Thursday, June 19, 2025

ಸತ್ಯ | ನ್ಯಾಯ |ಧರ್ಮ

ಗಾಜಾದಲ್ಲಿನ ನಾಗರಿಕರ ಸಾವು ಸಹಿಸಲಾಗದು: ರುಚಿರಾ ಕಾಂಬೋಜ್

ವಿಶ್ವಸಂಸ್ಥೆ: ಗಾಜಾದಲ್ಲಿನ ನಾಗರಿಕರ ಸಾವು ಸಹಿಸಲಾಗದು ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಭಾರತದ ಖಾಯಂ ರಾಯಭಾರಿ ರುಚಿರಾ ಕಾಂಬೋಜ್ ಹೇಳಿದ್ದಾರೆ. ಗಾಜಾದ ಮೇಲೆ ಇಸ್ರೇಲ್ ಯುದ್ಧ ಪ್ರಾರಂಭವಾದಾಗಿನಿಂದ ಭಾರತವು ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ನಾಯಕರೊಂದಿಗೆ ನಿರಂತರ ಸಂಪರ್ಕವನ್ನು ಹೊಂದಿದೆ ಎಂದು ಅವರು ಹೇಳಿದರು.

ಗಾಜಾದಲ್ಲಿ ತಕ್ಷಣದ ಕದನ ವಿರಾಮಕ್ಕೆ ಭಾರತ ಆಗ್ರಹಿಸುತ್ತಿದೆ. ಮಾನವೀಯ ನೆರವಿನ ನಿರಂತರ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಶಾಂತಿ ಮತ್ತು ಸ್ಥಿರತೆಯನ್ನು ತ್ವರಿತವಾಗಿ ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಳ್ಳುವುದು ಭಾರತದ ನಿಲುವು ಎಂದು ಅವರು ಸ್ಪಷ್ಟಪಡಿಸಿದರು.

ಗಾಜಾದ ಮೇಲೆ ಇಸ್ರೇಲ್‌ನ ಉಗ್ರ ದಾಳಿಯಲ್ಲಿ ಅಪಾರ ಪ್ರಮಾಣದ ಜೀವಹಾನಿ ಸಂಭವಿಸಿದೆ, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ ಎಂದು ರುಚಿರಾ ಕಾಂಬೋಜ್ ಬುಧವಾರ ಹೇಳಿದ್ದಾರೆ. ದಾಳಿಯ ಪರಿಣಾಮವಾಗಿ, ಗಾಜಾದಲ್ಲಿ ಮಾನವೀಯ ಬಿಕ್ಕಟ್ಟು ಉಂಟಾಗಿದೆ. ಇದು ಅಸಹನೀಯ ಮತ್ತು ಸ್ವೀಕಾರಾರ್ಹವಲ್ಲ ಎಂದು ಅವರು ಹೇಳಿದರು.

ನಾಗರಿಕರ ಸಾವನ್ನು ಭಾರತ ತೀವ್ರವಾಗಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಭಾರತ ಎಂದಿಗೂ ಸಹಿಸುವುದಿಲ್ಲ ಎಂದು ಅವರು ಹೇಳಿದರು. ನಾಗರಿಕರನ್ನು ಒತ್ತೆಯಾಳುಗಳನ್ನಾಗಿ ಮಾಡಿಕೊಳ್ಳುವುದು ಸಮಂಜಸವಲ್ಲ. ಒತ್ತೆಯಾಳುಗಳನ್ನು ತಕ್ಷಣವೇ ಮತ್ತು ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು.

ಮಧ್ಯಪ್ರಾಚ್ಯದ ನಾಯಕರೊಂದಿಗೆ ಭಾರತೀಯ ನಾಯಕತ್ವವು ಸಂಬಂಧವನ್ನು ಹೊಂದಿದೆ ಎಂದು ಹೇಳಿದ ಅವರು, ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಈ ಸಂಘರ್ಷಗಳಿಗೆ ಶಾಶ್ವತ ಮತ್ತು ಶಾಂತಿಯುತ ಪರಿಹಾರವನ್ನು ಕಂಡುಕೊಳ್ಳುವುದು ಭಾರತದ ನಿಲುವು ಎಂದು ಅವರು ಮೊದಲಿನಿಂದಲೂ ಹೇಳುತ್ತಾ ಬಂದಿದ್ದಾರೆ.

