ಗಣಪತಿಯ ಹಿನ್ನಲೆ ಬಹಳ ವಿಚಿತ್ರವಾಗಿದೆ. ಗಣಪತಿಯದು ಓರ್ವ ಪ್ರಖ್ಯಾತ ದೇವತೆಯಲ್ಲದ ಕಾಲವಿದ್ದಂತೆ ತೋರುತ್ತದೆ. ಅವನನ್ನು ಕಂಡು ಭಯಪಡುವವರೂ ಇದ್ದರು! ಗಣಪತಿಯ ಪರಿಕಲ್ಪನೆ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ಗಮನಿಸಬೇಕಾದ ವಿಶಿಷ್ಟತೆ. ಚರಣ್ ಐವರ್ನಾಡು ಬರೆದ ಗಣೇಶ ಹಬ್ಬದ ಪ್ರಯುಕ್ತದ ವಿಶೇಷ ಲೇಖನ ನಿಮ್ಮ ಓದಿಗಾಗಿ.
ಗಣಪತಿಯ ಪರಿಕಲ್ಪನೆ ಬಗ್ಗೆ ಬೇರೆ ಬೇರೆ ವಿಶ್ಲೇಷಣೆಗಳು ಬಂದಿವೆ. ವೇದಗಳ ಬೃಹ್ಮಣಸ್ಪತಿಯಿಂದ ಹಿಡಿದು ಆನೆ ಮುಖವನ್ನು ಹೊಂದಿರುವ ಗಣಪ ಅನೇಕ ರೂಪಾಂತರಗಳಿಗೆ ಒಳಗಾದವನು. ಅವನು ಕೆಲವರಿಗೆ ವೇದಮೂರ್ತಿ, ಕೆಲವರಿಗೆ ಅನಾರ್ಯರ ದೇವತೆ. ಅನೇಕರಿಗೆ ಆತ ಜಾನಪದ ಮೂಲದ ಕೃಷಿಯ ದೇವತೆ. ತುಳುವರಿಗೆ ಅವನು ಕೃಷಿಮೂಲದ ದೇವತೆ. ಆಧ್ಯಾತ್ಮಿಕವಾಗಿ ಅವನು ಪ್ರಣವ ಸ್ವರೂಪಿ ಎಂದೂ ವಿವರಿಸಲಾಗಿದೆ. ಅವನಿಗೆ ಲೋಕದಲ್ಲಿ ಯಾರಿಗೂ ಇಲ್ಲದಷ್ಟು ಹೆಸರುಗಳು ಬೇರೆ. ಕೆಲವಂತು ಅವನ ದೇಹವನ್ನು ತಮಾಷೆ ಮಾಡುವಂತವೇ…! ಅವನ ಬಗ್ಗೆ ಇರುವ ಕತೆಗಳನ್ನು, ಪುರಾಣಗಳನ್ನು ಕೆದಕಿ, ವಿಶ್ಲೇಷಿಸುತ್ತಾ ಹೋದಂತೆ ಭಾರತೀಯ ಆರಾಧನಾ ಪರಂಪರೆಗಳ ವಿರಾಟ್ ಸ್ವರೂಪದ ದರ್ಶನವಾಗುತ್ತದೆ.

