Sunday, April 28, 2024

ಸತ್ಯ | ನ್ಯಾಯ |ಧರ್ಮ

ಸಿಎಂ ಭೇಟಿ ಮಾಡಿದ ಭಾರತದ ಬ್ರಿಟಿಷ್ ಹೈ-ಕಮಿಷನರ್ ಅಲೆಕ್ಸ್ ಎಲ್ಲಿಸ್

ಬೆಂಗಳೂರು: ಯು.ಕೆ. ಹೂಡಿಕೆದಾರರು ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಯಾರಿಕಾ ಘಟಕಗಳ ಸ್ಥಾಪನೆ ಮಾಡುವಂತೆ ಆಹ್ವಾನ ನೀಡಿದ್ದರಿಂದ, ಭಾರತದ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹಾಗೂ ಕರ್ನಾಟಕ ಮತ್ತು ಕೇರಳದ ನೂತನ ಬ್ರಿಟಿಷ್ ಡೆಪ್ಯುಟಿ ಹೈಕಮಿಷನರ್ ಆಗಿ ನೇಮಕಗೊಂಡಿರುವ ಚಂದ್ರು ಅಯ್ಯರ್‌ರವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರುನ್ನು ಭೇಟಿಯಾಗಿದ್ದು, ಅವರೊಂದಿಗೆ ಸೌಹಾರ್ದಯುತ ಮಾತುಕತೆ ನಡೆಸಿದರು.

ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಬೊಮ್ಮಾಯಿಯವರು, ಕರ್ನಾಟಕ ರಾಜ್ಯವು ಹೂಡಿಕೆದಾರ ಸ್ನೇಹಿ ವಾತಾವರಣವನ್ನು ಹೊಂದಿದ್ದು, ಸಂಶೋಧನೆ ಮತ್ತು ಅಭಿವೃದ್ಧಿಗೂ ಹೊಸ ನೀತಿಯನ್ನು ಜಾರಿಗೆ ತರಲಾಗಿದೆ. ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಅವರು ಸಲಹೆ ನೀಡಿದರು ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಹಾಗೂ ಡೆಪ್ಯುಟಿ ಹೈಕಮಿಷನರ್ ಚಂದ್ರು ಅಯ್ಯರ್ ಅವರು ಯುಕೆ ಹಾಗೂ ಕರ್ನಾಟಕ ನಡುವಿನ ಬಾಂಧವ್ಯ ವಿಶೇಷವಾದುದು. ಕರ್ನಾಟಕದಲ್ಲಿರುವ ಯು.ಕೆ. ಕಂಪೆನಿಗಳ ಸಂಖ್ಯೆ ಗಣನೀಯವಾದುದು. ಒಂದು ವರದಿಯ ಪ್ರಕಾರ ಭಾರತದಲ್ಲಿರುವ 618 ಬ್ರಿಟಿಷ್ ಮಾಲೀಕತ್ವದ ಕಂಪೆನಿಗಳಲ್ಲಿ ಶೇ. 14 ರಷ್ಟು ಕರ್ನಾಟಕದಲ್ಲಿದ್ದು, ದಕ್ಷಿಣ ಭಾರತದಲ್ಲಿಯೇ ಇದು ಅತಿ ಹೆಚ್ಚು ಎಂದು ಗಮನ ಸೆಳೆದರು. ಬೆಂಗಳೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಅಯನ ರಿನ್ಯೂವೇಬಲ್ ಪವರ್ ಲಿ. ಯುಕೆಯ ಅತಿ ವೇಗವಾಗಿ ಬೆಳೆಯುತ್ತಿರುವ ಕಂಪೆನಿಯಾಗಿದೆ ಎಂದು ಅವರು ವಿವರಿಸಿದರು.

ಈಸ್ ಆಫ್ ಡೂಯಿಂಗ್ ಬಿಸಿನೆಸ್, ವಿದ್ಯುತ್ ಚಾಲಿತ ವಾಹನ ಬಳಕೆಯ ಕುರಿತ ಜಾಗೃತಿ, ಉನ್ನತ ಶಿಕ್ಷಣ ಕ್ಷೇತ್ರಗಳಲ್ಲಿ ಯುಕೆ ಹಾಗೂ ಕರ್ನಾಟಕದ ಸಹಯೋಗದ ಕುರಿತು ಚರ್ಚಿಸಲಾಯಿತು. ಯುಕೆಯಲ್ಲಿನ ಕನ್ನಡಿಗರ ಕೊಡುಗೆ, ಹಾಗೂ ಅವರು ಭಾರತ ಹಾಗೂ ಯು.ಕೆ. ನಡುವೆ ಬಾಂಧವ್ಯ ಬಲಪಡಿಸುತ್ತಿರುವ ಕುರಿತು ಉಭಯತ್ರರೂ ಮೆಚ್ಚುಗೆ ವ್ಯಕ್ತಪಡಿಸಿದರು ಎಂದು ಬೊಮ್ಮಾಯಿ ಹೇಳಿದ್ದಾರೆ.

ಈ ಸಂದರ್ಭದಲ್ಲಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಆಯುಕ್ತರಾದ ಗುಂಜನ್ ಕೃಷ್ಣ ಹಾಗೂ ಬ್ರಿಟಿಷ್ ಹೈ-ಕಮಿಷನ್ ಸಲಹೆಗಾರ ಮಂಜುನಾಥ್ ಕೆ.ಎಸ್. ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು