Home ರಾಜಕೀಯ ಚುನಾವಣಾ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಆಯ್ಕೆ ; ಬಿಜೆಪಿಯಲ್ಲಿ ತಗ್ಗದ ಯಡಿಯೂರಪ್ಪ ಹಿಡಿತ

ಚುನಾವಣಾ ಸಂಸದೀಯ ಮಂಡಳಿಗೆ ಯಡಿಯೂರಪ್ಪ ಆಯ್ಕೆ ; ಬಿಜೆಪಿಯಲ್ಲಿ ತಗ್ಗದ ಯಡಿಯೂರಪ್ಪ ಹಿಡಿತ

0

2023 ರ ಕರ್ನಾಟಕ ವಿಧಾನಸಭಾ ಚುನಾವಣೆ ಪೂರ್ವಭಾವಿಯಾಗಿ ಭಾರತೀಯ ಜನತಾ ಪಾರ್ಟಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು 11 ಸದಸ್ಯರ ಸಂಸದೀಯ ಮಂಡಳಿಗೆ ಸೇರಿಸಿದ್ದಾರೆ. ಆ ಮೂಲಕ ಚುನಾವಣಾ ಕಣದಿಂದ ನಿವೃತ್ತಿ ಆದರೂ ತಾನಿನ್ನೂ ಬಿಜೆಪಿ ಪಕ್ಷದ ಪ್ರಭಾವಿ ನಾಯಕ ಎಂದೇ ಯಡಿಯೂರಪ್ಪ ಬಿಂಬಿತರಾಗಿದ್ದಾರೆ.

ಬಿಜೆಪಿ ಪಕ್ಷದಲ್ಲಿ ಯಡಿಯೂರಪ್ಪ ಅವರ ಪ್ರಭಾವವನ್ನು ಶತಾಯಗತಾಯ ತಗ್ಗಿಸಲೇಬೇಕು ಎಂದು ಬಿ.ಎಲ್ ಸಂತೋಷ್ ನಿರ್ದೇಶನದಲ್ಲಿ ಸಂಘಪರಿವಾರ ಹೊರಟಿತ್ತು. ಆದರೆ ಸಧ್ಯದ ರಾಜಕೀಯ ಸಮೀಕ್ಷೆ ಮತ್ತು ಪ್ರತಿಪಕ್ಷಗಳ ಪರವಾಗಿ ಎದ್ದಿರುವ ಜನಾಭಿಪ್ರಾಯದಿಂದ ಯಡಿಯೂರಪ್ಪರನ್ನು ಬಿಟ್ಟರೆ ಆಪತ್ತು ಕಟ್ಟಿಟ್ಟ ಬುತ್ತಿ ಎನ್ನುವಂತಾಗಿದೆ. ಮುಂಬರುವ ಚುನಾವಣೆಯ ಭಯ ಮತ್ತು ಬಿಜೆಪಿ ಪಕ್ಷದ ನಿಲುವಿಗೆ ರಾಜ್ಯಾದ್ಯಂತ ತಲೆದೋರಿರುವ ಆಪತ್ತು ಪಕ್ಷದ ರಾಷ್ಟ್ರೀಯ ನಾಯಕತ್ವಕ್ಕೂ ಅರಿವಾದಂತಿದೆ.

ಈ ಹಿನ್ನೆಲೆಯಲ್ಲಿ ಸಂಘಪರಿವಾರ ಬಿಜೆಪಿ ರಾಷ್ಟ್ರೀಯ ನಾಯಕತ್ವದ ಮೂಲಕ ಬುಧವಾರ ಪ್ರಕಟಿಸಿರುವ 11 ಮಂದಿ ಸಂಸದೀಯ ಮಂಡಳಿಗೆ ಯಡಿಯೂರಪ್ಪರ ಹೆಸರನ್ನು ಸೂಚಿಸಿದೆ. ಆ ಮೂಲಕ ಬಿಜೆಪಿ ಪಕ್ಷಕ್ಕೆ ರಾಜ್ಯದ ಎರಡನೇ ಪ್ರಬಲ ಸಮುದಾಯ ಲಿಂಗಾಯತ ಧರ್ಮದ ಅವಲಂಬನೆಯನ್ನು ಒತ್ತಿ ಹೇಳಿದಂತಾಗಿದೆ.

