoding="async" width="640" height="480" src="https://peepalmedia.com/wp-content/uploads/2023/11/images-3.jpeg" alt="" class="wp-image-31094" srcset="https://peepalmedia.com/wp-content/uploads/2023/11/images-3.jpeg 640w, https://peepalmedia.com/wp-content/uploads/2023/11/images-3-300x225.jpeg 300w, https://peepalmedia.com/wp-content/uploads/2023/11/images-3-150x113.jpeg 150w" sizes="auto, (max-width: 640px) 100vw, 640px" /></figure>



<p>ಮತ್ತೆ ಪೂರ್ವಾಗ್ರಹಗಳ ಅಖಾಡಕ್ಕೆ ಮರಳಿ ಬರೋಣ. ಮಹಾನಗರಗಳ ಬಗೆಗಿರುವ ಜನಪ್ರಿಯ ಮತ್ತು ಕ್ಲೀಷೆಯೆಂಬಷ್ಟು ಸವಕಲಾಗಿರುವ ಪೂರ್ವಾಗ್ರಹವೆಂದರೆ ಇಲ್ಲಿರುವ ಬಹುತೇಕ ಯುವಜನತೆಗೆ ಪಬ್ಬು-ಕ್ಲಬ್ಬುಗಳೇ ಎರಡನೆಯ ಮನೆ ಎಂಬುದು. ಇತ್ತೀಚೆಗೆ ನಾರಾಯಣ ಮೂರ್ತಿಯವರು ಉದ್ಯೋಗಿಗಳು ವಾರಕ್ಕೆ ಎಪ್ಪತ್ತು ತಾಸುಗಳ ಕಾಲ ಕೆಲಸ ಮಾಡಬೇಕು ಅಂತೆಲ್ಲ ಹೇಳಿ ವಿವಾದದ ಧೂಳೆಬ್ಬಿಸಿದಾಗ, ಈ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಈ ಬಗ್ಗೆ ಫೇಸ್-ಬುಕ್ ನಲ್ಲಿ ಪ್ರತಿಕ್ರಿಯೆಯನ್ನು ಬರೆದಿದ್ದ ವ್ಯಕ್ತಿಯೊಬ್ಬರು &#8220;ಈ ಮೆಟ್ರೋ ಸಿಟಿಗಳಲ್ಲಿರುವ ಯುವಕ-ಯುವತಿಯರಿಗೆ ಮೈಬಗ್ಗಿಸಿ ದುಡಿಯಿರಿ ಎಂದರೆ ಮೈಯೆಲ್ಲಾ ಮುಳ್ಳಾಗುತ್ತದೆ. ಆದರೆ ವೀಕೆಂಡಿನಲ್ಲಿ ಪಬ್ಬುಗಳಿಗೆ ಹೋಗಿ ಪಾರ್ಟಿ ಮಾಡುವುದನ್ನು ನಿಲ್ಲಿಸಿ ಎಂದರೆ ಇದೇ ಮಂದಿ ಮುಖ ಸಿಂಡರಿಸುತ್ತಾರೆ&#8221;, ಎಂದು ಅಸಮಾಧಾನವನ್ನು ತೋಡಿಕೊಂಡಿದ್ದರು. ನಮ್ಮ ಮಹಾನಗರಗಳು ಕುಡುಕರ ಗಡಂಗುಗಳಾಗುತ್ತಿವೆ ಎಂಬುದು ಅವರ ಪ್ರಾಮಾಣಿಕ ಕಾಳಜಿ. ಇದು ಒಂದು ಮಟ್ಟಿಗೆ ಸತ್ಯವೂ ಹೌದು ಅನ್ನೋಣ. ಹಾಗಂತ ಈ ಸ್ಥಿತಿಗೆ ಯಾರು ಕಾರಣ? ಹೆಚ್ಚು ದುಡಿದು, ಹೆಚ್ಚು ಗಳಿಸಿ, ವಿಪರೀತ ಸುಸ್ತಾದವರು ಸಂಜೆ ಪೆಗ್ಗು ಇಳಿಸಿ ಕುಣಿಯುವುದೋ? ಅಥವಾ ಮಹಾನಗರಗಳಲ್ಲಿ ಕೈತುಂಬಾ ದುಡಿಯುವ ಮಂದಿ &#8220;ಮೈಬಗ್ಗಿಸಿ ದುಡಿಯುವ&#8221; ವರ್ಗದಡಿ ಬರುವುದಿಲ್ಲವೋ? ಗೊತ್ತಾಗಲಿಲ್ಲ!</p>



<p>ಹೀಗೆ ಬರೆದವರು ಎತ್ತಿದ್ದ ಮತ್ತೊಂದು ದೊಡ್ಡ ಪ್ರಶ್ನೆಯೆಂದರೆ ಸೈನಿಕರು ಗಡಿಯಾರ ನೋಡಿ ಕೆಲಸ ಮಾಡುವುದಿಲ್ಲ ಎಂದಾದಾಗ, ರೈತನೊಬ್ಬ ಮೈಬಗ್ಗಿಸಿ ದುಡಿದರೂ ಈ ಬಗ್ಗೆ ದೂರುವುದಿಲ್ಲ ಎಂದಾದಾಗ, ಮಹಾನಗರಗಳಲ್ಲಿ ಫ್ಯಾನ್ಸಿ ಆಫೀಸುಗಳಲ್ಲಿ ಕೂರುವ, ಎ.ಸಿ ಹವೆಯನ್ನು ಹೀರುವ, ವಾರಾಂತ್ಯಗಳಲ್ಲಿ ಬಿಯರ್ ಅಭಿಷೇಕಗಳನ್ನು ತಮಗೆ ತಾವೇ ಮಾಡಿಸಿಕೊಳ್ಳುವ ನಿಮ್ಮಂತಹ ಕೋಣಗಳಿಗೇನು ಧಾಡಿ ಅನ್ನುವುದು. ಬಹುಷಃ ಅವರಿಗೆ ಗೊತ್ತಿಲ್ಲದ ಸಂಗತಿಯೇನೆಂದರೆ ಇದೇ ಎ.ಸಿ ರೂಮುಗಳಲ್ಲಿ ಕೂತು ಕೀಬೋರ್ಡ್ ಕುಟ್ಟುವ ಉದ್ಯೋಗಿಯೊಬ್ಬ, ಇವತ್ತಲ್ಲಾ ನಾಳೆ ಹಳ್ಳಿಗೆ ಮರಳಿ, ಅರ್ಧ ಎಕರೆ ಜಮೀನು ಖರೀದಿಸಿ, ಏನೋ ಬೆಳೆದು, ಎರಡ್ಹೊತ್ತಿನ ಗಂಜಿ ಉಂಡು ಸುಖವಾಗಿರುತ್ತೇನೆ ಎಂದು ಕನಸು ಕಾಣುತ್ತಿರುತ್ತಾನೆ. ಇತ್ತ ಹಳ್ಳಿಯ ಹುಡುಗನೊಬ್ಬ ದೂರದಲ್ಲಿರುವ ಗಾಜಿನ ಕಟ್ಟಡದೊಳಗಿನ ಎ.ಸಿ. ರೂಮಿನಲ್ಲಿ ಒಂದ್ಹತ್ತು ಸಾವಿರದ ನೌಕರಿ ಸಿಕ್ಕರೂ ಬದುಕು ಪಾವನವಾದೀತು ಎಂದು ಹಂಬಲಿಸುತ್ತಿರುತ್ತಾನೆ. ಈರ್ವರಿಗೂ ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ! ಒಟ್ಟಿನಲ್ಲಿ ಮಹಾನಗರಗಳಲ್ಲಿ ದುಡಿದು ಕೈತುಂಬಾ ಗಳಿಸುವ ಸಾವಿರಾರು ಮಂದಿ ಉದ್ಯೋಗಿಗಳು ಪರಿಶ್ರಮಿಗಳೇ ಅಲ್ಲ ಅನ್ನುವುದು ಇಲ್ಲಿರುವ ಒಟ್ಟಾರೆ ಪೂರ್ವಾಗ್ರಹ.</p>



<p>ಇದು ನಿಜವೇ ಎಂಬುದನ್ನು ತಿಳಿದುಕೊಳ್ಳಲು ಇವರ ಬದುಕುಗಳಲ್ಲೊಮ್ಮೆ ಇಣುಕಿ ನೋಡಬೇಕು. ಕೆಲ ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಮಾಧ್ಯಮವೊಂದರಲ್ಲಿ &#8220;ಅರ್ಬನ್ ಪೂರ್&#8221; ಎಂಬ ಸಂಗತಿಯ ಬಗ್ಗೆ ಪ್ರಕಟವಾದ ಲೇಖನವೊಂದು ದೊಡ್ಡ ಚರ್ಚೆಯನ್ನು ಹುಟ್ಟುಹಾಕಿತ್ತು. &#8220;ಅರ್ಬನ್ ಪೂರ್&#8221; ಎಂದರೆ &#8220;ನಗರದ ಬಡವ&#8221; ಎಂದರ್ಥ. ಮಹಾನಗರಗಳಲ್ಲಿರುವ ಯುವಕ-ಯುವತಿಯರು ತಿಂಗಳಿಗೆ ನಲವತ್ತು-ಐವತ್ತು ಸಾವಿರದಷ್ಟು ದುಡಿದರೂ ಅವರ ಕೈ ಖಾಲಿಯಾಗಿರುತ್ತದೆ ಎನ್ನುತ್ತದೆ ಈ ಲೇಖನ. ಇದಕ್ಕೆ ಮಹಾನಗರಗಳ ದುಬಾರಿ ಜೀವನಶೈಲಿಯೊಂದೇ ಕಾರಣವಲ್ಲ. ಬದಲಾಗಿ ಬ್ರ್ಯಾಂಡೆಡ್ ಉಡುಪುಗಳ ಖಯಾಲಿ, ಪಬ್ಬು-ಕ್ಲಬ್ಬುಗಳ ಶೋಕಿ, ಐಷಾರಾಮಿ ವಸ್ತುಗಳ (ವಾಹನ, ಎಲೆಕ್ಟ್ರಾನಿಕ್ ವಸ್ತುಗಳು) ಮೋಹ, ಅನಗತ್ಯ ಶಾಪಿಂಗ್ ಹುಚ್ಚು&#8230; ಇತ್ಯಾದಿ ಕಾರಣಗಳನ್ನೂ ಪಟ್ಟಿ ಮಾಡಲಾಗಿದೆ. ತಕ್ಕಮಟ್ಟಿಗಿದ್ದ ಮನೆಯನ್ನು ಬಿಕರಿಗಿಟ್ಟು ಶೋಕಿಯ ಕಾರನ್ನು ಕೊಂಡು, ಕೊನೆಗೆ ಕಾರನ್ನೇ ಮನೆ ಮಾಡಿಕೊಂಡವರ ಕತೆಗಳಿವು.</p>



<p>2010 ರ ಸುಮಾರಿನಲ್ಲಿ ಸುಭಾಷ್ ಕಪೂರ್ &#8220;ಫಸ್ ಗಯಾ ರೇ ಒಬಾಮಾ&#8221; ಅನ್ನುವ ವಿಡಂಬನಾತ್ಮಕ ಚಿತ್ರವೊಂದನ್ನು ನಿರ್ದೇಶಿಸಿ ತೆರೆಯ ಮೇಲೆ ತಂದಿದ್ದರು. ಈ ಹಿಂದಿ ಚಿತ್ರದ ನಾಯಕ ಓರ್ವ ಅನಿವಾಸಿ ಭಾರತೀಯ. ಹೆಸರಿಗೆ ಉದ್ಯಮಿ. ಕೆಲದಿನಗಳ ಕಾಲ ತನ್ನ ಕರ್ಮಭೂಮಿಯಾದ ಅಮೆರಿಕಾದಿಂದ ಮರಳಿ, ಜನ್ಮಭೂಮಿ ಭಾರತದಲ್ಲಿರುವ ತನ್ನ ಕುಟುಂಬದ ಮನೆಗೆ ಬಂದಿರುವವನು. ಇತ್ತ ಅನಿವಾಸಿ ಭಾರತೀಯನೆಂದರೆ ಸಹಜವಾಗಿ ಶ್ರೀಮಂತನಾಗಿರುತ್ತಾನೆ ಎಂದು ಲೆಕ್ಕ ಹಾಕುವ ಕೆಲ ಧೂರ್ತರು ದುಡ್ಡಿನಾಸೆಗೆ ಬಿದ್ದು ಅವನನ್ನು ಅಪಹರಿಸುತ್ತಾರೆ. ಕಿಡ್ನಾಪ್ ಆಗಿರುವ ಈತನ ಬಿಡುಗಡೆಗಾಗಿ ದೊಡ್ಡ ಮೊತ್ತದ ಹಣಕ್ಕೆ ಬೇಡಿಕೆಯಿಟ್ಟು ಅದರಲ್ಲಿ ಯಶಸ್ವಿಯಾದರೆ ಬದುಕನ್ನು ಆರಾಮಾಗಿ ಕಳೆಯಬಹುದು ಎಂಬುದು ಅವರ ಲೆಕ್ಕಾಚಾರ.</p>



<p>ಆದರೆ ನೈಜಸ್ಥಿತಿ ಬೇರೆಯೇ ಆಗಿರುತ್ತದೆ. ಅಮೆರಿಕದಲ್ಲುಂಟಾದ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ಎನ್.ಆರ್.ಐ ಉದ್ಯಮಿ ಆಗಲೇ ದೊಡ್ಡ ಹೊಡೆತವನ್ನು ತಿಂದಿರುತ್ತಾನೆ.&nbsp; ದಿವಾಳಿಯಾಗುವಷ್ಟರ ಮಟ್ಟಿಗೆ ಕಾಸು ಸೋರಿಹೋಗಿರುತ್ತದೆ. ಎಲ್ಲಿಂದಾದರೂ ನಾಲ್ಕು ಕಾಸು ಒಟ್ಟುಗೂಡಿಸಿ ಹಳ್ಳಿಯಲ್ಲಿ ತಣ್ಣಗೆ ಬದುಕಿದರೆ ಸಾಕಪ್ಪ ಎಂಬ ರಹಸ್ಯ ಯೋಜನೆ ಅವನದ್ದಾಗಿರುತ್ತದೆ. ಆದರೆ ಎನ್.ಆರ್.ಐ ಲೇಬಲ್ಲಿನ ಹಿಂದಿರುವ ಇಷ್ಟೆಲ್ಲಾ ಕರಾಳ ಕತೆಗಳು ಉಳಿದವರಿಗೆ ಹೇಗೆ ಗೊತ್ತಾಗಬೇಕು? ಮುಂದೆ ಅವನನ್ನು ಅಪಹರಿಸಿದ ಧೂರ್ತರಿಗೆ ಈ ಸತ್ಯಸಂಗತಿಗಳೆಲ್ಲ ತಿಳಿದಾಗ ಕಿಡ್ನಾಪಿಂಗ್ ಯೋಜನೆಯು ಹೇಗೆಲ್ಲಾ ದಿಕ್ಕು ತಪ್ಪುತ್ತದೆ ಎಂಬುದನ್ನು ತಮಾಷೆಯಾಗಿಯೂ, ಅರ್ಥಪೂರ್ಣವಾಗಿಯೂ ತೋರಿಸುವ ಚಿತ್ರವಿದು.&nbsp;&nbsp;&nbsp;&nbsp;</p>



<figure class="wp-block-image size-full"><img loading="lazy" decoding="async" width="800" height="500" src="https://peepalmedia.com/wp-content/uploads/2023/11/bargain-tricks-of-india_20170929131710-1.jpg" alt="" class="wp-image-31095" srcset="https://peepalmedia.com/wp-content/uploads/2023/11/bargain-tricks-of-india_20170929131710-1.jpg 800w, https://peepalmedia.com/wp-content/uploads/2023/11/bargain-tricks-of-india_20170929131710-1-300x188.jpg 300w, https://peepalmedia.com/wp-content/uploads/2023/11/bargain-tricks-of-india_20170929131710-1-768x480.jpg 768w, https://peepalmedia.com/wp-content/uploads/2023/11/bargain-tricks-of-india_20170929131710-1-150x94.jpg 150w, https://peepalmedia.com/wp-content/uploads/2023/11/bargain-tricks-of-india_20170929131710-1-696x435.jpg 696w" sizes="auto, (max-width: 800px) 100vw, 800px" /></figure>



<p>ಮಹಾನಗರಗಳ ಮತ್ತು ಇಲ್ಲಿರುವ ಮಂದಿಯ ಬಗೆಗಿರುವ ಹಲವು ಪೂರ್ವಾಗ್ರಹಗಳಲ್ಲಿ ಇದೊಂದು ಕಿರುನೋಟ ಮಾತ್ರ. ಹಾಗಂತ ಇಲ್ಲಿರುವವರಿಗೆ ಯಾವುದೇ ಪೂರ್ವಾಗ್ರಹಗಳಿರುವುದಿಲ್ಲವೋ? ಹಾಗೇನಿಲ್ಲ. ಉದಾಹರಣೆಗೆ ಇಲ್ಲಿರುವ ವಿದೇಶೀಯರ ಬಗ್ಗೆ ಇವರೊಂದಿಗೆ ಹಣಕಾಸಿನ ವ್ಯವಹಾರ ಮಾಡುವ ಎಲ್ಲರಿಗೂ ಒಂದು ಕಣ್ಣಿರುತ್ತದೆ. ಅದು ತೀರಾ ಆಟೋಚಾಲಕರಿಂದ ಹಿಡಿದು, ಹವಾಲಾ ದಂಧೆ ಮಾಡುವ ತಿಮಿಂಗಿಲಗಳವರೆಗೂ ಸತ್ಯ. ಎಲ್ಲರಿಗೂ ಈ ಬಿಳಿಯರ ಜೇಬಿನಲ್ಲಿರುವ ಗರಿಗರಿ ಡಾಲರ್ ನೋಟುಗಳ ಮೇಲೊಂದು ಕಣ್ಣು.</p>



<p>ದುರಾದೃಷ್ಟವಶಾತ್ ಹಲವು ಮುಗ್ಧ ವಿದೇಶಿ ಪ್ರವಾಸಿಗರು ಈ ಜಾಲಕ್ಕೆ ಸುಲಭವಾಗಿ ಬಲಿಯಾಗುತ್ತಾರೆ ಕೂಡ. ದೆಹಲಿ, ಮುಂಬೈ ಸೇರಿದಂತೆ ಹಲವು ಶಹರಗಳಲ್ಲಿ ಅಲೆದಾಡುತ್ತಿದ್ದ ಕುಖ್ಯಾತ ಅಪರಾಧಿ, ಬಿಕಿನಿ ಕಿಲ್ಲರ್ ಚಾರ್ಲ್ಸ್ ಶೋಭರಾಜ್ ಇಂತಹ ಪ್ರವಾಸಿಗಳನ್ನೇ ವಂಚಿಸುತ್ತಿದ್ದ. ಇವನು ರೂಪದಲ್ಲಿ ಸುರಸುಂದರಾಂಗ. ಮಾತು ಶುರುಮಾಡಿದನೆಂದರೆ ಸಮ್ಮೋಹನಾ ಮಾಯ್ಕಾರ. ಚಾರ್ಲ್ಸ್ ಹಲವು ಭಾಷೆಗಳನ್ನು ಅರಳು ಹುರಿದಂತೆ ನಿರರ್ಗಳವಾಗಿ ಮಾತಾಡುತ್ತಿದ್ದ. ಕದ್ದಿರುವ ಪಾಸ್ಪೋರ್ಟುಗಳನ್ನು ಮನಬಂದಂತೆ ಬಳಸುತ್ತಾ, ತಾನು ಅವರೇ ಎಂದು ಪೋಸು ಕೊಡುತ್ತಾ ಊಸರವಳ್ಳಿಯಂತೆ ಬಣ್ಣ ಬದಲಿಸುತ್ತಿದ್ದ. ಅದ್ಯಾವ ಸಂಕೋಲೆಗಳನ್ನು ಹಾಕಿದರೂ ಹೌದಿನಿ ಜಾದೂಗಾರನಂತೆ ಹೇಗೋ ನುಸುಳಿ ಪಾರಾಗುತ್ತಿದ್ದ. ಇವೆಲ್ಲ ಕುಖ್ಯಾತ ಹಿನ್ನೆಲೆಯಿಂದಾಗಿ ಜಗತ್ತು ಅವನನ್ನು &#8220;ವಿಷಸರ್ಪ&#8221; ಎಂದು ಕರೆಯಿತು. ಈ ಪಯಣದಲ್ಲಿ ಅವನು ಕೋಟಿಗಟ್ಟಲೆ ಗಳಿಸಿದ್ದೂ ಇದೆ, ಏಕಾಏಕಿ ಕೈ ಬರಿದಾಗಿದ್ದೂ ಆಗಿದೆ. ಅಂತೂ ಈ ರೋಚಕತೆಯ ಹೆಸರಿನಲ್ಲಿ ಲೆಕ್ಕವಿಲ್ಲದಷ್ಟು ದರೋಡೆಗಳಾದವು. ಹಲವು ಬರ್ಬರ ಕೊಲೆಗಳೂ ಆದವು. ಎಲ್ಲವೂ ವಿದೇಶಿಗರ ಕೈಯಲ್ಲಿದ್ದ ಡಾಲರುಗಳು ಮತ್ತು ಪಾಸ್-ಪೋರ್ಟುಗಳಿಗಾಗಿ.&nbsp;</p>



<figure class="wp-block-image size-full is-resized"><img loading="lazy" decoding="async" width="1024" height="768" src="https://peepalmedia.com/wp-content/uploads/2023/11/Paharganj_across_New_Delhi_Railway_station.jpg" alt="" class="wp-image-31083" style="aspect-ratio:1.3333333333333333;width:693px;height:auto" srcset="https://peepalmedia.com/wp-content/uploads/2023/11/Paharganj_across_New_Delhi_Railway_station.jpg 1024w, https://peepalmedia.com/wp-content/uploads/2023/11/Paharganj_across_New_Delhi_Railway_station-300x225.jpg 300w, https://peepalmedia.com/wp-content/uploads/2023/11/Paharganj_across_New_Delhi_Railway_station-768x576.jpg 768w, https://peepalmedia.com/wp-content/uploads/2023/11/Paharganj_across_New_Delhi_Railway_station-150x113.jpg 150w, https://peepalmedia.com/wp-content/uploads/2023/11/Paharganj_across_New_Delhi_Railway_station-696x522.jpg 696w" sizes="auto, (max-width: 1024px) 100vw, 1024px" /><figcaption class="wp-element-caption"><strong><em>ದಿಲ್ಲಿಯ  ಪಹಾಡ್-ಗಂಜ್ ನ ಒಂದು ನೋಟ</em></strong></figcaption></figure>



<p>&#8220;ಈ ದಿಲ್ಲಿಯಂಥಾ ದಿಲ್ಲಿಯಲ್ಲಿ ನೀನು ಎಲ್ಲೂ ಇರಬಹುದು. ಆದರೆ ಪಹಾಡ್-ಗಂಜ್ ಬಗ್ಗೆ ಅದೇನು ವಿಶೇಷ ಮೋಹ?&#8221;, ಎಂದು ಓರ್ವ ಅಮೆರಿಕನ್ ಯುವಕನ ಬಳಿ ಒಮ್ಮೆ ಕೇಳಿದ್ದೆ. ಅವನ ಹೆಸರು ಪೀಟರ್. ಜೀವನೋಪಾಯಕ್ಕಾಗಿ ಹಲವು ಕ್ಷೇತ್ರಗಳಲ್ಲಿ ಕೈಯಾಡಿಸಿದ್ದಾನೆ. ಹೇಳಿಕೊಳ್ಳಲು ಪಾರ್ಟ್ ಟೈಮ್ ವಿದ್ಯಾರ್ಥಿ ಮತ್ತು ಪ್ರವಾಸಿ. ವರ್ಷಕ್ಕೊಂದಿಷ್ಟು ಕಾಸು ಉಳಿಸಿ ಪ್ರವಾಸ ಮಾಡುವುದು ಆತನ ಖಯಾಲಿಯಂತೆ. &#8220;ನಾನು ಪ್ರತೀಬಾರಿ ದಿಲ್ಲಿಗೆ ಬಂದಾಗಲೂ ಇಲ್ಲೇ ಉಳಿದುಕೊಳ್ಳುವುದು. ಬನಾರಸ್ಸಿಗೋ, ಕೋಲ್ಕತ್ತಾಗೋ ಹೋಗೋಣ ಅಂದರೆ ಹತ್ತಿರದಲ್ಲೇ ರೈಲ್ವೆ ಸ್ಟೇಷನ್ ಇದೆ. ಇಲ್ಲಿ ಲಾಡ್ಜುಗಳು ಅಗ್ಗ. ಬಿಯರಿಗೂ ಬರಗಾಲವಿಲ್ಲ. ಇನ್ನು ನಿನ್ನಂಥವರು ಮಾತಾಡಲು ಸಿಕ್ಕರೆ ಹರಟೆಯೂ ಆಯಿತು. ಬದುಕಿಗೆ ಇನ್ನೇನು ಬೇಕು ಹೇಳು?&#8221;, ಎಂದು ಪ್ರಶ್ನೆಯ ರೂಪದಲ್ಲೇ ಪೀಟರ್ ಉತ್ತರಿಸುತ್ತಿದ್ದರೆ ನಾನು ಸುಮ್ಮನೆ ನಕ್ಕಿದ್ದೆ.</p>



<p>ಆದರೆ ದಿಲ್ಲಿಯಲ್ಲೇ ಇರುವ ಬಹಳಷ್ಟು ಮಂದಿಗೆ ಪಹಾಡ್-ಗಂಜ್ ಎಂದರೆ ಹತ್ತರಲ್ಲೊಂದು ಪ್ರದೇಶವಷ್ಟೇ. ಪಹಾಡ್-ಗಂಜ್ ಎಂದರೆ ಇಂದಿಗೂ ದಿಲ್ಲಿಯ ಬಹುತೇಕರಿಗೆ ಇಕ್ಕಟ್ಟು ಗಲ್ಲಿಗಳು, ಹತ್ತಾರು ಲಾಡ್ಜುಗಳು, ಅಸ್ತವ್ಯಸ್ತ ಎನ್ನಿಸುವ ಪರಿಸರ, ಬಣ್ಣಗೆಟ್ಟ ಗೋಡೆಗಳು&#8230; ಇತ್ಯಾದಿಗಳು ಮಾತ್ರ ಕಣ್ಣಮುಂದೆ ಬಂದು ನಿಲ್ಲುತ್ತವೆ. ಮುಖ್ಯರಸ್ತೆಯಾದರೆ ಚಲೇಗಾ ಭಾಯಿ, ಗಲ್ಲಿಯಾದರೆ ಟಾಟಾ-ಬೈಬೈ ಎಂದು ಕ್ಯಾಬ್ ಚಾಲಕರೂ ಇಲ್ಲಿ ಹಿಂದೇಟು ಹಾಕುತ್ತಾರೆ. ಈ ಪೂರ್ವಾಗ್ರಹಗಳನ್ನು ತೊಡೆದುಹಾಕಬೇಕು ಅಂತಾದಲ್ಲಿ ನಿಧಾನವಾಗಿ ಇಲ್ಲಿಯ ನೀರಿನಲ್ಲೂ ಇಳಿಯಬೇಕು. ಕಂಡುಕೇಳದ ಕತೆಗಳಿಗೆ ಎಡತಾಕಬೇಕು.</p>



<p>ಹೀಗೆ ಮಹಾನಗರವೊಂದನ್ನು ಇಷ್ಟೇ ಅಂದುಕೊಂಡಾಗಲೆಲ್ಲಾ ಮತ್ಯಾವುದೋ ಹೊಸ ಅವತಾರವೊಂದು ಥಟ್ಟನೆ ಕಣ್ಣಮುಂದೆ ಬಂದು ನಿಲ್ಲುತ್ತದೆ. ವಿಶ್ವರೂಪದ ಅಣುಭಾಗವೊಂದರ ದರ್ಶನ ಮಾತ್ರವು ನಮ್ಮೊಳಗಿರುವ ದೀರ್ಘಕಾಲದ ಪೂರ್ವಾಗ್ರಹವೊಂದನ್ನು ನುಚ್ಚುನೂರು ಮಾಡಿಬಿಡುತ್ತದೆ. ಇಂಥದ್ದೊಂದು ಅಗಾಧತೆ ಮತ್ತು ಚಂಚಲತೆಯೇ ನಗರಗಳನ್ನು ಮುಗಿಯದ ಕುತೂಹಲಗಳ ಆಗರವನ್ನಾಗಿಸುತ್ತಿದೆಯೇ? ಇರಬಹುದೇನೋ! ‌</p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</p>