ಗಣಪತಿಯ ಬಗ್ಗೆ ಬಹಳ ಇಂಟರೆಸ್ಟಿಂಗ್ ಆದ ಸಂಗತಿಗಳು ಬರುತ್ತಿವೆ. ನಮ್ಮ ಗೌರವಾನ್ವಿತ ಪ್ರಧಾನಿ ಮೋದಿಯವರು ಐಐಟಿಯೊಂದರಲ್ಲಿ ಗಣಪತಿ ‘ಪ್ಲಾಸ್ಟಿಕ್’ ಅಥವಾ ‘ಕಾಸ್ಮೆಟಿಕ್’ ಸರ್ಜರಿಯ ಉತ್ಪಾದನೆ ಎಂದರು! ಅನೇಕರು ಇಂತಹ ನಿಲುವು ಹೊಂದಿದ್ದಾರೆ. ಪೆರಿಯಾರ್ ಕೂಡ ಹೀಗೆ ಗಣಪತಿಯನ್ನು ಟೀಕಿಸಿದ್ರಂತೆ! ಇದು ಗಣಪತಿಯ ಬಗ್ಗೆ ಸಾವಿರಾರು ವರ್ಷಗಳಿಂದ ಬೆಳೆದಿರುವ ಸಾಂಸ್ಕೃತಿಕತೆಯ ಮೇಲೆ ಕೆಟ್ಟ ಪರಿಣಾಮ ಬೀರಬಲ್ಲ ವ್ಯಾಖ್ಯಾನ. ಗಣಪತಿಯನ್ನು ಈ ರೀತಿ ಅರ್ಥೈಸುವುದು ತಪ್ಪು ಮಾತ್ರವಲ್ಲ ಪುರಾಣಗಳನ್ನ, ಕಾವ್ಯಗಳನ್ನು ನೋಡುವ ರೀತಿಯೂ ಇದಲ್ಲ. ಗಣಪತಿ, ತನ್ನ ಬಗ್ಗೆ ಸ್ತುತಿಸುವಾಗ ಭಕ್ತರು ಮಾಡುವ ಹಾಸ್ಯವನ್ನು ಸುಖಿಸುತ್ತಾನೆ, ಇನ್ನೊಂದೆಡೆ ಗಂಭೀರ ಅನ್ವೇಷಣೆಗಳಿಗೂ ಒಳಗಾಗಿದ್ದಾನೆ. ಅವನನ್ನು ಬ್ರಹ್ಮಚಾರಿ ಅಂತ ಹೇಳುತ್ತಾ ಸಿದ್ಧಿ-ಬುದ್ಧಿಯರ ಗಂಡ ಅಂತ ಕರಿತಾರೆ. ಸಿದ್ಧಿ-ಬುದ್ಧಿಯರಿಗೆ ಇವ ತಾಳಿ ಕಟ್ಟಿ ಮದುವೆಯಾಗಿದ್ದಾನೆ ಎಂದಲ್ಲ. ಅವ ಸಿದ್ಧಿಯನ್ನೂ ಬುದ್ಧಿಯನ್ನೂ ಯಥೇಚ್ಛವಾಗಿ ಸಂಪಾದಿಸಿದವನು ಮತ್ತು ನೀಡುವವನು.
ಶಂಕರಾಚಾರ್ಯರು ಉಗ್ರಪಂಥೀಯ ಗಾಣಪತ್ಯರ ಬಗ್ಗೆ ಪ್ರಸ್ತಾಪಿಸುತ್ತಾರೆ. ಇವರದ್ದು ಭಾರತದ ಎಲ್ಲೆಡೆ ಹರಡಿದ್ದ ಒಂದು ಪಂಥ. ಮನುವು ಗಣಪತಿಯನ್ನು ಶೂದ್ರರೆಲ್ಲಾ ಆರಾಧಿಸುವ ದೇವತೆ ಎಂದಿದ್ದಾನೆ. ಶಿವನನ್ನು ದ್ವೇಷಿಸುತ್ತಿದ್ದ ವೀರವೈಷ್ಣವರಿಗೆ ಅವನ ಮಗ ಗಣಪತಿ ಇಲ್ಲದಿದ್ದರೆ ಆಗುವುದಿಲ್ಲ. ನಾವು ತುಳುನಾಡಿನಲ್ಲಿ ‘ಗಣಪತಿಗ್ ಸುತ್ಯೆ ದೀಪುನೆ’ ಅಂತ ಯಾವ ಕಾರ್ಯ ಮಾಡುವ ಮುನ್ನ ಬೆಳ್ತಕ್ಕಿ ಮೇಲೆ ಕಾಯಿ ಇಟ್ಟು ಪ್ರಾರ್ಥಿಸುತ್ತೇವೆ. ಮೂಲದಲ್ಲಿ ಇದನ್ನು ದೇವೆರೆಗ್ ದೀಪುನಿ ಎನ್ನುತ್ತಾರೆ. ಚೌತಿಯಂದು ಕಬ್ಬನ್ನು ಮಂಟಪದಂತೆ ಪೇರಿಸಿ ಅವಲಕ್ಕಿ ಬಡಿಸುತ್ತೇವೆ.