ಸಮುದಾಯದ ಹಿನ್ನೆಲೆ, ರಾಜಕೀಯ ತಂತ್ರಗಾರಿಕೆ, ಅಧಿಕಾರದಲ್ಲಿ ಇನ್ನೂ ಮುಂದುವರಿಯಬಹುದಾದ ದೈಹಿಕ ಸಾಮರ್ಥ್ಯ ಎಲ್ಲವೂ ಇದ್ದರೂ ಯಡಿಯೂರಪ್ಪರನ್ನು ಪಕ್ಷದ ಹಿಡಿತದಿಂದ ತಪ್ಪಿಸುವುದು ಸಂಘ ಪರಿವಾರದ ಮೂಲ ಉದ್ದೇಶವಾಗಿತ್ತು. ಆ ಕಾರಣ ಕುಟುಂಬದ ಮೇಲೆ ಭ್ರಷ್ಟಾಚಾರದ ಆರೋಪ ಮತ್ತು ಭವಿಷ್ಯದಲ್ಲಿ ಬಿಜೆಪಿಗೆ ತಲೆದೋರಬಹುದಾದ ನಾಯಕತ್ವದ ಕೊರತೆಯಿಂದ ಬಿಜೆಪಿ ಒತ್ತಾಯಪೂರ್ವಕವಾಗಿ ಯಡಿಯೂರಪ್ಪರ ರಾಜೀನಾಮೆ ತಗೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿದ ದಿನದಿಂದಲೇ ರಾಜ್ಯದಲ್ಲಿ ಧಾರ್ಮಿಕ ಸಂಘರ್ಷ, ಹಿಜಾಬ್, ಅಜಾನ್, ಹಲಾಲ್, ಮುಸ್ಲಿಂ ವ್ಯಾಪಾರಿಗಳ ಬಹಿಷ್ಕಾರ, ಕೋಮು ಗಲಭೆಯಂತಹ ಯೋಜಿತ ಸಂಘರ್ಷವನ್ನು ಸಂಘ ಪರಿವಾರ ಹುಟ್ಟು ಹಾಕಿದ್ದು ಸೂಕ್ಷ್ಮವಾಗಿ ಗಮನಿಸಬಹುದಾದ ಸಂಗತಿಯಾಗಿದೆ.

