ಉತ್ತರಾಖಂಡದ ಪ್ರಸಿದ್ಧ ಚಾರ್ಧಾಮ್ ಯಾತ್ರೆಯು ಏಪ್ರಿಲ್ 19 ರಂದು ಗಂಗೋತ್ರಿ ಮತ್ತು ಯಮುನೋತ್ರಿ ದೇವಾಲಯಗಳ ಬಾಗಿಲು ತೆರೆಯುವುದರೊಂದಿಗೆ ಆರಂಭವಾಯಿತು. ಯಾತ್ರೆ ಆರಂಭವಾದ ಕೇವಲ 26 ದಿನಗಳಲ್ಲಿ 38 ಮಂದಿ ಭಕ್ತರು ಅನಾರೋಗ್ಯದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಸರ್ಕಾರದ ವರದಿ ತಿಳಿಸಿದೆ.
ಕೇದಾರ್ನಾಥ ಮತ್ತು ಬದರಿನಾಥ ದೇವಾಲಯಗಳನ್ನು ಕ್ರಮವಾಗಿ ಏಪ್ರಿಲ್ 22 ಮತ್ತು 23 ರಂದು ಭಕ್ತರಿಗಾಗಿ ತೆರೆಯಲಾಗಿತ್ತು. ಈ ಪೈಕಿ ಕೇದಾರ್ನಾಥ ಧಾಮವೊಂದರಲ್ಲೇ ಅತಿ ಹೆಚ್ಚು ಅಂದರೆ 21 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕೃತ ಮೂಲಗಳು ದೃಢಪಡಿಸಿವೆ.
ಇತರ ಧಾಮಗಳ ವಿವರ ನೋಡುವುದಾದರೆ, ಬದರಿನಾಥದಲ್ಲಿ 7 ಜನರು ಮೃತಪಟ್ಟಿದ್ದರೆ, ಗಂಗೋತ್ರಿ ಮತ್ತು ಯಮುನೋತ್ರಿಯಲ್ಲಿ ತಲಾ ಐವರು ಮೃತಪಟ್ಟಿದ್ದಾರೆ. ಈ ಯಾತ್ರಾ ಸ್ಥಳಗಳು ಅತ್ಯಂತ ಎತ್ತರದ ಪ್ರದೇಶದಲ್ಲಿರುವುದರಿಂದ ಆಮ್ಲಜನಕದ ಕೊರತೆ, ವಿಪರೀತ ಚಳಿ ಮತ್ತು ಹೃದಯಾಘಾತದಿಂದಾಗಿ ಈ ಸಾವುಗಳು ಸಂಭವಿಸಿವೆ ಎಂದು ಅಧಿಕಾರಿಗಳು ವಿಶ್ಲೇಷಿಸಿದ್ದಾರೆ.
ಯಾತ್ರಾರ್ಥಿಗಳ ಸಂಖ್ಯೆ ಈ ಬಾರಿ ಗಣನೀಯವಾಗಿ ಏರಿಕೆಯಾಗಿದ್ದು, ಬುಧವಾರ ಸಂಜೆಯ ವೇಳೆಗೆ ಸುಮಾರು 11.81 ಲಕ್ಷಕ್ಕೂ ಹೆಚ್ಚು ಭಕ್ತರು ನಾಲ್ಕು ಧಾಮಗಳನ್ನು ಸಂದರ್ಶಿಸಿದ್ದಾರೆ. ಚಾರ್ಧಾಮ್ ಮತ್ತು ಹೇಮಕುಂಡ್ ಸಾಹಿಬ್ ಯಾತ್ರೆಗಾಗಿ ಈ ವರ್ಷ ದಾಖಲೆ ಮಟ್ಟದ ಅಂದರೆ 33.96 ಲಕ್ಷಕ್ಕೂ ಹೆಚ್ಚು ಜನರು ನೋಂದಾಯಿಸಿಕೊಂಡಿದ್ದಾರೆ.
