ದಿಲ್ಲಿ : ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ ಬಳಿಕ ಶಿಕ್ಷಣ ತಜ್ಞ ಮತ್ತು ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು 8.2 ಕಿ.ಗ್ರಾಂ ತೂಕ ಕಳೆದುಕೊಂಡಿದ್ದಾರೆ ಎಂದು ಕಾಕ್ರೋಚ್ ಜನತಾ ಪಾಟಿ (ಸಿಜೆಪಿ) ಸೋಮವಾರ ತಿಳಿಸಿದೆ.ಸೋನಮ್ ವಾಂಗ್ಚುಕ್ ಅವರ ಉಪವಾಸ ಸತ್ಯಾಗ್ರಹ 16ನೇ ದಿನಕ್ಕೆ ಕಾಲಿರಿಸಿರುವುದರಿಂದ ಅವರ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಸಿಜೆಪಿ ತಿಳಿಸಿದೆ. ಪರೀಕ್ಷಾ ಅಕ್ರಮಗಳ ವಿರುದ್ಧ ಸಿಜೆಪಿ ನಡೆಸುತ್ತಿರುವ ಪ್ರತಿಭಟನೆ ಸೋಮವಾರ 24ನೇ ದಿನಕ್ಕೆ ಕಾಲಿರಿಸಿದ್ದು, ವಿರೋಧ ಪಕ್ಷದ ನಾಯಕರು ಮತ್ತು ವಿದ್ಯಾರ್ಥಿ ಸಂಘಟನೆಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೆಂಬಲ ಸೂಚಿಸಿದ್ದಾರೆ.
‘‘ವಾಂಗ್ಚುಕ್ ಅವರ ಉಪವಾಸ ಮುಷ್ಕರ 16ನೇ ದಿನಕ್ಕೆ ಕಾಲಿರಿಸಿದೆ. ಮಾನವ ಜೀವಗಳನ್ನು ಇಲ್ಲಿ ಪಣಕ್ಕಿಟ್ಟಿರುವುದರಿಂದ ಇದನ್ನು ಅಹಂಕಾರದ ಹೋರಾಟವನ್ನಾಗಿ ಮಾಡದಂತೆ ನಾನು ಸರಕಾರಕ್ಕೆ ವಿನಂತಿಸುತ್ತೇನೆ’’ ಎಂದು ಸಿಜೆಪಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ‘ಎಕ್ಸ್’ನ ಪೋಸ್ಟ್ನಲ್ಲಿ ಮನವಿ ಮಾಡಿದ್ದಾರೆ. ತಪ್ಪನ್ನು ಒಪ್ಪಿಕೊಳ್ಳುವುದು ದೌರ್ಬಲ್ಯದ ಸಂಕೇತವಲ್ಲ. ಅದು ಪ್ರಬುದ್ಧತೆ, ಹೊಣೆಗಾರಿಕೆ ಮತ್ತು ತಪ್ಪು ಸರಿಪಡಿಸುವ ಇಚ್ಛೆಯ ಸಂಕೇತವಾಗಿದೆ. ನಾವು ಕೇಳುತ್ತಿರುವುದು ಕೇವಲ ಹೊಣೆಗಾರಿಕೆಯನ್ನು ಮಾತ್ರ ಎಂದು ದೀಪ್ಕೆ ಹೇಳಿದ್ದಾರೆ.
