ಬೆಂಗಳೂರು: ಮುಖ್ಯಮಂತ್ರಿಗಳ ಕಚೇರಿಯಿಂದ ಆಯ್ದ ಪತ್ರಕರ್ತರಿಗೆ ಸಿಹಿತಿಂಡಿಯೊಂದಿಗೆ ನೀಡಲಾದ ಲಕ್ಷಗಟ್ಟಲೆ ರೂಪಾಯಿ ಭಕ್ಷೀಸು ಹಣದ ಕುರಿತು ಮತ್ತಷ್ಟು ಮಾಹಿತಿಗಳು ಹೊರಬರುತ್ತಿದ್ದು, ಕನ್ನಡಪ್ರಭ ಸಂಸ್ಥೆ ಗಿಫ್ಟ್ ಹಣ ನಿರಾಕರಿಸಿ, ಹಿಂದಕ್ಕೆ ಕಳುಹಿಸಿರುವ ಅಧಿಕೃತ ಮಾಹಿತಿ ʻಪೀಪಲ್ ಮೀಡಿಯಾʼ ಗೆ ಲಭ್ಯವಾಗಿದೆ.
ಮಾಧ್ಯಮಗಳ ಪತ್ರಕರ್ತರಿಗೆ, ಸಂಪಾದಕರಿಗೆ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಗಿಫ್ಟ್ ಆಗಿ ಸಿಹಿ ತಿಂಡಿಯೊಂದಿಗೆ ಲಕ್ಷಗಟ್ಟಲೆ ಹಣ ನೀಡಿರುವ ಕುರಿತು ʻಪೀಪಲ್ ಮೀಡಿಯಾʼ ಇಂದು ಬೆಳಿಗ್ಗೆ ಸ್ಫೋಟಕ ವರದಿ ಮಾಡಿತ್ತು.
ಮುಖ್ಯಮಂತ್ರಿ ಕಚೇರಿಯ ಮಾಧ್ಯಮ ಸಿಬ್ಬಂದಿ ನಗದು ಹಣವಿದ್ದ ಗಿಫ್ಟ್ ಬಾಕ್ಸ್ ತಂದು ಕೊಟ್ಟಾಗ ಕನ್ನಡಪ್ರಭ-ಸುವರ್ಣ ನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ, ಸ್ವೀಟ್ ಬಾಕ್ಸ್ನಲ್ಲಿದ್ದ ಕವರ್ ಗಮನಿಸಿದವರೇ ಸಿಡಿಮಿಡಿಗೊಂಡು, ಸಿಎಂ ಕಚೇರಿ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ.
ನೆವರ್ ಟ್ರೈ ದಿಸ್ ಎಗೇನ್
‘ನಮ್ಮ ಮಾಧ್ಯಮ ಸಂಸ್ಥೆಗಳಿಗೆ ಈ ರೀತಿ ಹಣ ಕಳುಹಿಸುವ ಕೆಲಸ ಮಾಡಬೇಡಿ, ನೆವರ್ ಟ್ರೈ ದಿಸ್ ಎಗೇನ್‘ ಎಂದು ಹೇಳಿ, ಹಣ ವಾಪಾಸ್ ಕಳುಹಿಸಿದರು ಎಂದು ʼಪೀಪಲ್ ಮೀಡಿಯಾʼಗೆ ತಿಳಿದು ಬಂದಿದೆ.