<p><strong>ಹಿಂದಿನ ಅಂಕಣಗಳನ್ನೂ ಓದಿ-</strong> </p>



<p><sub><a href="https://peepalmedia.com/a-life-story-of-a-metropolis/" data-type="post" data-id="30255">ಮಹಾನಗರವೊಂದರ ಜೀವನ ಕಥನ</a> <a href="https://peepalmedia.com/a-life-story-of-a-metropolis/" data-type="link" data-id="https://peepalmedia.com/a-life-story-of-a-metropolis/">https://peepalmedia.com/a-life-story-of-a-metropolis/</a></sub></p>



<p><a href="https://peepalmedia.com/?page_id=30259"><sub>ಬದುಕಿ</sub></a><sub><a href="https://peepalmedia.com/?page_id=30259">ನ ಕೊಲಾಜ್ ಚಿತ್ರಪಟಗಳು”</a>&nbsp;<a href="https://peepalmedia.com/collage-pictures-of-life/">https://peepalmedia.com/collage-pictures-of-life/</a></sub></p>



<p><sub><a href="https://peepalmedia.com/?page_id=30258">“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ”</a>&nbsp;<a href="https://peepalmedia.com/the-innovative-quest-of-networking/">https://peepalmedia.com/the-innovative-quest-of-networking/</a></sub></p>



<p><a href="https://peepalmedia.com/?page_id=27446"><sub>ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p><a href="https://peepalmedia.com/?page_id=28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>
]]></content:encoded>
					
		
		
			</item>
		<item>
		<title>ಮಹಾನಗರವೊಂದರ ಜೀವನ ಕಥನ</title>
		<link>https://peepalmedia.com/a-life-story-of-a-metropolis/</link>
		
		<dc:creator><![CDATA[Prasad Naik]]></dc:creator>
		<pubDate>Fri, 20 Oct 2023 13:19:25 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=30255</guid>

					<description><![CDATA[ದಶಕವೊಂದರಲ್ಲಿ ಮಹಾನಗರಿಗಳು ಬೆಳೆಯುವ ವೇಗವು ಕಮ್ಮಿಯೇನಲ್ಲ. ನಮ್ಮ ದೇಶದ ಬಹಳಷ್ಟು ಮಹಾನಗರಿಗಳು ನಗರೀಕರಣದ ಈ ಗರಿಷ್ಠಮಿತಿಯನ್ನು ತಲುಪಿದ್ದೂ ಆಗಿ, ಸುತ್ತಲಿನ ಪ್ರದೇಶಗಳನ್ನು ನಿಧಾನವಾಗಿ ತಮ್ಮೊಳಗೆ ಆವಾಹಿಸಿಕೊಳ್ಳುತ್ತಿವೆ. ಗದ್ದೆಗಳಿದ್ದ ಜಾಗಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತುತ್ತವೆ. ಮೇಲೇರಲು ಜಾಗವಿಲ್ಲ ಎಂದಾದಾಗ ಇದ್ದಲ್ಲೇ ಅಗೆದು ಸಬ್-ವೇ ಗಳು ಸೃಷ್ಟಿಯಾಗುತ್ತವೆ – ಪ್ರಸಾದ್‌ ನಾಯ್ಕ್‌, ದೆಹಲಿ &#8220;ಮಹಾನಗರಗಳು ಮಲಗುವುದಿಲ್ಲ&#8220;! ಈ ಮಾತನ್ನು ಮೊದಲ ಬಾರಿ ಕೇಳಿದಾಗ ನಾನು ಮಹಾನಗರಗಳನ್ನು ಕಂಡಿರಲಿಲ್ಲ. ಆದರೆ ಆ ಹೇಳಿಕೆಯಲ್ಲಿ ಅದೆಂಥದ್ದೋ ಬಗೆಯ ಒಂದು ಥ್ರಿಲ್ ಇತ್ತು. ಅಸಲಿಗೆ [&#8230;]]]></description>
										<content:encoded><![CDATA[
<p class="has-background" style="background-color:#26678f36"><strong>ದಶಕವೊಂದರಲ್ಲಿ ಮಹಾನಗರಿಗಳು ಬೆಳೆಯುವ ವೇಗವು ಕಮ್ಮಿಯೇನಲ್ಲ. ನಮ್ಮ ದೇಶದ ಬಹಳಷ್ಟು ಮಹಾನಗರಿಗಳು ನಗರೀಕರಣದ ಈ ಗರಿಷ್ಠಮಿತಿಯನ್ನು ತಲುಪಿದ್ದೂ ಆಗಿ, ಸುತ್ತಲಿನ ಪ್ರದೇಶಗಳನ್ನು ನಿಧಾನವಾಗಿ ತಮ್ಮೊಳಗೆ ಆವಾಹಿಸಿಕೊಳ್ಳುತ್ತಿವೆ. ಗದ್ದೆಗಳಿದ್ದ ಜಾಗಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತುತ್ತವೆ. ಮೇಲೇರಲು ಜಾಗವಿಲ್ಲ ಎಂದಾದಾಗ ಇದ್ದಲ್ಲೇ ಅಗೆದು ಸಬ್-ವೇ ಗಳು ಸೃಷ್ಟಿಯಾಗುತ್ತವೆ – <mark style="background-color:rgba(0, 0, 0, 0)" class="has-inline-color has-vivid-red-color">ಪ್ರಸಾದ್‌ ನಾಯ್ಕ್‌, ದೆಹಲಿ</mark></strong></p>



<p>&#8220;ಮಹಾನಗರಗಳು ಮಲಗುವುದಿಲ್ಲ<strong><em>&#8220;</em>!</strong></p>



<p>ಈ ಮಾತನ್ನು ಮೊದಲ ಬಾರಿ ಕೇಳಿದಾಗ ನಾನು ಮಹಾನಗರಗಳನ್ನು ಕಂಡಿರಲಿಲ್ಲ. ಆದರೆ ಆ ಹೇಳಿಕೆಯಲ್ಲಿ ಅದೆಂಥದ್ದೋ ಬಗೆಯ ಒಂದು ಥ್ರಿಲ್ ಇತ್ತು. ಅಸಲಿಗೆ ಈ ಮಾತನ್ನು ಮೊದಲ ಬಾರಿಗೆ ಯಾರು ಹೇಳಿದ್ದು, ಎಲ್ಲಿ ಓದಿದ್ದು, ಎಲ್ಲಿ ಕೇಳಿದ್ದು ಎಂಬುದೂ ಕೂಡ ಸರಿಯಾಗಿ ನೆನಪಿಲ್ಲ. ಆದರೆ ಸುಮ್ಮನೆ ಕುತೂಹಲಕ್ಕೆಂಬಂತೆ ಇದರ ಬೆನ್ನಟ್ಟಿ ಹೋದಾಗ ವಿಶ್ವವಿಖ್ಯಾತ ಅಮೆರಿಕನ್ ಗಾಯಕ ಫ್ರಾಂಕ್ ಸಿನಾತ್ರಾ ಥಟ್ಟನೆ ಎದುರಾಗಿ ಬಿಟ್ಟಿದ್ದ. &#8220;ಯಾವತ್ತೂ ನಿದ್ರಿಸದ ಶಹರವೊಂದರಲ್ಲಿ ನನಗೆ ಏಳುವ ಆಸೆ&#8230;&#8221;, ಅಂತೆಲ್ಲ ನ್ಯೂಯಾರ್ಕ್ ನಗರದ ಬಗ್ಗೆ ಒಂದು ಚಂದದ ಹಾಡನ್ನೇ ಬರೆದಿದ್ದ ಈ ಸಿನಾತ್ರಾ.</p>



<p>ಈ ಮಾತು ಹಲವು ವರ್ಷಗಳ ಕಾಲ ನನ್ನ ಮಟ್ಟಿಗೆ ಸತ್ಯವೂ ಆಗಿತ್ತು. ಮುಂಬೈ, ದೆಹಲಿ, ಗುರ್ಗಾಂವ್ ನಂತಹ ಮಹಾನಗರಗಳು ನಿದ್ರಿಸಿದ್ದನ್ನು ನನ್ನಂಥವರು ನೋಡಿಯೇ ಇರಲಿಲ್ಲ. ದಿಲ್ಲಿಯಂತಹ ದಿಲ್ಲಿಯಲ್ಲಿ ನಾನು ಅಪರಾತ್ರಿಗಳಲ್ಲಿ ಅಲೆದಾಡುತ್ತಿದ್ದ ದಿನಗಳಿಗೆ ಲೆಕ್ಕವೇ ಇಲ್ಲ. ಉದ್ಯೋಗ ನಿಮಿತ್ತದ ಪ್ರವಾಸಗಳ ಅವಧಿಯಲ್ಲಂತೂ ಇದು ಸರ್ವೇಸಾಮಾನ್ಯವಾಗಿತ್ತು. ಆದರೆ ಆ ಅವಧಿಯಲ್ಲೂ ತಕ್ಕಮಟ್ಟಿನ ಜನಸಂದಣಿಯನ್ನು ನಾನು ದಿಲ್ಲಿಯ ಬೀದಿಗಳಲ್ಲಿ ನೋಡುತ್ತಿದ್ದೆ. ವಾಹನಗಳು ಆಗೊಮ್ಮೆ ಈಗೊಮ್ಮೆ ಓಡಾಡುತ್ತಾ ಕತ್ತಲಿನ ಏಕತಾನತೆಯನ್ನು ಒದ್ದೋಡಿಸುತ್ತಿದ್ದವು. ಅಗಲ ರಸ್ತೆಗಳಿಗೆ ಈಗಾಗಲೇ ಬೆಳಕು ಚೆಲ್ಲುತ್ತಿರುವ ಸುಂದರ ಬೀದಿ ದೀಪಗಳಿಗೆ ಜೊತೆ ನೀಡುತ್ತಿದ್ದವು. ಇನ್ನು ಈ ನೈಟ್ ಲೈಫ್ ಎಂಬುದು ಶಹರದ ಮೆರುಗನ್ನಷ್ಟೇ ಹೆಚ್ಚಿಸುತ್ತಿರಲಿಲ್ಲ. ತನ್ನೊಳಗಿರುವ ಹಲವು ಸೋಜಿಗದ ಅಂಶಗಳಿಂದ ಮಹಾನಗರಕ್ಕೊಂದು ವಿಚಿತ್ರ ನಿಗೂಢತೆಯನ್ನೂ ತರುತ್ತಿದ್ದವು. ಇವುಗಳನ್ನೆಲ್ಲಾ ಆಗ ಬೆರಗಿನಿಂದ ನೋಡುತ್ತಿದ್ದರೆ, ಅರೇ ಹೌದಲ್ಲ&#8230; ಈ ಮಹಾನಗರಗಳೆಂಬ ಮುಗಿಯದ ಮಹಾಭಾರತಕ್ಕೆ ಪೂರ್ಣವಿರಾಮವಾದರೂ ಎಲ್ಲಿ ಅಂತೆಲ್ಲ ಅನ್ನಿಸೋದು.</p>



<p>ಆದರೆ, ಈ ಶತಮಾನದಲ್ಲಿ ನಡೆದ ಅನಿರೀಕ್ಷಿತ ಘಟನೆಯೊಂದು ಇವೆಲ್ಲವನ್ನು ಅಡಿಮೇಲು ಮಾಡಿಹಾಕಿತ್ತು. ದೇಶದಾದ್ಯಂತ ನಮ್ಮ ಮಹಾನಗರಗಳು ಮೊಟ್ಟ ಮೊದಲ ಬಾರಿಗೆ ಮಕಾಡೆ ಮಲಗಿದ್ದವು. ಇದೇನು ಕರ್ಫ್ಯೂ ಹೇರಿಕೆಯೋ ಅಥವಾ ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯವಿದೆಯೋ ಎಂದು ಅಚ್ಚರಿಪಡುವಂತೆ, ಎಂದಿನ ಜನನಿರತ ಬೀದಿಗಳು ಅಚಾನಕ್ಕಾಗಿ ಹಾಡಹಗಲೇ ನಿರ್ಜನವಾಗಿ ಬಿಟ್ಟವು. ಸಾಮಾನ್ಯವಾಗಿ ದೇಶದ ಎಲ್ಲಾ ಮೂಲೆಗಳಿಂದ ಜನಸಾಮಾನ್ಯರು ಮಹಾನಗರಗಳತ್ತ ದಾಪುಗಾಲಿಕ್ಕಿ ಬರುತ್ತಿದ್ದರೆ, ಈ ಬಾರಿ ಆಟವು ಉಲ್ಟಾಪಲ್ಟಾ ಆಗಿಹೋಗಿತ್ತು. ಅದು ಬೇರೇನೂ ಇಲ್ಲ. ಕಾಡ್ಗಿಚ್ಚಿನ ವೇಗದಲ್ಲಿ ಎಲ್ಲೆಡೆ ವ್ಯಾಪಿಸಿ ಜಗತ್ತನ್ನೇ ನಡುಗಿಸಿಬಿಟ್ಟ ಕೋವಿಡ್.</p>



<p>ಕಳೆದೊಂದು ದಶಕದ ಅವಧಿಯಲ್ಲಿ ಮಹಾನಗರಗಳ ಬದುಕಿನ ಹಾದಿಯನ್ನು ಗಮನಿಸುತ್ತಾ ಬಂದರೆ ಖಂಡಿತವಾಗಿಯೂ ಕೋವಿಡ್ ಒಂದು ಪ್ರಮುಖ ಮೈಲುಗಲ್ಲಾಗಿ ನಿಲ್ಲುತ್ತದೆ. ಇದರಂತೆ ಈ ಅವಧಿಯಲ್ಲಿ ನಡೆದ ಬೆಳವಣಿಗೆಗಳನ್ನು &#8220;ಕೋವಿಡ್ ಪೂರ್ವದಲ್ಲಿ&#8221; ಮತ್ತು &#8220;ಕೋವಿಡ್ ನಂತರದಲ್ಲಿ&#8221; ಎಂದು ಗೆರೆಯೆಳೆದು ವಿಂಗಡಿಸಬಹುದು. ಸಾವಿರಾರು ಕಾರ್ಮಿಕರ ನಿಲ್ಲದ ನಡಿಗೆ, ಪ್ರೀತಿಪಾತ್ರರು ಕೋವಿಡ್ ಗೆ ಬಲಿಯಾದಾಗ ಅಂತಿಮ ದರ್ಶನವನ್ನೂ ಪಡೆಯಲಾಗದ ದೌರ್ಭಾಗ್ಯ&#8230; ಹೀಗೆ ಒಂದೆರಡಲ್ಲ. ರಾಷ್ಟ್ರ ರಾಜಧಾನಿಯಲ್ಲಿ ವರ್ಕ್ ಫ್ರಂ ಹೋಮ್ ಆಯ್ಕೆಗಳಿರದಿದ್ದ ನಮ್ಮಂಥವರು ಈ ದಿನಗಳಲ್ಲೇ ನಾಲ್ಕು ಜನ್ಮಗಳಿಗಾಗುವಷ್ಟು ನೋಡಿದೆವು. ಮಹಾನಗರವಂತೂ ಏಕಾಏಕಿ ತಣ್ಣಗಾಗಿಬಿಟ್ಟು ತನ್ನ ಗುರುತನ್ನೇ ಕಳೆದುಕೊಂಡು ಮಂಕಾಗಿಬಿಟ್ಟಿತ್ತು.</p>



<p>ಹಾಗಂತ ಕೋವಿಡ್ ಭೂತವು ಕಾಡಿದ್ದು ನಮ್ಮ ಮಹಾನಗರಗಳನ್ನಷ್ಟೇ ಏನು? ಖಂಡಿತ ಅಲ್ಲ. ಆದರೆ ಮಹಾನಗರಗಳು ಕೊಂಚ ನಡುಗಿತೆಂದರೆ ಅದರ ಕಂಪನಗಳು ಬೇರೆಡೆಯಲ್ಲೂ ಸಾಕಷ್ಟು ಸದ್ದು ಮಾಡುತ್ತವೆ. ಏಕೆಂದರೆ ಮಹಾನಗರಗಳು ಆಯಾ ರಾಜ್ಯಗಳ ರೆವೆನ್ಯೂ ಕೇಂದ್ರಗಳೂ ಕೂಡ ಹೌದು. ಹರಿಯಾಣ ರಾಜ್ಯದ ಅಂದಾಜು 65% ರಷ್ಟು ಟ್ಯಾಕ್ಸ್ ರೆವೆನ್ಯೂ ಗುರುಗ್ರಾಮ ಒಂದರಿಂದಲೇ ಬರುತ್ತದೆ ಎಂದು ಕೇಂದ್ರ ಮಂತ್ರಿಯಾದ ಇಂದರ್ಜಿತ್ ಸಿಂಗ್ ಕಳೆದ ಬಾರಿ ಹೇಳಿಕೆಯನ್ನು ನೀಡಿದ್ದರು. ಟೈಮ್ಸ್ ಆಫ್ ಇಂಡಿಯಾ ವರದಿಯಂತೆ ಇದು ಸುಮಾರು 48,000 ಕೋಟಿಯಷ್ಟಾಗುತ್ತದೆ. ಆದರೆ ಕೋವಿಡ್ ಮಹಾಮ್ಮಾರಿಯು ಕನ್ವೆನ್ಷನಲ್ ಶೈಲಿಯ ಉದ್ಯೋಗಗಳಿಂದ ಹಿಡಿದು ಸ್ಟಾರ್ಟ್-ಅಪ್ ಗಳವರೆಗೂ ರಾಕ್ಷಸ ಹೊಡೆತವನ್ನು ನೀಡಿದಾಗ ಗುರುಗ್ರಾಮದಂತಹ ಮಹಾನಗರಗಳೂ ದಂಗುಬಡಿದಿದ್ದು ಸುಳ್ಳಲ್ಲ. ಹೀಗೆ ಭಾರತದ ಶಾಂಘೈ, ಮಿಲೇನಿಯಮ್ ಸಿಟಿ&#8230; ಅಂತೆಲ್ಲ ಹೆಮ್ಮೆಯಿಂದ ಕರೆಯಲ್ಪಡುವ ಗುರುಗ್ರಾಮವೂ ಸಹಜವಾಗಿ ದೇಶದ ಉಳಿದ ಮಹಾನಗರಗಳಂತೆ ಕೆಲ ತಿಂಗಳುಗಳ ಕಾಲ ಅಕ್ಷರಶಃ ಸ್ತಬ್ಧವಾಗಿಬಿಟ್ಟಿತ್ತು.</p>



<p>ಇವಿಷ್ಟರ ಹೊರತಾಗಿಯೂ ಶಹರವೊಂದು ಈ ಸಂಕಷ್ಟದ ಹಂತಗಳನ್ನು ದಾಟಿ, ಮೈಕೊಡವಿಕೊಂಡು ಅದ್ಯಾವ ಪರಿ ಎದ್ದೇಳುತ್ತದೆ ಎನ್ನುವುದೇ ಒಂದು ಕುತೂಹಲಕಾರಿ ಸಂಗತಿ. ಈ ಬಗ್ಗೆ ಪ್ರಸ್ತಾಪಿಸುವಾಗಲೆಲ್ಲಾ ನಮಗೆ ಥಟ್ಟನೆ ನೆನಪಾಗುವುದು ಮುಂಬೈ. ಬಹುಷಃ ಈ ದೇಶದಲ್ಲಿ ಮುಂಬೈ ತಾಳಿಕೊಂಡಷ್ಟು ಭಯಾನಕ ಆಘಾತಗಳನ್ನು ಬೇರ್ಯಾವ ಮಹಾನಗರವೂ ಅನುಭವಿಸಿರಲಿಕ್ಕಿಲ್ಲ. 1993 ರ ಸರಣಿ ಸ್ಫೋಟಗಳಿಂದ ಹಿಡಿದು 26/11 ಘಟನೆಯವರೆಗೆ, ಶಹರದ ಆತ್ಮಬಲವನ್ನು ಒಂದರೆಕ್ಷಣ ನಡುಗಿಸಿಬಿಡುವ ಭೀಕರ ಭಯೋತ್ಪಾದಕ ದಾಳಿಗಳು ಮುಂಬೈ ಮಹಾನಗರಿಗೆ ಹೊಸದೇನಲ್ಲ. ಭಯೋತ್ಪಾದಕ ದಾಳಿಗೆಂದು ಭಾರತದ ಹಲವು ಶಹರಗಳನ್ನು ಸರ್ವೇ ಮಾಡಿದ್ದ ಮಾಸ್ಟರ್ ಮೈಂಡ್ ಹೆಡ್ಲಿ ಕೊನೆಗೆ ಮುಂಬೈ ನಗರವನ್ನೇ ಏಕೆ ಆರಿಸಿಕೊಂಡ ಎಂಬ ಬಗ್ಗೆ ಲೇಖಕ ಹುಸೇನ್ ಝಾಯ್ದಿ ತಮ್ಮ ಕೃತಿಯೊಂದರಲ್ಲಿ ಅದ್ಭುತವಾಗಿ ಬರೆಯುತ್ತಾರೆ. ತಾನು ದಯಪಾಲಿಸುವ ಅನಾಮಿಕತೆಯು ಕೊನೆಗೆ ತನಗೇ ಮುಳುವಾಗಲಿದೆ ಎನ್ನುವ ಕಹಿಸತ್ಯವು ಮಹಾನಗರಿಗಾದರೂ ಹೇಗೆ ತಿಳಿಯಬೇಕು!</p>



<p>ಇವುಗಳಲ್ಲದೆ 2017 ರ ಪ್ರವಾಹ ಪರಿಸ್ಥಿತಿಯಲ್ಲೂ ಮುಂಬೈ ಮಹಾನಗರಿಯು ಪಡಬಾರದ ಪಾಡನ್ನು ಅನುಭವಿಸಬೇಕಾಯಿತು. ಅದೂ ಕೂಡ ಅನಿರೀಕ್ಷಿತ ಹೊಡೆತ. ಆದರೆ ಮುಂಬೈ ನಿವಾಸಿಗಳು ಎಂದಿನಂತೆ ಈ ಬಾರಿಯೂ ಮೈಕೊಡವಿ ಎದ್ದಿದ್ದರು. ಇದು ಈ ನೆಲದ ಗುಣವೇನೋ ಎಂಬಂತೆ ಲೆಕ್ಕವಿಲ್ಲದಷ್ಟು ಮಂದಿ ಬೀದಿಗಿಳಿದು ಪರಸ್ಪರರ ನೆರವಿಗೆ ಧಾವಿಸಿದರು. ಸಂಕಷ್ಟದ ನಡುವಿನ ಕತ್ತಲಿನಲ್ಲೂ ಭರವಸೆಯ ಹಣತೆಯನ್ನು ಹಚ್ಚುತ್ತಿದ್ದ ಅಸಾಮಾನ್ಯರ ನಿಸ್ವಾರ್ಥ ಸೇವೆಯ ದೃಶ್ಯಗಳು ಮಾಧ್ಯಮಗಳಿಂದಾಗಿ ದೇಶದ ಇತರ ಮೂಲೆಗಳನ್ನೂ ತಲುಪಿದ್ದವು. ಒಟ್ಟಿನಲ್ಲಿ ಅದಷ್ಟು ಬಾರಿ ಮಣ್ಣುಮುಕ್ಕಿದರೂ ಮತ್ತೆ ಮೈಕೊಡವಿ ಎದ್ದುಬಿಡುವ ಈ ಹೋರಾಟದ ಗುಣದಿಂದಾಗಿ ಮನುಷ್ಯನೂ, ಮಹಾನಗರಿಯೂ ಹೆಚ್ಚೇನೂ ವಿಭಿನ್ನ ಎಂದನ್ನಿಸುವುದಿಲ್ಲ. ಮುಂದೆ ಸಾಗಲೇಬೇಕಾದ ಅನಿವಾರ್ಯತೆ ಮತ್ತು ಮಹಾತ್ವಾಕಾಂಕ್ಷೆಗಳು ಇಬ್ಬರದ್ದೂ ಹೌದು.</p>



<p>ನನಗೂ ಮಹಾನಗರಿಗೂ ಇರುವ ನಂಟು ದಶಕದಷ್ಟು ಹಳೆಯದಾಗಿರುವುದರಿಂದ ಇಲ್ಲಿನ ಹಲವು ಅಂಕಿಅಂಶಗಳನ್ನು ನಾನು ದಶಕಗಳ ಪರಿಧಿಯಲ್ಲೇ ಹೆಣೆದು ಕೊಂಡಿದ್ದೇನೆ. ಈ ಒಂದು ದಶಕಗಳಲ್ಲಿ ಬಹಳಷ್ಟು ಸಂಗತಿಗಳು ನಡೆದಿವೆ. ದಿಲ್ಲಿ ಬದಲಾಗಿದೆ. ಯಮುನೆಯಲ್ಲಿ ಸಾಕಷ್ಟು ನೀರು ಹರಿದಿದೆ. ನಮ್ಮ ನಡುವಿನ ಮಹತ್ವದ ಲೇಖಕರೂ, ವಿದ್ವಾಂಸರೂ ಆಗಿರುವ ಪ್ರೊ. ಪುರುಷೋತ್ತಮ ಬಿಳಿಮಲೆಯವರು ಇತ್ತೀಚೆಗೆ ಭಾಷಣವೊಂದರಲ್ಲಿ ಮಾತನಾಡುತ್ತಾ ಇತಿಹಾಸದ ವೈಭವ ಮತ್ತು ವರ್ತಮಾನದ ಸೊಬಗುಗಳೆರಡನ್ನೂ ಹದವಾಗಿ ತನ್ನೊಳಗೆ ಇಟ್ಟುಕೊಂಡಿರುವ ಮಹಾನಗರವಿದು ಎಂದು ದೆಹಲಿಯನ್ನು ಬಣ್ಣಿಸಿದರು. ದಿಲ್ಲಿಯಂಥಾ ಅದ್ಭುತ ನಗರವನ್ನು ಇಷ್ಟು ಚಂದವಾಗಿ ಮತ್ತು ಸರಳವಾಗಿ ಪದಗಳಲ್ಲಿ ಕಟ್ಟಿಕೊಡುವುದು ಬಹುಷಃ ಅವರಿಗಷ್ಟೇ ಸಾಧ್ಯ.</p>



<p>ರಾಷ್ಟ್ರ ರಾಜಧಾನಿಯಾಗಿರುವ ದೆಹಲಿಯ ಸಾಮಾಜಿಕ ತಲ್ಲಣಗಳನ್ನು ಮತ್ತೊಮ್ಮೆ ದಶಕವೊಂದರ ಚಿಕ್ಕ ಆವರಣದಲ್ಲಿ ಅವಲೋಕಿಸಿದರೆ ಅಚ್ಚರಿಯಾಗದಿರಲು ಸಾಧ್ಯವೇ ಇಲ್ಲ. ಉದಾಹರಣೆಗೆ ದೆಹಲಿಯಲ್ಲಾದ ಕೆಲ ಮಹತ್ವದ ಚಳುವಳಿಗಳನ್ನೇ ನೋಡೋಣ. ನಿರ್ಭಯಾ ಪ್ರಕರಣದ ತರುವಾಯ ಸ್ಥಳೀಯ ಯುವಜನರಲ್ಲಿ ಹೊತ್ತಿಕೊಂಡ ಜನಾಕ್ರೋಶ, ದಿಲ್ಲಿಯ ಮರಗಟ್ಟುವ ಚಳಿಯಲ್ಲೂ ಕಲ್ಲಿನಂತೆ ದೃಢವಾಗಿ ನಿಂತಿದ್ದ ರೈತರ ಸಮೂಹ, ಶಾಹೀನ್ ಬಾಗ್ ನಲ್ಲಾದ ಸಂಚಲನಗಳು, ನಮ್ಮ ಅಂತಾರಾಷ್ಟ್ರೀಯ ಮಹಿಳಾ ಕುಸ್ತಿಪಟುಗಳ ಮುಷ್ಕರವು ಹುಟ್ಟುಹಾಕಿದ ಚರ್ಚೆಗಳು&#8230; ಹೀಗೆ ಮಹಾನಗರಿಯಲ್ಲಾಗುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ ಯಾವುದೇ ಆಸಕ್ತನೊಬ್ಬನನ್ನು ಗಂಭೀರ ಚಿಂತನೆಗೆ ಹಚ್ಚುವಂತೆ ಪ್ರೇರೇಪಿಸಿದ ಗಮನಾರ್ಹ ಹೋರಾಟಗಳಿವು. ಇಂತಹ ಮೈಕ್ರೋ ಬೆಳವಣಿಗೆಗಳಲ್ಲೇ ದಿಲ್ಲಿಯ ಬಗೆಗಿರುವ ಹಲವು ಹಳೆಯ ಪೂರ್ವಾಗ್ರಹಗಳು ಕಳಚಿಕೊಂಡಿವೆ. ಜೊತೆಗೆ ಹೊಸ ಇಮೇಜುಗಳೂ ಸೃಷ್ಟಿಯಾಗುತ್ತಿವೆ. ಮಹಾನಗರಗಳ ವಿಕಾಸದ ಹಾದಿಯಲ್ಲಿ ಇದು ಸಹಜವೂ ಹೌದು.</p>