ಆದರೆ ಗಣಪತಿಯ ಹಿನ್ನಲೆ ಬಹಳ ವಿಚಿತ್ರವಾಗಿದೆ. ಗಣಪತಿ ಓರ್ವ ಪ್ರಖ್ಯಾತ ದೇವತೆಯಲ್ಲದ ಕಾಲವಿದ್ದಂತೆ ತೋರುತ್ತದೆ. ಅವನನ್ನು ಕಂಡು ಭಯಪಡುವವರೂ ಇದ್ದರು! ಗಣಪತಿಯ ಪರಿಕಲ್ಪನೆ ಸಾವಿರಾರು ವರ್ಷಗಳಿಂದ ಬೇರೆ ಬೇರೆ ಸ್ಥಿತ್ಯಂತರಗಳಿಗೆ ಒಳಗಾಗಿರುವುದು ಗಮನಿಸಬೇಕಾದ ವಿಶಿಷ್ಟತೆ.
ನಮ್ಮಲ್ಲಿ ವೇದಗಳು ಉಲ್ಲೇಖಿಸಿದ, ಪೂಜಿಸಲ್ಪಟ್ಟ ಅನೇಕ ದೇವತೆಗಳಿಗೆ ಆರಾಧನೆ ಇಲ್ಲ. ಇಂದ್ರ, ವರುಣ, ಬೃಹಸ್ಪತಿ, ಅಗ್ನಿ, ವಾಯು ಮೊದಲಾದವರಿಗೆ ಒಂದು ದೇವಾಲಯವೇ ಇಲ್ಲ! ಅವರು ಮಂತ್ರಗಳಲ್ಲಿ ಮಾತ್ರ ಕಾಣಿಸುತ್ತಾರೆ. ವೇದಗಳು ಆರಂಭದಲ್ಲಿ ಮೂರ್ತಿ ಪೂಜೆಯನ್ನು ಒಪ್ಪಲಿಲ್ಲ. ಏನಿದ್ದರೂ ಯಾಗದಲ್ಲೇ ಕೆಲಸ. ಆಗಮಶಾಸ್ತ್ರಗಳು ಮೂರ್ತಿ ಪೂಜೆ ನಿಲ್ಲಿಸದ ಹೊರತು ಮುಕ್ತಿ ದೊರೆಯದು ಎನ್ನುತ್ತವೆ. ಪ್ರತಿಮೆ ಎಂದರೆ ಒಂದು ಅಧಿಷ್ಠಾನ ಅಷ್ಟೇ, ದೇವರು ಅದರಲ್ಲಿದ್ದಾನೆ ಎಂಬುದು ಭಕ್ತನ ಊಹೆ. “ಅಜ್ಞಾನಂ ಭಾವನಾರ್ಥಾಯ ಪ್ರತಿಮಾಃ ಪರಿಕಲ್ಪಿತಾಃ”- ಪ್ರತಿಮೆ ಅಜ್ಞಾನಿಗಳಿಗೆ ಮಾತ್ರ. ಸಾಧಕನಾದವನು ಪ್ರತಿಮೆಯನ್ನು ಮೀರಿ ದೇವರನ್ನು ಕಾಣುತ್ತಾನೆ, ಮೂರ್ತಿಯ ಮೊರೆ ಹೋಗುವುದಿಲ್ಲ! ಶಿಲ್ಪಶಾಸ್ತ್ರ ಪ್ರತಿಮೆಗಿಂತ ಅದನ್ನು ಮಾಡಿದ ಶಿಲ್ಪಿ ಮೊದಲು ಪೂಜಾರ್ಹ ಎನ್ನುತ್ತದೆ. “ಶಿಲ್ಪಿನಂ ಪೂಜಯೇತ್ ಪೂರ್ವಂ”
ಆರಂಭದಲ್ಲಿ ಗಣಪತಿಯ ಆರಾಧನೆ ಅವೈದಿಕ ಸಮುದಾಯದಲ್ಲಿ ಮೂರ್ತರೂಪ ಆರಾಧನೆಯ ನೆಲೆಯಲ್ಲಿತ್ತು. ಅದನ್ನು ವೈದಿಕ ಕೃತಿಗಳು ಸ್ವೀಕರಿಸಿರಬಹುದು. ಋಗ್ವೇದದಲ್ಲಿ ಗಣಪತಿಯ ಪ್ರಸ್ತಾಪ ಎರಡೇ ಎರಡು ಬಾರಿ ಬರುವುದು. ಒಂದು ಅತ್ಯಂತ ಪ್ರಾಚೀನ ಎಂದು ಭಾವಿಸಲಾದ ಎರಡನೇ ಮಂಡಲದಲ್ಲಾದರೆ ಇನ್ನೊಂದು ಅರ್ವಾಚೀನವೆಂದು ಪರಿಗಣಿಸಲಾದ ಹತ್ತನೇ ಮಂಡಲದಲ್ಲಿ. ಮೊದಲ ಪ್ರಸ್ತಾಪವನ್ನು ನಾವು ಗಣಹೋಮದಲ್ಲಿ ಕೇಳಿರುತ್ತೇವೆ.
