ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಅವರಿಗೆ ವಿಚಾರಣಾಧೀನ ಖೈದಿಯಾಗಿ ನಂಬರ್ 6106 ಕೊಡಲಾಗಿದೆ. ಅಂದಿನಿಂದ ಈ ನಂಬರ್ ಟ್ರೆಂಡಿನಲ್ಲಿದ್ದು ಹಲವು ಟೆಂಪೋ, ಬೈಕ್ ಇತ್ಯಾದಿ ವಾಹನಗಳ ಮೇಲೂ ಕಾಣಿಸಿಕೊಂಡಿತ್ತು.
ಎಲ್ಲವನ್ನೂ ಅತಿಯಾಗಿ ಮಾಡುವುದು ದರ್ಶನ್ ಅಭಿಮಾನಿಗಳ ಗುಣ. ಈಗ ಅಂತಹದ್ದೇ ಒಂದು ಕೃತ್ಯ ಮಕ್ಕಳ ಆಯೋಗದ ಕೆಂಗಣ್ಣಿಗೆ ಗುರಿಯಾಗಿದ್ದು, ಅದು ದರ್ಶನ್ ಅಭಿಮಾನಿಯೊಬ್ಬನಿಗೆ ನೋಟಿಸ್ ನೀಡಲು ಮುಂದಾಗಿದೆ.
ಮಗುವಿಗೆ ಕೈದಿ ಬಟ್ಟೆ ಹಾಕಿಸಿ ಪೋಟೋ ಶೂಟ್ ಮಾಡಿದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಅದು ಮಗುವಿನ ಪೋಷಕರಿಗೆ ಪೋಷಕರಿಗೆ ನೋಟಿಸ್ ನೀಡಲು ಮುಂದಾಗಿದೆ. ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡಿರುವ ಆಯೋಗವು ಮಗುವಿಗೆ ಕೈದಿ ಬಟ್ಟೆ ಹಾಕಿರುವುದು ತಪ್ಪು ಹೀಗಾಗಿ ನೋಟಿಸ್ ನೀಡಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಒಂದು ವರ್ಷದ ಮಗುವಿಗೆ ಖೈದಿ ನಂಬರ್ 6106 ನಂಬರ್ ಹಾಕಿ, ಕೈ ಕೋಳ ಮಾದರಿ, ಖೈದಿಗಳ ರೀತಿ ಬಿಳಿ ಬಟ್ಟೆ ಹಾಕಿ ಹುಟ್ಟುಹಬ್ಬ ಆಚರಿಸಿದ್ದೂ ಅಲ್ಲದೇ ಆ ಬಟ್ಟೆಯಲ್ಲಿ ಫೋಟೊ ಶೂಟ್ ಮಾಡಿಸಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.