Home ದೇಶ ರೈತರ ಜೊತೆ ನಿಲ್ಲಲಿದೆಯೇ ಜೆನ್‌ ಝೀ? ರೈತನಾಯಕ ಟಿಕಾಯತ್‌ ಜೊತೆ ಸಭೆ ನಡೆಸಿದ ಸಿಜೆಪಿ ನಾಯಕ...

ರೈತರ ಜೊತೆ ನಿಲ್ಲಲಿದೆಯೇ ಜೆನ್‌ ಝೀ? ರೈತನಾಯಕ ಟಿಕಾಯತ್‌ ಜೊತೆ ಸಭೆ ನಡೆಸಿದ ಸಿಜೆಪಿ ನಾಯಕ ಅಶುತೋಷ್

0

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಕಾರಣವಾದ ಪ್ರತಿಭಟನೆಯ ಯಶಸ್ಸಿನಿಂದ ಹೊಸ ಉತ್ಸಾಹದಲ್ಲಿರುವ ವಿದ್ಯಾರ್ಥಿಗಳು ಮತ್ತು ಯುವಜನರು ರೈತರೊಂದಿಗೆ ಕೈಜೋಡಿಸಿ ಒಂದೇ ವೇದಿಕೆಗೆ ಬಂದು ನರೇಂದ್ರ ಮೋದಿ ಸರ್ಕಾರದ ವಿರುದ್ಧ ದೇಶವ್ಯಾಪಿ ಬೃಹತ್ ಚಳವಳಿ ಆರಂಭಿಸಲಿದ್ದಾರೆಯೇ?

ನಗರಗಳಲ್ಲಿ ವಾಸಿಸುವ ‘ಜೆನ್‌ಝಿ’ (Gen-Z) ತಲೆಮಾರು, ಹೊಲಗಳಲ್ಲಿ ಕಷ್ಟಪಟ್ಟು ದುಡಿಯುವ ರೈತರೊಂದಿಗೆ ಕೈಜೋಡಿಸಲು ಸಾಧ್ಯವೇ? ಪರ್ಯಾಯ ಆಸಕ್ತಿಗಳು ಮತ್ತು ಆಕಾಂಕ್ಷೆಗಳನ್ನು ಹೊಂದಿರುವ ಇಂತಹ ಭಿನ್ನ ವರ್ಗಗಳು ಒಟ್ಟಾಗಿ ಕೆಲಸ ಮಾಡಲು ಸಾಧ್ಯವೇ? ಕಾಕ್ರೋಚ್ ಜನತಾ ಪಾರ್ಟಿ (CJP) ವಕ್ತಾರ ಅಶುತೋಷ್ ರಾಂಕಾ ಅವರು ಭಾರತೀಯ ಕಿಸಾನ್ ಯೂನಿಯನ್ (BKU) ಮುಖ್ಯಸ್ಥ ರಾಕೇಶ್ ಟಿಕಾಯತ್ ಅವರನ್ನು ಭೇಟಿಯಾಗಿ, ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಎಲ್ಲಾ ಕಡೆಯಿಂದ ಸುತ್ತುವರಿಯುವ ಯೋಜನೆಗಳ ಕುರಿತು ಚರ್ಚಿಸಿದ ನಂತರ ಈ ಪ್ರಶ್ನೆಗಳು ಎದ್ದಿವೆ. ಎರಡೂ ವರ್ಗಗಳಿಗೆ ಸೇರಿದ ಮತ್ತಷ್ಟು ಜನರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿದ್ಯಾರ್ಥಿಗಳು, ಯುವಜನರು ಮತ್ತು ರೈತರನ್ನು ಒಂದೇ ವೇದಿಕೆಗೆ ತಂದು ಸರ್ಕಾರದ ವಿರುದ್ಧ ಚಳವಳಿ ನಡೆಸಲು ಅಗತ್ಯವಿರುವ ಭವಿಷ್ಯದ ತಂತ್ರ ಮತ್ತು ಕಾರ್ಯಾಚರಣೆಯ ಯೋಜನೆಗಳ ಕುರಿತು ಅವರು ಚರ್ಚಿಸಿದರು. “ಎಲ್ಲಾ ಕಡೆಯಿಂದ ಮೋದಿ ಸರ್ಕಾರವನ್ನು ಮುತ್ತಿಗೆ ಹಾಕಲು ಈ ದೇಶದ ರೈತರು, ವಿದ್ಯಾರ್ಥಿಗಳು ಮತ್ತು ಯುವಜನರು ಒಟ್ಟಾಗಿ ಕೆಲಸ ಮಾಡಲಿದ್ದಾರೆ ಎಂದು ನಾವು ಆಶಿಸುತ್ತೇವೆ” ಎಂದು ರಾಂಕಾ ಮಾಧ್ಯಮಗಳಿಗೆ ತಿಳಿಸಿದರು.