ಜೊತೆಗೆ ಇಂತಹ ಸಂಘರ್ಷದಿಂದ ಎಂತಹ ಜನಾಭಿಪ್ರಾಯ ಮೂಡಬಹುದು ಎಂದು ಬಿಜೆಪಿ ಗಮನಿಸಿದ ಹಿನ್ನೆಲೆಯಲ್ಲಿ ಸಂಘಪರಿವಾರದ ಈ ತಂತ್ರಗಾರಿಕೆ ಹೆಚ್ಚು ಯಶಸ್ವಿಯಾದಂತೆ ಕಾಣುತ್ತಿಲ್ಲ. ಶಿವಮೊಗ್ಗದ ಹರ್ಷ ಮತ್ತು ಸುಳ್ಯದ ಪ್ರವೀಣ್ ನೆಟ್ಟಾರು ಹತ್ಯೆಯ ನಂತರ ಬಿಜೆಪಿಗೆ ಪರವಾದ ರಾಜಕೀಯ ಅಭಿಪ್ರಾಯ ಬರಬಹುದು ಎಂದೇ ಸಂಘ ಪರಿವಾರ ನಿರೀಕ್ಷಿಸಿತ್ತು. ಅದರಂತೆ ಈ ಹತ್ಯೆಗಳನ್ನು ರಾಜಕೀಯಕ್ಕೆ ಎಳೆತಂದಿತ್ತು. ಆದರೆ ಈ ಹತ್ಯೆಗಳ ನಂತರ ಸಂಘಪರಿವಾರ ಹಿನ್ನೆಲೆಯ ಕೆಲವು ಸಂಘಟನೆಗಳೇ ಬಿಜೆಪಿ ವಿರುದ್ಧ ತಿರುಗಿ ಬಿದ್ದದ್ದು ಪ್ರತಿಪಕ್ಷಗಳಿಗೇ ಆಶ್ಚರ್ಯ ತರಿಸುವಂತಾಗಿದೆ. ಕೋಮು ಸಂಘರ್ಷಕ್ಕೆ ಕರೆ ಕೊಡುವ ಯಾವೊಬ್ಬ ಬಿಜೆಪಿ ಮುಖಂಡರ ಮಕ್ಕಳು ಇವತ್ತು ಬೀದಿಗಿಳಿದು ಜೀವ ಕಳೆದುಕೊಂಡಿದ್ದಾರೆ ಎಂದು ಈ ಯುವಕರೇ ಬಿಜೆಪಿಯನ್ನು ಪ್ರಶ್ನಿಸುತ್ತಿದ್ದಾರೆ.

ಎಲ್ಲಕ್ಕಿಂತ ಮುಖ್ಯವಾಗಿ ಇತ್ತೀಚೆಗೆ ನಡೆದ ಸಿದ್ದರಾಮಯ್ಯ ಹುಟ್ಟು ಹಬ್ಬ ಆಚರಣೆ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ರಾಜ್ಯ ಮಾತ್ರವಲ್ಲ, ದೇಶದಲ್ಲಿ ಈ ವರೆಗೆ ನಡೆದ ರಾಜಕೀಯ ಸಮಾವೇಶಗಳಲ್ಲಿ ಈ ಪ್ರಮಾಣದ ಜನಾಭಿಪ್ರಾಯ ಯಾರೂ ಸಹ ಕಂಡಿರಲಿಲ್ಲ. ಎಷ್ಟೇ ಹಣ, ಹೆಂಡದ ಆಮಿಷವಿದ್ದರೂ ಹೆಚ್ಚೆಂದರೆ ಎರಡ್ಮೂರು ಲಕ್ಷದ ಜನಸಂಖ್ಯೆಗೆ ರಾಜಕೀಯ ಪಕ್ಷಗಳು ಸುಸ್ತಾಗುತ್ತಿದ್ದವು. ಆದರೆ ಸಿದ್ದರಾಮಯ್ಯ ಹುಟ್ಟು ಹಬ್ಬದ ಆಚರಣೆ ಮತ್ತು ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ನಡೆದ ಕಾಂಗ್ರೆಸ್ ನ ಸ್ವಾತಂತ್ರ್ಯ ನಡಿಗೆಗೆ ನಿರೀಕ್ಷೆಗೂ ಮೀರಿದ ಜನಾಭಿಪ್ರಾಯ ಬಿಜೆಪಿ ನಿದ್ದೆಗೆಡಿಸಿದೆ.