ಗಾಜಾಕ್ಕೆ ಮಾನವೀಯ ನೆರವು ನೀಡುವ ಭದ್ರತಾ ಮಂಡಳಿಯ ನಿರ್ಣಯಕ್ಕೆ ರಷ್ಯಾ ತಿದ್ದುಪಡಿಯನ್ನು ಪ್ರಸ್ತಾಪಿಸಿತು, ಆದರೆ ಯುನೈಟೆಡ್ ಸ್ಟೇಟ್ಸ್ ಕಳೆದ ತಿಂಗಳ 22ರಂದು ಅದನ್ನು ವೀಟೋ ಮಾಡಿದೆ. ಬಳಿಕ ನಡೆದ ಸಾಮಾನ್ಯ ಸಭೆಯನ್ನುದ್ದೇಶಿಸಿ ರುಚಿರ ಕಾಂಬೋಜ್ ಮಾತನಾಡಿದರು.

ಮಂಗಳವಾರ, ಮಧ್ಯ ಮತ್ತು ದಕ್ಷಿಣ ಗಾಜಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿಯಲ್ಲಿ 147 ಪ್ಯಾಲೆಸ್ಟೀನಿಯನ್ನರು ಕೊಲ್ಲಲ್ಪಟ್ಟರು. ಅವರಲ್ಲಿ ರಾಫಾ ನಗರದಲ್ಲಿ ಒಂದೇ ಕುಟುಂಬದ 15 ಜನರಿದ್ದಾರೆ. ಒಂದು ಕಾಲದಲ್ಲಿ ಸುರಕ್ಷಿತ ವಲಯ ಎಂದು ಘೋಷಿಸಲಾಗಿದ್ದ ರಫಾ ನಗರದಲ್ಲಿಯೂ ಇಸ್ರೇಲ್ ಉಗ್ರ ದಾಳಿ ನಡೆಸುತ್ತಿದೆ.

ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿ ಪಡೆಗಳು ಸರಣಿ ದಾಳಿ ನಡೆಸುತ್ತಿವೆ. ಪ್ಯಾಲೆಸ್ತೀನ್ ಹೋರಾಟಗಾರರನ್ನು ಸ್ಫೋಟಕಗಳಿಂದ ಗುರಿಯಾಗಿಸಲಾಗುತ್ತಿದೆ. ಏತನ್ಮಧ್ಯೆ, ಯುಎಸ್ ವಿದೇಶಾಂಗ ಕಾರ್ಯದರ್ಶಿ ಆಂಥೋನಿ ಬ್ಲಿಂಕೆನ್ ರಮಲ್ಲಾದಲ್ಲಿ ಪ್ಯಾಲೆಸ್ತೀನ್ ಪ್ರಾಧಿಕಾರದ ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರನ್ನು ಭೇಟಿಯಾದರು.

ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ ಸಭೆಯ ಕುರಿತು ಹೇಳಿಕೆಯನ್ನು ಬಿಡುಗಡೆ ಮಾಡಿದೆ. ಗಾಜಾದಲ್ಲಿ ನಾಗರಿಕರ ಸಾವು-ನೋವುಗಳನ್ನು ಕಡಿಮೆ ಮಾಡಲು ನಡೆಯುತ್ತಿರುವ ಪ್ರಯತ್ನಗಳು ಮತ್ತು ಮಾನವೀಯ ನೆರವಿನ ಅಡೆತಡೆಯಿಲ್ಲದ ವಿತರಣೆಯನ್ನು ವೇಗಗೊಳಿಸುವ ಬಗ್ಗೆ ಬ್ಲಿಂಕನ್ ಚರ್ಚಿಸಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಇಸ್ರೇಲ್ ದಾಳಿಯಲ್ಲಿ ಇಲ್ಲಿಯವರೆಗೆ 23,357 ಜನರು ಸಾವನ್ನಪ್ಪಿದ್ದಾರೆ ಮತ್ತು 59,410 ಜನರು ಗಾಯಗೊಂಡಿದ್ದಾರೆ.