“ಗಣಾನಾಂ ತ್ವಾ ಗಣಪತಿಂ ಹವಾಮಹೇ
ಕವಿಃ ಕವೀನಾಂ ಉಪಮಶ್ರವಸ್ತಮಂ
ಜ್ಯೇಷ್ಠರಾಜಂ ಬ್ರಹ್ಮಣಾಂ ಬ್ರಹ್ಮಣಸ್ಪತ
ಅ ನಃ ಶೃಣ್ವನ್ನೂ ತಿಭಿಃ ಸೀದಸಾದನಂ||”
ಇಲ್ಲಿ ಗಣಪತಿಯನ್ನು ‘ಬ್ರಹ್ಮಣಸ್ಪತಿ’ ಎಂದು ಕರೆಯಲಾಗಿದೆ. ಇವನೇ ಬೃಹಸ್ಪತಿಯೂ. ಈತ ಕವಿಗಳಲ್ಲಿ ಕವಿ, ದೊಡ್ಡ ರಾಜ. “ಬಾ….ನಾನು ಯಜ್ಞ ಮಾಡ್ತಿದ್ದೇನೆ. ನಿನಗಿಲ್ಲಿ ಆಸನ ಇದೆ. ಬಾ ಕೂತ್ಕೊ…” ಅಂತ ಕರೆದಿದ್ದಾರೆ. ಪ್ರಶ್ನೆ ಎಂದರೆ ಈ ಗಣಪತಿ ನಮ್ಮ ಆನೆ ತಲೆಯ ಗಣಪತಿಯೋ…ಎಂದು. ಐತ್ತರೇಯ ಬ್ರಾಹ್ಮಣದ ಇದು ಬೃಹಸ್ಪತಿಯ ಮಂತ್ರ!
ಆಚಾರ್ಯ ಸಾಯಣರು “ಗಣಾನಾಂ” ಎಂದರೆ ದೇವತೆಗಳ ಗಣ(ಗುಂಪು) ದೇವ ಗಣಗಳ ನಾಯಕ. ಇಲ್ಲಿ ಗಣಪತಿ ಎಂದರೆ ಅದು ಬೃಹಸ್ಪತಿಯೇ.
ಎರಡನೇ ಮಂತ್ರವೆಂದರೆ….
ನಿ ಷು ಸೀದ ಗಣಪತೇ ಗಣೇಷು
ತ್ವಾ ಮಾಹುರ್ವಿಪ್ರತಮಂ ಕವೀನಾಂ|
ನ ಋತೇ… ಹೀಗೆ…
“ಹೇ…ಗಣಪತಿ….ಬಾ…ಗಣಗಳ ಮಧ್ಯೆ ಕೂತ್ಕೊ. ನೀನು ಕವಿಗಳಲ್ಲೇ ಬುದ್ಧಿವಂತ. ನಿನ್ನನ್ನು ಬಿಟ್ಟು ಯಾವುದೂ ನಡೆಯದು. ನೀನು ಸಂಪತ್ತನ್ನು ಪಡೆದವ. ಬಾ ಚಿತ್ರವಿಚಿತ್ರನಾದ ಸೂರ್ಯನನ್ನು ಹೊಗಳು- ಮಹಾಂ ಅರ್ಕಂ ಮಘವಙ್ ಚಿತ್ರಮರ್ಚ” ಅಂತ. ಸಾಯಣರು ಮಂತ್ರಘೋಷ ಮಾಡುವ ಗುಂಪಿನ ಜೊತೆ ಕೂತು ಸೂರ್ಯನನ್ನು ಹಾಡು. ನಿನ್ನನ್ನು ಬಿಡ್ಲಿಕ್ಕಾಗ್ತದೊ…? ಎಂಬರ್ಥದಲ್ಲಿ ಈ ಗಣಪತಿ ಇಂದ್ರನೇ ಅಂತಾರೆ!
