Home ಬ್ರೇಕಿಂಗ್ ಸುದ್ದಿ ಜೂ.9 ರಂದು ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್ ರವರಿಗೆ ನಾಗರಿಕರ ಸನ್ಮಾನ – ಹೆಚ್.ಎಲ್. ಮಲ್ಲೇಶ್...

ಜೂ.9 ರಂದು ಬೂಕರ್ ಪ್ರಶಸ್ತಿ ಬಾನು ಮುಷ್ತಾಕ್ ರವರಿಗೆ ನಾಗರಿಕರ ಸನ್ಮಾನ – ಹೆಚ್.ಎಲ್. ಮಲ್ಲೇಶ್ ಗೌಡ


ಹಾಸನ :
ನಗರದ ಹಾಸನಾಂಭ ಕಲಾಕ್ಷೇತ್ರದಲ್ಲಿ ಜೂನ್ 9ರ ಸೋಮವಾರ ಬೆಳಗ್ಗೆ 11 ಗಂಟೆಗೆ ಬೂಕರ್ ಪ್ರಶಸ್ತಿ ಪಡೆದ ಬಾನು ಮುಷ್ತಾಕ್‌ಅವರಿಗೆ ಜಿಲ್ಲಾ ‘ನಾಗರಿಕ ಸನ್ಮಾನ’ ನಡೆಯಲಿದ್ದು, ಇದಕ್ಕೆ ಮೊದಲು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ವಿವಿಧ ಜನಪದ ಕಲಾತಂಡಗಳ ಸಾಂಸ್ಕೃತಿಕ ಮೆರವಣಿಗೆಯು ಆರಂಭವಾಗಿ ಕಲಾಭವನದವರೆಗೂ ಸಾಗಲಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಚ್.ಎಲ್. ಮಲ್ಲೇಶ್ ಗೌಡ ತಿಳಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿ, ಸನ್ಮಾನ ಕಾರ್ಯಕ್ರಮವನ್ನು ಕನ್ನಡ ನಾಡಿನ ಹಿರಿಯ ಸಾಹಿತಿ ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸಿ ಮಾತನಾಡಲಿದ್ದಾರೆ ಹಾಗೂ ಡಾ. ಎಚ್.ಎಸ್. ಅನುಪಮಾ ಅವರು ಅಭಿನಂಧನಾ ನುಡಿಗಳನ್ನು ಆಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾನ್ಯ ಸಂಸದರಾದ ಶ್ರೀಯುತ ಶ್ರೇಯಸ್ ಪಟೇಲ್, ಮಾನ್ಯ ಶಾಸಕರಾದ ಶ್ರೀಯುತ ಸ್ವರೂಪ್ ಪ್ರಕಾಶ್, ಹಾಸನ ನಗರಪಾಲಿಕೆ ಅಧ್ಯಕ್ಷರಾದ ಶ್ರೀಯುತ ಎಂ. ಚಂದ್ರೇಗೌಡ, ಮಾನ್ಯ ಜಿಲ್ಲಾಧಿಕಾರಿ ಶ್ರೀಮತಿ ಸಿ. ಸತ್ಯಭಾಮ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಕ ಅಧಿಕಾರಿ ಶ್ರೀಮತಿ ಬಿ.ಆರ್. ಪೂರ್ಣಿಮ ಮತ್ತು ಜಿಲ್ಲಾ ಪೋಲೀಸ್ ವರಿಷ್ಟಾಧಿಕಾರಿ ಶ್ರೀಮತಿ ಮೊಹಮದ್ ಸುಜೀತ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮಕ್ಕೆ ಹಾಸನ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳ ಮುಖಂಡರು, ಕಾರ್ಯಕರ್ತರು, ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದರು.

ಹಾಸನದ ಹೆಮ್ಮೆಯ ಸಾಹಿತಿ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ 2025ರ ಬೂಕರ್ ಅಂತರರಾಷ್ಟಿಯ ಪ್ರಶಸ್ತಿ ಲಭಿಸಿರುವುದು ಕನ್ನಡ, ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ಕನ್ನಡ ಸಾಹಿತ್ಯಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರಕಿದೆ. ಸಮೃದ್ಧ ಹಾಗೂ ಶಾಶ್ತ್ರೀಯ ಭಾಷೆಯಾದ ನಮ್ಮ ಕನ್ನಡ ಭಾಷೆ ಇಂದು ಹಲವು ಸಮಸ್ಯೆಗಳು ಮತ್ತು ದಾಳಿಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ಕನ್ನಡ ಸತ್ವ ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವುದು ಬಹಳ ಸಂತಸದ ವಿಷಯ. ಅವರು ಈ ಅತ್ಯುನ್ನತ ಪ್ರಶಸ್ತಿ ಪಡೆದಿರುವುದು ನಮಗೆ ಅಪಾರ ಹೆಮ್ಮೆಯ ವಿಷಯವಾಗಿದ್ದು, ಅವರನ್ನು ಮತ್ತು ಅವರ ಕೃತಿಯನ್ನು ಅತ್ಯಂತ ಸಮರ್ಥವಾಗಿ ಅನುವಾದಿಸಿ ಕನ್ನಡಕ್ಕೆ ಜಾಗತಿಕ ಮನ್ನಡೆಗಳಿಸಲು ಕಾರಣರಾದ ನಮ್ಮ ಪಕ್ಕದ ಜಿಲ್ಲೆಯವರಾದ ಶ್ರೀಮತಿ ದೀಪಾ ಭಾಸ್ತಿಯವರನ್ನು ಶ್ರೀಮತಿ ದೀಪಾ ಭಾಸ್ತಿ ಅವರಿಗೆ ‘ಒಂದು ನಾಗರಿಕ ಸನ್ಮಾನ’ ಮಾಡಿ ಗೌರವಿಸುವುದು ನಮ್ಮೆಲ್ಲರ ಆಧ್ಯತೆಯ ಕೆಲಸವಾಗಿದೆ. ಜೂನ್ 9ರ ಸೋಮವಾರ ಹಾಸನದ ಹಾಸನಾಂಭ ಕಲಾಕ್ಷೇತ್ರದಲ್ಲಿ ಶ್ರೀಮತಿ ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ‘ನಾಗರಿಕ ಸನ್ಮಾನ’ ಮಾಡಲು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜನಪರ ಚಳುವಳಿಗಳು, ಕನ್ನಡಪರ ಸಂಘಟನೆಗಳು, ಸಂಘ ಸಂಸ್ಥೆಗಳು ಹಾಗೂ ನಾಗರಿಕ ಸಮಿತಿ ನಿರ್ಧರಿಸಿವೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಸಂಘಟಕರಾದ ತೋಫಿಕ್, ದಲಿತಪರ ಸಂಘಟನೆಯ ಮುಖಂಡರಾದ ಎಂ.ಜಿ. ಪೃಥ್ವಿ, ರಮೇಶ್, ಕೆ.ಪಿ.ಆರ್.ಎಸ್. ಜಿಲ್ಲಾಧ್ಯಕ್ಷ ಹೆಚ್.ಆರ್. ನವೀನ್ ಕುಮಾರ್, ಕಸಾಪ ಗೌರವ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ ಇತರರು ಉಪಸ್ಥಿತರಿದ್ದರು.

You cannot copy content of this page

Exit mobile version