Home ದೇಶ ಕೋಲ್ಕತ್ತಾದಲ್ಲಿ ಮುಸ್ಲಿಂ ಉಪ ಪ್ರಾಂಶುಪಾಲೆಗೆ ಒತ್ತಾಯಪೂರ್ವಕ ರಾಜೀನಾಮೆ: ಕೊಠಡಿಗೆ ಗಂಗಾಜಲ ಸಿಂಪಡಿಸಿ ‘ಶುದ್ಧೀಕರಣ’ ಮಾಡಿದ ಎಬಿವಿಪಿ...

ಕೋಲ್ಕತ್ತಾದಲ್ಲಿ ಮುಸ್ಲಿಂ ಉಪ ಪ್ರಾಂಶುಪಾಲೆಗೆ ಒತ್ತಾಯಪೂರ್ವಕ ರಾಜೀನಾಮೆ: ಕೊಠಡಿಗೆ ಗಂಗಾಜಲ ಸಿಂಪಡಿಸಿ ‘ಶುದ್ಧೀಕರಣ’ ಮಾಡಿದ ಎಬಿವಿಪಿ ವಿದ್ಯಾರ್ಥಿಗಳು

0

ಕೋಲ್ಕತ್ತಾದ ಸುರೇಂದ್ರನಾಥ್ ಲಾ ಕಾಲೇಜಿನ ಉಪ ಪ್ರಾಂಶುಪಾಲೆ ಡಾ. ಮೊಹಮ್ಮದಿ ತರನ್ನುಮ್ ಅವರನ್ನು 23 ಗಂಟೆಗಳ ಕಾಲ ಅಕ್ರಮವಾಗಿ ಕೂಡಿಹಾಕಿ (ಘೇರಾವ್), ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದ ನಂತರ, ಎಬಿವಿಪಿ (ABVP) ಸಂಘಟನೆಯ ವಿದ್ಯಾರ್ಥಿಗಳು ಅವರ ಕಚೇರಿ ಕೊಠಡಿಗೆ ಗಂಗಾಜಲ ಸಿಂಪಡಿಸಿ ಧೂಪ ಹಾಕಿ ‘ಶುದ್ಧೀಕರಣ’ ನಡೆಸಿರುವ ಘಟನೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹಿಂದಿನ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರದ ಪ್ರಭಾವವನ್ನು ತೊಡೆದುಹಾಕಲು ಈ ಕ್ರಮ ಕೈಗೊಂಡಿರುವುದಾಗಿ ಪ್ರತಿಭಟನಾಕಾರರು ಸಮರ್ಥಿಸಿಕೊಂಡಿದ್ದಾರೆ.

ಸೆಮಿಸ್ಟರ್ ಪರೀಕ್ಷೆಗಳಿಗೆ ಹಾಜರಾಗಲು ಕನಿಷ್ಠ ಶೇಕಡಾ 75ರಷ್ಟು ಹಾಜರಾತಿ ಕಡ್ಡಾಯಗೊಳಿಸಿ ಕಾಲೇಜು ಆಡಳಿತ ಮಂಡಳಿ ನೋಟಿಸ್ ಜಾರಿ ಮಾಡಿದ್ದೇ ಈ ವಿವಾದಕ್ಕೆ ಕಾರಣವಾಗಿತ್ತು. ಕಠಿಣ ನಿಯಮ ಜಾರಿಯಾದರೆ 900 ವಿದ್ಯಾರ್ಥಿಗಳ ಪೈಕಿ ಸುಮಾರು 600 ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಲಿದ್ದಾರೆ ಎಂದು ಆರೋಪಿಸಿ ಎಬಿವಿಪಿ ನೇತೃತ್ವದಲ್ಲಿ ಭಾರಿ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಉಪ ಪ್ರಾಂಶುಪಾಲರ ಕೊಠಡಿಯ ವಿದ್ಯುತ್, ಫ್ಯಾನ್ ಸಂಪರ್ಕ ಕಡಿತಗೊಳಿಸಿ, ಆಹಾರ ಮತ್ತು ಕುಡಿಯುವ ನೀರು ನೀಡದೆ ತೀವ್ರ ಕಿರುಕುಳ ನೀಡಲಾಯಿತು ಎಂದು ಡಾ. ತರನ್ನುಮ್ ಆರೋಪಿಸಿದ್ದಾರೆ. ತೀವ್ರ ಒತ್ತಡಕ್ಕೆ ಮಣಿದು ರಾಜೀನಾಮೆ ಪತ್ರ ನೀಡಿದರೂ, ಪೊಲೀಸ್ ರಕ್ಷಣೆಯಲ್ಲಿ ಕ್ಯಾಂಪಸ್‌ನಿಂದ ಹೊರಬರುವ ವೇಳೆ “ನಾನು ರಾಜೀನಾಮೆ ನೀಡಿಲ್ಲ, ನನ್ನನ್ನು ಪಿತೂರಿಯ ಸಂತ್ರಸ್ತೆಯನ್ನಾಗಿಸಲಾಗಿದೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಮತ್ತು ವಕೀಲ ಕೌಸ್ತವ್ ಬಾಗ್ಚಿ ಅವರು ಮಧ್ಯಪ್ರವೇಶಿಸಿ, ಸ್ವಯಂ-ಘೋಷಣೆಯ ಆಧಾರದ ಮೇಲೆ ಪರೀಕ್ಷೆ ಬರೆಯಲು ಅವಕಾಶ ನೀಡುವ ಬಗ್ಗೆ ಚರ್ಚಿಸಿದ್ದರೂ ಪ್ರತಿಭಟನೆ ನಿಲ್ಲಲಿಲ್ಲ. ತರನ್ನುಮ್ ಅವರು ವಿದ್ಯಾರ್ಥಿ ವಿರೋಧಿ ಧೋರಣೆ ಹೊಂದಿದ್ದಾರೆ ಎಂದು ಬಾಗ್ಚಿ ಆರೋಪಿಸಿದ್ದರು.

ಆದರೆ, ವಿದ್ಯಾರ್ಥಿಗಳಲ್ಲಿ ಶಿಸ್ತು ಕಾಪಾಡಲು ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ತರಲು ಯತ್ನಿಸಿದ್ದಕ್ಕೆ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ತರನ್ನುಮ್ ಹೇಳಿದ್ದು, ಉನ್ನತ ಶಿಕ್ಷಣ ಇಲಾಖೆ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ. ಉಪ ಪ್ರಾಂಶುಪಾಲರ ರಾಜೀನಾಮೆಯನ್ನು ‘ವಿದ್ಯಾರ್ಥಿ ಹಕ್ಕುಗಳ ಗೆಲುವು’ ಎಂದು ಎಬಿವಿಪಿ ಬಣ್ಣಿಸಿದೆ.

You cannot copy content of this page

Exit mobile version