ಹೀಗೆ ಋುಗ್ವೇದದಲ್ಲಿ ಬರುವ ಗಣಪತಿ ನಮ್ಮ ಆನೆತಲೆಯ ಗಣಪತಿಯಲ್ಲ! ಇಲ್ಲಿ ಬರುವ ಗಣಪತಿ ದೇವತೆಯ ಹೆಸರಲ್ಲ ಎನಿಸುತ್ತದೆ. ಅವನು ವೇದಗಳಲ್ಲಿ ಆಗಾಗ ಬರುವ ‘ಮರುತ್ತಗಳ ಗಣ’, ‘ಅಂಗಿರಸ ಗಣ’ ಮೊದಲಾದ ಜನರ ಗುಂಪಿನ ಒಡೆಯನ ಪದವಿ. ಗಣಗಳ ಅಧಿಪತಿ ಆತ !
ಋಗ್ವೇದದದಲ್ಲಿ ಗಣಪತಿ ಬೃಹಸ್ಪತಿಯಾದರೆ ಯಜುರ್ವೇದವು ರುದ್ರನನ್ನು ಬೃಹಸ್ಪತಿ ಎನ್ನುತ್ತದೆ…….ರುದ್ರಸ್ಯ ಗಾಣಪತ್ಯಾನ್ ಮಯೋಭೂರೇಹಿ. ಸಾಯಣಾಚಾರ್ಯರು ಈ ಗಾಣಪತ್ಯವು ‘ಪಶುಸಮೂಹ’ ಎನ್ನುತ್ತಾರೆ. ರುದ್ರನು ಪಶುಪತಿಯೇ. ಮಹೀಧರನು ತನ್ನ ವಾಜಸನೇಯಿ ಮಂತ್ರಕ್ಕೆ ಬರೆದ ಭಾಷ್ಯದಲ್ಲಿ ಈ ಗಣವು ದೇವತೆಗಳ ಜೊತೆಗಿರುವ ಭೂತವಿಶೇಷಗಳ ಗುಂಪು, ಅದರ ಒಡೆಯ ಗಣಪತಿ ಎನ್ನುತ್ತಾರೆ. (…ತೇಷಾಂ ಪಾಲಕಾ ಗಣಪತಯ)
ಕೆಲ ವೇದೋಕ್ತ ದೇವತೆಗಳು ಕಾಲಾನಂತರದಲ್ಲಿ ಆರಾಧನೆಯನ್ನು ಕಳೆದುಕೊಂಡವು. ಅನಾರ್ಯ ಸಮುದಾಯಗಳ ದೇವತೆಗಳ ಆರಾಧನೆ ಪ್ರಬಲವಾಯಿತು. ಅಗ್ನಿ,ವಾಯು,ವರುಣರು ತ್ರಿಮೂರ್ತಿಗಳೊಂದಿಗೆ ಸಮೀಕರಿಸಲ್ಪಟ್ಟರು. ವೇದಗಳಲ್ಲಿ ಉಲ್ಲೇಖವಾಗದ ಗಣಪತಿ ಬಹುತೇಕ ಅವೈದಿಕ ಸಮುದಾಯಗಳ ಪ್ರಮುಖ ದೇವತೆಯಾಗಿದ್ದವನಿರಬೇಕು. ಗೃಹ್ಯಸೂತ್ರಗಳು ವೈದಿಕ ಸಂಪ್ರದಾಯವನ್ನು ಸ್ವೀಕರಿಸಿ ಮೂಲ ನಂಬಿಕೆಗಳನ್ನು ಬಿಡದ ಸಾಮಾನ್ಯರನ್ನು ಪ್ರಸ್ತಾಪಿಸುತ್ತದೆ. ಈ ಸಾಮಾನ್ಯರು ಗಣಪತಿಯನ್ನು ‘ವಿನಾಯಕ’ (ವಿಶಿಷ್ಟ ನಾಯಕ) ನೆಂದು ಕರೆದರು. ಈ ವಿನಾಯಕ ಭೂತಗಣಗಳ ನಾಯಕನಾದ ಭೂತನೆ. ಈ ವಿನಾಯಕ ವಿಘ್ನಕಾರಕ, ಉಪದ್ರ,ಆತಂಕ ಉಂಟು ಮಾಡುವವನು. ಗಣಪತಿ ವಿಘ್ನಕಾರಕನೂ ಎಂದು ಹೇಳುವ ನಮಗೆ ಅದಕ್ಕೆ ಕಾರಣ ತಿಳಿದಿಲ್ಲ. ಮಕ್ಕಳಿಗೆ ಬಾಲಗ್ರಹ ಉಂಟುಮಾಡುವವರಲ್ಲಿ ವಿನಾಯಕರೂ ಇದ್ದಾನೆ.
