ನೈರುತ್ಯ ರೈಲ್ವೆ ಇಲಾಖೆಯ 194 ಗೂಡ್ಸ್ ರೈಲು ಮ್ಯಾನೇಜರ್ ಹುದ್ದೆಗಳು ಹಾಗೂ ಹುಬ್ಬಳ್ಳಿ ವಿಭಾಗದ 101 ಎಲ್ಡಿಸಿಇ ಹುದ್ದೆಗಳಿಗೆ ಮುಂಬಡ್ತಿ ನೀಡಲು ಉದ್ದೇಶಿಸಲಾಗಿದ್ದ ಪರೀಕ್ಷೆಗಳು ಕನ್ನಡಿಗರ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ದಿಢೀರ್ ರದ್ದಾಗಿವೆ. ಪರೀಕ್ಷೆಯಲ್ಲಿ ಕನ್ನಡ ಭಾಷೆಗೆ ಅವಕಾಶ ನೀಡದ ರೈಲ್ವೆ ಇಲಾಖೆಯ ಧೋರಣೆಯನ್ನು ಖಂಡಿಸಿ ಕನ್ನಡಿಗರು ಮತ್ತು ಕನ್ನಡ ಸಂಘಟನೆಗಳು ನಡೆಸಿದ ನಿರಂತರ ಹೋರಾಟಕ್ಕೆ ಇಲಾಖೆ ಮಣಿದಿದ್ದರೂ, ಪರೀಕ್ಷೆಯನ್ನು ಕೊನೆ ಕ್ಷಣದಲ್ಲಿ ರದ್ದುಗೊಳಿಸುವ ಮೂಲಕ ಕನ್ನಡಿಗ ಉದ್ಯೋಗಿಗಳನ್ನು ಅತಂತ್ರ ಸ್ಥಿತಿಗೆ ತಳ್ಳಲಾಗಿದೆ. ಈ ನಡೆಯು ರೈಲ್ವೆ ಇಲಾಖೆಯ ಅವಿವೇಕದ ಮತ್ತು ಕನ್ನಡಿಗರ ಮೇಲಿನ ತಾತ್ಸಾರ ಮನೋಭಾವದ ಪರಮಾವಧಿಯಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಸಾವಿರಾರು ಉದ್ಯೋಗಿಗಳು ಮೊದಲೇ ವಿನಂತಿಸಿದ್ದರೂ, ರೈಲ್ವೆ ಇಲಾಖೆಯು ಇಷ್ಟು ದಿನ ಶಾಂತಿಯುತ ಪ್ರತಿರೋಧವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿತ್ತು. ಪ್ರಾರಂಭದಲ್ಲಿಯೇ ಇಲಾಖೆಯು ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದ್ದರೆ ಈಗಿನ ಗೊಂದಲದ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ಪ್ರತಿಭಟನೆಯ ಕಾವು ಹೆಚ್ಚಾದ ತಕ್ಷಣವೇ ತರಾತುರಿಯಲ್ಲಿ ಪರೀಕ್ಷೆ ರದ್ದುಮಾಡಿರುವುದು ಇಲಾಖೆಯ ಕುಟಿಲತೆಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಹಿಂದಿ ಹೇರಿಕೆಯ ಮೂಲಕ ಕನ್ನಡಿಗ ಉದ್ಯೋಗಾಕಾಂಕ್ಷಿಗಳಿಗೆ ಅನ್ಯಾಯ ಮಾಡುತ್ತಿರುವುದು ಇದೇ ಮೊದಲೇನಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾಗಿ ಕನ್ನಡಿಗರೇ ಆದ ವಿ. ಸೋಮಣ್ಣನವರು ಇದ್ದರೂ ಸಹ ಕನ್ನಡಿಗರಿಗೆ ಇಂತಹ ಅನ್ಯಾಯವಾಗುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ. ಸೋಮಣ್ಣನವರು ಕನ್ನಡಿಗರ ಪರವಾಗಿ ನಿಂತು ಇಂತಹ ತಾರತಮ್ಯಗಳನ್ನು ಸರಿಪಡಿಸುತ್ತಾರೆ ಎಂಬ ಭರವಸೆಯನ್ನು ಕನ್ನಡಿಗರು ಇಟ್ಟುಕೊಂಡಿದ್ದರು. ಆದರೆ ಅವರು