<p>ಹಾಗೆ ನೋಡಿದರೆ ನನ್ನ ಬಾಲ್ಯಕಾಲದ ಕೆಲ ಬೀದಿಗಳು ಹೆಚ್ಚೇನೂ ಬದಲಾಗಿಲ್ಲ. ಆದರೆ ದಶಕವೊಂದರಲ್ಲಿ ಮಹಾನಗರಿಗಳು ಬೆಳೆಯುವ ವೇಗವು ಕಮ್ಮಿಯೇನಲ್ಲ. ನಮ್ಮ ದೇಶದ ಬಹಳಷ್ಟು ಮಹಾನಗರಿಗಳು ನಗರೀಕರಣದ ಈ ಗರಿಷ್ಠಮಿತಿಯನ್ನು ತಲುಪಿದ್ದೂ ಆಗಿ, ಸುತ್ತಲಿನ ಪ್ರದೇಶಗಳನ್ನು ನಿಧಾನವಾಗಿ ತಮ್ಮೊಳಗೆ ಆವಾಹಿಸಿಕೊಳ್ಳುತ್ತಿವೆ. ಗದ್ದೆಗಳಿದ್ದ ಜಾಗಗಳಲ್ಲಿ ವಸತಿ ಸಮುಚ್ಚಯಗಳು ತಲೆಯೆತ್ತುತ್ತವೆ. ಮೇಲೇರಲು ಜಾಗವಿಲ್ಲ ಎಂದಾದಾಗ ಇದ್ದಲ್ಲೇ ಅಗೆದು ಸಬ್-ವೇ ಗಳು ಸೃಷ್ಟಿಯಾಗುತ್ತವೆ. ಒಟ್ಟಿನಲ್ಲಿ ರಾಕ್ಷಸಗಾತ್ರದಲ್ಲಿ ಬೆಳೆಯುವುದೊಂದು ಬಿಟ್ಟರೆ ತನಗಿನ್ನೇನೂ ಗೊತ್ತಿಲ್ಲ ಎಂಬಂತೆ.</p>



<p>ಆದರೇನು ಮಾಡುವುದು? ವಯಸ್ಸು ಮನುಷ್ಯನಿಗೂ ಆಗುತ್ತದೆ. ಮಹಾನಗರಿಗೂ ಆಗುತ್ತದೆ. ಹಳೆಯದು ಇನ್ನೇನು ಮುಗಿದೇಹೋಯಿತು ಎಂಬಷ್ಟರಲ್ಲಿ ಮತ್ತೆ ಹೊಸದೇನೋ ಬರುತ್ತದೆ. ಮುಂದೇನು ಎಂಬ ಪ್ರಶ್ನೆಯು ಎಲ್ಲಾ ಪೀಳಿಗೆಯ ಪಾಲಿಗೂ ಉಳಿಯುತ್ತದೆ.</p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p><sub><strong>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</strong></sub></p>



<p><strong>ಇವುಗಳನ್ನೂ ಓದಿ-</strong></p>



<p><a href="https://peepalmedia.com/?page_id=30259" data-type="page" data-id="30259"><sub>ಬದುಕಿ</sub></a><sub><a href="https://peepalmedia.com/?page_id=30259" data-type="page" data-id="30259">ನ ಕೊಲಾಜ್ ಚಿತ್ರಪಟಗಳು”</a>  <a href="https://peepalmedia.com/collage-pictures-of-life/" data-type="link" data-id="https://peepalmedia.com/collage-pictures-of-life/">https://peepalmedia.com/collage-pictures-of-life/</a></sub></p>



<p><sub><a href="https://peepalmedia.com/?page_id=30258" data-type="page" data-id="30258">“ನೆಟ್ವರ್ಕಿಂಗ್ ಎಂಬ ನವೀನ ತಲಾಶೆ”</a>  <a href="https://peepalmedia.com/the-innovative-quest-of-networking/" data-type="link" data-id="https://peepalmedia.com/the-innovative-quest-of-networking/">https://peepalmedia.com/the-innovative-quest-of-networking/</a></sub></p>



<p><a href="https://peepalmedia.com/?page_id=27446"><sub>ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p><a href="https://peepalmedia.com/?page_id=28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>
]]></content:encoded>
					
		
		
			</item>
		<item>
		<title>&#8220;ನೆಟ್ವರ್ಕಿಂಗ್ ಎಂಬ ನವೀನ ತಲಾಶೆ&#8221;</title>
		<link>https://peepalmedia.com/the-innovative-quest-of-networking/</link>
		
		<dc:creator><![CDATA[Prasad Naik]]></dc:creator>
		<pubDate>Fri, 06 Oct 2023 11:57:43 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=29310</guid>

					<description><![CDATA[ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು ಹಂಚಿಕೊಳ್ಳಲೊಬ್ಬ ಬಾಳಸಂಗಾತಿ ಬೇಕು. ಒಬ್ಬ ಒಂದೊಳ್ಳೆಯ ಗೆಳೆತನದ ತಲಾಶೆಯಲ್ಲಿದ್ದರೆ, ಇನ್ನೊಬ್ಬ ಹೊಸ ಗ್ರಾಹಕನೊಬ್ಬನಿಗಾಗಿ ಗಾಳ ಹಾಕುತ್ತಿರಬಹುದು &#8211; ಪ್ರಸಾದ್‌ ನಾಯ್ಕ್‌, ದೆಹಲಿ ಕೆಲವು ಉಕ್ತಿಗಳನ್ನು ನಾವು ಅದೆಷ್ಟು ಬಾರಿ ಬಳಸಿರುತ್ತೇವೆ ಎಂದರೆ ಅವುಗಳು ಕ್ರಮೇಣ ಮಹಾಬೋರು ಅನ್ನಿಸಿಬಿಟ್ಟಿರುತ್ತವೆ. ಉದಾಹರಣೆಗೆ ಮಹಾನಗರಗಳಲ್ಲಿ ಕಾರ್ಪೋರೆಟ್ ಗಾದೆಯಂತೆ [&#8230;]]]></description>
										<content:encoded><![CDATA[
<p class="has-background" style="background-color:#abb7c24f"><strong>ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು ಹಂಚಿಕೊಳ್ಳಲೊಬ್ಬ ಬಾಳಸಂಗಾತಿ ಬೇಕು. ಒಬ್ಬ ಒಂದೊಳ್ಳೆಯ ಗೆಳೆತನದ ತಲಾಶೆಯಲ್ಲಿದ್ದರೆ, ಇನ್ನೊಬ್ಬ ಹೊಸ ಗ್ರಾಹಕನೊಬ್ಬನಿಗಾಗಿ ಗಾಳ ಹಾಕುತ್ತಿರಬಹುದು &#8211; <mark style="background-color:rgba(0, 0, 0, 0)" class="has-inline-color has-vivid-red-color">ಪ್ರಸಾದ್‌ ನಾಯ್ಕ್‌, ದೆಹಲಿ</mark></strong></p>



<p>ಕೆಲವು ಉಕ್ತಿಗಳನ್ನು ನಾವು ಅದೆಷ್ಟು ಬಾರಿ ಬಳಸಿರುತ್ತೇವೆ ಎಂದರೆ ಅವುಗಳು ಕ್ರಮೇಣ ಮಹಾಬೋರು ಅನ್ನಿಸಿಬಿಟ್ಟಿರುತ್ತವೆ.</p>



<p>ಉದಾಹರಣೆಗೆ ಮಹಾನಗರಗಳಲ್ಲಿ ಕಾರ್ಪೋರೆಟ್ ಗಾದೆಯಂತೆ ಅತಿಯಾಗಿ ಬಳಸಲ್ಪಡುವ &#8220;ನೆಟ್ವರ್ಕ್ ಈಸ್ ನೆಟ್ ವರ್ತ್&#8221; ಎಂಬ ಮಾತು. ನಿಮ್ಮ ಸಂಪರ್ಕಗಳೇ ನಿಮ್ಮ ನಿಜವಾದ ಸಂಪತ್ತು ಎನ್ನುತ್ತದೆ ಈ ಆಧುನಿಕ ಲೋಕದ ಉಕ್ತಿ. ತಕ್ಕಮಟ್ಟಿಗೆ ಇದು ಸತ್ಯವೂ ಹೌದು. ಆದರೆ ಸಂಪರ್ಕಗಳನ್ನು ಹೆಚ್ಚಿಸಿಕೊಂಡ ಮಾತ್ರಕ್ಕೆ ನಮ್ಮೆಲ್ಲ ಇಕ್ಕಟ್ಟಿನ ಕೆಲಸಗಳು ಅನಾಯಾಸವಾಗಿ ನಡೆದುಹೋಗುತ್ತವೆ ಎಂಬುದು ಮಾತ್ರ ಶುದ್ಧ ಕಟ್ಟುಕತೆಯೇ. ಬಿಲ್ ಕ್ಲಿಂಟನ್, ಕಿಸ್ಸಿಂಗರ್ ರಂತಹ ದಿಗ್ಗಜರು ತಮ್ಮ ಸಂಪರ್ಕಗಳನ್ನು ಬಹಳ ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿದ್ದರಂತೆ. ಬಹಳ ಸಂಕೀರ್ಣವಾಗಿದ್ದ ಇವರುಗಳ ಕಾಂಟಾಕ್ಟ್ ಲಿಸ್ಟಿನಲ್ಲಿ ಜನಸಾಮಾನ್ಯರ ಹೆಸರುಗಳೂ ಇರುತ್ತಿದ್ದವು ಎನ್ನಲಾಗುತ್ತದೆ. ಇನ್ನು ಇವರಿಬ್ಬರೂ ರಾಜಕೀಯ ಕ್ಷೇತ್ರದಲ್ಲಿದ್ದ ಪರಿಣಾಮವಾಗಿ ಸಂಘಟನೆಯ ನಿಟ್ಟಿನಲ್ಲಿ ಇವುಗಳು ಬಹು ಉಪಯುಕ್ತವೂ ಆಗುತ್ತಿತ್ತಂತೆ.</p>



<p>ಹೀಗಾಗಿ ಜನರು ಸಾಮಾನ್ಯವಾಗಿ ಒಂದೆಡೆ ಸೇರುವ ಪಾರ್ಟಿ, ಮೀಟಿಂಗ್, ಔತಣಕೂಟ&#8230; ಇತ್ಯಾದಿಗಳಿಗೆ ಹೆಚ್ಚಿನ ಆಕರ್ಷಣೆ ಮತ್ತು ಪ್ರಾಮುಖ್ಯತೆಗಳು ಸಿಗುವ ಬಗೆಯನ್ನು ನಾವು ಮಹಾನಗರಗಳಲ್ಲಿ ಕಾಣಬಹುದು. ಆದರೆ ಇದನ್ನು ಶುದ್ಧ ಸಮಯಹಾಳು ಅನ್ನುವವರ ವರ್ಗವೂ ಇದೆ. ಖ್ಯಾತ ಲೇಖಕ ಖುಷ್ವಂತ್ ಸಿಂಗ್ ಇದಕ್ಕೊಂದು ಒಳ್ಳೆಯ ಉದಾಹರಣೆ. ಶ್ರೀಮಂತರ ಪಾರ್ಟಿಗಳಲ್ಲಿ ಅಡ್ಡಾಡಿಕೊಂಡು, ಸಿಕ್ಕಸಿಕ್ಕವರೊಂದಿಗೆ ಹರಟೆ ಹೊಡೆಯುವುದು ಅವರಿಗೆ ಕಿಂಚಿತ್ತೂ ಇಷ್ಟವಿರಲಿಲ್ಲವಂತೆ. ಈ ಅಮೂಲ್ಯ ಸಮಯವನ್ನು ಏಕಾಂತ, ಓದು ಅಥವಾ ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬಹುದು ಎಂಬುದು ಅವರ ಅಭಿಪ್ರಾಯವಾಗಿರಬಹುದು. ಹೀಗೆ ತಮ್ಮ ದಿನಚರಿಯನ್ನು ಬಹಳ ಶಿಸ್ತಿನಿಂದ ಪಾಲಿಸುತ್ತಿದ್ದ ಖುಷ್ವಂತ್ ಸಿಂಗ್ ಸಾಹಿತ್ಯಲೋಕದಲ್ಲಿ ದೊಡ್ಡ ಹೆಸರನ್ನು ಪಡೆದಿರುವುದು ಅಚ್ಚರಿಯ ಸಂಗತಿಯೇನಲ್ಲ ಬಿಡಿ.</p>



<p>ಹಾಗಂತ ಎಲ್ಲವನ್ನೂ, ಎಲ್ಲರನ್ನೂ ನೆಟ್ವರ್ಕಿಂಗ್ ಎಂಬ ವಿಶಾಲ ವಿಭಾಗದಡಿಯಲ್ಲೇ ಹಾಕಲಾಗುವುದಿಲ್ಲ. ಏಕೆಂದರೆ ಈ ಬಗೆಯ ಸೋಷಿಯಲೈಸಿಂಗ್ ಕಸರತ್ತುಗಳಲ್ಲಿ ಇನ್ನಿತರ ಆಯಾಮಗಳೂ ಇರುತ್ತವೆ. ಹಲವರು ಸಂಗಾತಿಗಳ ತಲಾಶೆಯಲ್ಲಿರುತ್ತಾರೆ. ಇನ್ನು ಕೆಲವರು ಹೊಸ ಗೆಳೆತನಗಳಿಗಾಗಿ ಹಂಬಲಿಸುತ್ತಾರೆ. ಉಳಿದವರು ಮತ್ಯಾವುದೋ ನಿರೀಕ್ಷೆಗಳನ್ನು ಹೊತ್ತುಕೊಂಡು ಬಂದಿರಲೂಬಹುದು. ನನ್ನಂತಹ ಕೆಲವರು ತಮ್ಮ ಆಸುಪಾಸಿನಲ್ಲಿರುವ ಸಮಾನ ಮನಸ್ಕರನ್ನು ಒಗ್ಗೂಡಿಸಿ ಏನಾದರೊಂದು ಚಟುವಟಿಕೆಯಲ್ಲಿ ವ್ಯಸ್ತರಾಗಿಯೂ ಇರುವುದುಂಟು.</p>



<p>ಇಂದು ಇಂತಹ ತರಹೇವಾರಿ ಚಟುವಟಿಕೆಗಳಿಗೆ ಹತ್ತು ಹಲವು ಚಂದದ ಹೆಸರುಗಳಿವೆ. ಆದರೆ ನಮ್ಮ ಕಾಲೇಜು ದಿನಗಳಲ್ಲಿ ಇವೆಲ್ಲ ನಮಗೆ ಗೊತ್ತೇ ಇರಲಿಲ್ಲ. ಒಮ್ಮೆ ಹೀಗಾಯಿತು. ದೇಶದ ವಿವಿಧ ಮೂಲೆಗಳಿಂದ ಬಂದಿರುವ ವಿದ್ಯಾರ್ಥಿಗಳ ಮಧ್ಯೆ, ಕರಾವಳಿ ಭಾಗದ ನಾವು ನಾಲ್ಕೈದು ವಿದ್ಯಾರ್ಥಿಗಳು ನಮ್ಮದೇ ಆದ ಚಿಕ್ಕ, ಅನಧಿಕೃತ ಗುಂಪೊಂದನ್ನು ಕಟ್ಟಿಕೊಂಡಿದ್ದೆವು. ಅದಕ್ಕೆ &#8220;ಲೋಕೋ&#8221; ಎಂಬ ಸಪ್ಪೆ ಹೆಸರೊಂದನ್ನೂ ಇಡಲಾಗಿತ್ತು. ಎಲ್ಲಾದರೂ ಸಮಯ ಸಿಕ್ಕರೆ ಒಂದಿಷ್ಟು ಹರಟೆ ಹೊಡೆಯುತ್ತಿದ್ದೆವು ಎಂಬುದನ್ನು ಬಿಟ್ಟರೆ ಈ ಸೋ ಕಾಲ್ಡ್ ಗುಂಪಿಗೆ ಹೇಳಿಕೊಳ್ಳುವಂತಹ ಮಹಾ ಧ್ಯೇಯೋದ್ದೇಶಗಳೂ ಇರಲಿಲ್ಲ. ಬಹುಷಃ ಇಂಥದ್ದೊಂದು ಅಸ್ತಿತ್ವದಲ್ಲಿತ್ತು ಎಂಬುದು ಕೂಡ ನಮ್ಮ ಬಹಳಷ್ಟು ಮಂದಿ ಸಹಪಾಠಿಗಳಿಗೆ ಗೊತ್ತಿರಲಿಕ್ಕಿಲ್ಲ.</p>



<p>ಹೀಗಿರುವಾಗ ಎಂದಿನಂತೆ ಅದೂ ಒಂದು ಸಾಮಾನ್ಯ ದಿನ. ಸೆಮಿಸ್ಟರ್ ಪರೀಕ್ಷೆಗಳು ಮುಗಿದಿದ್ದವು. ರಜೆಗಳು ಶುರುವಾಗಲು ಇನ್ನೇನು ಒಂದು ದಿನವಷ್ಟೇ ಬಾಕಿ ಉಳಿದಿತ್ತು. ಹೀಗಾಗಿ ಆ ಸೀಸನ್ನಿನ ಕೊನೆಯ ಅಧಿವೇಶನ ಎಂಬಂತೆ ನಾವೆಲ್ಲರೂ ಅಂದು ಸೇರಿದೆವು. ಎಂದಿನಂತೆ ಕೈಯಲ್ಲಿ ಕಾಸಿಲ್ಲದ ಪರಿಣಾಮವಾಗಿ ಗುಂಪಿನಲ್ಲಿದ್ದ ಒಬ್ಬ ಧಾರಾಳಿಯೇ ಅಂದೂ ಧಾರಾಳಿಯಾಗಿ ಎಲ್ಲರಿಗೂ ಒಂದೊಂದು ಪಪ್ಸ್ ತೆಗೆಸಿಕೊಟ್ಟಿದ್ದ. ಆ ದಿನಗಳಲ್ಲಿ ತೀರಾ ಕಡಿಮೆ ಖರ್ಚಿನಲ್ಲಿ ಸಂತೃಪ್ತಿಯನ್ನು ಕೊಡುತ್ತಿದ್ದ ವಿಶೇಷ ತಿಂಡಿಯದು.</p>



<p>ಇರಲಿ. ರಜೆ ಮುಗಿಯುವಷ್ಟರಲ್ಲಿ ಎಲ್ಲರೂ ಒಂದೊಂದು ನೀಳ್ಗತೆಯನ್ನು ಬರೆದು ತರಬೇಕು ಎಂಬಲ್ಲಿಗೆ ಆ ಮೀಟಿಂಗು ಕೊನೆಗೊಂಡಿತ್ತು. ಅಂದಹಾಗೆ ಆ ಕತೆಯಲ್ಲಿ ಇಂತಿಂಥಾ ಅಂಶಗಳಿರಬೇಕು ಎಂಬ ವಿಚಿತ್ರ ಷರತ್ತುಗಳೂ ಇದ್ದವು. ವಿಶೇಷವಾಗಿ ನಾವೇ ಆ ನೀಳ್ಗತೆಯಲ್ಲಿ ಪಾತ್ರಗಳಾಗಿರಬೇಕು ಅಥವಾ ನಮಗೆ ಹೋಲಿಕೆಯಿರುವ ಪಾತ್ರಗಳು ಹೆಚ್ಚಿರಬೇಕು, ಸದ್ಯದ ವರ್ತಮಾನ ಮತ್ತು ಭವಿಷ್ಯಗಳು ಬರುವಂತೆ ಕತೆಯನ್ನು ಹೆಣೆದಿರಬೇಕು, ನೋಡಲು ಮೋಜೆನಿಸುವ ಬ್ಲಾಕ್-ಬಸ್ಟರ್ ಸಿನೆಮಾದಂತೆ ಓದಲು ಮಜವಾಗಿರಬೇಕು&#8230; ಹೀಗೆ ಏನೇನೋ ಷರತ್ತುಗಳು.</p>



<p>ಅಷ್ಟಕ್ಕೂ ಅಂದು ಈ ಹುಚ್ಚು ನಿರ್ಧಾರವನ್ನು ಯಾರು ಮಂಡಿಸಿ ಯಶಸ್ವಿಯಾದರು ಎಂಬುದು ನನಗಂತೂ ನೆನಪಿಲ್ಲ. ಏಕೆಂದರೆ ನಮ್ಮ ಗುಂಪಿನಲ್ಲಿ ಯಾರೂ ಬರಹಗಾರರಿರಲಿಲ್ಲ. ಅಸಲಿಗೆ ಆಗಿನ್ನೂ ನಾನು ಬರವಣಿಗೆಯಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿರಲಿಲ್ಲ. ಇನ್ನು ನಮ್ಮ ಲೋಕೋ ಗುಂಪಿನಲ್ಲಿ ನನ್ನ ಮತ್ತು ಮತ್ತೋರ್ವ ಹುಡುಗನನ್ನು ಬಿಟ್ಟರೆ ಉಳಿದವರ್ಯಾರಿಗೂ ಅಷ್ಟಾಗಿ ಓದಿನ ಹಿನ್ನೆಲೆಯಿರಲಿಲ್ಲ. ಆದರೂ ಆಯ್ತಾಯ್ತು ಎಂದು ತಲೆಯಾಡಿಸುತ್ತಾ ನಾವು ಕೊನೆಯ ದಿನವನ್ನೂ, ರುಚಿಕರ ಪಪ್ಸ್ ಅನ್ನೂ ಭರ್ಜರಿಯಾಗಿ ಮುಗಿಸಿ ಮನೆಗಳತ್ತ ಮರಳಿದೆವು.</p>



<p>ಅಂತೂ ರಜಾದಿನಗಳು ಮುಗಿದವು. ನಾವು ಮತ್ತೆ ಸೇರಿದ್ದೆವು. ನಮ್ಮ ಕೊನೆಯ ಮೀಟಿಂಗಿನಲ್ಲಿ ನಿರ್ಧಾರವಾದಂತೆ ನಾನು ನೀಳ್ಗತೆಯೊಂದಿಗೆ ಬಂದಿದ್ದೆ. ವಿಚಿತ್ರವೆಂದರೆ ಉಳಿದ ಯಾರಿಗೂ ಈ ಬಗ್ಗೆ ನೆನಪಿರಲಿಲ್ಲ. ಪಪ್ಸ್ ಹೊಟ್ಟೆಯೊಳಗೆ ಕರಗಿಹೋದ ಬೆನ್ನಿಗೆ, ಎಲ್ಲರಿಗೂ ಈ ಕತೆಯ ಟಾಸ್ಕ್ ಮೂರ್ಖತನದ್ದು ಎಂದೆನಿಸಿ ಅದನ್ನು ಅಲ್ಲಿಗೇ ಮರೆತುಬಿಟ್ಟಿದ್ದರು. ಆದರೆ ನಾನೊಬ್ಬ ಮಾತ್ರ ಪೆದ್ದನಂತೆ ಬಹಳ ತಲೆಕೆಡಿಸಿಕೊಂಡು, ನೀಳ್ಗತೆಯೊಂದನ್ನು ಸಿದ್ಧಪಡಿಸಿ ಕಾಲೇಜಿಗೆ ಮರಳಿದ್ದೆ. ಅಸಲಿಗೆ ಬರೆಯುತ್ತಾ ಹೋದಂತೆ ಕತೆಯು ಹೆಚ್ಚೇ ದೀರ್ಘವಾಗಿಬಿಟ್ಟಿತ್ತು. ಒಂದಿಷ್ಟು ಸಾಹಸ, ಪ್ರಣಯ, ರೋಚಕ ತಿರುವುಗಳು&#8230; ಹೀಗೆ ಏನೇನೋ ಜನಪ್ರಿಯ ಮಸಾಲೆಗಳಿದ್ದ ಅದು ಸರಿಸುಮಾರು ನಲವತ್ತು ಪುಟಗಳವರೆಗೆ ಚಾಚಿಕೊಂಡಿತ್ತು. ಇದೊಂದು ಮಿನಿ ಕಾದಂಬರಿಯೇ ಆಯಿತಪ್ಪಾ ಎಂದು ಓದಿದ ನಮ್ಮ ಹುಡುಗನೊಬ್ಬ ಅಚ್ಚರಿಯಿಂದ ಹೇಳಿಕೊಂಡಿದ್ದ. ಅಸಲಿಗೆ ನಾನು ಏನೋ ಒಂದು ಬರೆದಿದ್ದೇನೆ ಅನ್ನುವುದಕ್ಕಿಂತ, ಇವನು ಕಾಲಹರಣದ ಹರಟೆಯನ್ನು ನಿಜಕ್ಕೂ ಇಷ್ಟು ಗಂಭೀರವಾಗಿ ತೆಗೆದುಕೊಂಡಿದ್ದ ಎಂಬುದೇ ಎಲ್ಲರಿಗೆ ಅಚ್ಚರಿ ಮತ್ತು ತಮಾಷೆಯ ಸಂಗತಿಯಾಗಿತ್ತು.&nbsp;&nbsp;</p>



<p>ನಮ್ಮ ನಡುವಿನಲ್ಲಾದರೂ ಅಷ್ಟೇ. ಸಾಮಾನ್ಯವಾಗಿ ಸಮಾನಮನಸ್ಕ ಮತ್ತು ಕ್ರಿಯಾಶೀಲ ಮಂದಿಯೊಂದಿಗೆ ಬೆರೆತಿರುವಾಗ ಏನಾದರೊಂದು ಹೊಸ ಸಂಗತಿಗಳು ಸೃಷ್ಟಿಯಾಗುತ್ತಲೇ ಇರುತ್ತವೆ. ಇನ್ನು ಸೋಷಿಯಲೈಸಿಂಗ್ ಹೆಸರಿನಲ್ಲಿ ಕೇವಲ ಅವಶ್ಯಕತೆ-ಕೊಡುಕೊಳ್ಳುವಿಕೆಗಳಿಗಷ್ಟೇ ಸೀಮಿತವಾಗಿರುವ ತೆಳು ಸಂಬಂಧಗಳನ್ನು ಸೃಷ್ಟಿಸಿಕೊಂಡು, ಅವುಗಳಲ್ಲಿ ಕಳೆದುಹೋಗುವುದಕ್ಕಿಂತ ಇದು ನೂರು ಪಟ್ಟು ವಾಸಿ. ನಟಿ ವಿದ್ಯಾ ಬಾಲನ್ ಸಂದರ್ಶನವೊಂದರಲ್ಲಿ ಮಾತಾಡುತ್ತಾ &#8220;ಆಧುನಿಕರಾದ ನಾವು ಹೊಸ ಸಂಬಂಧಗಳನ್ನು ಸೃಷ್ಟಿಸಿಕೊಳ್ಳುವ ನಿಟ್ಟಿನಲ್ಲಿ ಸದಾ ಒಂದು ಬಗೆಯ ವಿಚಿತ್ರ ಗಡಿಬಿಡಿಯಲ್ಲಿರುತ್ತೇವೆ. ವ್ಯಕ್ತಿಯೊಬ್ಬನನ್ನು ನೈಜರೂಪದಲ್ಲಿ ಅರಿತುಕೊಳ್ಳುವ ಆಸಕ್ತಿಯು ನಮ್ಮಲ್ಲಿ ಮರೆಯಾಗಿದೆ. ಈ ಹೊಸ ಪರಿಚಯದಿಂದಾಗಿ ನಮಗೇನು ಲಾಭ ದಕ್ಕಬಹುದು ಎಂಬ ವಿಲಕ್ಷಣ ಹಪಾಹಪಿಯೇ ಹೆಚ್ಚಿನವರ ಗುರಿಯಾಗಿರುತ್ತದೆ&#8221;, ಎನ್ನುತ್ತಾರೆ.</p>