ಸೆಂಟ್ರಲ್ ಗಾಜಾದ ಡೀರ್ ಎಲ್-ಬಲಾವ್‌ನಲ್ಲಿರುವ ಅಲ್-ಅಕ್ಸಾ ಆಸ್ಪತ್ರೆ ಬಳಿಯ ಮನೆಯೊಂದರ ಮೇಲೆ ಇಸ್ರೇಲಿ ಪಡೆಗಳು ದಾಳಿ ನಡೆಸಿದಾಗ 40 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ ಎಂದು ಗಾಜಾ ಸರ್ಕಾರದ ಮಾಧ್ಯಮ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ಸೇನೆ ಸುರಕ್ಷಿತ ವಲಯ ಎಂದು ಘೋಷಿಸಿರುವ ಪ್ರದೇಶದಲ್ಲಿ ನಡೆದಿರುವ ದಾಳಿಯಿಂದಾಗಿ ಕೇಂದ್ರ ಗಾಜಾದಲ್ಲಿ ಇಸ್ರೇಲ್ ಸೇನೆ ಹೇಳುತ್ತಿರುವ ಸುಳ್ಳು, ವಂಚನೆಗಳು ಸ್ಪಷ್ಟವಾಗುತ್ತಿವೆ ಎಂದು ಮಾಧ್ಯಮ ಕಚೇರಿ ಪ್ರಕಟಣೆ ತಿಳಿಸಿದೆ. ಗಾಜಾದಲ್ಲಿ ಎಲ್ಲಿಯೂ ಸುರಕ್ಷಿತ ಪ್ರದೇಶವಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅದು ಹೇಳಿದೆ.

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಜ್ಞ ಬಾಲಕೃಷ್ಣನ್ ರಾಜಗೋಪಾಲ್ ಅವರು, ಗಾಜಾದಲ್ಲಿನ ಮನೆಗಳ ಧ್ವಂಸವನ್ನು ಅಂತರಾಷ್ಟ್ರೀಯ ನ್ಯಾಯಾಲಯವು ನರಮೇಧದ ಸಾಕ್ಷಿ ಎಂದು ಪರಿಗಣಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಇಲ್ಲಿಯವರೆಗೆ, ಗಾಜಾದಲ್ಲಿ ಶೇಕಡಾ 56ಕ್ಕಿಂತಲೂ ಹೆಚ್ಚು ಮನೆಗಳು ನಾಶವಾಗಿವೆ ಎಂದು ಅವರು ಹೇಳಿದರು.

ಉತ್ತರ ಗಾಜಾದಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ಅವರು ಹೇಳಿದರು. 82ರಷ್ಟು ಮನೆಗಳು ನೆಲಸಮವಾಗಿವೆ ಎಂದರು. ಗಾಜಾದ ಆಸ್ಪತ್ರೆಗಳಲ್ಲಿ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ ಎಂದು ರೆಡ್‌ಕ್ರಾಸ್ ಹೇಳಿದೆ. ಅಂತರಾಷ್ಟ್ರೀಯ ರೆಡ್ ಕ್ರಾಸ್ ಸಮಿತಿಯ ನಿರ್ದೇಶಕ ರಾಬರ್ಟ್ ಮರ್ದಿನಿ ಮಾತನಾಡಿ, ಎಲ್ಲ ಆಸ್ಪತ್ರೆಗಳಲ್ಲಿ ಆರೋಗ್ಯ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ಇದು ಸ್ವೀಕಾರಾರ್ಹವಲ್ಲ ಮತ್ತು ಅಪಾಯಕಾರಿ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page