ಈ ಎಲ್ಲಾ ಹಿನ್ನೆಲೆಯಲ್ಲಿ ಬಿಜೆಪಿ ಪಕ್ಷಕ್ಕೆ ಅನಿವಾರ್ಯವಾಗಿ ಯಡಿಯೂರಪ್ಪರ ನಾಯಕತ್ವ ಹೊರತಾಗಿ ಚುನಾವಣೆ ಎದುರಿಸುವುದು ಅಸಾಧ್ಯ ಎನ್ನುವಂತಾಗಿದೆ. ಮೇಲ್ನೋಟಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಯಡಿಯೂರಪ್ಪ ಸೂಚಿಸಿದ ಮುಖ್ಯಮಂತ್ರಿಯೇ ಆದರೂ ಬೊಮ್ಮಾಯಿ ಈಗ ಸಂಪೂರ್ಣವಾಗಿ ಬಿ.ಎಲ್ ಸಂತೋಷ್ ಕೈಗೊಂಬೆಯಾಗಿದ್ದಾರೆ. ತನ್ನ ರಾಜಕೀಯ ಭವಿಷ್ಯವನ್ನು ಮನಗಂಡ ಬೊಮ್ಮಾಯಿ ಸಂಪೂರ್ಣವಾಗಿ ಸಂಘ ಪರಿವಾರ ಮತ್ತು ಬಿ.ಎಲ್.ಸಂತೋಷ್ ಸೂಚಿಸಿದಂತೇ ಕುಣಿಯುತ್ತಿದ್ದಾರೆ. ಯಡಿಯೂರಪ್ಪ ರಾಜಕೀಯ ಭವಿಷ್ಯದ ಬಗ್ಗೆ ಅನುಮಾನವಿದ್ದ ಬೊಮ್ಮಾಯಿ ಇತ್ತ ಸಂಘಪರಿವಾರವನ್ನೂ ಮೆಚ್ಚಿಸಿ, ಅತ್ತ ಲಿಂಗಾಯತ ಸಮುದಾಯವನ್ನೂ ತನ್ನ ಹಿಡಿತಕ್ಕೆ ತಗೆದುಕೊಳ್ಳುವ ದೂರಾಲೋಚನೆಗೆ ಈಗ ತಣ್ಣೀರು ಎರಚಿದಂತಾಗಿದೆ.

ಏನೆಂದರೂ ಈ ಚುನಾವಣೆ ನಂತರ ಯಡಿಯೂರಪ್ಪ ರಾಜಕೀಯ ಭವಿಷ್ಯ ಸಂಪೂರ್ಣವಾಗಿ ಮುಗಿದ ಅಧ್ಯಾಯ ಎಂಬುದು ರಾಜಕೀಯ ಪಂಡಿತರ ಲೆಕ್ಕಾಚಾರ. ಯಡಿಯೂರಪ್ಪ ಚುನಾವಣಾ ಕಣದ ನಿವೃತ್ತಿಯ ನಂತರ ಇಲ್ಲಿಯವರೆಗೂ ಯಡಿಯೂರಪ್ಪ ಪುತ್ರ ವಿಜಯೇಂದ್ರಗೆ ಯಾವುದೇ ಪ್ರಭಾವಿ ರಾಜಕೀಯ ಸ್ಥಾನಮಾನ ನೀಡದಿರುವುದು ಮತ್ತು ಕುಟುಂಬದ ಮೇಲಿರುವ ಭ್ರಷ್ಟಾಚಾರದ ಆರೋಪದಿಂದ ರಾಜ್ಯ ಬಿಜೆಪಿ ಮೇಲಿರುವ ಯಡಿಯೂರಪ್ಪ ಕುಟುಂಬದ ಹಿಡಿತ ತಪ್ಪಿಸುವ ತಂತ್ರಗಾರಿಕೆಯಾಗಿದೆ. ಮುಂಬರುವ ಚುನಾವಣೆಗೆ ಯಡಿಯೂರಪ್ಪ ಮತ್ತವರ ಕುಟುಂಬವನ್ನು ಮೆಟ್ಟಿಲಾಗಿ ಬಳಸಿಕೊಂಡು ಸ್ಪಷ್ಟ ಬಹುಮತ ಬಂದರೆ ಬಿ.ಎಲ್ ಸಂತೋಷ್ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಸಂಘಪರಿವಾರದ್ದು ಎಂಬುದು ಸಂಘಪರಿವಾರದ ಆಂತರಿಕ ಉದ್ದೇಶ ಎಂಬುದು ಸ್ಪಷ್ಟ.

You cannot copy content of this page

Exit mobile version