<p>ಹಾಗೆ ನೋಡಿದರೆ ಸಾರ್ವಜನಿಕ ಜೀವನದಲ್ಲಿರುವವರಿಗೆ ಇದು ಸಹಜವೂ ಕೂಡ. ಅದರಲ್ಲೂ ಗಾಜಿನ ಅರಮನೆಗಳಲ್ಲಿ ಬೆಚ್ಚಗಿರುವ ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರಿರುವ ಹೊರಜಗತ್ತನ್ನು ಹೋಲಿಸಿ ಇದನ್ನಿಲ್ಲಿ ಹೇಳುತ್ತಿದ್ದೇನೆ. ಹೊರಜಗತ್ತಿನ ವ್ಯಕ್ತಿಯಾಗಿ ಪತ್ರಕರ್ತನೊಬ್ಬನನ್ನು ಉದಾಹರಣೆಯಾಗಿ ಪರಿಗಣಿಸುವುದಾದರೆ ಆತ ಅದೆಂಥದ್ದೇ ಪ್ರಭಾವಿ ಪತ್ರಕರ್ತನಾಗಿದ್ದರೂ ಖ್ಯಾತ ಚಿತ್ರನಟನೊಬ್ಬನೊಂದಿಗೆ, ಕ್ರೀಡಾಪಟುವೊಂದಿಗೆ ಅಥವಾ ರಾಜಕಾರಣಿಯೊಂದಿಗೆ ದೀರ್ಘಕಾಲದವರೆಗೆ ಅತ್ಯಾಪ್ತ ಒಡನಾಟವನ್ನು ಕಾಯ್ದುಕೊಳ್ಳುವುದು ಸಾಧ್ಯವಾಗುವುದಿಲ್ಲ. ಏಕೆಂದರೆ ಅದು ಬಹಳ ತಾಳ್ಮೆ, ಸಮಯ ಮತ್ತು ಶ್ರಮವನ್ನು ಬೇಡುವಂಥದ್ದು. ಹೀಗಿರುವಾಗ ಇವೆಲ್ಲಾ ಅಂಶಗಳು ಎರಡೂ ಕಡೆಯಲ್ಲಿದ್ದು ಆಪ್ತಸಂಬಂಧವೊಂದು ಸೃಷ್ಟಿಯಾಗುವುದು ಮತ್ತು ಕಾಲಾಂತರದಲ್ಲಿ ಉಳಿಯುವುದು ತೀರಾ ಅಪರೂಪ.</p>



<p>ಆದರೆ ಈ ಬಗೆಯ ಅಗೋಚರ ದ್ವೀಪಗಳು ಮೇಲಿನ ಅಪವಾದಗಳನ್ನು ಹೊರತುಪಡಿಸಿ, ನಮ್ಮಂತಹ ಜನಸಾಮಾನ್ಯರ ಮಧ್ಯೆಯೂ ನಿಧಾನವಾಗಿ ಸೃಷ್ಟಿಯಾಗುತ್ತಿರುವುದು ಆಧುನಿಕ ಜೀವನಶೈಲಿಯ ಒಂದು ಶಾಪವೂ ಹೌದು. ಹೀಗಾಗಿಯೇ &#8220;ಸ್ಮಾಲ್-ಟಾಕ್&#8221; ಎಂಬ ಎರಡು ಸಾಮಾನ್ಯ ಪದಗಳು, ಬಹಳ ಜನಪ್ರಿಯ ಮತ್ತು ಆಕರ್ಷಣೀಯ ಪದಗಳಾಗಿ ಬದಲಾಗುತ್ತವೆ. ಏನು-ಹೇಗೆ-ಎಷ್ಟು ಮಾತನಾಡಿದರೆ ಇಂತಿಷ್ಟು ಲಾಭ ಗ್ಯಾರಂಟಿ ಎಂಬುದನ್ನು ಹೇಳಿಕೊಡುವ ತರಬೇತಿ ಸಂಸ್ಥೆಗಳು ಅಣಬೆಯಂತೆ ಹುಟ್ಟಿಕೊಳ್ಳುತ್ತವೆ. ಈ ಸಂಬಂಧದಿಂದಾಗಿ ನನಗೇನು ಸಿಗಲಿದೆ ಎಂಬ ಪ್ರಶ್ನೆಯೇ ಮುಖ್ಯವಾಗಿ, ಆಗಂತುಕನೊಬ್ಬನೊಂದಿಗೆ ಚಿಕ್ಕದೊಂದು ಹರಟೆಯ ಸುಖವೂ ಸದ್ದಿಲ್ಲದೆ ಸೋರಿಹೋಗುತ್ತದೆ.</p>



<p>ಸುಮ್ಮನೆ ಒಮ್ಮೆ ಯೋಚಿಸಿ ನೋಡಿ. ಈ ಮೀಟಿಂಗ್, ಚಾಟಿಂಗ್, ಈಟಿಂಗ್, ಡೇಟಿಂಗ್, ನೆಟ್ವರ್ಕಿಂಗ್, ಸೋಷಿಯಲೈಸಿಂಗ್ ಗಳ ಮಧ್ಯದಲ್ಲೇ ಬದುಕಿನ ಹಲವು ಸಂಗತಿಗಳು ಅರಳಿಕೊಳ್ಳಬೇಕು. ಒಬ್ಬನಿಗೆ ಹಾಸಿಗೆ ಹಂಚಿಕೊಳ್ಳಲೊಬ್ಬ ಸಂಗಾತಿ ಬೇಕು. ಮತ್ತೊಬ್ಬನಿಗೆ ಬಾಳು ಹಂಚಿಕೊಳ್ಳಲೊಬ್ಬ ಬಾಳಸಂಗಾತಿ ಬೇಕು. ಒಬ್ಬ ಒಂದೊಳ್ಳೆಯ ಗೆಳೆತನದ ತಲಾಶೆಯಲ್ಲಿದ್ದರೆ, ಇನ್ನೊಬ್ಬ ಹೊಸ ಗ್ರಾಹಕನೊಬ್ಬನಿಗಾಗಿ ಗಾಳ ಹಾಕುತ್ತಿರಬಹುದು. ಅಲ್ಲೆಲ್ಲೋ ಒಬ್ಬ ಅನಾಮಿಕ ಟ್ರೋಲ್ ವೀರ, ಅಪ್ಪಟ ಟೈಂಪಾಸ್ ಶೂರ. ಮತ್ತೆಲ್ಲೋ ಒಂದು ನಿಗೂಢ ಹನಿಟ್ರ್ಯಾಪ್ ಜಾಲ. ನಮ್ಮೆಲ್ಲರದ್ದು ಒಂದೇ ಮೈದಾನ. ಆದರೆ ಎಲ್ಲರ ಆಟಗಳೂ ವಿಭಿನ್ನ.</p>



<p>ನೆಟ್ವರ್ಕಿಂಗ್ ಸೇರಿದಂತೆ ಎಲ್ಲಾ ಬಗೆಯ ಹುಡುಕಾಟಗಳು ಬದುಕೆಂಬ ಮುಖ್ಯರಸ್ತೆಯ ಒಳಹಾದಿಗಳಷ್ಟೇ. ಒಳಹಾದಿಗಳು ನಮ್ಮನ್ನು ದಾರಿ ತಪ್ಪಿಸುವಂತಾಗದಿರಲಿ.</p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</p>



<p><strong>ಇವುಗಳನ್ನೂ ಓದಿ-</strong></p>



<p><a href="https://peepalmedia.com/?page_id=27446"><sub>“ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p><a href="https://peepalmedia.com/?page_id=28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>
]]></content:encoded>
					
		
		
			</item>
		<item>
		<title>&#8220;ಟ್ರೆಂಡಿಂಗ್ ಕತೆಗಳ ಸುತ್ತಮುತ್ತ&#8230;&#8221;</title>
		<link>https://peepalmedia.com/trending-stories-around/</link>
		
		<dc:creator><![CDATA[Prasad Naik]]></dc:creator>
		<pubDate>Fri, 22 Sep 2023 13:13:32 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=28328</guid>

					<description><![CDATA[ಇಂದು &#8220;ಜವಾನ್&#8221; ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು ಅದ್ಯಾವುದೇ ಆಗಿರಲಿ. ಆದರೆ ಟ್ರೆಂಡ್ ಗಳ ಕತೆ ಮಾತ್ರ ಕೊನೆಯಾಗುವುದಿಲ್ಲ &#8211;ಪ್ರಸಾದ್‌ ನಾಯ್ಕ್‌, ದೆಹಲಿ ಒಂದು ಚಿಕ್ಕ ಕತೆ. ಈ ಕತೆಯ ಹೀರೋ ಅಥವಾ ಹೀರೋಯಿನ್ ನೀವೇ ಎಂದಿಟ್ಟುಕೊಳ್ಳೋಣ. ನೀವು ಎಲ್ಲಿಗೋ ಹೊರಟಿದ್ದೀರಿ ಅಥವಾ ತಲುಪಿದ್ದೀರಿ. ಪ್ರಯಾಣದಲ್ಲಿದ್ದೀರಿ ಎಂದರೂ ಸರಿ. ವಿಹಾರ, ವಿಶ್ರಾಂತಿ [&#8230;]]]></description>
										<content:encoded><![CDATA[
<p class="has-background" style="background-color:#abb7c242"><strong>ಇಂದು &#8220;ಜವಾನ್&#8221; ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು ಅದ್ಯಾವುದೇ ಆಗಿರಲಿ. ಆದರೆ ಟ್ರೆಂಡ್ ಗಳ ಕತೆ ಮಾತ್ರ ಕೊನೆಯಾಗುವುದಿಲ್ಲ &#8211;<mark style="background-color:rgba(0, 0, 0, 0)" class="has-inline-color has-vivid-red-color">ಪ್ರಸಾದ್‌ ನಾಯ್ಕ್‌, ದೆಹಲಿ</mark></strong></p>



<p><strong>ಒಂದು</strong> ಚಿಕ್ಕ ಕತೆ.</p>



<p>ಈ ಕತೆಯ ಹೀರೋ ಅಥವಾ ಹೀರೋಯಿನ್ ನೀವೇ ಎಂದಿಟ್ಟುಕೊಳ್ಳೋಣ.</p>



<p>ನೀವು ಎಲ್ಲಿಗೋ ಹೊರಟಿದ್ದೀರಿ ಅಥವಾ ತಲುಪಿದ್ದೀರಿ. ಪ್ರಯಾಣದಲ್ಲಿದ್ದೀರಿ ಎಂದರೂ ಸರಿ. ವಿಹಾರ, ವಿಶ್ರಾಂತಿ ಆದರೂ ಓಕೆ. ಅಚಾನಕ್ಕಾಗಿ ಹೊಟ್ಟೆಯು ತಳಮಳಿಸಿದಂತಾಗುತ್ತದೆ. ಸಣ್ಣಗೆ ಶುರುವಾಗುವ ಇಂಥದ್ದೊಂದು ಅನುಭವವು ಕ್ರಮೇಣ ನಿಮ್ಮನ್ನು ಇನ್ನಿಲ್ಲದಂತೆ ಹಿಂಡಿ ಹಾಕುತ್ತದೆ. ನಿಮಗೀಗ ಅರ್ಜೆಂಟಾಗಿ ಶೌಚಕ್ಕೆ ಹೋಗಬೇಕು. ಹೋಗಬೇಕು ಎಂದರೆ ಹೋಗಲೇಬೇಕು, ಅಷ್ಟೇ. ಅಷ್ಟರಮಟ್ಟಿನ ತುರ್ತು. ಆದರೆ ಅಲ್ಲಿ ಯಾವುದೇ ಶೌಚದ ಸೌಲಭ್ಯವಿರುವುದಿಲ್ಲ. ಇದ್ದರೂ ನೀವಿರುವ ಸಮಯ, ಸಂದರ್ಭಗಳು ನಿಮಗೆ ಶೌಚಕ್ಕೆ ಹೋಗಲು ಬಿಡುವುದಿಲ್ಲ.</p>



<p>ನೀವು ಆಗೇನು ಮಾಡುತ್ತೀರಿ?</p>



<p>ಇಂತಹ ಫಜೀತಿಯ ಅನುಭವಗಳು ನಮ್ಮಲ್ಲಿ ಬಹುತೇಕ ಎಲ್ಲರಿಗೂ ಆಗಿರುತ್ತವೆ. ಅದನ್ನು ಹೇಗೋ ನಿಭಾಯಿಸಿಯೂ ಇರುತ್ತೇವೆ. ಆದರೆ ನಂತರ ಈ ಬಗ್ಗೆ ಅಷ್ಟೇನೂ ಗಂಭೀರವಾಗಿ ಯೋಚಿಸಿರುವುದಿಲ್ಲ. ಏಕೆಂದರೆ ಎಲ್ಲಾ ಕಡೆ ಹೇಳಿಕೊಂಡು ಕೊಚ್ಚಿಕೊಳ್ಳಲು ಅದು ಸಾಹಸಗಾಥೆಯೇನಲ್ಲ. ಮೋಜಿನ ಪಾರ್ಟಿಗಳಲ್ಲಿ ತಮಾಷೆಗೆಂದು ಹೇಳಿದರೆ ಉಗಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವೇ ಮುಜುಗರಕ್ಕೀಡು ಮಾಡುವ ಪ್ರಸಂಗಗಳಿವು. ಅಂತೂ ಪರಿಸ್ಥಿತಿಯು ನಮ್ಮ ನಿಯಂತ್ರಣಕ್ಕೆ ಬಂತಲ್ಲ ಎಂದು ನಿಟ್ಟುಸಿರಿಟ್ಟು ಸಹಜವಾಗಿ ಅದನ್ನು ಮರೆತಿರುತ್ತೇವೆ. ಬದುಕು ಎಂದಿನಂತೆ ಮುಂದಕ್ಕೆ ಸಾಗಿರುತ್ತದೆ.</p>



<p>ವಿಶೇಷವೆಂದರೆ ಲೇಖಕ ರ್ಯಾನ್ ಜೇಕಬ್ಸನ್ ಇಂಥದ್ದೇ ವಿಚಿತ್ರ ಅನುಭವಗಳನ್ನು ಹಲವರಿಂದ ಕಲೆಹಾಕಿ &#8220;ಟಾಯ್ಲೆಟ್ ಟೇಲ್ಸ್&#8221; (ಶೌಚದ ಕತೆಗಳು) ಎಂಬ ಪುಸ್ತಕವೊಂದನ್ನು ತಂದಿದ್ದಾರೆ. ಹಲವು ಪೇಚಿನ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಂಡು, ಅದೆಷ್ಟೋ ಮಂದಿ ಫಜೀತಿಗೊಳಗಾದ ಪ್ರಸಂಗಗಳನ್ನು ನಾವು ಈ ಪುಟ್ಟ ಪುಸ್ತಕದಲ್ಲಿ ಓದಬಹುದು. ಈ ಬಗೆಯ ಕಂಟೆಂಟ್ ಅನ್ನು ಕೂಡ ಪುಸ್ತಕ ರೂಪದಲ್ಲಿ ತರಬಹುದೇ ಎಂದು ನನ್ನನ್ನು ಯೋಚನೆಗೆ ದೂಡಿದ ಕೃತಿಯಿದು.</p>



<p>ಸಾಮಾನ್ಯವಾಗಿ ಪುಸ್ತಕಗಳ ಲೋಕದಲ್ಲಿ ಎಂತೆಂಥಾ ಹೊಸ ಟ್ರೆಂಡ್ ಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಕುತೂಹಲದಿಂದ ಗಮನಿಸುತ್ತಿರುವವನು ನಾನು. &#8220;ಶೌಚ ಸಾಹಿತ್ಯ&#8221; (ಹೀಗೆಂದು ಕರೆಯಬಹುದೇ? ಗೊತ್ತಿಲ್ಲ!) ವನ್ನು ಬರೆದಿರುವುದರಲ್ಲಿ ರ್ಯಾನ್ ಮೊದಲನೆಯವನೇನಲ್ಲ. ನಿಸ್ಸಂದೇಹವಾಗಿ ಕೊನೆಯವನೂ ಆಗುವುದಿಲ್ಲ. ಆದರೆ ಟಾಯ್ಲೆಟ್ ಲೋಕದ ಈ ಆಯಾಮವನ್ನು ಕೂಡ ಸತ್ಯಕತೆಗಳಾಗಿ ಓದುಗರಿಗಾಗಿ ನೀಡಬಹುದು ಎಂಬ ಹೊಸ ಟ್ರೆಂಡ್ ಅನ್ನು ಸೃಷ್ಟಿಸುವುದು ಲೇಖಕನ ಪ್ರಯತ್ನವಾಗಿರಬಹುದು. ಈ ಸಾಧ್ಯತೆಯನ್ನು ನಾನು ಅಷ್ಟು ಸುಲಭವಾಗಿ ಅಲ್ಲಗಳೆಯಲಾರೆ.</p>



<p>ಏಕೆಂದರೆ ನಮ್ಮ ನಡುವಿನ ಪ್ರತಿಯೊಬ್ಬ ಸೃಷ್ಟಿಕರ್ತನೂ ಒಂದಲ್ಲ ಒಂದು ಬಾರಿ ಹೊಸದೊಂದು &#8220;ಟ್ರೆಂಡ್&#8221; ಅನ್ನು ಸೃಷ್ಟಿಸಲು ಪ್ರಯತ್ನಿಸಿರುತ್ತಾನೆ. ಕ್ರಿಕೆಟಿಗ ಧೋನಿಯ ಕೇಶಶೈಲಿಯನ್ನು ನಮ್ಮ ಕಾಲದ ಅನೇಕ ಹುಡುಗರು ಪ್ರಯತ್ನಿಸಿದ್ದು, ಇದರಿಂದಾಗಿ ಮನೆಯವರಿಂದ ಧೋನಿಯ ಸಿಕ್ಸರ್ ಗಿಂತಲೂ ಭರ್ಜರಿಯಾದ ಒದೆತಗಳನ್ನು ತಿಂದಿದ್ದು&#8230; ಹೀಗೆ ಹಲವು ಸಂಗತಿಗಳು ನನಗೆ ನೆನಪಿವೆ. ನನ್ನ ಸಹಪಾಠಿ ವಲಯದಲ್ಲಿದ್ದ ಓದುಗರು ಆಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳನ್ನು ಎದ್ದೂ ಬಿದ್ದೂ ಓದೋರು. ಏಕೆಂದರೆ ಹ್ಯಾರಿ ಪಾಟರ್ ಓದಿಲ್ಲ ಅಂತಾದರೆ ನೀನು ಓದುಗನೇ ಅಲ್ಲ ಎಂಬಂತಹ ಟ್ರೆಂಡ್ ಒಂದು ಆಗಿನ ದಿನಗಳಲ್ಲಿ ಸೃಷ್ಟಿಯಾಗಿತ್ತು. ಇಂದು &#8220;ಜವಾನ್&#8221; ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು ಅದ್ಯಾವುದೇ ಆಗಿರಲಿ. ಆದರೆ ಟ್ರೆಂಡ್ ಗಳ ಕತೆ ಮಾತ್ರ ಕೊನೆಯಾಗುವುದಿಲ್ಲ.</p>



<p>ಇವು ನಿರುಪದ್ರವಿ ಟ್ರೆಂಡ್ ಗಳ ಕತೆಯಾಯಿತು. ಆದರೆ ಇವುಗಳನ್ನು ಜಾಗತಿಕ ಆಯಾಮದಲ್ಲಿ ನೋಡಿದರೆ ಉದ್ಯಮ-ಲಾಭ-ಮಾರುಕಟ್ಟೆಯ ಹೊಳಹುಗಳೂ ನಿಧಾನವಾಗಿ ಕಾಣತೊಡಗುತ್ತವೆ. ಅಷ್ಟಕ್ಕೂ &#8220;ಟ್ರೆಂಡ್&#8221; ಎಂದರೇನು? ಸರಳ ಭಾಷೆಯಲ್ಲಿ ಹೇಳುವುದಾದರೆ ದೊಡ್ಡ ಬದಲಾವಣೆಯನ್ನು ತರುವ ಯಾವುದಾದರೊಂದು ಹೊಸ ಬೆಳವಣಿಗೆಯನ್ನು ಟ್ರೆಂಡ್ ಅನ್ನಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಫ್ಯಾಷನ್ ಉದ್ಯಮ. ನಾವು ಹೇಗಿದ್ದರೆ ಚಂದ ಎನ್ನುವುದನ್ನು ಯಾವುದೋ ದೇಶದ, ಯಾವುದೋ ದೈತ್ಯ ಕಂಪೆನಿಯಲ್ಲಿ ಕೂತಿರುವ, ಕೆಲ ಬುದ್ಧಿವಂತರ ತಂಡಗಳು ನಿರ್ಧರಿಸುತ್ತವೆ. ಇದಕ್ಕೆ ತಕ್ಕಂತೆ ಬೆಳ್ಳಗೆ-ತೆಳ್ಳಗಿರುವುದೇ ಸೌಂದರ್ಯ, ಕಪ್ಪಗಿರುವುದು ಕುರೂಪ&#8230; ಇತ್ಯಾದಿ ಅರೆಬೆಂದ ವ್ಯಾಖ್ಯೆಗಳನ್ನು ಸೃಷ್ಟಿಸಿ, ಹಲವು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಇನ್ನು ಇಲ್ಲಿ ಲಾಭವೇ ಅಂತಿಮ ಉದ್ದೇಶವಾಗಿರುವುದರಿಂದ ಇವುಗಳನ್ನು ಅನುಷ್ಠಾನಗೊಳಿಸುವ ವೈಖರಿಯೂ ಕೂಡ ಸಹಜವಾಗಿ ವ್ಯವಸ್ಥಿತ ಮಟ್ಟಿನದ್ದಾಗಿರುತ್ತದೆ.</p>



<p>ಹಲವು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮೌರಿಟಾನಿಯಾ ಎಂಬ ದೇಶದ ಬಗ್ಗೆ ವಿಶೇಷ ಲೇಖನವೊಂದನ್ನು ನಾನು ಸಿದ್ಧಪಡಿಸಿದ್ದೆ. ವಿಶೇಷವೆಂದರೆ ಈ ದೇಶದಲ್ಲಿ ದಪ್ಪಗಿರುವ ಹೆಣ್ಣುಮಕ್ಕಳನ್ನು ಸುಂದರಿಯರೆಂದು ಒಪ್ಪಿಕೊಳ್ಳುವ ನಂಬಿಕೆಯಿದೆ. ಹೀಗಾಗಿ ಇಲ್ಲಿ ಹುಡುಗಿಯರು ದಪ್ಪಗಿದ್ದಷ್ಟು ವಿವಾಹಕ್ಕೆ ಬೇಡಿಕೆ ಹೆಚ್ಚು. ವಧುದಕ್ಷಿಣೆಯೂ ಹೆಚ್ಚು (ಭಾರತದಲ್ಲಿ ವರದಕ್ಷಿಣೆಯಿದ್ದಂತೆ ಇಲ್ಲಿ ವಧುದಕ್ಷಿಣೆಯ ರೂಢಿಯಿದೆ). ಹೀಗಾಗಿ ಹೆಣ್ಣುಮಕ್ಕಳ ತೂಕವನ್ನು ಒತ್ತಾಯ ಪೂರ್ವಕವಾಗಿ ಹೆಚ್ಚಿಸುವ ಅಮಾನವೀಯ, ಭಯಾನಕ ಕ್ಯಾಂಪುಗಳು ಇಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯಗಳಲ್ಲೊಂದು. ಹಾಗೆ ನೋಡಿದರೆ ಹೆಣ್ಣುಮಕ್ಕಳು ದಪ್ಪಗಿದ್ದರೇನೇ ಚಂದ ಅನ್ನುವಂಥದ್ದು ಮೌರಿಟಾನಿಯಾದಲ್ಲಿ ಚಾಲ್ತಿಯಲ್ಲಿರುವ ಒಂದು ದೀರ್ಘಾವಧಿಯ ಸಾಂಪ್ರದಾಯಿಕ ಟ್ರೆಂಡ್. ಮುಖ್ಯವಾಹಿನಿಯ ಫ್ಯಾಷನ್ ಉದ್ಯಮದಷ್ಟು ಇದು ಜಾಗತಿಕ ಮಟ್ಟದಲ್ಲಿ ಪ್ರಚಲಿತವಾಗಿಲ್ಲ ಮತ್ತು ಅಲ್ಲಿರುವಷ್ಟು ಆರ್ಥಿಕ ಮೌಲ್ಯವಿಲ್ಲ ಅನ್ನುವುದೊಂದನ್ನು ಬಿಟ್ಟರೆ ಅದಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಏಕೆಂದರೆ ಸೌಂದರ್ಯವನ್ನು ದೇಹದ ತೂಕದೊಂದಿಗೆ ತಕ್ಕಡಿಯಲ್ಲಿ ಹಾಕುವುದೇ ಒಂದು ಬಗೆಯ ಮೂರ್ಖತನ.</p>



<p>ಇದೇ ಹಿನ್ನೆಲೆಯನ್ನಿಟ್ಟುಕೊಂಡು ಸುದ್ದಿಯನ್ನೂ ನಾನೀಗ ಟ್ರೆಂಡ್ ಪರಿಕಲ್ಪನೆಯ ಜೊತೆಗೆ ಇಲ್ಲಿ ಎಳೆದು ತರುತ್ತಿದ್ದೇನೆ. ಏಕೆಂದರೆ ಸುದ್ದಿಗೂ ಟ್ರೆಂಡಿಗೂ ಬಹಳ ಸಾಮ್ಯತೆಗಳಿವೆ. ಎರಡೂ ನಮ್ಮ ದೈನಂದಿನ ಜೀವನದಲ್ಲಿ ನಿತ್ಯವೂ ಬಂದುಹೋಗುವ ಅಂಶಗಳು. ಎರಡಕ್ಕೂ ಇರುವ ಆಯಾಮಗಳು ಹಲವು. ಎರಡನ್ನೂ ಬಹಳ ಚಾಕಚಕ್ಯತೆಯಿಂದ ಸೃಷ್ಟಿಸಲಾಗುತ್ತದೆ ಮತ್ತು ಕೆಲ ಕಾಲದವರೆಗೆ ಜೀವಂತವಾಗಿಡಲಾಗುತ್ತದೆ. ಇವೆರಡರ ಹಿಂದೆಯೂ ಹಲವು ವ್ಯಕ್ತಿ/ಸಮುದಾಯಗಳ ಮತ್ತು ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಶಕ್ತಿಗಳು ಸದಾ ಯುದ್ಧಸನ್ನದ್ಧರಾಗಿ ಕೆಲಸ ಮಾಡುತ್ತಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರೆಡನ್ನು ಫಾಲೋ ಮಾಡುವುದು ಅಥವಾ ಬಿಡುವುದು ಸಂಪೂರ್ಣವಾಗಿ ನಮ್ಮ ಆಯ್ಕೆಗೆ ಬಿಟ್ಟಿರುವುದು. ಏಕೆಂದರೆ ಇವರೆಡು ನಮ್ಮ ಮೊದಲೂ ಇದ್ದವು. ನಮ್ಮ ನಂತರವೂ ಇರಲಿವೆ.</p>