ದೆಹಲಿಯ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಬಾರದು ಎಂಬ ತಮ್ಮ ಬೇಡಿಕೆಗೆ ಬೆಂಬಲ ನೀಡುವಂತೆ ಸಿಜೆಪಿ, ಟಿಕಾಯತ್ ಅವರನ್ನು ಕೋರಿದೆ. ಪ್ರತಿಭಟನಾಕಾರರ ವಿರುದ್ಧ ಕ್ರಮಗಳನ್ನು ಕೈಬಿಡದಿದ್ದರೆ ಮತ್ತೆ ದೇಶವ್ಯಾಪಿ ಚಳವಳಿ ಆರಂಭಿಸುವುದಾಗಿ ಸಿಜೆಪಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ಬಿಹಾರ ಮತ್ತು ಪಶ್ಚಿಮ ಬಂಗಾಳದಲ್ಲಿ ವಿದ್ಯಾರ್ಥಿಗಳ ವಿರುದ್ಧ ಪ್ರಕರಣಗಳು ದಾಖಲಾಗಿದ್ದು, ರಾಜಸ್ಥಾನದಲ್ಲೂ ವಿದ್ಯಾರ್ಥಿಗಳ ಮೇಲೆ ಪ್ರಕರಣಗಳು ದಾಖಲಾಗುತ್ತಿವೆ ಎಂದು ಸಿಜೆಪಿ ಆರೋಪಿಸಿದೆ. ಮಧ್ಯಪ್ರದೇಶದಲ್ಲಿ ರೈತರ ಇತ್ತೀಚಿನ ಆಂದೋಲನದ ಹಿನ್ನೆಲೆಯಲ್ಲಿ ಸಿಜೆಪಿ-ಟಿಕಾಯತ್ ಸಭೆಯು ಮಹತ್ವ ಪಡೆದುಕೊಂಡಿದೆ.

ಬೆಂಬಲ ಬೆಲೆಗಾಗಿ ರಸ್ತೆಗಿಳಿದ ರೈತರು

ಬಿಜೆಪಿ ಆಡಳಿತದ ಮಧ್ಯಪ್ರದೇಶದಲ್ಲಿ ರೈತರ ಆಂದೋಲನ ಮುಂದುವರಿದಿದೆ. ರಾಜಧಾನಿ ಭೋಪಾಲ್‌ನಲ್ಲಿ ಹೆಸರುಕಾಳು (Moong) ಖರೀದಿ ಮತ್ತು ಇ-ಟೋಕನ್ ವ್ಯವಸ್ಥೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಬುಧವಾರ 2,000 ಕ್ಕೂ ಹೆಚ್ಚು ರೈತರು ಪೋಲೀಸ್ ಬ್ಯಾರಿಕೇಡ್‌ಗಳನ್ನು ಮುರಿದು, ಸಿಎಂ ಮೋಹನ್ ಯಾದವ್ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿ ರಸ್ತೆಯಲ್ಲೇ ಧರಣಿ ಕುಳಿತರು.