ರೈಲ್ವೆ ಇಲಾಖೆ ಕರ್ನಾಟಕಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಬರೀ ಮಾತಿನ ಅರಮನೆ ಕಟ್ಟುವುದರಲ್ಲಿ ನಿರತರಾಗಿದ್ದಾರೆ. ಅವರು ತಮ್ಮ ಮಾತುಗಳನ್ನು ಕಡಿಮೆ ಮಾಡಿ, ರಾಜ್ಯದ ಹಿತಾಸಕ್ತಿ ಕಾಪಾಡಲು ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಿದ್ದರಾಮಯ್ಯ ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಹಿಂದಿ ಭಾಷೆಯ ಮೇಲೆ ಇರುವ ಅತಿಯಾದ ಪ್ರೀತಿ ಮತ್ತು ಕನ್ನಡದಂತಹ ಪ್ರಾದೇಶಿಕ ಭಾಷೆಗಳ ಮೇಲೆ ಇರುವ ತಾತ್ಸಾರವು ದೇಶದ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಉತ್ತರ ಭಾರತದ ಹಿಂದಿ ಭಾಷಿಗರಿಗೆ ಅನುಕೂಲ ಮಾಡಿಕೊಡುವ ಏಕೈಕ ಉದ್ದೇಶದಿಂದ ಕೇಂದ್ರದ ಪರೀಕ್ಷೆಗಳಲ್ಲಿ ಹಿಂದಿ ಮತ್ತು ಇಂಗ್ಲಿಷ್ಗೆ ಮಾತ್ರ ಆದ್ಯತೆ ನೀಡುವ ಭಾಷಾ ದಬ್ಬಾಳಿಕೆಯನ್ನು ಕನ್ನಡಿಗರು ಸಹಿಸಲು ಸಾಧ್ಯವಿಲ್ಲ. ಭಾರತವು ರಾಜ್ಯಗಳ ಒಕ್ಕೂಟವಾಗಿದ್ದು, ಪ್ರತಿ ಭಾಷೆಗೂ ತನ್ನದೇ ಆದ ಗೌರವವಿದೆ. ನಾವು ಹಿಂದಿಯನ್ನು ಭಾಷೆಯಾಗಿ ವಿರೋಧಿಸುವುದಿಲ್ಲ, ಆದರೆ ಅದನ್ನು ಕನ್ನಡಿಗರ ಮೇಲೆ ಹೇರುವುದನ್ನು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ.
ಕನ್ನಡಿಗರು ತಮ್ಮ ಹಕ್ಕಿನ ಉದ್ಯೋಗ ಮತ್ತು ಭಡ್ತಿಗಾಗಿ ಕೇಂದ್ರದ ಮುಂದೆ ಭಿಕ್ಷೆಗೆ ನಿಂತಿಲ್ಲ, ಬದಲಾಗಿ ತಾವು ಕಲಿತ ಭಾಷೆಯಲ್ಲೇ ಪರೀಕ್ಷೆ ಬರೆಯುವ ಸಾಂವಿಧಾನಿಕ ಹಕ್ಕನ್ನು ಕೇಳುತ್ತಿದ್ದಾರೆ. ಆಳುವ ಪಕ್ಷದ ಸಂಸದರು ತಮ್ಮ ಪಕ್ಷದ ಮುಲಾಜಿಗೆ ಬಿದ್ದು ಮೌನವಾಗಿರಬಹುದು, ಆದರೆ ಜಾಗೃತ ಕನ್ನಡಿಗರು ಈ ಅನ್ಯಾಯವನ್ನು ಪ್ರಶ್ನಿಸುತ್ತಲೇ ಇರುತ್ತಾರೆ. ಇನ್ನು ಮುಂದಿನ ದಿನಗಳಲ್ಲಿ ಇಂತಹ ಭಾಷಾ ತಾರತಮ್ಯ ಮರುಕಳಿಸದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಧ್ಯಪ್ರವೇಶಿಸಿ ಸಂಬಂಧಪಟ್ಟ ಇಲಾಖೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ರದ್ದಾಗಿರುವ ರೈಲ್ವೆ ಪರೀಕ್ಷೆಗಳನ್ನು ಕೂಡಲೇ ಕನ್ನಡದಲ್ಲೂ ಬರೆಯಲು ಅವಕಾಶ ಕಲ್ಪಿಸಿ ಹೊಸದಾಗಿ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