<p>ಈಗ ಮತ್ತೆ ಸುದ್ದಿಯತ್ತ ಬರೋಣ. ಅಸಲಿಗೆ ಸ್ವಿಸ್ ಲೇಖಕ ರಾಲ್ಫ್ ಡೊಬೆಲಿ ನಾವು ಸುದ್ದಿಗಳನ್ನು ಯಾಕೆ ಓದಬಾರದು ಎಂಬ ಅದ್ಭುತ ಕೃತಿಯೊಂದನ್ನು ಬರೆದಿದ್ದಾನೆ. ತನ್ನ ಪ್ರಖರ ವಿಚಾರಗಳನ್ನು ಬಹಳ ಕನ್ವಿನ್ಸಿಂಗ್ ಆಗಿ ಓದುಗರಿಗಾಗಿ ಪ್ರಸ್ತುತಪಡಿಸಬಲ್ಲ ಕೆಲವೇ ಲೇಖಕರಲ್ಲಿ ಈತನೂ ಒಬ್ಬ. ನಾವು ಸುದ್ದಿಗಳನ್ನು ಏಕೆ ನೋಡಬಾರದು/ಓದಬಾರದು ಎಂದು ರಾಲ್ಫ್ ಹೇಳಿರುವ ಹಲವು ಕಾರಣಗಳಲ್ಲಿ ಕೆಲವು ಆಯ್ದ ಸ್ವಾರಸ್ಯಕರ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಜೊತೆಗೇ ಮೇಲೆ ಹೇಳಿರುವ ಹಿನ್ನೆಲೆಯಲ್ಲಿ ಟ್ರೆಂಡ್ ಪರಿಕಲ್ಪನೆಯನ್ನೂ ಕೂಡ ಸುದ್ದಿಗಳ ಜೊತೆ ತಾಳೆ ಹಾಕಿ ಆವರಣದಲ್ಲಿ ನೀಡಿದ್ದೇನೆ.</p>



<p>&#8211; ಸುದ್ದಿಗಳನ್ನು ನೋಡದಿದ್ದ ಪರಿಣಾಮವಾಗಿ ನಾವು ಔಟ್-ಡೇಟೆಡ್ ಏನೂ ಆಗುವುದಿಲ್ಲ. ಸುದ್ದಿಯು ನಿಜಕ್ಕೂ ಅಷ್ಟು ದೊಡ್ಡದಾಗಿದ್ದರೆ ಅಥವಾ ಮುಖ್ಯವಾಗಿದ್ದರೆ ಸ್ವಲ್ಪ ತಡವಾಗಿಯಾದರೂ ಬೇರೆ ಮೂಲಗಳಿಂದ ನಿಮ್ಮನ್ನು ಖಂಡಿತ ತಲುಪುತ್ತದೆ. ಈ ಸುದ್ದಿಯನ್ನು ನಾನೇ ಮೊದಲು ಓದಿದ್ದು/ನೋಡಿದ್ದು ಎಂದು ಬೀಗುವುದರಲ್ಲಿ ಅರ್ಥವೇ ಇಲ್ಲ.</p>



<p>(ಸೋಷಿಯಲ್ ಮೀಡಿಯಾದಿಂದ ನಾಲ್ಕು ದಿನ ವಿರಾಮ ತೆಗೆದುಕೊಂಡಲ್ಲಿ ಪರಿತಪಿಸುವ ಅಗತ್ಯವೇನಿಲ್ಲ. ಮಾರುಕಟ್ಟೆಯಲ್ಲಿ ಐ-ಫೋನ್ ಅಪ್ಡೇಟ್ ಆದಾಗಲೆಲ್ಲ ನಾವು ನಮ್ಮ ಸ್ಮಾರ್ಟ್‍ಫೋನುಗಳನ್ನು ಬದಲಾಯಿಸಬೇಕಿಲ್ಲ. ನಿನ್ನೆ ಏನೋ ಇತ್ತು. ನಾಳೆ ಇನ್ನೇನೋ ಬರುತ್ತದೆ. ಇದು ನಿತ್ಯ ನಿರಂತರ)</p>



<p>&#8211; ಸುದ್ದಿಗಳನ್ನು ಪ್ರಸ್ತುತಪಡಿಸುವುದರ ಹಿಂದೆ ಒಂದು ವಿನ್ಯಾಸವಿರುತ್ತದೆ. ಅದು ಪತ್ರಿಕೆ, ನ್ಯೂಸ್ ಚಾನೆಲ್, ರೇಡಿಯೋ, ವೆಬ್-ಸೈಟ್&#8230; ಹೀಗೆ ಒಂದೊಂದು ಕಡೆ ಒಂದೊಂದು ಬಗೆಯಲ್ಲಿರುತ್ತದೆ. ಉದಾಹರಣೆಗೆ ವೆಬ್-ಸೈಟ್ ಒಂದರ ಚಿಕ್ಕದೊಂದು ಕಾಲಮ್ಮಿನಲ್ಲಿ &#8220;ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಕಾಗದಗಳ ಪೂರೈಕೆಗೆ ಹೊಡೆತ ಬಿದ್ದಿದೆ&#8221; ಎಂದು ಪ್ರಕಟವಾಗಿದೆ ಎಂದಿಟ್ಟುಕೊಳ್ಳೋಣ. ಈ ಸುದ್ದಿಯು ಒಂದು ಮಟ್ಟಿಗೆ ಸತ್ಯವಾಗಿರಬಹುದು. ಹಾಗಂತ ಅದೊಂದೇ ಕಾರಣ ಎಂದು ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಜಿಯೋಪಾಲಿಟಿಕ್ಸ್ ಸೇರಿದಂತೆ ಹಲವು ಸಂಗತಿಗಳು ನಿಜಕ್ಕೂ ಸಂಕೀರ್ಣವಾಗಿರುತ್ತವೆ. ಹಲವು ಸಂಗತಿಗಳು ಒಂದಕ್ಕೊಂದು ಕೊಂಡಿ ಹಾಕಿಕೊಂಡು ಹೊಸ ಸನ್ನಿವೇಶಗಳನ್ನು ಸೃಷ್ಟಿಸಿರುತ್ತವೆ. ನಿಸ್ಸಂದೇಹವಾಗಿ ಅವುಗಳನ್ನು ಕೆಲವೇ ಕೆಲವು ವಾಕ್ಯ ಅಥವಾ ಪ್ಯಾರಾಗ್ರಾಫುಗಳಲ್ಲಿ ಹಿಡಿದಿಡುವುದು ಅಸಾಧ್ಯ. ಹೀಗಾಗಿ ನಿಮಗೆ ಸಿಗುವ ಸುದ್ದಿಯು ಘಟನಾವಳಿಗಳನ್ನು ಸ್ಪಷ್ಟವಾಗಿ ಅರ್ಥೈಸುವ ನಿಟ್ಟಿನಲ್ಲಿ ಬಹುತೇಕ ಅಪೂರ್ಣವೇ ಆಗಿರುತ್ತವೆ.</p>



<p>(ಕೆಲ ಚಿತ್ರಗಳು ಅಥವಾ ವೀಡಿಯೋಗಳು ಜಗತ್ತಿನಾದ್ಯಂತ ವೈರಲ್ ಆದ ಮಾತ್ರಕ್ಕೆ ಸದಾ ಸತ್ಯವೇ ಆಗಿರಬೇಕು ಅಂತೇನಿಲ್ಲ. ಈ ಕಂಟೆಂಟ್ ಗಳ ಹಿನ್ನೆಲೆಗಳನ್ನು ಹುಡುಕುತ್ತಾ ಹೋದರೆ ಅದೇ ಒಂದು ದೊಡ್ಡ ಸಾಹಸವಾಗಬಹುದು)</p>



<p>&#8211; ಹಿಂದೆ ಸಾಧಕರಷ್ಟೇ ಸೆಲೆಬ್ರಿಟಿಗಳಾಗುತ್ತಿದ್ದರು. ಇಂದು ತಲೆಬುಡವಿಲ್ಲದ ಕೆಲಸಗಳೂ, ಹಾಸ್ಯಾಸ್ಪದ ವ್ಯಕ್ತಿಗಳೂ ಕ್ಯಾಮೆರಾಗಳಿಗೆ ವಸ್ತುವಾಗುತ್ತವೆ. ಸೆಲೆಬ್ರಿಟಿ ಎಂಬ ಪದಕ್ಕೆ ಸದ್ಯದ ಕಾಲಮಾನದಲ್ಲಿ ಅರ್ಥವೇ ಇಲ್ಲ. ಉದಾಹರಣೆಗೆ ಇಂತಿಂಥಾ ಚಿತ್ರನಟಿಯೊಬ್ಬಳಿಗೆ ವಿಚ್ಛೇದನದಿಂದಾಗಿ ಇಷ್ಟಿಷ್ಟು ಮಿಲಿಯನ್ ಡಾಲರ್ ಪರಿಹಾರ ಸಿಕ್ಕಿತು, ಇಂದು ವ್ಯಕ್ತಿಯೊಬ್ಬ ಎರಡು ಸಾವಿರ ಕಬ್ಬಿಣದ ಮೊಳೆಗಳನ್ನು ನುಂಗಿ ವಿಶ್ವದಾಖಲೆ ನಿರ್ಮಿಸಿದ&#8230; ಇಂಥಾ ಕೆಲಸಕ್ಕೆ ಬಾರದ ಸುದ್ದಿಗಳಿಂದಾಗಿ ನಿಮಗೆ ನಯಾಪೈಸೆಯ ಪ್ರಯೋಜನವಿಲ್ಲ.</p>



<p>(ನಟಿಯೊಬ್ಬರು ಮಾಲ್ಡೀವ್ಸ್ ದ್ವೀಪಕ್ಕೆ ಹೋಗಿ ವಿಹಾರ ಮಾಡಿಬಂದ ಚಿತ್ರವೊಂದು ಎಲ್ಲೆಡೆ ಟ್ರೆಂಡಿಂಗ್ ಆಗುತ್ತಿದ್ದರೆ ಮತ್ತು ನೀವು ಒಂದು ಪಕ್ಷ ಈ ಸುದ್ದಿಯನ್ನು ಮಿಸ್ ಮಾಡಿಕೊಂಡಿದ್ದರೆ ತಲೆ ಚಚ್ಚಿಕೊಳ್ಳುವಂಥದ್ದೇನಿಲ್ಲ. ಟೇಕ್ ಇಟ್ ಈಸಿ!)</p>



<p>&#8211; ಸುದ್ದಿಗಳು ನಿಮಗೆ ತಕ್ಷಣದ ಮಾಹಿತಿಯನ್ನು ನೀಡಬಲ್ಲವೇ ಹೊರತು ಅವುಗಳು ನಿಮ್ಮ ಜ್ಞಾನವನ್ನು ಹೆಚ್ಚಿಸಲಾರವು. ಹೀಗಾಗಿ ವಿಷಯವೊಂದರ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಳ್ಳಲು ಸುದ್ದಿಗಳನ್ನು ಅವಲಂಬಿಸುವುದಕ್ಕಿಂತ, ಆಯಾ ವಿಷಯಗಳ ಬಗ್ಗೆ ತಜ್ಞರಿಂದ ಬರೆದ ಅಂಕಣಗಳು ಅಥವಾ ಸಂಬಂಧಿ ಪುಸ್ತಕಗಳನ್ನು ಓದುವುದು ಹೆಚ್ಚು ಉಪಕಾರಿಯಾಗಬಲ್ಲದು. (ಜಾಹೀರಾತು ಆಕರ್ಷಕವಾಗಿದ್ದ ಮಾತ್ರಕ್ಕೆ ಉತ್ಪನ್ನಗಳೂ ಅದ್ಭುತವಾಗಿರಬೇಕು ಅಂತೇನಿಲ್ಲ)</p>



<p>ಹೀಗೆ ನಾವು ಬೇಕೆಂದರೂ ಬೇಡವೆಂದರೂ ಸುದ್ದಿಗಳು ಹಲವು ರೂಪಗಳಲ್ಲಿ ನಮ್ಮ ನಡುವೆ ಸದಾ ಇರುತ್ತವೆ ಮತ್ತು ಮುಂದೆಯೂ ಇರಲಿವೆ. ಇದು ಟ್ರೆಂಡ್ ಗಳ ವಿಚಾರದಲ್ಲೂ ಸತ್ಯ. ಟ್ರೆಂಡ್ ಗಳ ಬಗ್ಗೆ ಬರೆಯುವಾಗ ಸಾಮಾನ್ಯವಾಗಿ &#8220;ಸಮೂಹಸನ್ನಿ&#8221; ಎಂಬ ಪದವನ್ನು ಕನ್ನಡದಲ್ಲಿ ಪ್ರಯೋಗಿಸಲಾಗುತ್ತದೆ. ಟ್ರೆಂಡ್ ಅನ್ನು ಸಮರ್ಥವಾಗಿ ಹಿಡಿದಿಡಲು ಒಂದಿಷ್ಟು ಸತ್ಯವೂ, ಒಂದಿಷ್ಟು ವ್ಯಂಗ್ಯವೂ ಅಡಗಿರುವ ಈ ಪದಕ್ಕಿಂತ ಒಳ್ಳೆಯ ಪದವು ನಮಗೆ ಸಿಗಲಾರದೇನೋ.</p>



<p>&#8220;ಟ್ರೆಂಡ್&#8221; ಎಂಬ ಚಿಕ್ಕ ಪದವೊಂದರ ಮೂಲವನ್ನು ಬೆನ್ನಟ್ಟಿ ಹೋಗಿದ್ದೆ. ಇಷ್ಟೆಲ್ಲಾ ಬರೆಯಬೇಕಾಯಿತು!</p>



<p></p>



<p><strong>ಪ್ರಸಾದ್‌ ನಾಯ್ಕ್‌, ದೆಹಲಿ</strong><strong></strong></p>



<p>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. &#8220;ಹಾಯ್ ಅಂಗೋಲಾ&#8221;, &#8220;ಸಫಾ&#8221;, &#8220;ಸ್ನೇಹಗ್ರಾಮದ ಸಂಸತ್ತು&#8221; ಮತ್ತು &#8220;ಮರ ಏರಲಾರದ ಗುಮ್ಮ&#8221; ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</p>



<p><a href="https://peepalmedia.com/?page_id=27450"><sub>“ಬದುಕಿನ ಕೊಲಾಜ್ ಚಿತ್ರಪಟಗಳು”</sub></a><a href="https://peepalmedia.com/collage-pictures-of-life/"><sub>https://peepalmedia.com/collage-pictures-of-life/</sub></a></p>



<p><a href="https://peepalmedia.com/?page_id=27446"><sub>“ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub><a href="https://peepalmedia.com/?page_id=27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub> </p>



<p><a href="https://peepalmedia.com/?page_id=28329" data-type="page" data-id="28329"><sub>“ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ”</sub></a><a href="https://peepalmedia.com/from-bedroom-to-boardroom/" data-type="link" data-id="https://peepalmedia.com/from-bedroom-to-boardroom/"><sub>https://peepalmedia.com/from-bedroom-to-boardroom/</sub></a></p>



<p></p>
]]></content:encoded>
					
		
		
			</item>
		<item>
		<title>&#8220;ಬೆಡ್ರೂಮಿನಿಂದ ಬೋರ್ಡ್ ರೂಮಿನವರೆಗೆ&#8221;</title>
		<link>https://peepalmedia.com/from-bedroom-to-boardroom/</link>
		
		<dc:creator><![CDATA[Prasad Naik]]></dc:creator>
		<pubDate>Fri, 08 Sep 2023 11:39:14 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=27442</guid>

					<description><![CDATA[&#8220;ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ನುಣುಚಿ ಪಾರಾಗುವ ಕಲೆ ಗೊತ್ತಿರಬೇಕು. ನೀವೂ ಹೀಗೆಯೇ ಕಾಲೆಳೆದುಕೊಂಡು ಹೋಗುತ್ತಿದ್ದರೆ, ನಿಮ್ಮ ಕೆಳಗಿನವರು ನಿಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋಗಿಬಿಡುತ್ತಾರೆ ನೋಡಿ&#8230;&#8221;, ಆತ ಕಾರ್ಪೋರೆಟ್ ಭೂತವನ್ನು ಆವಾಹಿಸಿಕೊಂಡವನಂತೆ ಮಾತನಾಡುತ್ತಲೇ ಇದ್ದ – ʼಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ ಪ್ರಸಾದ್‌ ನಾಯ್ಕ್, ದೆಹಲಿ. &#8220;ನನ್ನ ಬೆಡ್ರೂಮಿನಲ್ಲಿ [&#8230;]]]></description>
										<content:encoded><![CDATA[
<p><strong><sub><mark style="background-color:rgba(0, 0, 0, 0)" class="has-inline-color has-vivid-red-color">&#8220;ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ನುಣುಚಿ ಪಾರಾಗುವ ಕಲೆ ಗೊತ್ತಿರಬೇಕು. ನೀವೂ ಹೀಗೆಯೇ ಕಾಲೆಳೆದುಕೊಂಡು ಹೋಗುತ್ತಿದ್ದರೆ, ನಿಮ್ಮ ಕೆಳಗಿನವರು ನಿಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋಗಿಬಿಡುತ್ತಾರೆ ನೋಡಿ&#8230;&#8221;, ಆತ ಕಾರ್ಪೋರೆಟ್ ಭೂತವನ್ನು ಆವಾಹಿಸಿಕೊಂಡವನಂತೆ ಮಾತನಾಡುತ್ತಲೇ ಇದ್ದ – ʼಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ ಪ್ರಸಾದ್‌ ನಾಯ್ಕ್, ದೆಹಲಿ.</mark></sub></strong></p>



<p></p>



<p>&#8220;ನನ್ನ ಬೆಡ್ರೂಮಿನಲ್ಲಿ ನನಗೆ ಬಹಳ ಮುಖ್ಯವಾದ ಎರಡು ಸಂಗತಿಗಳಿವೆ: ಒಂದು ನನ್ನ ಹೆಂಡತಿ, ಇನ್ನೊಂದು ನನ್ನ ಪೆನ್ನು-ನೋಟ್ ಪ್ಯಾಡ್. ಮ್ಯಾನೇಜ್‌ಮೆಂಟ್‌ನಿಂದ ಯಾರದ್ದಾದರೂ ಕರೆ ಬಂದರೆ, ನಾನು ಥಟ್ಟನೆ ಪೆನ್ನು-ನೋಟ್ ಪ್ಯಾಡ್ ಕೈಗೆತ್ತಿ ನೋಟ್ಸ್ ಮಾಡಿಕೊಳ್ಳುತ್ತೇನೆ. ಮಾಡಬೇಕಿರುವ ಕೆಲಸವನ್ನು ಮುಗಿಸುತ್ತೇನೆ&#8230;&#8221;</p>



<p>ಮಧ್ಯವಯಸ್ಸಿನ ಅವರು ಹಾಗೆ ಹೇಳುತ್ತಿದ್ದರೆ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಆತ ಪ್ರತಿಷ್ಠಿತ ಸರಕಾರಿ ಸಂಸ್ಥೆಯೊಂದರಲ್ಲಿ ಹಿರಿಯ ಅಧಿಕಾರಿ. ಸಂಬಳ ಚೆನ್ನಾಗಿದೆ. ಅಲ್ಲಲ್ಲಿ ಲಂಚ ಹುಟ್ಟಿಸುವ ಪ್ರಾಜೆಕ್ಟುಗಳು ಆತನ ಸುಪರ್ದಿಯಲ್ಲಿವೆ. ಷೇರ್ ಮಾರ್ಕೆಟ್ ಮೇಲಕ್ಕೂ ಕೆಳಕ್ಕೂ ಹೋದಾಗ ಇವರ ರಕ್ತದೊತ್ತಡಕ್ಕೂ ಆಗಾಗ ಕುತ್ತಾಗುವುದುಂಟು ಎಂಬುದನ್ನು ಬಿಟ್ಟರೆ ಸಂಪತ್ತು ಅಲ್ಲೂ ಹುಟ್ಟುತ್ತದೆ. ಕೈಗೊಬ್ಬ ಕಾಲಿಗೊಬ್ಬ ಎಂಬಂತೆ ಆಳುಗಳಿದ್ದಾರೆ. ಹೀಗೆ ಹೇಳುತ್ತಾ ಹೋದರೆ ಅವರದ್ದು ಭಲೇ ಸುಖ ಜೀವನ ಎಂದು ಯಾರಿಗಾದರೂ ಅನ್ನಿಸಬೇಕು. ನಾನೂ ಹಾಗಂದುಕೊಂಡಿದ್ದೆ. ಮೇಲಿನ ನುಡಿಮುತ್ತನ್ನು ಕೇಳುವ ಕ್ಷಣದವರೆಗೂ!</p>



<p>ನಾನು ಗಮನಿಸಿರುವಂತೆ ಆತ ಆ ಸಂಸ್ಥೆಯ ಯಶಸ್ವಿ ನಾಯಕರ ಪಟ್ಟಿಯಲ್ಲಿ ಕಾಣಿಸಿಕೊಳ್ಳುವ ಅಧಿಕಾರಿಯೇನಲ್ಲ. ಅವರು ತಮ್ಮನ್ನು ಓರ್ವ ಯಶಸ್ವಿ ಅಧಿಕಾರಿ ಎಂದು ಯೋಚಿಸಿದ್ದರೆ ಅದು ಬೇರೆ ವಿಷಯ. ಬಹುಷಃ ಆ ಕಾರಣಕ್ಕಾಗಿಯೇ ಅವರು ನಮ್ಮಂತಹ ಎಳಸುಗಳಿಗೆ ಯಶಸ್ಸಿನ ಸೂತ್ರವನ್ನು ಹೇಳುತ್ತಿದ್ದರು. ಇದ್ಯಾವ ರೀತಿಯ ಕರ್ತವ್ಯನಿಷ್ಠೆ ಎಂಬುದು ನನಗಂತೂ ಗೊತ್ತಾಗಲಿಲ್ಲ. ಏಕೆಂದರೆ ತಲೆ ಹೋಗುವಂತಿನ ಯಾವ ಕೆಲಸಗಳನ್ನೂ ಆ ಸಂಸ್ಥೆಯು ನಿರ್ವಹಿಸುವುದಿಲ್ಲ. ಅಂತಹ ತುರ್ತುಗಳು ಅಪರೂಪಕ್ಕೊಮ್ಮೆ ಬಂದುಹೋದರೆ ಅದನ್ನೂ ಸರಿಯೆಂದು ಒಪ್ಪಿಕೊಳ್ಳೋಣ. ಆದರೆ ಅದು ನಿತ್ಯದ ಮಾತಾಯಿತು ಎಂದರೆ ಆ ವ್ಯವಸ್ಥೆಯಲ್ಲಿ ಹುಳುಕಿದೆ ಎಂದೇ ಹೇಳಬೇಕಾಗುತ್ತದೆ.</p>



<p>&#8220;ಪತ್ನಿ ಮತ್ತು ಪೆನ್ನು-ನೋಟ್ ಪ್ಯಾಡ್ ಗಳಲ್ಲಿ ಒಂದಕ್ಕೆ ನಿಷ್ಠನಾಗಿದ್ದರೂ ಈತ ಬಹುಷಃ ಖುಷಿಯಾಗಿರುತ್ತಿದ್ದ&#8221;, ಎಂದು ನಂತರ ಸಹೋದ್ಯೋಗಿಯೊಬ್ಬ ಹುಳ್ಳಗೆ ನಗೆಯಾಡಿದ. ನಿಷ್ಠೆ ಎಂಬುದು ಬಹಳ ತೂಕದ ಪದವಾಗಿದ್ದರಿಂದ ನಾನು ಪ್ರತಿಕ್ರಿಯೆಯನ್ನು ನೀಡುವ ಗೋಜಿಗೆ ಹೋಗದೆ ಸುಮ್ಮನಾಗಿಬಿಟ್ಟೆ. ಏಕೆಂದರೆ ಕಾರ್ಪೊರೆಟ್ ಸಂಸ್ಥೆಗಳಲ್ಲಿ ಗೋಡೆಗಳಿಗೆ ಮಾತ್ರ ಕಿವಿಯಿರುವುದಲ್ಲ. ಗಾಳಿಯಲ್ಲಿ ಅದೆಷ್ಟೋ ಕಣ್ಣಿಗೆ ಕಾಣದ ಕಿವಿಗಳು ವೈರಸ್ಸುಗಳಂತೆ ತೇಲಾಡುತ್ತಲೇ ಇರುತ್ತವೆ. ಪರಿಸ್ಥಿತಿಯು ಹೀಗಿರುವಾಗ ತಮ್ಮ ಜಾಗ್ರತೆಯಲ್ಲಿ ತಾವಿರುವುದು ಜಾಣತನ.</p>



<p>ಈ ಬಗೆಯ ಜೀವನಶೈಲಿಯನ್ನು ನಮ್ಮ ನಡುವಿನ ದೈತ್ಯ ಸಂಸ್ಥೆಗಳು ತಮ್ಮ ಉದ್ಯೋಗಿಗಳಲ್ಲಿ ಉತ್ತೇಜಿಸುತ್ತಿವೆಯಾ? ಇದು &#8220;ನಾಳೆ ನೀವೂ ಹೀಗಾಗಬೇಕು&#8221; ಎಂದು ನಮಗೆ ನೀಡಲಾಗುತ್ತಿರುವ ಮೋಟಿವೇಷನಲ್ ಭಾಷಣವೋ? &#8220;ನೋಡ್ತಾ ಇರಿ, ನಿಮಗೂ ಹೀಗಾಗಲಿದೆ&#8221; ಎಂಬ ಎಚ್ಚರಿಕೆಯೋ? ಅಥವಾ &#8220;ಇದೆಲ್ಲಾ ನಾರ್ಮಲ್. ಇದೇ ನಮ್ಮ ನ್ಯೂ ನಾರ್ಮಲ್&#8221; ಎಂದು ನಯ-ನಾಜೂಕಿನ ಲೇಪ ಹಚ್ಚಿಕೊಂಡು ಉದ್ಯೋಗಿಗಳಿಗೆ ಮಾಡಲಾಗುತ್ತಿರುವ ಮೆಂಟಲ್ ಪ್ರೋಗ್ರಾಮಿಂಗ್ ತಂತ್ರಗಳೋ?</p>



<p>***********</p>



<p>ಅಂದು ರಾಷ್ಟ್ರೀಯ ಸದ್ಭಾವನಾ ದಿವಸ.</p>



<p>ಆತನೂ ಓರ್ವ ಹಿರಿಯ ಅಧಿಕಾರಿ. ಆ ದಿನಕ್ಕೆಂದೇ ನಿರ್ಮಿಸಿದ್ದ ಪುಟ್ಟ, ತಾತ್ಕಾಲಿಕ ವೇದಿಕೆಯಲ್ಲಿ ಚೆನ್ನಾಗಿಯೇ ಭಾಷಣ ಮಾಡಿದ್ದ. ಚಪ್ಪಾಳೆಗಳು ಪರವಾಗಿಲ್ಲ ಎಂಬಷ್ಟು ಬಿದ್ದಿದ್ದವು. ಆತನ ಎದೆಯು ಹೆಮ್ಮೆಯಿಂದ ಉಬ್ಬಿಹೋಗಿತ್ತು. &#8220;ಹೆಂಗೆ ನಾನು? ಗಣ್ಯರ ಪಟ್ಟಿಯಲ್ಲಿಲ್ಲದಿದ್ದರೂ, ಯಾರನ್ನೋ ಗಡಿಬಿಡಿಯಲ್ಲಿ ಯಾಮಾರಿಸಿ ಮೈಕು ಕಿತ್ತುಕೊಂಡು ಭಾಷಣ ಮಾಡಿದೆ ನೋಡು&#8230;&#8221;, ಎಂಬಂತೆ ದೂರದಲ್ಲಿದ್ದ ಆತನದ್ದೇ ಬ್ಯಾಚಿನ ಮತ್ತೊಬ್ಬ ಅಧಿಕಾರಿಯತ್ತ ಕಣ್ಣು ಮಿಟುಕಿಸಿದ. ಅವನೂ ಇದಕ್ಕೆ ಉತ್ತರವೆಂಬಂತೆ ನಕ್ಕು ತನ್ನ ಸಮ್ಮತಿಯನ್ನು ಸೂಚಿಸಿದ. ಅಲ್ಲಿಗೆ ಆ ಬೆಳಗೂ ಎಂದಿನಂತೆ ಕಳೆದುಹೋಗಿತ್ತು.</p>



<p>ಅದೇ ದಿನ ಮಧ್ಯಾಹ್ನದ ಭೋಜನದ ಅವಧಿಯ ನಂತರ ಆತನ ಕ್ಯಾಬಿನ್ನಿನಿಂದ ಬರುತ್ತಿದ್ದ ಗದ್ದಲದ ದನಿ ಬಲು ಜೋರಾಗಿತ್ತು. ಸಂಸ್ಥೆಯ ಕೆಳಮಟ್ಟದ ಅಧಿಕಾರಿಯೊಬ್ಬ ತನಗೆ ನೇಮಿಸಲಾಗಿದ್ದ ಚಿಕ್ಕ ಕೆಲಸವೊಂದನ್ನು ಮಾಡಲು ವಿಫಲನಾಗಿದ್ದ. ಅದು ಅವತ್ತೇ ಆಗಬೇಕಿದ್ದ ಕೆಲಸವೇನೂ ಆಗಿರಲಿಲ್ಲ. ಅದರಿಂದ ಸಂಸ್ಥೆಗೆ ನಾಲ್ಕಾಣೆ ನಷ್ಟವೂ ಆಗಿರಲಿಲ್ಲ. ಪರಿಸ್ಥಿತಿಗಳು ಆ ಉದ್ಯೋಗಿಯ ನಿಯಂತ್ರಣಕ್ಕೆ ಮೀರಿದ್ದ ಪರಿಣಾಮವಾಗಿ, ನಾಳೆ ಮತ್ತೊಮ್ಮೆ ಪ್ರಯತ್ನಿಸಿ ನೋಡಿ ಸಾರ್ ಎಂದು ಸುಲಭವಾಗಿ ಸಾಗಹಾಕಬಹುದಿತ್ತು. ಆದರೆ ಸಾಹೇಬರು ಆ ಮೂಡಿನಲ್ಲಿರಲಿಲ್ಲವಲ್ಲ.</p>



<p>&#8220;ನೀವು ಗಾಂಧಿಯಂತೆ ವ್ಯವಹರಿಸುತ್ತೀರಿ. ಇಷ್ಟು ವರ್ಷ ಕೆಲಸ ಮಾಡಿಯೂ ನಿಮಗೆ ಕೆಲಸಗಳನ್ನು ಮಾಡಿಸಿಕೊಳ್ಳುವ ಕಲೆಯು ಕರಗತವಾಗಿಲ್ಲ. ಪ್ರಾಮಾಣಿಕತೆ ಇದ್ದರೆ ಸಾಲದು. ಚಾಲಾಕಿತನವೂ ಇರಬೇಕು. ಯಾರ ಮುಷ್ಟಿಯಲ್ಲಿ ಸಿಕ್ಕಿಹಾಕಿಕೊಂಡರೂ, ಮೈಗೆ ಎಣ್ಣೆ ಹಚ್ಚಿಕೊಂಡ ಪೈಲ್ವಾನನಂತೆ ನುಣುಚಿ ಪಾರಾಗುವ ಕಲೆ ಗೊತ್ತಿರಬೇಕು. ನೀವೂ ಹೀಗೆಯೇ ಕಾಲೆಳೆದುಕೊಂಡು ಹೋಗುತ್ತಿದ್ದರೆ, ನಿಮ್ಮ ಕೆಳಗಿನವರು ನಿಮ್ಮನ್ನು ಓವರ್ ಟೇಕ್ ಮಾಡಿಕೊಂಡು ಹೋಗಿಬಿಡುತ್ತಾರೆ ನೋಡಿ&#8230;&#8221;, ಆತ ಕಾರ್ಪೋರೆಟ್ ಭೂತವನ್ನು ಆವಾಹಿಸಿಕೊಂಡವನಂತೆ ಮಾತನಾಡುತ್ತಲೇ ಇದ್ದ. ಆತನ ದನಿಯು ಅಂದು ಅದೆಷ್ಟು ಜೋರಾಗಿತ್ತೆಂದರೆ ಛೇಂಬರಿನ ಬಾಗಿಲು ಕೊಂಚವೇ ತೆರೆದಿದ್ದರೂ, ಆ ತೀಕ್ಷ್ಣವಾದ ಮಾತುಗಳು ಹೊರಗಿದ್ದ ಎಲ್ಲರಿಗೂ ಸ್ಪಷ್ಟವಾಗಿ ಕೇಳುತ್ತಿದ್ದವು.</p>



<p>ಇದೂ ಒಂದು ರೀತಿಯಲ್ಲಿ ಮೋಟಿವೇಷನಲ್ ಭಾಷಣವೇ. ಆದರೆ ಇಲ್ಲಿ ಸಮಯ-ಸಂದರ್ಭ ಮತ್ತು ಸನ್ನಿವೇಶಗಳು ಭಿನ್ನವಾಗಿದ್ದರಿಂದ ಅದು ಬೈಗುಳದ ರೂಪವನ್ನು ಪಡೆದುಕೊಂಡಿತ್ತು. ಏನಿದರ ಗೂಡಾರ್ಥ? ನಾನು ಚಾಲಾಕಿಯಾಗಿದ್ದರಿಂದಲೇ ಮೇಲಧಿಕಾರಿಯಾಗಿದ್ದೇನೆ ಅಂತಲೇ? ಪ್ರಾಮಾಣಿಕತೆಗಿಂತ ಚಾಲಾಕಿತನವೇ ಕೆಲಸಕ್ಕೆ ಬರುವ ಮೌಲ್ಯ ಅಂತಲೇ? ಹೇಗಾದರೂ ಮಾಡಿ ಉಳಿದವರನ್ನು ಹಿಂದಿಕ್ಕಿ ತಾನೊಬ್ಬ ಗೆಲ್ಲುವುದೊಂದೇ ಯಶಸ್ಸು ಅಂತಲೇ?</p>



<p>************</p>



<p>ಯಶಸ್ಸು ಎಂಬುದು ಸವಕಲು ಪದವಾಗಿ ಬದಲಾಗಿ ವರ್ಷಗಳೇ ಕಳೆದಿವೆ.</p>



<p>ಹಿಂದೆಲ್ಲಾ ಅವನೊಬ್ಬ ಯಶಸ್ವಿ ಮನುಷ್ಯ ಎಂದರೆ ನಾವು ಯೋಚನೆಗೆ ಬೀಳುತ್ತಿದ್ದೆವು. ಇವನ್ಯಾರು? ಯಶಸ್ವಿ ಶಿಕ್ಷಕನೇ? ಯಶಸ್ವಿ ರಾಜಕಾರಣಿಯೇ? ಯಶಸ್ವಿ ಕಲಾವಿದನೇ? ಯಶಸ್ವಿ ಉದ್ಯಮಿಯೇ? ಹೀಗೆ ಬಹಳಷ್ಟು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿದ್ದವು. ಕ್ರಮೇಣ ದುಡ್ಡು ಕೂಡಿಡುವುದೇ ಯಶಸ್ಸು ಎಂಬರ್ಥದಲ್ಲಿ ಪರಿಸ್ಥಿತಿಗಳು ಬದಲಾದ ಮೇಲೆ ಈ ಬಗೆಯ ಗೊಂದಲಗಳು ಈಗ ಮೂಡುವುದಿಲ್ಲ. ಯಶಸ್ಸು ಗಳಿಸುವುದು ಹೇಗೆ ಎಂಬ ಪಾಠವನ್ನು ಹಲವು ಬಗೆಗಳಲ್ಲಿ ಪ್ರಸ್ತುತಪಡಿಸುವ ಸೆಲ್ಫ್ ಹೆಲ್ಪ್ ಇಂಡಸ್ಟ್ರಿ ಇಂದು ಬಿಲಿಯನ್ ಗಟ್ಟಲೆ ಡಾಲರು ಬೆಲೆಬಾಳುವ ದೈತ್ಯ ಉದ್ಯಮ. ಒಳಗಿರುವ ವೈನ್ ಅದೇ. ಆದರೆ ಬಾಟಲ್ಲುಗಳು ಮಾತ್ರ ಹೊಸತು!</p>



<p>ಹೀಗಾಗಿಯೇ ಸರಕಾರಿ ನೌಕರನೊಬ್ಬ ಪ್ರಾಮಾಣಿಕನಾಗಿ ಕೆಲಸ ಮಾಡಿದರೆ, ಲಂಚ ಮುಟ್ಟದಿದ್ದರೆ ಆತ ದೈವಾಂಶಸಂಭೂತನಂತೆ (ಕನಿಷ್ಠಪಕ್ಷ ಹೊರಗಿನವರಿಗೆ; ಆ ವರ್ತುಲದಲ್ಲಿದ್ದವರಿಗೆ ಆತನೊಬ್ಬ ನಾಲಾಯಕ್ಕೇ!) ಕಾಣತೊಡಗುತ್ತಾನೆಯೇ ಹೊರತು, ಅದು ಆತನ ಆದ್ಯ ಕರ್ತವ್ಯ ಎಂದನಿಸುವುದೇ ಇಲ್ಲ. ಚಲನಚಿತ್ರಗಳಲ್ಲಿ ನಾಲ್ಕಾರು ಅಶ್ಲೀಲ ಜೋಕುಗಳು-ಎರಡು ಐಟಮ್ ಸಾಂಗ್ಸ್ ಗಳನ್ನು ತುರುಕದಿದ್ದರೆ ಅದು ಜನಪ್ರಿಯ ಚಿತ್ರಗಳ ಪಟ್ಟಿಗೆ ಸೇರುವುದೇ ಇಲ್ಲ. ನಾಲ್ಕು ದಿನಗಳಿಗೊಮ್ಮೆ ಅಸಂಬದ್ಧ ಮಾಡಿ ಸುದ್ದಿಗೆ ಗ್ರಾಸವಾಗದ ರಾಜಕಾರಣಿ ಇಂದಿನ ಕಾಲಮಾನಕ್ಕೆ ಮಹಾಬೋರು. ಇಂದು ನಟರಿಗೆ ನಟನೆಯಲ್ಲಿ, ಲೇಖಕರಿಗೆ ಬರವಣಿಗೆಯಲ್ಲಿ, ಹೋರಾಟಗಾರರಿಗೆ ಹೋರಾಟಗಳಲ್ಲಿ, ಅಧಿಕಾರಿಗಳಿಗೆ ತಮ್ಮ ಕರ್ತವ್ಯದಲ್ಲಿ, ರಾಜಕಾರಣಿಗಳಿಗೆ ತಮ್ಮ ಜನಸೇವೆಯಲ್ಲಿ&#8230; ತನ್ನ ಪಾಡಿಗೆ ತಾನೆಂಬಂತೆ ವ್ಯಸ್ತರಾಗಿ ಕಳೆದುಹೋಗುವ ವಿಲಾಸವಿಲ್ಲ. ಕೆಲಸ ಮಾಡುವುದು ಮೊದಲ ಭಾಗ. ನಂತರ ಅದನ್ನು ಮಾರ್ಕೆಟಿಂಗ್ ಮಾಡುವ ಕಸರತ್ತುಗಳದ್ದು ಬೇರೆಯದ್ದೇ ಆಟ.</p>



<p>ಹಿಂದೆ ಉದ್ಯಮಕ್ಷೇತ್ರಗಳಲ್ಲಿರುವ ನೈತಿಕ ಮೌಲ್ಯಗಳ ಬಗ್ಗೆ ಮಾತಾಡುವಾಗಲೆಲ್ಲಾ ಟಾಟಾರವರ ಕತೆಗಳನ್ನು ಉದ್ಧರಿಸಲಾಗುತ್ತಿತ್ತು. ನಾನು ಹಿಂದೊಮ್ಮೆ ಓದಿದ್ದ ಚಂದದ ಸತ್ಯಕತೆಯಲ್ಲಿ ದೈತ್ಯ ಕೋಲ್ಡ್ ಡ್ರಿಂಕ್ ಕಂಪೆನಿಯೊಂದರ ಸೀಕ್ರೆಟ್ ಫಾರ್ಮುಲಾ ಒಂದು, ತನ್ನ ಪ್ರತಿಸ್ಪರ್ಧಿ ಕಂಪೆನಿಯ ಉದ್ಯೋಗಿಯೊಬ್ಬನ ಕೈಸೇರುತ್ತದೆ. ಕಾರ್ಮಿಕನೊಬ್ಬನ ಕಣ್ತಪ್ಪಿನಿಂದ ಆಗಿದ್ದ ಅವಾಂತರವಾಗಿತ್ತದು. ಇತ್ತ ಇದನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವುದು ದ್ರೋಹ ಎಂಬುದನ್ನು ಅರಿಯುವ ಆತ, ಆ ಕಟ್ಟನ್ನು ಅಷ್ಟೇ ಶಿಸ್ತಿನಿಂದ ತಲುಪಿಸಬೇಕಾದಲ್ಲಿ ಸುರಕ್ಷಿತವಾಗಿ ತಲುಪಿಸುತ್ತಾನೆ. ನಂತರ ಪ್ರತಿಸ್ಪರ್ಧಿ ಕಂಪೆನಿಯ ಮುಖ್ಯಸ್ಥ ಖುದ್ದು ಕರೆ ಮಾಡಿ ಆ ನೌಕರನನ್ನು ಅಭಿನಂದಿಸಿದನಂತೆ. ಬಹುಷಃ ಚಾಲಾಕಿತನ, ಬಕೆಟ್ಟು, ಫಾಸ್ಟು, ರ್ಯಾಟ್ ರೇಸ್&#8230; ಇತ್ಯಾದಿ ಪದಗಳು ಆಗಿನ ಸಮಯದಲ್ಲಿ ಟ್ರೆಂಡ್ ಆಗಿರಲಿಲ್ಲವೇನೋ!</p>



<p>ಅಷ್ಟಕ್ಕೂ ಒತ್ತಡವನ್ನು ನಮ್ಮ ಬದುಕಿನ ಭಾಗವಾಗಿಸಿದ್ದು ಯಾರು? ಹಾಗೆ ಮಾಡಿದವರ ಹಿತಾಸಕ್ತಿಗಳೇನು? ಪ್ರಾಡಕ್ಟಿವಿಟಿಯ ಹೆಸರಿನಲ್ಲಿ ಏಕೆ ಅನಗತ್ಯ ತುರ್ತುಗಳನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಲಾಗುತ್ತದೆ? ಹೇಗೆ ವ್ಯವಸ್ಥೆಯೊಂದು ಪ್ರಾಮಾಣಿಕನೊಬ್ಬನನ್ನು ಅನಿವಾರ್ಯವಾಗಿ ಭ್ರಷ್ಟನನ್ನಾಗಿಸುತ್ತದೆ? ನೀನು ಹುಟ್ಟಿದ್ದೇ ದುಡಿಯುವುದಕ್ಕಾಗಿ, ಕಾಸು ಕೂಡಿಡುವುದಕ್ಕಾಗಿ ಎಂಬ ಭ್ರಮೆಗಳನ್ನು ಸೃಷ್ಟಿಸಲಾಗುತ್ತದೆ? ಕೊನೆಗೆ ಲೋಕರೂಢಿಗೆ ತಕ್ಕಂತೆ ಎಲ್ಲವನ್ನು ಗಳಿಸಿದರೂ ಇಲ್ಲದ ಖಾಲಿತನವೊಂದು ಏಕೆ ಹುಟ್ಟಿಬಿಡುತ್ತದೆ? ಬರೀ ಇದಕ್ಕೇನಾ ಇಷ್ಟೆಲ್ಲಾ ಕೈ-ಕಾಲು ಬಡಿದಿದ್ದು ಎಂಬ ವೈರಾಗ್ಯವೊಂದು ವಯಸ್ಸಲ್ಲದ ವಯಸ್ಸಿನಲ್ಲಿ ಏಕೆ ಥಟ್ಟನೆ ಕಾಡತೊಡಗುತ್ತದೆ?</p>



<p>&nbsp;ಈ ನಿಟ್ಟಿನಲ್ಲಿ ಲೈಫ್ ಕೋಚ್ ಮುಕೇಶ್ ಖತ್ರಿಯವರು ಹೇಳುವ &#8220;ಮಿಲಿಯನೇರ್&#8221; ಮತ್ತು &#8220;ಹ್ಯಾಪೀ ಮಿಲಿಯನೇರ್&#8221; ಪರಿಕಲ್ಪನೆಗಳು ನನಗೆ ಬಹಳ ಅರ್ಥಪೂರ್ಣ ಅನ್ನಿಸುತ್ತದೆ. &#8220;ಮಿಲಿಯನೇರ್&#8221; ಆದರೆ ಸಾಲುವುದಿಲ್ಲ. &#8220;ಹ್ಯಾಪೀ ಮಿಲಿಯನೇರ್&#8221; ಆದರೇನೇ ಅದಕ್ಕೊಂದು ಸಾರ್ಥಕತೆ ಎಂಬುದು ಅವರ ವಾದ. ಅವರು ಹೇಳುವಂತೆ ಈ ಜಗತ್ತಿನಲ್ಲಿ ಸಾಕಷ್ಟು ಮಿಲಿಯನೇರ್ ಗಳಿದ್ದಾರೆ. ಆದರೆ ಅಷ್ಟಿದ್ದೂ ಸಂತೋಷವಾಗಿರುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೋಟ್ಯಾಧಿಪತಿಯಾದ ನಂತರವೂ ಖುಷಿ-ಸಂತೃಪ್ತಿಗಳಿಲ್ಲ ಎಂದಾದ ಮೇಲೆ ಆ ಕೋಟಿ ಇದ್ದರೇನು ಹೋದರೇನು?</p>



<p>ಸ್ಪರ್ಧೆ, ಮಹಾತ್ವಾಕಾಂಕ್ಷೆ, ಒತ್ತಡಗಳೇನೇ ಇರಲಿ. ಬೆಡ್ರೂಮಿನ ಹಂತದವರೆಗೂ ಹೋಗುವಷ್ಟು ಅವುಗಳನ್ನು ಸಡಿಲ ಬಿಟ್ಟರೆ ಬಹಳ ಕಷ್ಟ!</p>



<p></p>



<p class="has-text-align-left"><strong>ಪ್ರಸಾದ್ ನಾಯ್ಕ್</strong></p>



<p class="has-text-align-left"><sub>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ <a><mark style="background-color:rgba(0, 0, 0, 0)" class="has-inline-color has-black-color">ಪ್ರಸಾದ್ ನಾಯ್ಕ್</mark> </a>ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</sub></p>



<p class="has-text-align-left"></p>



<p><strong>ಇವುಗಳನ್ನು ಓದಿದ್ದೀರಾ?</strong></p>



<p><a href="https://peepalmedia.com/?page_id=27450" data-type="page" data-id="27450"><sub>“ಬದುಕಿನ ಕೊಲಾಜ್ ಚಿತ್ರಪಟಗಳು”</sub></a><a href="https://peepalmedia.com/collage-pictures-of-life/" data-type="link" data-id="https://peepalmedia.com/collage-pictures-of-life/"><sub>https://peepalmedia.com/collage-pictures-of-life/</sub></a></p>



<p><a href="https://peepalmedia.com/?page_id=27446" data-type="page" data-id="27446"><sub>“ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/metropolis-city-vs-ambition/" data-type="link" data-id="https://peepalmedia.com/metropolis-city-vs-ambition/"><sub>https://peepalmedia.com/metropolis-city-vs-ambition/</sub></a></p>



<p><a href="https://peepalmedia.com/the-story-of-a-mini-rain/" data-type="post" data-id="26408"><sub>“ಒಂದು ಮಿನಿಮಳೆಯ ಕಥೆ”</sub></a><a href="https://peepalmedia.com/the-story-of-a-mini-rain/" data-type="link" data-id="https://peepalmedia.com/the-story-of-a-mini-rain/"><sub>https://peepalmedia.com/the-story-of-a-mini-rain/</sub></a></p>



<p><sub> <a href="https://peepalmedia.com/?page_id=27444" data-type="page" data-id="27444">“ಕೂತು ಕೂತು ಕೆಟ್ಟವರು”https://peepalmedia.com/kootu-kootu-kettavaru/</a></sub></p>



<p></p>



<p></p>
]]></content:encoded>
					
		
		
			</item>
		<item>
		<title>&#8220;ಒಂದು ಮಿನಿಮಳೆಯ ಕಥೆ&#8221;</title>
		<link>https://peepalmedia.com/the-story-of-a-mini-rain/</link>
		
		<dc:creator><![CDATA[Prasad Naik]]></dc:creator>
		<pubDate>Fri, 25 Aug 2023 11:58:15 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=26408</guid>

					<description><![CDATA[ಪ್ರಕೃತಿಯು ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿಬೀಳುತ್ತವೆ. ʼಸ್ಮಾರ್ಟ್ʼ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಹುಟ್ಟಿಕೊಂಡ ನಗರಗಳಲ್ಲಿ ಹಳೆಯ ಸಮಸ್ಯೆಗಳು ಕಾಡತೊಡಗಿದಾಗ ನಮಗೆ ಅಚ್ಚರಿಯೂ ಆಗುವುದಿಲ್ಲ. ಕನಿಷ್ಠಮಟ್ಟದ ಹಳಹಳಿಕೆಯೂ ಮೂಡುವುದಿಲ್ಲ- ಪ್ರಸಾದ್‌ ನಾಯ್ಕ್‌ , ದೆಹಲಿ &#8220;ಎಂಥಾ ಮಳೆ ಸಾರ್&#8221;, ಎಂದರವರು. &#8220;ಇದು ಮಳೆ ಅಲ್ಲ, ಮಜಾಕ್ ಅಷ್ಟೇ&#8221;, ಎಂದ ಮತ್ತೊಬ್ಬ. ನಾಲ್ಕೈದು ತಿಂಗಳುಗಳ ಭರ್ಜರಿ ಮಾನ್ಸೂನ್ ಅವಧಿಯನ್ನು [&#8230;]]]></description>
										<content:encoded><![CDATA[
<p class="has-background" style="background-color:#abb7c273"><strong>ಪ್ರಕೃತಿಯು ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿಬೀಳುತ್ತವೆ. ʼಸ್ಮಾರ್ಟ್ʼ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡುಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಹುಟ್ಟಿಕೊಂಡ ನಗರಗಳಲ್ಲಿ ಹಳೆಯ ಸಮಸ್ಯೆಗಳು ಕಾಡತೊಡಗಿದಾಗ ನಮಗೆ ಅಚ್ಚರಿಯೂ ಆಗುವುದಿಲ್ಲ. ಕನಿಷ್ಠಮಟ್ಟದ ಹಳಹಳಿಕೆಯೂ ಮೂಡುವುದಿಲ್ಲ- <mark style="background-color:rgba(0, 0, 0, 0)" class="has-inline-color has-vivid-red-color"> ಪ್ರಸಾದ್‌ ನಾಯ್ಕ್‌ , ದೆಹಲಿ</mark></strong></p>



<p>&#8220;ಎಂಥಾ ಮಳೆ ಸಾರ್&#8221;, ಎಂದರವರು.</p>



<p>&#8220;ಇದು ಮಳೆ ಅಲ್ಲ, ಮಜಾಕ್ ಅಷ್ಟೇ&#8221;, ಎಂದ ಮತ್ತೊಬ್ಬ.</p>



<p>ನಾಲ್ಕೈದು ತಿಂಗಳುಗಳ ಭರ್ಜರಿ ಮಾನ್ಸೂನ್ ಅವಧಿಯನ್ನು ನೋಡಿ ಬಂದಿರುವ ಭಾರತದ ಕರಾವಳಿ ಪ್ರದೇಶದ ಮಂದಿಗೆ ದಿಲ್ಲಿಯಂತಹ ಶಹರಗಳಲ್ಲಿ ಸುರಿಯುವ ಮಳೆಯು ಮಳೆಯೆಂಬಂತೆ ಅನ್ನಿಸುವುದೇ ಇಲ್ಲ. ಹೀಗಾಗಿ ಇಲ್ಲಿಯ ಮಳೆಯು ಅವರಿಗೆ ಮಜಾಕಿನಂತೆ ಕಾಣುತ್ತದೆ. ಹಾಗಿದ್ದರೂ ಜುಲೈ ತಿಂಗಳ ಚಿಕ್ಕದೊಂದು ಮಳೆಯು ಇಡೀ ಗುರುಗ್ರಾಮವನ್ನು ಕೆಲ ತಾಸುಗಳ ಕಾಲ ಅಕ್ಷರಶಃ ನಿಶ್ಚಲವಾಗಿಸಿಬಿಟ್ಟಿತ್ತು. ಥೇಟು &#8220;ತುಮ್ ಮಿಲೇ&#8221; ಚಿತ್ರದಲ್ಲಿ ಬರುವ, ಪ್ರವಾಹಕ್ಕೆ ಸಿಕ್ಕಿಹಾಕಿಕೊಂಡು ಇಷ್ಟಿಷ್ಟೇ ಮುಳುಗುವ ಮುಂಬೈ ಮಹಾನಗರಿಯಂತೆ. ಮಹಾನಗರಗಳಿಗೆ ಸಾಮಾನ್ಯವಾಗಿ ನಿಲ್ಲುವ ಜಾಯಮಾನವಿಲ್ಲದಿರುವುದರಿಂದ ಇದೊಂದು ಅಪರೂಪದ ಸಂಗತಿಯೂ ಹೌದು.</p>



<p>ಅಂದು ಸಂಜೆ ನಮ್ಮ ತಂಡವು ಆರೂವರೆಯ ಹೊತ್ತಿಗೆ ಆಫೀಸು ಬಿಟ್ಟು ಹೊರಟಾಗಿತ್ತು. ನಮಗದು ಎಂದಿಗಿಂತ ಬೇಗದ ಸಮಯ. ಕಳೆದೊಂದು ತಾಸಿನಿಂದ ನಿರಂತರ ಮಳೆಯಾಗುತ್ತಲೇ ಇದ್ದ ಪರಿಣಾಮವಾಗಿ ಕೊಂಚ ಮುಂಜಾಗ್ರತೆಯೆಂಬಂತೆ ನಾವು ಒಂದರ್ಧ ತಾಸು ಬೇಗನೆ ಆಫೀಸಿನಿಂದ ಹೊರಟಿದ್ದೆವು. ಆದರೆ ಹೊರಟು ತಪ್ಪು ಮಾಡಿಬಿಟ್ಟೆವು ಎಂಬ ಜ್ಞಾನೋದಯವಾಗಲು ಹೆಚ್ಚಿನ ಸಮಯವೇನೂ ಬೇಕಾಗಲಿಲ್ಲ. ವಾಹನವನ್ನು ಹಿಂದಕ್ಕೆ ತಿರುಗಿಸಿ ಆಫೀಸಿಗೆ ಮತ್ತೆ ಹೋಗಿಬಿಡೋಣ, ಇಲ್ಲಿದ್ದರೆ ತಾಸುಗಟ್ಟಲೆ ಇಲ್ಲೇ ಸಿಕ್ಕಿಹಾಕಿಕೊಳ್ಳುತ್ತೇವೆ ಎಂದು ನಮ್ಮ ಸಾರಥಿ ಹೇಳಿದಾಗ ಕೂತಿದ್ದ ಉಳಿದವರಿಗೆ ಬೇರೆ ಆಯ್ಕೆಗಳಿರಲಿಲ್ಲ. ಹೀಗಾಗಿ ಮತ್ತೆ ಅಫೀಸಿಗೆ ತೆರಳಿ, ನಿಮಿಷಗಳು ಕಳೆದಂತೆ ತೀವ್ರವಾಗುತ್ತಿದ್ದ ಸಂಜೆಯ ಟ್ರಾಫಿಕ್ ಅನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಂಡು ಮತ್ತೆ ಹೊರಡುವುದೆಂದು ತೀರ್ಮಾನವಾಯಿತು.</p>



<p>ಆದರೆ ಹಾಗೆ ಹೊರಡುವುದೆಂದರೆ ಮನದಲ್ಲಿ ಯೋಚಿಸಿದಷ್ಟು ಸುಲಭವಲ್ಲವಲ್ಲ. ಮಳೆಯ ಕಾಲದಲ್ಲಿ ಮಹಾನಗರಿಗಳು ಅಕ್ಷರಶಃ ಚಕ್ರವ್ಯೂಹದಂತಾಗುತ್ತವೆ. ವಾಹನ ಚಾಲಕರು ಸಮೂಹಸನ್ನಿಯಲ್ಲಿ ಬುದ್ಧಿಭ್ರಮಣೆಗೊಳಗಾದವರಂತೆ ಎಲ್ಲಾ ಕಡೆಯಿಂದ, ಸಿಕ್ಕಸಿಕ್ಕಲ್ಲಿ ನುಗ್ಗಿಸಲು ಪ್ರಯತ್ನಿಸುತ್ತಿರುತ್ತಾರೆ. ವಾಹನಗಳ ಚಕ್ರಗಳು ನಿಂತಲ್ಲೇ ಅತ್ತಿತ್ತ ಸರಿಯುತ್ತವೆ ಎಂಬುದನ್ನು ಬಿಟ್ಟರೆ, ಯಾವ ದಿಕ್ಕಿನತ್ತಲೂ ಸಾಗಲಾಗದೆ ಗೊಂದಲಕ್ಕೀಡಾಗಿಬಿಡುತ್ತವೆ. ಎಲ್ಲರಿಗೂ ಆದಷ್ಟು ಬೇಗ ಮನೆ ಸೇರುವ ತವಕ. ಪಕ್ಕದವನನ್ನು ಮೋರಿಗೆ ತಳ್ಳಿಯಾದರೂ ತಾನು ಮುಂದೆ ಹೋಗಬೇಕು ಎಂಬ ಗಡಿಬಿಡಿ. ಎಂತೆಂಥಾ ಪರಿಣತ ಡ್ರೈವರುಗಳ ಅಸಲಿ ಅಗ್ನಿಪರೀಕ್ಷೆಗಳು ಶುರುವಾಗುವುದೇ ಇಂತಹ ಇಕ್ಕಟ್ಟಿನ ಸಂದರ್ಭಗಳಲ್ಲಿ.&nbsp;</p>



<p>ಇಂಥಾ ಸಂದರ್ಭಗಳಲ್ಲಿ ಕೂತಿರುವ ವಾಹನಗಳಿಂದ ಇಳಿಯುವುದೂ ಕೂಡ ಒಂದು ದೊಡ್ಡ ಸಾಹಸದಂತೆ ಬದಲಾಗುತ್ತದೆ. ಏಕೆಂದರೆ ಮಹಾನಗರಿಗಳಲ್ಲಿ ನೀರು ಇಂಗುವ ವ್ಯವಸ್ಥೆಗಳು ಇಲ್ಲದ ಪರಿಣಾಮವಾಗಿ ಎಲ್ಲಾ ಕಡೆ ನೀರು ತುಂಬಿಕೊಂಡಂತಹ, ಕೃತಕ ಪ್ರವಾಹದ ಪರಿಸ್ಥಿತಿ. ಅಂದಿನ ಪರಿಸ್ಥಿತಿಯೂ ಕೂಡ ಬಹುತೇಕ ಅಂಥದ್ದೇ ಆಗಿತ್ತು. ವಾಹನದ ವ್ಯವಸ್ಥೆಯಿಲ್ಲದ ಪಾದಚಾರಿಗಳು ಮೊಣಕಾಲಿನವರೆಗೆ ಬರುತ್ತಿದ್ದ ನೀರಿನ ಮಟ್ಟದೊಂದಿಗೆ ಸೆಣಸಾಡುತ್ತಾ ಮುನ್ನಡೆಯುತ್ತಲೇ ಇದ್ದರು. ಕಾಲಿನಡಿಯಲ್ಲಿ ರಸ್ತೆಯಿದೆಯೋ, ಮೋರಿಯಿದೆಯೋ, ಹೈ-ಟೆನ್ಷನ್ ಕೇಬಲ್ಲುಗಳಿವೆಯೋ, ಪ್ರಪಾತವಿದೆಯೋ ಎಂಬುದನ್ನೂ ಗುರುತಿಸಲಾಗದಂತಹ ದುಸ್ಥಿತಿ. ಹೀಗಾಗಿ ಪ್ರತಿಯೊಂದು ಹೆಜ್ಜೆಯೂ ಒಂದು ಬಗೆಯ ಜೂಜಾಟ-ಜೂಟಾಟ!</p>



<p>ಇದಾದ ಕೆಲ ಹೊತ್ತಿನಲ್ಲಿ ನಾವೆಲ್ಲಾ ಹೇಗೋ ಒದ್ದಾಡಿಕೊಂಡು ಮರಳಿ ಆಫೀಸು ತಲುಪಿದ್ದಾಯಿತು. ಮಳೆ ಒಂದರೆಕ್ಷಣ ಬಿಟ್ಟಿದ್ದರೂ, ಟ್ರಾಫಿಕ್ ಅಷ್ಟು ಬೇಗ ಮುಗಿಯುವ ಪ್ರಶ್ನೆಯೇ ಇರಲಿಲ್ಲ. ಇನ್ನು ನಗರವನ್ನು ಸತಾಯಿಸುತ್ತಿದ್ದ ಪ್ರವಾಹದ ಪರಿಸ್ಥಿತಿಯಂತೂ ಹತ್ತಾರು ತಾಸುಗಳ ಕಾಲ ತಿಳಿಯಾಗುವ ಸಾಧ್ಯತೆಗಳೇ ಇರಲಿಲ್ಲ. ಈ ಗಡಿಬಿಡಿಯಲ್ಲಿ ನಮ್ಮದೇ ಸಹೋದ್ಯೋಗಿಯೊಬ್ಬ ಶಹರದ ಮತ್ತೊಂದು ಮೂಲೆಯಿಂದ ಕಾಲೆಳೆಯುತ್ತಾ ಆಫೀಸಿನವರೆಗೆ ಬಂದಿದ್ದ. ಎಲ್ಲರಂತೆ ಅವನದ್ದೂ ಒಂದು ಕತೆಯಾಗಿತ್ತು.</p>



<p>ಅಷ್ಟಕ್ಕೂ ಆಗಿದ್ದೇನೆಂದರೆ ಅವನು ಪ್ರಯಾಣಿಸುತ್ತಿದ್ದ ಕ್ಯಾಬೊಂದು ಶಹರದ ಅಂಡರ್-ಪಾಸ್ ಒಂದರಲ್ಲಿ ಮಳೆಯ ಹೊಡೆತಕ್ಕೆ ಸಿಕ್ಕಿಹಾಕಿಕೊಂಡಿದೆ. ಅಂಡರ್-ಪಾಸಿನೊಳಗೆ ನೀರಿನ ಮಟ್ಟವು ನಿಧಾನವಾಗಿ ಮೇಲಕ್ಕೇರತೊಡಗಿದಂತೆ ವಾಹನದ ಎಂಜಿನ್ನಿಗೂ ತೊಂದರೆಯಾಗಿ ಎಂಜಿನ್ ಜೀವ ಕೈಚೆಲ್ಲಿದೆ. ಈ ಮಧ್ಯೆ ಟ್ರಾಫಿಕ್ಕು ಕೊಂಚವಾದರೂ ಸರಿಹೋಗಬಹುದು ಎಂದು ಇವರೆಲ್ಲ ಕಾದಿದ್ದೇ ಬಂದಿತ್ತು. ಆದರೆ ಅಂಥದ್ದೇನೂ ಆಗಲಿಲ್ಲ. ಬದಲಾಗಿ ವಾಹನದೊಳಗೆ ದೀರ್ಘಕಾಲ ಕೂತು ಉಸಿರುಗಟ್ಟಿದಂತಾಗಿ ಈತ ಅನಿವಾರ್ಯವಾಗಿ ವಾಹನದಿಂದ ಹೊರಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತ ಕ್ಯಾಬಿನೊಳಗೂ ಕೂರಲಾಗದೆ, ಇತ್ತ ಗಮ್ಯವನ್ನೂ ತಲುಪಲಾಗದೆ ಎಲ್ಲೂ ಸಲ್ಲದಂತಿನ ಫಜೀತಿ. ಅಂತೂ ಆತ ಹೀಗೆ ಕಾಲೆಳೆದುಕೊಂಡು ಆಫೀಸು ತಲುಪುವಷ್ಟರಲ್ಲಿ ಒಂದೆರಡು ತಾಸುಗಳು ಕಳೆದುಹೋಗಿದ್ದವು. ದೇಹಕ್ಕೆ ರಾಕ್ಷಸ ಸುಸ್ತು ಆವರಿಸಿಕೊಂಡಿತ್ತು.</p>



<p>ಈ ಹೊತ್ತಿಗಾಗಲೇ ಬಹುಷಃ ಶಹರದ ಪ್ರಮುಖ ಸುದ್ದಿವಾಹಿನಿಗಳು ಎಚ್ಚರಗೊಂಡಿದ್ದವು. ನಗರದ ಎಫ್ಫೆಮ್ ಸ್ಟೇಷನ್ನುಗಳು ಟ್ರಾಫಿಕ್ ಬಗೆಗಿನ ಅಪ್ಡೇಟ್ ಗಳನ್ನು ಕೇಳುಗರಿಗಾಗಿ ನಿಷ್ಠೆಯಿಂದ ಕೊಡಲಾರಂಭಿಸಿದ್ದವು. ಡಿಜಿಟಲ್ ವಾಹಿನಿಗಳಲ್ಲಿ ಮಿನಿ ಬ್ರೇಕಿಂಗ್ ನ್ಯೂಸ್ ಗಳು ಬುಲೆಟ್ ಪಾಯಿಂಟ್ಸ್ ಗಳಲ್ಲಿ ಬಿತ್ತರವಾಗತೊಡಗಿದ್ದವು. ಈಗಾಗಲೇ ಟ್ರಾಫಿಕ್ಕಿನಲ್ಲಿ ಹೊರಟವರು ಒಂದಿಂಚೂ ಮುನ್ನಡೆಯದೆ ಹಲವು ತಾಸುಗಳು ಆಗಲೇ ಕಳೆದುಹೋಗಿದ್ದವು. ಮಳೆಯು ತಕ್ಕಮಟ್ಟಿಗೆ ನಿಯಂತ್ರಣಕ್ಕೆ ಬಂದಿತ್ತಾದರೂ, ವಾಹನಗಳ ಚಕ್ರವ್ಯೂಹದಂತೆ ಬದಲಾಗಿದ್ದ ಶಹರದ ಪರಿಸ್ಥಿತಿಯು ಒಂದಿನಿತೂ ಬದಲಾಗದಿರುವ ಪರಿಣಾಮವಾಗಿ ಗ್ರೌಂಡ್ ರಿಯಾಲಿಟಿಯ ಹಂತದಲ್ಲಿ ಹೆಚ್ಚಿನ ಉಪಯುಕ್ತ ಬದಲಾವಣೆಗಳೇನೂ ಬದಲಾಗಿರಲಿಲ್ಲ.</p>



<p>ಇತ್ತ ಟ್ರಾಫಿಕ್ಕಿನ ಚಕ್ರವ್ಯೂಹವನ್ನು ಮೊದಲೇ ಅಂದಾಜಿಸಿ, ಆಫೀಸ್ ಸಂಕೀರ್ಣದಲ್ಲೇ ಉಳಿದಿದ್ದ ನಮ್ಮಂಥವರ ಪರಿಸ್ಥಿತಿಯು ಕೊಂಚವಾದರೂ ವಾಸಿಯಿತ್ತು ಎಂದರೆ ಅತಿಶಯೋಕ್ತಿಯಾಗಲಿಕ್ಕಿಲ್ಲ. ಆದರೆ ಮುಂದಿನ ನಡೆಗಳನ್ನು ಅಂದಾಜಿಸಲು ಬಿತ್ತರವಾಗುತ್ತಿದ್ದ ಬ್ರೇಕಿಂಗ್ ನ್ಯೂಸ್ ಗಳನ್ನು ಅವಲಂಬಿಸದೆ ಬೇರೆ ದಾರಿಗಳಿರಲಿಲ್ಲ. ಹೀಗಾಗಿ ತಾಸುಗಳು ಕಳೆದರೂ, ಕ್ಷಣಕ್ಷಣದ ಮಾಹಿತಿಗಳು ಲಭ್ಯವಿದ್ದರೂ ಮುಳುಗುತ್ತಿದ್ದ ಶಹರದೊಳಗೆ ಕಾಲಿಡುವ ಸಾಹಸಕ್ಕಿಳಿಯುವುದು ಅಪಾಯಕಾರಿ ನಡೆಯೇ ಆಗಿತ್ತು. ಕ್ಯಾಬ್ ಜಾಲವು ಸಂಪೂರ್ಣವಾಗಿ ಹಳ್ಳಹಿಡಿದು ಪ್ರಯಾಣಿಕರು ರಸ್ತೆಯಲ್ಲೇ ಬಾಕಿಯಾಗಿದ್ದರು. ನಿತ್ಯೋಪಯೋಗಿ ಬಳಕೆಯ ಆಪ್ ಗಳ ವೆಬ್ ಸರ್ವರುಗಳು ಮಕಾಡೆ ಮಲಗಿದ್ದವು. ಹಠಾತ್ತನೆ ಮೆಟ್ರೋ ಎಂಬುದು ನೆಚ್ಚಿಕೊಳ್ಳಬಹುದಾದ ಕೊನೆಯ ಮತ್ತು ಏಕೈಕ ಸಾರಿಗೆ ವ್ಯವಸ್ಥೆಯಾಗಿ ಹೊರಹೊಮ್ಮಿತ್ತು. ಇನ್ನು ನಿಧಾನವಾಗಿ ಎತ್ತರಕ್ಕೆ ಏರುತ್ತಿದ್ದ ನೀರಿನ ಮಟ್ಟದಿಂದಾಗಿ ಪುಟ್ಟ ಕಾರುಗಳು ನಿಂತಲ್ಲೇ ಕೆಟ್ಟುಹೋಗುತ್ತಾ ಗಾಯದ ಮೇಲೆ ಬರೆ ಎಳೆದಂತಹ ಪರಿಸ್ಥಿತಿಯು ಕೂಡ ಸೃಷ್ಟಿಯಾಗಿತ್ತು.</p>



<p>************</p>



<p>ಇದು ಎನ್.ಸಿ.ಆರ್ ಪ್ರದೇಶದಲ್ಲಿ ಇತ್ತೀಚೆಗೆ ಬಂದು ಹೋದ ಒಂದು ಮಿನಿ ಮಳೆಯ ಕತೆ.</p>



<p>ಮಿನಿ ಮಳೆಯೊಂದು ಹೀಗೆ ತಂದಿಟ್ಟ ಅವಾಂತರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಹೋದರೆ ಇದನ್ನೊಂದು ಮಹಾಮಳೆ ಅಂತಲೂ ಕರೆಯಬಹುದು. ನಗರದ ಕೊಂಚವೂ ಉತ್ಪ್ರೇಕ್ಷೆಯಿಲ್ಲದ ಸತ್ಯಕತೆಯೊಂದು ಅದ್ಯಾವ ಮಟ್ಟಿನಲ್ಲಿ ರೋಚಕವಾಗಿ, ಸಿನಿಮೀಯವಾಗಿ ಓದಿಸಿಕೊಂಡು ಹೋಗುತ್ತದೆ ನೋಡಿ! ನನಗನಿಸುವಂತೆ ಮಹಾನಗರವಾಸಿಗಳಲ್ಲಿ ಬಹುತೇಕರಿಗೆ ಇಂಥಾ ಅನುಭವಗಳು ಒಂದಲ್ಲ ಒಂದು ಬಾರಿ ಖಂಡಿತ ಆಗಿರುತ್ತವೆ. ಮಜಾಕ್ ಅನಿಸುವ ಕೂಡ ಒಂದರ್ಧ ತಾಸಿನ ಮಳೆಯೂ ಕೂಡ ಅಚಾನಕ್ಕಾಗಿ ಮಹಾಮಳೆ ಎಂದನ್ನಿಸತೊಡಗುತ್ತದೆ. ವಿಪರ್ಯಾಸವೆಂದರೆ ಇಂತಹ ಘಟನೆಗಳು ನಮ್ಮ ನಡುವೆ ಕಾಲಾಂತರದಲ್ಲಿ ಸಾಮಾನ್ಯವಾಗುತ್ತಾ ಹೋಗಿರುವುದು.</p>



<p><mark style="background-color:rgba(0, 0, 0, 0)" class="has-inline-color has-vivid-red-color"><strong><sub>ಹಿಂದಿನ ಲೇಖನ ಓದಿದ್ದೀರಾ ?</sub></strong>   <a href="https://peepalmedia.com/?page_id=26420" data-type="page" data-id="26420"><sub>“ಬದುಕಿನ ಕೊಲಾಜ್ ಚಿತ್ರಪಟಗಳು”</sub></a></mark></p>



<p>ಮುಂಬೈನಲ್ಲೂ ವರ್ಷಕ್ಕೊಂದೆರಡು ಬಾರಿ ಹೀಗಾಗುತ್ತದೆ. ಸಿಕ್ಕಸಿಕ್ಕಲ್ಲಿ ನೀರು ತುಂಬಿಕೊಂಡು, ಪ್ರವಾಹ ಪರಿಸ್ಥಿತಿಯೊಂದು ಉದ್ಭವವಾಗಿ ಜನಜೀವನವು ಸಂಪೂರ್ಣವಾಗಿ ಅಸ್ತವ್ಯಸ್ತವಾಗುತ್ತದೆ. ಆಗ ಸುದ್ದಿವಾಹಿನಿಗಳು ಬ್ರೇಕಿಂಗ್ ನ್ಯೂಸ್ ಎಂದು ಅರಚುತ್ತವೆ. ಮಹಾನಗರಪಾಲಿಕೆಗಳು ಎಲ್ಲಿ ಸತ್ತಿವೆ ಎಂದು ಪತ್ರಿಕೆಗಳ ಮುಖಪುಟಗಳು ಅಬ್ಬರಿಸುತ್ತವೆ. ಹಲವು ಇಲಾಖೆಗಳ ಅದೆಷ್ಟೋ ಅಧಿಕಾರಿಗಳನ್ನು ರಾತ್ರೋರಾತ್ರಿ ತುರ್ತುಸಭೆಗಳ ಹೆಸರಿನಲ್ಲಿ ಜಾಗರಣೆ ಮಾಡಿಸಲಾಗುತ್ತದೆ. ಒಂದೆರಡು ದಿನಗಳ ಬಳಿಕ ಮೂಗಿನ ಮಟ್ಟದವರೆಗೆ ಏರಿದ್ದ ನೀರು ಇಳಿದುಹೋದ ನಂತರ ಎಲ್ಲವೂ ಮತ್ತೆ ಯಥಾಸ್ಥಿತಿಗೆ ಬರುತ್ತದೆ. ಮತ್ತದೇ ಪ್ರಹಸನಗಳು ಮುಂದಿನ ವರ್ಷ ಯಾವುದೇ ಪಶ್ಚಾತ್ತಾಪದ ಭಾವನೆಗಳಿಲ್ಲದೆ ಪುನರಾವರ್ತನೆಗೊಳ್ಳುತ್ತವೆ!</p>



<p>ನಮ್ಮದು ಮಾಡೆಲ್ಲುಗಳ ಯುಗ. ನಮ್ಮಲ್ಲಿ ಸಿದ್ಧ ಮಾದರಿಗಳು ಜನಪ್ರಿಯವಾಗುವುದೂ ಹೆಚ್ಚು. ಅವುಗಳನ್ನು ಸಿದ್ಧಸೂತ್ರದಂತೆ ಬಹುಬೇಗನೆ ಒಪ್ಪಿಕೊಂಡು ಮುನ್ನಡೆಯುವುದೂ ಹೆಚ್ಚು. ಬಹುಷಃ ಅದು ಮಾನವನ ಯೋಚನಾವಿಧಾನವೂ ಆಗಿರಬಹುದು. ವಿಚಿತ್ರವೆಂದರೆ ನಮ್ಮ ನಡುವಿನ ಬಹಳಷ್ಟು ಜನಪ್ರಿಯ ಮಾಡೆಲ್ಲುಗಳು ತಮ್ಮ ಅಸಲಿ ಉಪಯುಕ್ತತೆಗಿಂತ, ತಮ್ಮ ಸುತ್ತಲಿನ ಗ್ಲಾಮರ್ ಪ್ರಭಾವಳಿಯಿಂದ ಜನಪ್ರಿಯವಾಗಿದ್ದೇ ಹೆಚ್ಚು. ಉದ್ಯಮಶೀಲತೆ, ಲಾಬಿ, ರಾಜಕೀಯ ಲಾಭನಷ್ಟಗಳು, ಜಾಗತಿಕ ಮಾರುಕಟ್ಟೆ&#8230; ಹೀಗೆ ಹಲವು ನಿರ್ಣಾಯಕ ಅಂಶಗಳು ಇವುಗಳನ್ನು ನಮಗರಿವಿಲ್ಲದಂತೆ ವ್ಯವಸ್ಥಿತವಾಗಿ ನಡೆಸುತ್ತಿರಬಹುದು. ಹೀಗಾಗಿಯೇ ನಮ್ಮ ನಡುವಿನ ಮಹಾನಗರಿಗಳು ಬಹುತೇಕ ಒಂದೇ ರೀತಿ ಕಾಣುತ್ತವೆ. ಅದ್ದೂರಿ ಶಾಪಿಂಗ್ ಮಾಲ್ ಗಳ ಜಾತ್ರೆಯಂತೆ, ಫ್ಲೈ-ಓವರುಗಳ ಕಾಂಕ್ರೀಟು ಕಾಡಿನಂತೆ, ಅಗಲ ರಸ್ತೆಗಳ ಸಮುದ್ರದಂತೆ ಮತ್ತು ಅಸಂಖ್ಯಾತ ವಾಹನಗಳ ಗೊಂದಲನಗರಿಗಳಂತೆ. ಎಲ್ಲದಕ್ಕೂ ಒಂದೇ ಚಹರೆ! ಇವುಗಳಿಗೆ ನಾವು ಸ್ಮಾರ್ಟ್‍ಸಿಟಿಗಳೆಂದು ಆಕರ್ಷಕ ಹೆಸರನ್ನೂ ಇಟ್ಟಿದ್ದೇವೆ.</p>



<p>ಆದರೆ ಪ್ರಕೃತಿಯು ಹೀಗೆ ಚಿಕ್ಕದಾಗಿ ಮುನಿಸಿಕೊಂಡಾಗಲೇ ಮಾನವ ನಿರ್ಮಿತ ನಗರಗಳ ಬಣ್ಣಗಳು ಆಗಾಗ ಕಳಚಿ ಬೀಳುತ್ತವೆ. ಸ್ಮಾರ್ಟ್ ಕಿರೀಟವು ಅಚಾನಕ್ಕಾಗಿ ಭಾರವೆನಿಸತೊಡಗುತ್ತದೆ. ಒಟ್ಟಿನಲ್ಲಿ ಮಹಾನಗರಗಳ ಹಣೆಬರಹವೇ ಇಷ್ಟೆಂದು ನಗರವಾಸಿಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಒಪ್ಪಿಕೊಂಡು ಬಿಟ್ಟಿದ್ದೇವೆ. ಹೀಗಾಗಿ ಹೊಸದಾಗಿ ಹುಟ್ಟಿಕೊಂಡ ನಗರಗಳಲ್ಲಿ ಹಳೆಯ ಸಮಸ್ಯೆಗಳು ಕಾಡತೊಡಗಿದಾಗ ನಮಗೆ ಅಚ್ಚರಿಯೂ ಆಗುವುದಿಲ್ಲ. ಕನಿಷ್ಠಮಟ್ಟದ ಹಳಹಳಿಕೆಯೂ ಮೂಡುವುದಿಲ್ಲ.</p>



<p>ಶಾರೂಖ್ ಹೇಳುವುದು ಸತ್ಯ: &#8220;ಬಡೇ ಬಡೇ ಶಹರ್ ಮೇ ಐಸೀ ಛೋಟೀ ಛೋಟೀ ಬಾತೇಂ ಹೋತೀ ರೆಹ್ತೀ ಹೈ!&#8221;</p>



<p></p>



<p><strong><mark><mark style="background-color:#ffffff" class="has-inline-color has-vivid-red-color">ಪ್ರಸಾದ್ ನಾಯ್ಕ್</mark></mark></strong></p>



<p><sub>ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಇವರು<a> </a>ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</sub></p>



<p><strong><mark style="background-color:rgba(0, 0, 0, 0)" class="has-inline-color has-vivid-red-color"><sub>ಹಿಂದಿನ   ಲೇಖನಗಳನ್ನು  ಓದಿದ್ದೀರಾ ?</sub>&nbsp;</mark></strong></p>



<p><a href="https://peepalmedia.com/metropolis-city-vs-ambition/"><mark style="background-color:rgba(0, 0, 0, 0)" class="has-inline-color has-vivid-red-color"><sub>“ಮಹಾನಗರ Vs. ಮಹತ್ವಾಕಾಂಕ್ಷೆ”</sub></mark></a><a href="https://peepalmedia.com/?page_id=25325"></a></p>



<p><a href="https://peepalmedia.com/?page_id=25336"><sub><mark style="background-color:rgba(0, 0, 0, 0)" class="has-inline-color has-vivid-red-color">“ಕೂತು ಕೂತು ಕೆಟ್ಟವರು”</mark></sub></a><a href="https://peepalmedia.com/kootu-kootu-kettavaru/"><sub><mark style="background-color:rgba(0, 0, 0, 0)" class="has-inline-color has-vivid-red-color">https://peepalmedia.com/kootu-kootu-kettavaru/</mark></sub></a></p>



<p></p>



<p></p>



<p></p>
]]></content:encoded>
					
		
		
			</item>
		<item>
		<title>&#8220;ಬದುಕಿನ ಕೊಲಾಜ್ ಚಿತ್ರಪಟಗಳು&#8221;</title>
		<link>https://peepalmedia.com/collage-pictures-of-life/</link>
		
		<dc:creator><![CDATA[Peepal Media]]></dc:creator>
		<pubDate>Fri, 11 Aug 2023 13:04:26 +0000</pubDate>
				<category><![CDATA[ಲೈಫ್‌ ಸ್ಟೈಲ್‌]]></category>
		<category><![CDATA[india]]></category>
		<category><![CDATA[kannada]]></category>
		<category><![CDATA[karnataka]]></category>
		<category><![CDATA[peepal]]></category>
		<category><![CDATA[peepalmedia]]></category>
		<guid isPermaLink="false">https://peepalmedia.com/?p=25319</guid>

					<description><![CDATA[ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ. ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ! &#8211; ʼಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ ಪ್ರಸಾದ್‌ ನಾಯ್ಕ್, ದೆಹಲಿ. ಹೆಸರು ನೆನಪಾಗದ ಚಿತ್ರವೊಂದರ ಸನ್ನಿವೇಶ. &#8220;ನೀನು ನಿಜವಾಗಲೂ ಸುಖವಾಗಿದ್ದೀಯಾ?&#8221; ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ಹುಡುಗ ಕೇಳುತ್ತಿದ್ದಾನೆ. ಅವಳು ಒಂದು ಕ್ಷಣ ತಡವರಿಸುತ್ತಾಳೆ. ಇಂಥದ್ದೊಂದು ಪ್ರಶ್ನೆಯನ್ನು ಈವರೆಗೆ ಯಾರೂ ಅವಳಿಗೆ ಕೇಳಿದ್ದಿಲ್ಲ. ಎಲ್ಲರೂ ಅವೇ ಕ್ಲೀಷೆ ಮಾದರಿಯ ನೀರಸ [&#8230;]]]></description>
										<content:encoded><![CDATA[
<p><strong>ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ. ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ! &#8211;</strong> <strong>ʼ<mark style="background-color:rgba(0, 0, 0, 0)" class="has-inline-color has-vivid-red-color">ಮೆಟ್ರೋ ಟೈಮ್ಸ್‌ʼ ಅಂಕಣದಲ್ಲಿ ಪ್ರಸಾದ್‌ ನಾಯ್ಕ್, ದೆಹಲಿ.</mark></strong></p>



<p>ಹೆಸರು ನೆನಪಾಗದ ಚಿತ್ರವೊಂದರ ಸನ್ನಿವೇಶ.</p>



<p>&#8220;ನೀನು ನಿಜವಾಗಲೂ ಸುಖವಾಗಿದ್ದೀಯಾ?&#8221;</p>



<p>ಜೊತೆಯಲ್ಲಿ ಹೆಜ್ಜೆ ಹಾಕುತ್ತಿರುವ ಹುಡುಗ ಕೇಳುತ್ತಿದ್ದಾನೆ. ಅವಳು ಒಂದು ಕ್ಷಣ ತಡವರಿಸುತ್ತಾಳೆ. ಇಂಥದ್ದೊಂದು ಪ್ರಶ್ನೆಯನ್ನು ಈವರೆಗೆ ಯಾರೂ ಅವಳಿಗೆ ಕೇಳಿದ್ದಿಲ್ಲ. ಎಲ್ಲರೂ ಅವೇ ಕ್ಲೀಷೆ ಮಾದರಿಯ ನೀರಸ ಪ್ರಶ್ನೆಗಳನ್ನು ಕೇಳುವವರು. ತಮ್ಮ ಲಾಭ, ಅನುಕೂಲಗಳನ್ನು ನೋಡಿಕೊಂಡು ಏನೇನೋ ಕೇಳುವವರು. ಖಾಸಗಿ ಬದುಕಿನೊಳಗೆ ಇಣುಕಿ ನೋಡುವ ಕೆಟ್ಟ ಕುತೂಹಲದಿಂದಾಗಿ ನಿರುಪದ್ರವಿ ತನಿಖೆಯ ಧಾಟಿಯಲ್ಲಿ ಕೇಳುವವರು.</p>



<p>ನಿನಗೆ ವರ್ಷಕ್ಕೆಷ್ಟು ಪ್ಯಾಕೇಜ್?</p>



<p>ಬಾಯ್ ಫ್ರೆಂಡ್ ಇದ್ದಾನಾ?</p>



<p>ನಾನು ಇತ್ತೀಚೆಗೆ ಇಟಲಿ ಸುತ್ತಾಡಿ ಬಂದೆ. ನೀನೆಲ್ಲಿಗೆ ಹೋದೆ?</p>



<p>ಎಷ್ಟು ಶೇರು ಖರೀದಿಸಿದೆ?</p>



<p>ರೀಲ್ಸ್ ಯಾಕೆ ಮಾಡ್ತಿಲ್ಲ?</p>



<p>ವಾಟ್ಸಾಪ್ ನಂಬರ್ ಕೊಡ್ತೀಯಾ?</p>



<p>ಯುವರ್ ಪ್ಲೇಸ್ ಆರ್ ಮೈ ಪ್ಲೇಸ್?</p>



<p>ಎಲ್ಲಾ ಇಂಥವೇ!</p>



<p>ಅಂಥದ್ದರಲ್ಲಿ ಇವನೊಬ್ಬ ನಿನಗೆ ಬದುಕಿನಲ್ಲಿ ಸಂತಸ ಕೊಡುವ ಸಂಗತಿಗಳು ಯಾವುದೆಂದು ಕೇಳುತ್ತಿದ್ದಾನೆ. ನಿಜವಾಗಲೂ ಖುಷಿಯಾಗಿದ್ದೀಯಾ ಎಂದು ಕೇಳುತ್ತಾನೆ. ಯಾವ ಚಟುವಟಿಕೆಗಳನ್ನು ಮಾಡುತ್ತಾ ನೀನು ಕಳೆದುಹೋಗುತ್ತೀಯಾ ಎಂದು ಕೇಳುತ್ತಾನೆ. ಒಂದೆರಡು ಪದಗಳಲ್ಲಿ ಇವುಗಳಿಗೆ ಉತ್ತರಿಸುವುದಾದರೂ ಹೇಗೆ? ಬೆರಳೆಣಿಕೆಯ ಪದಗಳಲ್ಲಿ ಅಂತರಂಗವನ್ನು ಹೇಗೆ ಬಿಚ್ಚಿಡುವುದು?</p>



<p>ನಾನು ನಿಜವಾಗಲೂ ಖುಷಿಯಾಗಿದ್ದೇನಾ ಎಂದು ಯೋಚಿಸುತ್ತಾಳೆ ಅವಳು. ಕೆಲ ಉತ್ತರಗಳು ಅಷ್ಟು ಬೇಗ ಸಿಗುವಂಥದ್ದಲ್ಲ!</p>



<p>********</p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಚಿತ್ರ 1:</mark></strong></p>



<p>ಎಂದಿನಂತೆ ಅದೂ ಒಂದು ದಿನ.</p>



<p>ಅದೊಂದು ದೊಡ್ಡದಾದ ಫಲಕವು ಥಟ್ಟನೆ ನನ್ನನ್ನು ಆಕರ್ಷಿಸಿತ್ತು. ಇಡೀ ನಗರವನ್ನು ಕಾಯುತ್ತಿದೆಯೇನೋ ಎಂಬಂತೆ ಸಾಕಷ್ಟು ಎತ್ತರದಲ್ಲಿ ಕಾಣುತ್ತಿದ್ದ, ಮಿನಿ ಟವರಿನಂತಿದ್ದ ಅಗಲವಾದ ಜಾಹೀರಾತು ಫಲಕ. ಬೀದಿಯ ಅಂದಗೆಡಿಸಲು ಜಾಹೀರಾತು ಫ್ಲೆಕ್ಸ್ ಒಂದಿದ್ದರೆ ಸಾಕು. ಅದರಲ್ಲೂ ದಿಲ್ಲಿಯಂತಹ ಮೆಟ್ರೋ ಸಿಟಿಗಳಲ್ಲಿ ಹಾಕಲಾಗುವ ಜಾಹೀರಾತು ಫಲಕಗಳು ದೈತ್ಯ ಗಾತ್ರದ್ದಾಗಿರುತ್ತವೆ. ರಸ್ತೆ, ಫ್ಲೈ-ಓವರ್, ಮೆಟ್ರೋ ರೈಲು&#8230; ಹೀಗೆ ಎಲ್ಲೆಡೆ ಸಾಗುವ ವ್ಯಕ್ತಿಗೂ ಸ್ಪಷ್ಟವಾಗಿ ಕಾಣುವಷ್ಟು. ತನ್ನ ಚಮಕ್-ಧಮಕ್ಕಿನಿಂದ ಕಣ್ಣಿಗೆ ರಾಚುವಷ್ಟು.</p>



<p>ಅಷ್ಟೇ ಆಗಿದ್ದಲ್ಲಿ ಆ ಫಲಕವೂ ಹತ್ತರಲ್ಲಿ ಹನ್ನೊಂದನೆಯದಾಗಿ ಮರೆತು ಹೋಗುತ್ತಿತ್ತೇನೋ. ಆದರೆ ಅದೊಂದು ಜಾಹೀರಾತು ಫಲಕವು ವಿಶೇಷವಾಗಿ ಗಮನ ಸೆಳೆಯಲು ಕಾರಣಗಳೂ ಇದ್ದವು. ಮೊದಲನೆಯದಾಗಿ ಇನ್ನೇನು ಬಿಡುಗಡೆಯಾಗಲಿರುವ ಹೊಸ ಪುಸ್ತಕವೊಂದರ ಜಾಹೀರಾತು ಆಗಿತ್ತದು. ಪುಸ್ತಕಗಳಿಗೆ ಈ ಮಟ್ಟಿನ ಪ್ರಚಾರ ಕೊಡುವುದನ್ನು ನಮ್ಮ ದೇಶದಲ್ಲಿ ನಾನು ಅಷ್ಟಾಗಿ ನೋಡಿದ ಹಾಗಿಲ್ಲ. ಅಲ್ಲದೆ ಅಡಿಬರಹ, ತಲೆಬರಹ, ಬೇರ್ಯಾವ ಬರಹ-ಲೇಬಲ್ಲುಗಳಿಲ್ಲದೆ ಕೇವಲ ಮುಖಪುಟವನ್ನಷ್ಟೇ ತನ್ನಲ್ಲಿ ತುಂಬಿಕೊಂಡಿದ್ದ ಜಾಹೀರಾತು ಫಲಕ ಬೇರೆ. ಕಪ್ಪು ಹಿನ್ನೆಲೆಯ ಅಷ್ಟು ದೊಡ್ಡ ಫ್ರೇಮಿನಲ್ಲಿ ಕಪ್ಪು ಬಣ್ಣದ ಮುಖಪುಟವೊಂದನ್ನು ಬಿಟ್ಟು ಬೇರೇನಿಲ್ಲ.</p>



<p>ಅಂದಹಾಗೆ ಅದು ಇಂದ್ರಾಣಿ ಮುಖರ್ಜಿಯವರು ಬರೆದಿರುವ &#8220;Unbroken&#8221; ಕೃತಿಯ ಮುಖಪುಟ. ದೇಶದಾದ್ಯಂತ ಕುತೂಹಲವನ್ನು ಹುಟ್ಟಿಸಿದ್ದ ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ಇಂದ್ರಾಣಿಯೇ ಈ ಲೇಖಕಿ. ತನ್ನ ಮಗಳು ಶೀನಾಳನ್ನು ಕೊಲ್ಲಿಸಿದ ಆರೋಪದ ಮೇಲೆ ಕೆಲಕಾಲ ಜೈಲಿಗೂ ಹೋಗಿಬಂದವರು. ಮೀಡಿಯಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದ ಇಂದ್ರಾಣಿ ಮುಖರ್ಜಿ ಈ ಪ್ರಕರಣದಿಂದಾಗಿ ಅಷ್ಟೇ ಕುಖ್ಯಾತಿಯನ್ನು ಕೂಡ ಪಡೆದಿದ್ದರು. ಸದರಿ ಪ್ರಕರಣವೂ ಸೇರಿದಂತೆ, ತನ್ನ ಬದುಕಿನ ಹಲವು ಏಳುಬೀಳುಗಳ ಕತೆಗಳನ್ನು ಈ ಕೃತಿಯಲ್ಲಿ ಲೇಖಕಿ ದಾಖಲಿಸಿದ್ದಾರಂತೆ.</p>



<p>ಅಚ್ಚರಿಯೆಂದರೆ ನನ್ನ ಸಹೋದ್ಯೋಗಿಯೊಬ್ಬ ಅದೇ ದಾರಿಯಲ್ಲಿ ನಿತ್ಯವೂ ಸಾಗುವವನು. ಅಷ್ಟು ದಿನಗಳಾದರೂ ಅದೊಂದು ಜಾಹೀರಾತು ಫಲಕವನ್ನು ಅವನು ಗಮನಿಸಿಯೇ ಇರಲಿಲ್ಲವಂತೆ. ಹೌದು, ಇದು ಎಲ್ಲ ಜಾಹೀರಾತು ಫಲಕಗಳಂತಿಲ್ಲ ಎಂಬುದನ್ನು ನಂತರ ಅವನು ಒಪ್ಪಿಕೊಂಡಿದ್ದ. ಸಾಂಪ್ರದಾಯಿಕ ಶೈಲಿಯಿಂದ ಹೊರತಾಗಿದ್ದ ಆ ಫಲಕವು ತನ್ನ ಅಷ್ಟೆತ್ತರದ ಗಾತ್ರದ ಹೊರತಾಗಿಯೂ ಅವನ ಗಮನವನ್ನು ಸೆಳೆದಿರಲಿಲ್ಲ. ಕ್ಯಾಬಿನಲ್ಲಿ ಕೂತು ಪ್ರಯಾಣಿಸುವಾಗಲೂ ನಾವು ಸ್ಮಾರ್ಟ್‍ಫೋನುಗಳಲ್ಲಿ ಮುಳುಗಿರುವ ಪರಿಣಾಮವಾಗಿ ಸುತ್ತಮುತ್ತಲಿನ ಜಗತ್ತನ್ನು ಗಮನಿಸುವ ಅಭ್ಯಾಸವೇ ಹೊರಟುಹೋಗಿದೆ ಎಂದೂ ಅವನು ಹೇಳುತ್ತಿದ್ದ.</p>



<p>ಇದು ಬಹುಮಟ್ಟಿಗೆ ಸತ್ಯವೂ ಹೌದು. ನನ್ನನ್ನೂ ಸೇರಿಸಿ!</p>



<p>********</p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಚಿತ್ರ 2</mark></strong></p>



<p>ಪ್ರವೀಣ್ ರಾಜಸ್ಥಾನ ಮೂಲದ ಯುವಕ. ತನ್ನ ವೃತ್ತಿಯ ಕಾರಣದಿಂದಾಗಿ ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದು ಮತ್ತು ಅವರೊಂದಿಗೆ ಒಡನಾಡುವುದು ಅವನ ನಿತ್ಯದ ಚಟುವಟಿಕೆಗಳಲ್ಲೊಂದು.</p>



<p>ಪ್ರವೀಣ್ ಸದ್ಯ ದಿಲ್ಲಿಯಲ್ಲಿ ರೈಡಿಂಗ್ ಇನ್ಸ್ಟ್ರಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಸೈಕಲ್ ಓಡಿಸಲು ಬರದಿದ್ದವರು ಇವರ ಬಳಿ ಬಂದು ಸೈಕಲ್ ಓಡಿಸುವುದನ್ನು ಕಲಿಯಬಹುದು. ಅವರು ವೃತ್ತಿಪರ ಸಂಸ್ಥೆಯೊಂದರ ಜೊತೆ ಗುರುತಿಸಿಕೊಂಡಿರುವುದರಿಂದ ಈ ಸೇವೆಗೆ ಇಂತಿಷ್ಟು ಶುಲ್ಕವೂ ಇರುತ್ತದೆ. ಹೀಗೆ ಇಪ್ಪತ್ತು-ಇಪ್ಪತ್ತೆರಡು ವರ್ಷ ಪ್ರಾಯದ ಪ್ರವೀಣ, ವಯಸ್ಸಿನಲ್ಲಿ ತನಗಿಂತ ಮೂರು ಪಟ್ಟು ದೊಡ್ಡವರಿಗೂ ಸೈಕಲ್ ತುಳಿಯುವುದನ್ನು ಕಲಿಸಿದ್ದಾರೆ, ಕಲಿಸುತ್ತಿದ್ದಾರೆ. ಸೈಕಲ್ ಸವಾರಿಯ ಕೌಶಲವನ್ನು ಒಂದು ವೃತ್ತಿಯಾಗಿಸಲೂಬಹುದು ಎಂಬುದನ್ನು ಅವರಿಗೆ ಕಲಿಸಿಕೊಟ್ಟಿದ್ದು ದಿಲ್ಲಿ ಶಹರವಂತೆ. ಇದು ಮಹಾನಗರಿಯ ಮಹಿಮೆ.</p>



<p>ಪ್ರವೀಣರಿಗೆ ರಾಜಸ್ಥಾನದ ಒಂದು ದುರ್ಗಮ ಮೂಲೆಯಲ್ಲಿ ಕೊಂಚ ಜಮೀನಿದೆ. ಆದರೆ ಆ ಪ್ರದೇಶದ ನೀರಿನ ಅಭಾವ ಮಾತ್ರ ದೇವರಿಗಷ್ಟೇ ಪ್ರೀತಿ. ಹೀಗಾಗಿ ಅವರು ದಿಲ್ಲಿಗೆ ಬಂದು ಅಧ್ಯಯನ ಮಾಡುತ್ತಾ, ಸರಕಾರಿ ಇಲಾಖೆಯ ವಿವಿಧ ಪರೀಕ್ಷೆಗಳಿಗಾಗಿ ಸಿದ್ಧರಾಗುತ್ತಿದ್ದಾರೆ. ಈ ಮಧ್ಯೆ ಹೊಟ್ಟೆಪಾಡಿಗಾಗಿ ಸೈಕಲ್ ಸವಾರಿ. ಮಹಾನಗರಿಯು ತನ್ನ ಸ್ವಾವಲಂಬಿ ಬದುಕಿಗಾಗಿ ದಾರಿಯೊಂದನ್ನು ಮಾಡಿಕೊಟ್ಟಿದೆ ಎಂಬ ಬಗ್ಗೆ ಅವರಿಗೆ ಸಮಾಧಾನವಿದೆ.&nbsp;</p>



<p>ಆ ನಿರಾಳತೆಯ ಹೊಳಪನ್ನು ಅವರ ಕಣ್ಣುಗಳಲ್ಲಿ ನಾವು ಕಾಣಬಹುದು.</p>



<p>********</p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಚಿತ್ರ 3</mark></strong></p>



<p>ಕೆಲ ವರ್ಷಗಳ ಹಿಂದೆ ಖ್ಯಾತ ಚಿತ್ರಕಲಾವಿದರಾದ ಬಾದಲ್ ಚಿತ್ರಕಾರ್ ರವರನ್ನು ಸಂದರ್ಶಿಸಲು ಹೋಗಿದ್ದೆ.</p>



<p>ಎಂಭತ್ತರ ಸಾಲಿನಲ್ಲಿದ್ದ ಬಾದಲ್ ರವರಲ್ಲಿ ಬಾಲ್ಯದ ತುಂಟತನವೂ, ಹರೆಯದ ಹುಮ್ಮಸ್ಸೂ ಸಾಕಷ್ಟಿತ್ತು. ಆಗಾಗ ಗಂಟುಮೋರೆ ಹಾಕುತ್ತಿದ್ದ ಪತ್ನಿಯ ಗಲ್ಲವನ್ನು ಚಿವುಟಿ ಆಕೆಯ ಕಾಲೆಳೆಯುವುದರಿಂದ ಹಿಡಿದು, &#8220;ಏನ್ರೀ ನೀವು, ಬರೀ ದಂಡ&#8230; ಒಂದು ಫೋಟೋಗೆ ಪೋಸ್ ಕೊಡಲೂ ಬರುವುದಿಲ್ಲ&#8221; ಎಂದು ಮುಲಾಜಿಲ್ಲದೆ ನನ್ನನ್ನು ಕೀಟಲೆ ಮಾಡುವಷ್ಟರ ಮಟ್ಟಿನ ಎನರ್ಜಿ ಅವರದ್ದು. ಅವರ ಗೂಡಾಗಿರುವ ಪುಟ್ಟ ಕೋಣೆಯೂ ಸೇರಿದಂತೆ ಅವರಿರುವಲ್ಲಿ ಎಲ್ಲೆಲ್ಲೂ ಬಣ್ಣಗಳದ್ದೇ ಸಾಮ್ರಾಜ್ಯ.</p>



<p>ಸ್ವಾರಸ್ಯದ ಸಂಗತಿಯೆಂದರೆ ಬಾದಲ್ ಚಿತ್ರಕಾರ್ ಕೆಲವೇ ಕೆಲವು ನಿಮಿಷಗಳಲ್ಲಿ ಬಿಳಿಹಾಳೆಯ ಮೇಲೆ ಚಂದಚಂದದ ವರ್ಣಚಿತ್ರಗಳನ್ನು ಬಿಡಿಸಬಲ್ಲವರು. ಅಂದು ಕೂಡ ಇವರ ಪೋಸ್ಟರುಗಳನ್ನು ಕೊಂಡೊಯ್ಯಲೆಂದೇ ತರುಣನೊಬ್ಬ ಬಂದಿದ್ದ. ಏನಿಲ್ಲವೆಂದರೂ ಇಪ್ಪತ್ತೈದರಿಂದ ಮೂವತ್ತು ಪೋಸ್ಟರುಗಳು. ಹೀಗೆ ಇಲ್ಲಿಂದ ಹೊರಟ ಪೋಸ್ಟರ್ ಗಳು ದಿಲ್ಲಿಯ ಕನ್ನಾಟ್ ಪ್ಲೇಸ್ ಸೇರಿದಂತೆ ಹಲವು ಬೀದಿಗಳಲ್ಲಿ ಮಾರಾಟವಾಗುತ್ತವೆ. ಇನ್ನು ದರಗಳು ದುಬಾರಿಯಲ್ಲದ ಪರಿಣಾಮವಾಗಿ ವ್ಯಾಪಾರಕ್ಕೆ ಬರವಿಲ್ಲ.</p>



<p>ಹೀಗೆ, ತಮ್ಮ ಮನೆಗಳನ್ನು ಅಲಂಕರಿಸುವ, ಮನವನ್ನು ಮುದಗೊಳಿಸುವ ಅನಾಮಿಕ ಚಿತ್ರಗಳ ಹಿಂದಿರುವ ಕೈ ಇವರದ್ದು ಎಂಬುದು ಚಿತ್ರಗಳನ್ನು ಆಸ್ವಾದಿಸುವ ಅದೆಷ್ಟೋ ಮಂದಿಗೆ ಗೊತ್ತೇ ಆಗುವುದಿಲ್ಲ.</p>



<p>********</p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಚಿತ್ರ 4</mark></strong></p>



<p>ನಾಲ್ಕು-ಐದನೇ ತರಗತಿಯ ಬಾಲಕಿಯೊಬ್ಬಳು ಹುಮ್ಮಸ್ಸಿನಿಂದ ಭಾಷಣ ಮಾಡುತ್ತಿದ್ದಾಳೆ.</p>



<p>ಅದು ಕೇಂದ್ರ ಜಲ ಸಂಪನ್ಮೂಲ ಇಲಾಖೆಯ ಒಂದು ಕಾರ್ಯಕ್ರಮ. ಸ್ಥಳೀಯ ಶಾಲಾ ಮಕ್ಕಳಿಗಾಗಿ ಭಾಷಣ ಸ್ಪರ್ಧೆ. ಹೀಗೆ ಸ್ಪರ್ಧಿಯಾಗಿರುವ ಈ ಬಾಲಕಿ ಉತ್ಸಾಹದಿಂದ ತನ್ನ ಭಾಷಣವನ್ನು ಮುಂದುವರಿಸಿದ್ದಾಳೆ. ನಡುವಿನಲ್ಲೇನೋ ಗೊಂದಲವಾಗಿ ಬಾಲಕಿಯ ಭಾಷಣವು ಅಚಾನಕ್ಕಾಗಿ ಹಳಿ ತಪ್ಪಿಬಿಡುತ್ತದೆ. ಹೀಗೆ ಗಾಬರಿ, ಗೊಂದಲ, ಸಭಾಕಂಪನ, ನಿರಾಶೆ&#8230; ಎಲ್ಲವೂ ಒಟ್ಟೊಟ್ಟಿಗೆ ದಾಳಿಯಿಟ್ಟ ಪರಿಣಾಮವಾಗಿ ಬಾಲಕಿ ನಿಂತಲ್ಲೇ ಕಣ್ಣೀರಾಗುತ್ತಾಳೆ. ನಂತರ ಕಾರ್ಯಕ್ರಮದ ಆಯೋಜಕರೇ ವೇದಿಕೆಗೆ ಬಂದು, ಅವಳನ್ನು ಸಂತೈಸಿ ಸಭಿಕರಿದ್ದೆಡೆಗೆ ಕರೆದೊಯ್ಯಬೇಕಾಗುತ್ತದೆ.</p>



<p>ಅದು ಅವಳ ದಿನವಾಗಿರಲಿಲ್ಲ. ಸಹಜವಾಗಿ ಅವಳಿಗೆ ಬಹುಮಾನವೂ ಬರಲಿಲ್ಲ. ಆದರೆ ಸಭಾಕಾರ್ಯಕ್ರಮದ ನಂತರ ಕೆಲ ಅತಿಥಿಗಳು ಮತ್ತು ತೀರ್ಪುಗಾರರು ಬಂದು ಕಣ್ಣೀರಾಗಿದ್ದ ಅವಳನ್ನು ಮತ್ತೆ ಸಂತೈಸುತ್ತಾರೆ. ಇರ್ಲಿ ಬಿಡು ಎಂದು ಬೆನ್ನುತಟ್ಟಿ, ಹುರಿದುಂಬಿಸುವಂತೆ ಅವಳೊಂದಿಗೆ ಗ್ರೂಪ್ ಫೋಟೋ ತೆಗೆಸಿಕೊಳ್ಳುತ್ತಾರೆ. ಇಲ್ಲೇನಾಗುತ್ತಿದೆ ಎಂದು ಅಚ್ಚರಿಯಿಂದ ಬರುವ ಕೆಲ ಆಸಕ್ತರು ಕೂಡ ಅವಳೊಂದಿಗೆ ಮತ್ತಷ್ಟು ಸೆಲ್ಫಿಗಳನ್ನು ತೆಗೆದುಕೊಳ್ಳುತ್ತಾರೆ. ಅಂತೂ ಸ್ಪರ್ಧೆಯ ದಿನವೊಂದು, ಒಳಗೊಳ್ಳುವಿಕೆಯ (inclusive) ಒಂದು ಸುಂದರ ಅನುಭವದಲ್ಲಿ ಕೊನೆಯಾಗುತ್ತದೆ.&nbsp;&nbsp;</p>



<p>ಆ ಸುಂದರ ದಿನವು ಬಹಳ ಕಾಲ ಅವಳ ನೆನಪಿನಲ್ಲಿ ಉಳಿಯಲಿದೆ ಎಂಬ ನಂಬಿಕೆ ನನ್ನದು.</p>



<p>********</p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಉಪಸಂಹಾರ</mark></strong></p>



<p>&#8220;ನೀನು ನಿಜವಾಗಲೂ ಸುಖವಾಗಿದ್ದೀಯಾ?&#8221;, ಅವನು ಮತ್ತೆ ಕೇಳುತ್ತಾನೆ.</p>



<p>&#8220;ಈ ಕ್ಷಣವಂತೂ ಸೊಗಸಾಗಿದೆ. ಹೀಗಾಗಿ ಸಂತೋಷವಾಗಿದ್ದೇನೆ ಎನ್ನಲಡ್ಡಿಯಿಲ್ಲ&#8221;, ಎನ್ನುತ್ತಾಳವಳು.</p>



<p>ಅವನು ಮೆಚ್ಚಿ ನಗುತ್ತಾನೆ. ಇವಳೂ ನಾಚಿ ಮುಗುಳ್ನಗುತ್ತಾಳೆ.</p>



<p>ಮಾತಿಲ್ಲದೆಯೂ ಉತ್ತರಗಳು ವಿನಿಮಯವಾಗಿರುತ್ತವೆ.</p>



<p></p>



<p><strong><mark style="background-color:rgba(0, 0, 0, 0)" class="has-inline-color has-vivid-red-color">ಪ್ರಸಾದ್ ನಾಯ್ಕ್</mark></strong></p>



<p class="has-text-align-left"><sub><strong><mark style="background-color:rgba(0, 0, 0, 0)" class="has-inline-color has-black-color">ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ </mark><a><mark style="background-color:rgba(0, 0, 0, 0)" class="has-inline-color has-black-color">ಪ್ರಸಾದ್ ನಾಯ್ಕ್ </mark></a><mark style="background-color:rgba(0, 0, 0, 0)" class="has-inline-color has-black-color">ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ; ‘ಹಾಯ್ ಅಂಗೋಲಾ’; ಮತ್ತು ‘ಸಫಾ’ ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.</mark></strong></sub></p>



<p></p>



<p><strong><sub>ಹಿಂದಿನ ಸಂಚಿಕೆಗಳನ್ನು ಓದಿದ್ದೀರಾ ?</sub> </strong><a href="https://peepalmedia.com/metropolis-city-vs-ambition/" data-type="post" data-id="24504"><sub>“ಮಹಾನಗರ Vs. ಮಹತ್ವಾಕಾಂಕ್ಷೆ”</sub></a><a href="https://peepalmedia.com/?page_id=25325" data-type="page" data-id="25325"><sub> </sub></a>   </p>



<p>  <a href="https://peepalmedia.com/?page_id=25336" data-type="page" data-id="25336"><sub>“ಕೂತು ಕೂತು ಕೆಟ್ಟವರು”</sub></a><a href="https://peepalmedia.com/kootu-kootu-kettavaru/" data-type="link" data-id="https://peepalmedia.com/kootu-kootu-kettavaru/"><sub>https://peepalmedia.com/kootu-kootu-kettavaru/</sub></a></p>



<p></p>



<p></p>



<p></p>



<p></p>
]]></content:encoded>
					
		
		
			</item>
	</channel>
</rss>