ಕನಿಷ್ಠ ಬೆಂಬಲ ಬೆಲೆಗೆ ಕಾನೂನಾತ್ಮಕ ಗ್ಯಾರಂಟಿ ನೀಡಬೇಕೆಂದು ಆಗ್ರಹಿಸಿ ಕೆಲವು ರೈತರು ಅರ್ಧನಗ್ನ ಪ್ರದರ್ಶನದ ಮೂಲಕ ಪ್ರತಿಭಟಿಸಿದರು. ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಕಲೆಕ್ಟರ್ ಪ್ರಿಯಾಂಕ್ ಮಿಶ್ರಾ ಅವರು ನರ್ಮದಾಪುರಂ ರಸ್ತೆಯಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲು ಆದೇಶ ಹೊರಡಿಸಿದರು. ಈ ಮಧ್ಯೆ, ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ತಮ್ಮೊಂದಿಗೆ ಊಟ ಮಾಡಿ, ಸಮಸ್ಯೆಗಳನ್ನು ಆಲಿಸುವಂತೆ ರೈತರು ರಾಜಕೀಯ ನಾಯಕರಿಗೆ ಆಹ್ವಾನ ನೀಡಿದ್ದಾರೆ.

ರೈತರು ಮುಖ್ಯವಾಗಿ ಮೂರು ಬೇಡಿಕೆಗಳನ್ನು ಇಟ್ಟಿದ್ದಾರೆ. ಮೊದಲನೆಯದಾಗಿ, ರಾಜ್ಯದಲ್ಲಿ ಶೇ. 100 ರಷ್ಟು ಹೆಸರುಕಾಳು ಖರೀದಿಗೆ ಭರವಸೆ ನೀಡಬೇಕು. ಎರಡನೆಯದಾಗಿ, ಗೊಬ್ಬರ ವಿತರಣಾ ವ್ಯವಸ್ಥೆಯನ್ನು ಸುಧಾರಿಸಬೇಕು. ಮೂರನೆಯದಾಗಿ, ರೈತರ ಬಾಕಿ ಇರುವ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಬೇಡಿಕೆಗಳ ಕುರಿತು ಮಂಗಳವಾರ ರಾತ್ರಿ ಅಧಿಕಾರಿಗಳು ಮತ್ತು ರೈತರ ನಡುವೆ ಗಂಟೆಗಟ್ಟಲೆ ಮಾತುಕತೆ ನಡೆದರೂ ಯಾವುದೇ ಫಲಿತಾಂಶ ಸಿಕ್ಕಿರಲಿಲ್ಲ.

ಒಂದು ವಾರಕ್ಕೆ ಸಾರುವಷ್ಟು ಅಗತ್ಯ ಸಾಮಗ್ರಿಗಳೊಂದಿಗೆ ಬಂದು ರೈತರು ಪ್ರತಿಭಟನೆ ಮುಂದುವರಿಸುತ್ತಿರುವುದು ಗಮನಾರ್ಹ. ಇದಲ್ಲದೆ, ಈ ರೈತ ಚಳವಳಿಗೆ ‘ಜೆನ್‌ಝೀ’ ವರ್ಗದ ಬೆಂಬಲವೂ ಸಿಗುತ್ತಿದೆ. ದೆಹಲಿಯಲ್ಲಿ ರೈತ ನಾಯಕ ರಾಕೇಶ್ ಟಿಕಾಯತ್ ಅವರೊಂದಿಗೆ ಸಿಜೆಪಿ ನಾಯಕರು ಭೇಟಿಯಾಗಿ, ವಿದ್ಯಾರ್ಥಿಗಳು ಮತ್ತು ಯುವಜನರೊಂದಿಗೆ ಜಂಟಿ ವೇದಿಕೆ ರಚಿಸಲು ಮುಂದಾಗಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

You cannot copy content of this page

Exit mobile version