ನ ರಾಕ್ಷಸಾ ನ ಪಿಶಾಚಾ ನ ಭೂತಾ ನ ವಿನಾಯಕಾ…….
ಹೀಗೆ ಭೂತಪ್ರೇತಪಿಶಾಚಶ್ಚ ಯಕ್ಷರಕ್ಷೋ ವಿನಾಯಕಃ||
ವಿನಾಯಕರಿಗೆ ಮಂದಿ ಭಯ ಪಡುತ್ತಿದ್ದರು. ವಿನಾಯಕರ ಸಂಖ್ಯೆ ದೊಡ್ಡದಾದರೂ ನಾಲ್ವರು ಪ್ರಮುಖರು-ಉಸ್ಮಿತ, ಕೂಷ್ಮಾಂಡರಾಜಪುತ್ರ, ಶಾಲಕಟಂಕಟ,ದೇವಯಜನ. ಬೇರೆ ಬೇರೆ ಸೂತ್ರಗಳಲ್ಲಿ ಬೇರೆ ಬೇರೆಯವರು ಪ್ರಮುಖರು. ವಿನಾಯಕರಲ್ಲಿ ವಿರೂಪಾಕ್ಷ, ವೈಶ್ರವಣ,ಮಹಾಸೇನರೂ ಇದ್ದಾರೆ. ಇವರು ಕ್ರಮವಾಗಿ ಶಿವ, ಕುಬೇರ (ಇವನು ಓರ್ವ ಯಕ್ಷ), ಸ್ಕಂದನೇ ಇರಬಹುದು. ವಿನಾಯಕರು ಮೈಯಲ್ಲಿ ಬರುವುದನ್ನು ಗೃಹ್ಯಸೂತ್ರಗಳು ಪ್ರಸ್ತಾಪಿಸುತ್ತವೆ. ಆಗ ವಿನಾಯಕ ಹಿಡಿದವ ಮಣ್ಣು ಪುಡಿ ಮಾಡುವುದು, ಹುಲ್ಲು ಕೀಳುವುದು,ಮೈಮೇಲೆ ಬರೆ ಹಾಕಿಕೊಳ್ಳುವುದು ಮಾಡುತ್ತಾನೆ. ಇವನೊಬ್ಬ ರಾಜಪುತ್ರನಾದರೆ ಪಟ್ಟ ಕಳೆದುಕೊಳ್ಬೇಕಿತ್ತು. ಹೆಣ್ಮಕ್ಕಳಿಗೆ ಮದುವೆಯಾಗದಿದ್ದರೆ, ಮಕ್ಕಳಾಗದಿದ್ದರೆ ಈ ಎಲ್ಲಾ ವಿಘ್ನಗಳನ್ನು ತರುವವನು ವಿನಾಯಕನೇ. ಅವನನ್ನು ಸಂತೃಪ್ತಿ ಪಡಿಸಿ ಒಲಿಸಿಕೊಳ್ಳಬೇಕು. ಅದಕ್ಕೆ ಅವನನ್ನೇ ಮೊದಲು ಪೂಜಿಸಿದರೆ ವಿಘ್ನಗಳು ಬರುವುದಿಲ್ಲ!
