Thursday, June 13, 2024

ಸತ್ಯ | ನ್ಯಾಯ |ಧರ್ಮ

ಹೋದಲ್ಲೆಲ್ಲ ಆತ್ಮಹತ್ಯೆ ಅಸ್ತ್ರ ಬಳಸುವ ಚೈತ್ರಾ ಗ್ಯಾಂಗ್: ಗೋವಿಂದ ಪೂಜಾರಿ ಕಚೇರಿಯಲ್ಲೂ ಹೈಡ್ರಾಮಾ

ಟಿಕೆಟ್ ವಂಚನೆಯ 5 ಕೋಟಿ ಡೀಲ್ ಪ್ರಕರಣದ ವಿಡಿಯೋ ಸಾಕ್ಷಿಯೊಂದು ಪ್ರಕರಣದ ತನಿಖೆ ವೇಳೆ ಹೊರಬಿದ್ದಿದೆ. ವಂಚಕಿ ಚೈತ್ರ ಕುಂದಾಪುರ ಗ್ಯಾಂಗ್ ಸಂತ್ರಸ್ತ ಗೋವಿಂದ ಪೂಜಾರಿ ಕಚೇರಿಯಲ್ಲಿ ನಡೆಸಿದ್ದಾರೆ ಎನ್ನಲಾದ ಸಂಧಾನದ ಸಿಸಿ ಕ್ಯಾಮರಾದ ವಿಡಿಯೋ ಇದಾಗಿದ್ದು, ಆ ವಿಡಿಯೋದಲ್ಲೂ ಚೈತ್ರ ಗ್ಯಾಂಗ್ ನಡೆಸಿದ ಆತ್ಮಹತ್ಯೆ ನಾಟಕ ಹೊರಬಿದ್ದಿದೆ.

ಹಣ ಕಳೆದುಕೊಂಡ ಸಂಘಪರಿವಾರದ ಕಾರ್ಯಕರ್ತ, ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಟಿಕೆಟ್ ವಂಚನೆಯ ಜಾಲದ ಬಗ್ಗೆ ಅರಿವಾಗುತ್ತಲೇ ಪ್ರಕರಣದ ಪ್ರಮುಖ ಆರೋಪಿಗಳನ್ನು ತನ್ನ ಕಛೇರಿಗೆ ಕರೆಸಿಕೊಂಡಿದ್ದಾರೆ. ಏಪ್ರಿಲ್ 24 ಕ್ಕೆ ಗೋವಿಂದ ಪೂಜಾರಿ ಕಚೇರಿಯಲ್ಲಿ ಸಂಧಾನದ ಮಾತುಕತೆ ನಡೆದಿದೆ. ಈ ಸಂದರ್ಭದಲ್ಲಿ ಗೋವಿಂದ ಬಾಬು ಪೂಜಾರಿ ತಾನು ಕೊಟ್ಟ 5 ಕೋಟಿ ವಾಪಸ್ ಕೊಡಬೇಕೆಂದು ತಾಕೀತು ಮಾಡಿದ್ದಾರೆ.

ಬೆಂಗಳೂರಿನ ಬಂಡೆಪಾಳ್ಯದಲ್ಲಿರುವ ಗೋವಿಂದ ಬಾಬು ಪೂಜಾರಿ ಕಚೇರಿಗೆ ಪ್ರಕರಣದಲ್ಲಿ ಭಾಗಿಯಾದ ಪ್ರಮುಖರನ್ನು ಏಪ್ರಿಲ್ 24 ಕ್ಕೆ ಕರೆಸಲಾಗಿತ್ತು. ಈ ಸಂದರ್ಭದಲ್ಲಿ ಚೈತ್ರಾ, ಗಗನ್, ಪ್ರಸಾದ್ ಬೈಂದೂರು, ಶ್ರೀಕಾಂತ್ ಹಾಗೂ ಪ್ರಮುಖರು ಹಾಜರಿದ್ದರು.

