ಚಾಮರಾಜನಗರ (ಗುಂಡ್ಲು ಪೇಟೆ) : ಏಪ್ರಿಲ್ -21: ಕೇಂದ್ರ ಸರ್ಕಾರ ಕಾಂಗ್ರೆಸ್ ನವರನ್ನು ಗುರಿಯಾಗಿಸಿ ದಾಳಿ ಮಾಡುತ್ತಿದ್ದು ಬಿಜೆಪಿಯವರ ಮೇಲೆ ದಾಳಿ ಆಗುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಿಳಿಸಿದರು.
ಅವರು ಇಂದು ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಶಾಸಕ ಹ್ಯಾರೀಸ್ ಅವರ ಪುತ್ರ ನಲಪಾಡ್ ಅವರ ಮನೆ ಮೇಲೆ ಇಡಿ ದಾಳಿಯಾಗಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಅವರು ಮೇಲಿನಂತೆ ಪ್ರತಿಕ್ರಿಯೆ ನೀಡಿದರು.
ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ
ಮೂಢನಂಬಿಕೆಗಳಲ್ಲಿ ನನಗೆ ನಂಬಿಕೆಯಿಲ್ಲ. ಹಾಗಾಗಿ ಚಾಮರಾಜನಗರಕ್ಕೆ ಸಾಕಷ್ಟು ಬಾರಿ ಭೇಟಿ ನೀಡುತ್ತಿದ್ದೇನೆ. ಇಲ್ಲಿಗೆ ಬಂದರೆ ಕುರ್ಚಿ ಗಟ್ಟಿಯಾಗುತ್ತದೆ ಎಂದು ಪ್ರಾಸಂಗಿಕವಾಗಿ ಹೇಳಿದ್ದೆ ಎಂದು ಮಾಧ್ಯಮದರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಗ್ಯಾರಂಟಿಗಳು ಬಡವರ ಕಾರ್ಯಕ್ರಮಗಳೆಂದು ಗೊತ್ತಾಗಿದೆ
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿದ್ದವರೇ ಅದನ್ನು ಘೋಷಣೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ವಿರೋಧಿಸುತ್ತಿದ್ದವರಿಗೆ ಗ್ಯಾರಂಟಿಗಳು ಬಡವರ ಕಾರ್ಯಕ್ರಮಗಳೆಂದು ಗೊತ್ತಾಗಿದೆ ಎಂದರು.
ಎಲ್ಲರಿಗೂ ಪರಿಹಾರ ಕೊಡುತ್ತೇವೆ
ಸಿಎಂ ತಮ್ಮ ಕ್ಷೇತ್ರದಲ್ಲಿ ಸತ್ತವರಿಗೆ ಮಾತ್ರ ಪರಿಹಾರ ನೀಡುತ್ತಿರುವ ಬಗ್ಗೆ ಜೆಡಿಎಸ್ ಶಾಸಕ ಶರಣಗೌಡ ಚಂದಾಪುರ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಎಲ್ಲರಿಗೂ ನೀಡಲಾಗುತ್ತಿದೆ, ನಮ್ಮ ಗಮನಕ್ಕೆ ಬಂದರೆ ಪರಿಹಾರ ನೀಡುತ್ತೇವೆ. ಶಾಸಕರು ಕೇಳಿದರೂ ಖಂಡಿತ ಕೊಡುತ್ತೇವೆ ಎಂದರು.
ಕ್ಷೇತ್ರ ಮರು ವಿಂಗಡಣೆಗೆ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ಅಲ್ಲ
ಬಿಜೆಪಿಯವರೇ ಮಹಿಳಾ ಮೀಸಲಾತಿ ವಿರೋಧಿಗಳು. ರಾಜೀವ್ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಸಂವಿಧಾನಕ್ಕೆ 73, 74 ನೇ ತಿದ್ದುಪಡಿಗಳನ್ನು ತಂದು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿ ತಂದಿದ್ದು ಕಾಂಗ್ರೆಸ್. ಅದನ್ನು ರಾಜ್ಯಸಭೆಯಲ್ಲಿ ಕೆಡವಿದವರು ಎನ್.ಡಿ. ಎ ಈಗ ರಾಜಕೀಯಕ್ಕಾಗಿ ಕ್ಷೇತ್ರ ಮರುವಿಂಗಡನೆ ಸೇರಿಸಿ ಮಸೂದೆ ಮಂಡಿಸಿದ್ದಾರೆ . ನಮ್ಮದು ಕ್ಷೇತ್ರ ಮರು ವಿಂಗಡಣೆಗೆ ವಿರೋಧವೇ ಹೊರತು ಮಹಿಳಾ ಮೀಸಲಾತಿಗೆ ಅಲ್ಲ ಎಂದರು.
ತೃತೀಯ ಭಾಷೆಗೆ ಅಂಕ : ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು
ತೃತೀಯ ಭಾಷೆಗೆ ಹಿಂದಿನ ವರ್ಷಗಳಂತೆಯೇ ಮೌಲ್ಯಮಾಪನ ಮಾಡಿ ಅಂಕಗಳನ್ನು ನೀಡಬೇಕೆಂದು ಉಚ್ಚ ನ್ಯಾಯಾಲಯ ಹೇಳಿದ್ದು, ಮುಂದಿನ ತೀರ್ಮಾನ ಮಾಡಲು ಸೂಚಿಸಿದ್ದು, ನ್ಯಾಯಾಲಯದ ನಿರ್ದೇಶನವನ್ನು ಪಾಲಿಸಲಾಗುವುದು ಎಂದರು.
ಆಮ್ಲಜನಕ ದುರಂತ: ಅಧಿಕಾರಿಗಳೊಂದಿಗೆ ