Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ಸ್ವಾಮಿಜೀ ಅರೆಸ್ಟ್‌ ಆಗಲಿ ದೊಡ್ಡವ್ರ ಬಂಡವಾಳ ಎಲ್ಲ ಹೊರ ಬರುತ್ತೆ: ಚೈತ್ರಾ ಕುಂದಾಪುರ

ಸ್ವಾಮಿಜೀ ಅರೆಸ್ಟ್‌ ಆಗಲಿ ದೊಡ್ಡವ್ರ ಬಂಡವಾಳ ಎಲ್ಲ ಹೊರ ಬರುತ್ತೆ: ಚೈತ್ರಾ ಕುಂದಾಪುರ

0

ಬೆಂಗಳೂರು: ಬಿಜೆಪಿ ಟಿಕೇಟ್ ಡೀಲ್ ಪ್ರಕರಣದ ವಿಷಯದಲ್ಲಿ ಸ್ವಾಮೀಜಿ ಬಂಧನವಾದರೆ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ ಎಂದು ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರ ಪ್ರತಿಕ್ರಿಯಿಸಿದ್ದಾಳೆ.

ಸಿಸಿಬಿ ಕಚೇರಿ ಮುಂದೆ ಪೊಲೀಸ್ ವಾಹನದಿಂದ ಕೆಳಗಡೆ ಇಳಿಯುತ್ತಿದ್ದಂತೆ ಮಾಧ್ಯಮಗಳ ಕ್ಯಾಮೆರಾ ಮುಂದೆ ಮಾತನಾಡಿದ ಚೈತ್ರಾ, ಸ್ವಾಮೀಜಿ ಬಂಧನವಾಗಲಿ ಆಗ ಎಲ್ಲ ಸತ್ಯ ಹೊರಗಡೆ ಬರುತ್ತದೆ. ಇದರಲ್ಲಿ ದೊಡ್ಡ ದೊಡ್ಡವರ ಹೆಸರು ಕೂಡ ಬಹಿರಂಗವಾಗುತ್ತದೆ. ಇಂದಿರಾ ಕ್ಯಾಂಟೀನ್ ಬಿಲ್ಲಿಗಾಗಿ ಈ ರೀತಿ ಷಡ್ಯಂತ್ರ ಮಾಡಿದ್ದಾರೆ ಎಂದು ಹೇಳಿದ್ದಾಳೆ.

ಚೈತ್ರಾ ಈ ಹೇಳಿಕೆ ನೀಡುವುದರೊಂದಿಗೆ ಈ ಪ್ರಕರಣದಲ್ಲಿ ಶಾಮೀಲಾಗಿರುವ ʼದೊಡ್ಡ ದೊಡ್ಡವರʼ ಬುಡಕ್ಕೂ ಬಿಸಿನೀರು ಹರಿಯಬಹುದಾದ ಸಾಧ್ಯತೆಗಳು ಕಾಣತೊಡಗಿವೆ. ಚೈತ್ರಾ ತನ್ನ ಹೇಳಿಕೆಯಲ್ಲಿ ಈ ದೊಡ್ಡವರ ಹೆಸರುಗಳನ್ನು ಹೇಳಿಲ್ಲವಾದರೂ ಮಾಧ್ಯಮಗಳು ಹಾಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಹೆಸರುಗಳು ಓಡಾಡತೊಡಗಿದ್ದು, ಈ ಉರುಳು ಬಿಜೆಪಿಯ ಕುತ್ತಿಗೆಗೂ ಸುತ್ತಿಕೊ‍ಳ್ಳುವ ಲಕ್ಷಣಗಳು ಕಾಣತೊಡಗಿವೆ.

ಹೊಸಪೇಟೆ ಜಿಲ್ಲೆಯ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಅಭಿನವ ಶ್ರೀ ಹಾಲಶ್ರೀ ಸ್ವಾಮೀಜಿ ಕೂಡ ಈ ಪ್ರಕರಣದಲ್ಲಿ ಇದ್ದು, ಎ3 ಆರೋಪಿಯಾಗಿದ್ದಾನೆ. ಆದ್ರೆ, ಚೈತ್ರಾ ಕುಂದಾಪುರ ಅರೆಸ್ಟ್ ಆಗುತ್ತಿದ್ದಂತೆಯೇ ಸ್ವಾಮೀಜಿ ನಾಪತ್ತೆಯಾಗಿದ್ದಾನೆ. ಮಠಕ್ಕೆ ಬರದೇ ಫೋನ್ ಸಂಪರ್ಕಕ್ಕೆ ಸಿಗದೇ ತಲೆಮರೆಸಿಕೊಂಡಿದ್ದಾನೆ. ಹೀಗಾಗಿ ಸಿಸಿಬಿ ಪೊಲೀಸರು ಸಹ ಸ್ವಾಮೀಜಿ ಬಂಧನಕ್ಕೆ ಬಲೆ ಬೀಸಿದ್ದು, ಆತ ಸಿಕ್ಕ ಬಳಿಕ ಈ ಪ್ರಕರಣ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಲಿವೆ.

ಬೈಂದೂರು ವಿಧಾನಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುತ್ತೇನೆಂದು ಚೈತ್ರಾ ಕುಂದಾಪುರ ವಂಚನೆ ಮಾಡಿದ್ದಳು. ಗಗನ್ ಕಡೂರು, ಮೋಹನ್ ಕುಮಾರ್ ಅಲಿಯಾಸ್ ರಮೇಶ್ ಮತ್ತು ಗ್ಯಾಂಗ್ ಜತೆ ಸೇರಿಕೊಂಡು ಉದ್ಯಮಿ ಬಳಿಯಿಂದ ಬರೋಬ್ಬರಿ 7 ಕೋಟಿ ಹಣ ವಂಚಿಸಿದ್ದರು. ಪ್ರಕರಣದ ಬಗ್ಗೆ ಇಂಚಿಂಚೂ ಮಾಹಿತಿ ಗೊತ್ತಾಗುತ್ತಿದ್ದಂತೆಯೇ ಸಿಸಿಬಿ ಪೊಲೀಸರು ಅಲರ್ಟ್ ಆಗಿ ಎಲ್ಲರನ್ನೂ ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

You cannot copy content of this page

Exit mobile version