ಈ ಸಂದರ್ಭದಲ್ಲಿ ಚೈತ್ರಾ ಗ್ಯಾಂಗ್ ಮೇಲೆ ತಿರುಗಿ ಬಿದ್ದ ಗೋವಿಂದ ಬಾಬು ಪೂಜಾರಿ “ದುಡ್ಡು ತೆಗೆದುಕೊಂಡು ಮೋಸ ಮಾಡಿದ್ದೀರ. 3 ಕೋಟಿ ಹಣ ಕುಮಾರಕೃಪಾದಲ್ಲಿ ಕೊಟ್ಟಿದ್ದೆ. ನೀವು ಕೇಳಿದಂತೆ ಹಣ ಕೊಟ್ಟರೂ ಕೆಲಸವಾಗಿಲ್ಲ. ದುಡ್ಡು ತೆಗೆದುಕೊಂಡು ನೀವು ಮೋಸ ಮಾಡಿದ್ದೀರ ಅನ್ನೋದು ಗೊತ್ತಾಗಿದೆ. ಮುಂಬೈನಲ್ಲಿ ಸಂತೋಷ್ ಶೆಟ್ಟಿ ಜೊತೆ ಮಾತಾಡಿದ್ದೇನೆ. RsS ಹಿನ್ನೆಲೆಯ ವಿಶ್ವನಾಥ್ ಅನ್ನೋರು ಇದಾರಾ ಇಲ್ವಾ ಎಂಬುದು ನನ್ನ ಪ್ರಶ್ನೆ? ಎಲ್ಲಾ ಕಡೆ ವಿಚಾರಿಸಿದ್ದೀನಿ. ನೀವು ನನಗೆ ಮೋಸ ಮಾಡಿರುವುದು ಸ್ಪಷ್ಟವಾಗಿದೆ” ಎಂದು ಪೂಜಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಕೆ.ಆರ್.ಪುರ ವ್ಯಾಪ್ತಿಯಲ್ಲಿ ಕಬಾಬ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿಯನ್ನು ಚೈತ್ರ ಮತ್ತು ಗ್ಯಾಂಗ್ RSS ಹಾಗೂ BJP ಯ ಪ್ರಭಾವಿ ನಾಯಕರು ಇವರು, ಇವರಿಂದ ಬಿಜೆಪಿ ಟಿಕೆಟ್ ಪಡೆಯಬಹುದು ಎಂದು ಹೇಳಿ ಯಾಮಾರಿಸಲಾಗಿತ್ತು. ಇದನ್ನು ಅರಿತ ಪೂಜಾರಿ, ‘ವಿಶ್ವನಾಥ್ ಅನ್ನೋರು ಯಾರಿಲ್ಲ, ಸತ್ಯ ಒಪ್ಪಿಕೊಳ್ಳಿ.’ ಎಂದು ಗದರಿಸಿದ್ದಾರೆ.

ಆಗ ಅಲ್ಲೇ ಇದ್ದ ಚೈತ್ರ ಕುಂದಾಪುರ ಆಪ್ತ ಗಗನ್ ಕಡೂರಿಗೆ ಚೈತ್ರ ಬೈದಂತೆ ಹೈಡ್ರಾಮ ಸೃಷ್ಟಿ ಮಾಡಿದ್ದಾಳೆ. ಈ ವೇಳೆ ಪೂಜಾರಿ ಎದುರಲ್ಲೇ ಚೈತ್ರ ಹಾಗೂ ಗಗನ್ ಕಡೂರು ನಡುವೆ ಮಾತಿನ ಚಕಮಕಿ ನಡೆದಿದೆ. ಈ ವೇಳೆ 3.5 ಕೋಟಿ ಕೇಳಿದ ನಂತರ ಗಗನ್ ಕಡೂರು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ನಾಟಕವಾಡಿದ್ದು, ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಿಸಿ ಕ್ಯಾಮರಾದಲ್ಲಿ ಪೂಜಾರಿ-ಚೈತ್ರಾ ನಡುವಿನ ಚರ್ಚೆ. ಪೂಜಾರಿ ಮುಂದೆ ಚೈತ್ರಾ ಅಂಡ್ ಟೀಂ ನಾಟಕ. ಗಗನ್ ಕಡೂರು ವಿಷ ಕುಡಿದ ರೀತಿ ನಾಟಕ ಎಲ್ಲವೂ ಸೆರೆಯಾಗಿದ್ದು ಪೊಲೀಸರಿಗೆ ಸಿಕ್ಕ ಮಾಹಿತಿ ಲಭ್ಯವಾಗಿದೆ. ಯಾಮಾರಿಸುವ ಪ್ರತೀ ಸಂದರ್ಭದಲ್ಲಿಯೂ ಚೈತ್ರ ಅಂಡ್ ಗ್ಯಾಂಗ್ ಈ ರೀತಿ ವಿಷ ಕುಡಿದು ಬ್ಲಾಕ್ಮೇಲ್ ಮಾಡುವ ನಾಟಕವಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ‌.

ಪ್ರಕರಣದ ತನಿಖೆ ವೇಳೆಯಲ್ಲೂ ಸೋಪಿನ ನೊರೆ ಬಾಯಲ್ಲಿ ಹಾಕಿಕೊಂಡು ಹೈಡ್ರಾಮ ಸೃಷ್ಟಿ ಮಾಡಿದ್ದು ಇಲ್ಲಿ ನೆನೆಸಿಕೊಳ್ಳಬೇಕು.

Related Articles

ಇತ್ತೀಚಿನ ಸುದ್ದಿಗಳು