ಮೈಸೂರಿನ ಕಲಾಗ್ರಾಮದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಚಾಮರಾಜನಗರ ಸಂಸದ, ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ಐವತ್ತು ವರ್ಷಗಳ ಸುಧೀರ್ಘ ರಾಜಕೀಯ ಜೀವನ ನಡೆಸಿರುವ ವಿ.ಶ್ರೀನಿವಾಸ ಪ್ರಸಾದ್ ಅನಾರೋಗ್ಯದ ಹಿನ್ನೆಲೆಯಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ಮಾತನ್ನು ಹೇಳಿದ್ದಾರೆ.
ಮೂಲ ಕಾಂಗ್ರೆಸ್ಸಿಗರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ನಂತರ ಜೆಡಿಯು ಪಕ್ಷಕ್ಕೆ ಸೇರಿ ಮತ್ತೆ ಕಾಂಗ್ರೆಸ್ ಗೆ ಮರಳಿದ್ದರು. 2013 ರಲ್ಲಿ ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ, ತನ್ನ ರಾಜಕೀಯ ಸಮಕಾಲೀನ ನಾಯಕ ಸಿದ್ದರಾಮಯ್ಯ ನಡುವಿನ ಮಸುಕಿನ ಗುದ್ದಾಟದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ, 2019 ರಲ್ಲಿ ಬಿಜೆಪಿ ಸಂಸದರಾಗಿ ಚಾಮರಾಜನಗರ ಮೀಸಲು ಕ್ಷೇತ್ರದಿಂದ ಆಯ್ಕೆಯಾದರು.
ತನ್ನ ಮೂಲ ಸಿದ್ಧಾಂತದ ವಿರೋಧಿ ಆದರೂ ಬಿಜೆಪಿಯಲ್ಲೇ ಇದ್ದು ಕೊನೆಗೆ ಅಲ್ಲೇ ರಾಜಕೀಯ ನಿವೃತ್ತಿ ಘೋಷಿಸಿದ್ದಾರೆ. ನಿವೃತ್ತಿ ಘೋಷಣೆ ಸಂದರ್ಭದಲ್ಲಿ “ದಲಿತರು ಬಡವರು ಎಂದು ಕಾಯಿನ್ ಮಾಡಿಬಿಟ್ಟಿದ್ದಾರೆ. ಶೋಷಣೆಗೆ ಒಳಗಾದವರು ದಲಿತರು. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷ ಕಳೆದರೂ ಪ್ರತ್ಯೇಕ ಕಾಲೋನಿಗಳಲ್ಲಿ ವಾಸಿಸುತ್ತಿದ್ದಾರೆ. ಸಾಮಾಜಿಕವಾಗಿ ಎಲ್ಲರೊಂದಿಗೆ ಒಟ್ಟಾಗಿ ವಾಸಿಸಲು ಇನ್ನೂ ಸಾಧ್ಯವಾಗಿಲ್ಲದಿರುವುದು ವಿಪರ್ಯಾಸವಾಗಿದೆ. ನಮಗೆ ಡಾ. ಬಿ. ಆರ್ . ಅಂಬೇಡ್ಕರ್ ಮಾರ್ಗದರ್ಶಕರಾಗಿದ್ದಾರೆ. ಕತ್ತಲಿನಲ್ಲಿದ್ದ ನಮಗೆ ಬೆಳಕು ನೀಡಿದವರು ಅಂಬೇಡ್ಕರ್” ಎಂದು ಹೇಳಿದ್ದಾರೆ.
“ಇನ್ನು ನನ್ನ ಸಂಸತ್ ಸ್ಥಾನದ ಅವಧಿ ಮುಗಿಯಲು ಒಂದೂವರೆ ವರ್ಷವಿದ್ದು ಆಗಲೇ ರಾಜಕೀಯ ಜೀವನಕ್ಕೂ 50 ವರ್ಷ ತುಂಬುತ್ತದೆ. ಆಗಲೇ ರಾಜಕೀಯ ನಿವೃತ್ತಿ ಪಡೆಯುವೆ. ಮುಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ನನ್ನ ಮಕ್ಕಳೂ ಸಹ ರಾಜಕೀಯಕ್ಕೆ ಬರುವುದಿಲ್ಲ” ಎಂದು ತಿಳಿಸಿದ್ದಾರೆ. ಆ ಮೂಲಕ ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯ ನಿವೃತ್ತಿಯ ಅಧಿಕೃತ ಘೋಷಣೆಯಾಗಿದೆ.

“ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮನವರಿಕೆ ಮಾಡಿಕೊಂಡಿದ್ದೇನೆ. ಜಾತಿಯತೆ, ಅಸ್ಪೃಶ್ಯತೆ ಹೇಗೆ ನಮ್ಮನ್ನು ಕೊಲ್ಲುತ್ತದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದೇನೆ. ಅಸ್ಪೃಶ್ಯತೆಯ ಹಿಂಸೆ ಕೇಳಿದರೆ ಬೇರೆಯವರಿಗೆ ರಕ್ತ ಕುದಿಯುತ್ತದೆ. ಇನ್ನು ಅನುಭವಿಸುವವರ ಕತೆ ಏನಾಗಬೇಡ? ಅಸ್ಪೃಶ್ಯತೆ ಮಾನಸಿಕ ರೋಗ. ಹಿಂದೂ ಧರ್ಮದ ಅಸಮಾನತೆ ವಿರುದ್ಧ ಹೋರಾಡಲು ಸಾಧ್ಯವಾಗದೆ ಡಾ.ಬಿ.ಆರ್.ಅಂಬೇಡ್ಕರ್ ಬೌದ್ಧ ಧರ್ಮಕ್ಕೆ ಸೇರಿದರು. ನಮಗೆ ಧಾರ್ಮಿಕ ವಿಮೋಚನೆ ನೀಡಿದರು” ಅಂಬೇಡ್ಕರ್ ವಿಚಾರಧಾರೆ ಬಗ್ಗೆ ಪ್ರಸ್ತಾಪಿಸಿ ವಿ.ಶ್ರೀನಿವಾಸ್ ಪ್ರಸಾದ್ ಮಾತನಾಡಿದರು.
ಶ್ರೀನಿವಾಸ ಪ್ರಸಾದ್ ಚುನಾವಣಾ ರಾಜಕೀಯ ನಿವೃತ್ತಿ ಘೋಷಣೆಯ ನಂತರ ಚಾಮರಾಜನಗರ ಲೋಕಸಭಾ ಸ್ಥಾನಕ್ಕೆ ಅರ್ಹ ಅಭ್ಯರ್ಥಿಯ ಲೆಕ್ಕಾಚಾರ ಬಿಜೆಪಿ ಪಾಳಯದಲ್ಲಿ ಶುರುವಾಗಿದೆ. ಬಿಜೆಪಿಯ ನಂಜನಗೂಡಿನ ಹಾಲಿ ಶಾಸಕ ಹರ್ಷವರ್ಧನ್ ಮತ್ತು ಕೊಳ್ಳೇಗಾಲ ಶಾಸಕ ಎನ್.ಮಹೇಶ್ ನಡುವೆ ಮುಂದಿನ ಸಂಸತ್ ಅಭ್ಯರ್ಥಿ ಸ್ಥಾನಕ್ಕೆ ಪೈಪೋಟಿ ಶುರುವಾಗಿದೆ. ಬಿಜೆಪಿ ಪಕ್ಷದಲ್ಲಿದ್ದರೂ ಯಾವುದೇ ಅಜೆಂಡಾಗಳ ಅಡಿಯಲ್ಲಿ ರಾಜಕೀಯ ಮಾಡದ ಹರ್ಷವರ್ಧನ್ ಒಂದು ಕಡೆಯಾದರೆ, ಬಿಜೆಪಿಗೆ ಸೇರಿ ಪಕ್ಕಾ RSS ನ ಹುರಿಯಾಳುವಿನಂತೆ ವರ್ತಿಸುತ್ತಿರುವ ಎನ್.ಮಹೇಶ್ ಮತ್ತೊಂದು ರೀತಿಯಲ್ಲಿ ಮುಂದಿನ ಬಿಜೆಪಿ ಸಂಸತ್ ಸ್ಥಾನದ ಆಕಾಂಕ್ಷಿ ಆಗಿದ್ದಾರೆ.