ಅಚ್ಚರಿ ಎಂದರೆ ಇಷ್ಟೆಲ್ಲಾ ವಿನಾಯಕರಲ್ಲಿ ಗಣಮುಖದ ಗಣಪತಿ ಮಾತ್ರ ಆರಾಧನೆಗೆ ಒಳಪಟ್ಟು ಮುಂದುವರಿದದ್ದು ಹೇಗೆ? ದೈವಗಳನ್ನು ಏಕೀಕರಿಸಿಲಾಯಿತೆ? ಆಚಾರ್ಯ ಶಂಕರರು ಪಂಚಾಯತನ ಪದ್ಧತಿ ತಂದದ್ದು ಇದೇ ರೀತಿ. ನೀವು ಯಾವುದೇ ದೈವವನ್ನೂ ಪೂಜಿಸಿ ಅದು ವಿಷ್ಣು, ಶಿವ, ಅಂಬಿಕೆ, ಗಣಪತಿ, ಸೂರ್ಯ – ಇವರಲ್ಲಿ ಒಬ್ಬರಾಗಿರುತ್ತಾರೆ! ಶಿವ,ರುದ್ರ,ಪಶುಪತಿ ಮೊದಲಾದ ದೈವಗಳು ಒಂದೇ ಈಶ್ವರನ ಅಡಿಗೆ ಬಂದಂತೆ! ಗಣಪತಿಯೊಬ್ಬನನ್ನು ಪೂಜಿಸಿದರೆ ಅಷ್ಟೂ ವಿನಾಯಕರನ್ನು ನೆನೆದಂತೆ.
ವಿನಾಯಕ ವಿಘ್ನಗಳ ರಾಜ. ಅವನ ಜೋಳಿಗೆಯಲ್ಲಿ ತಿಂಡಿಗಳ ಜೊತೆ ವಿಘ್ನಗಳೂ ಪೊಟ್ಟಣ ಕಟ್ಟಿ ಇರುತ್ತವೆ. ಅವನ ಪೂಜೆಗೆ ಮೊದಲು ವಿಘ್ನಕರ್ತೃ (ಕಾರಕ) ನಂತರ ವಿಘ್ನಹರ್ತೃ(ನಿವಾರಕ) ಎನ್ನುತ್ತಾರೆ. ಇವನೊಡನೆ ದೇವತೆಗಳೂ ಕಾದಾಡಿದ್ದಾರಂತೆ!
ಪಾರ್ವತಿ ಸ್ನಾನದಲ್ಲಿ ಇರುವಾಗ ಶಿವನನ್ನು ತಡೆದ ವಿನಾಯಕ ತನ್ನ ತಲೆಯನ್ನು ಕಡಿದುಕೊಳ್ಳುತ್ತಾನೆ. ಇದು ಬ್ರಹ್ಮವೈವರ್ತ ಪುರಾಣದ ಕತೆ. ವರಹಪುರಾಣದಲ್ಲಿ ಶಿವ ಸುಂದರಾಂಗನಾದ ವಿನಾಯಕನನ್ನು ನೋಡಿ ಅಸೂಯೆಯಿಂದ ಡೊಳ್ಳು ಹೊಟ್ಟೆ, ಆನೆ ತಲೆ ಹೊಂದುವಂತೆ ಶಪಿಸಿದ ಕತೆ ಇದೆ. ಇನ್ನೊಂದೆಡೆ ಶನಿಯೋರ್ವನ ಕಣ್ಣೋಟದಿಂದ ಶಿಶು ಗಣೇಶನ ತಲೆ ಉದುರಿದ ಕತೆಯೂ ಇದೆ. ಇನ್ನು ಜನಪದರಲ್ಲಿ ಅವನು ದನದ ಸೆಗಣಿಯಿಂದ ಹುಟ್ಟಿದ. ಗಣಪತಿಯ ಆನೆಯ ಮುಖವನ್ನು ಕೇಂದ್ರವಾಗಿರಿಸಿಕೊಂಡು ಈ ಕಥೆಗಳು ಹುಟ್ಟಿವೆ. ಪ್ಲಾಸ್ಟಿಕ್ ಸರ್ಜರಿಯಿಂದ ತಲೆ ಜೋಡಿಸಿದ್ದಲ್ಲ!
(ಈ ಲೇಖನದಲ್ಲಿ ವ್ಯಕ್ತವಾಗಿರುವ ಎಲ್ಲ ಅಭಿಪ್ರಾಯಗಳು ಲೇಖಕರದ್ದಾಗಿರುತ್ತದೆ.)
ಚರಣ್ ಐವರ್ನಾಡು
ಲೇಖಕ, ಪತ್ರಕರ್ತ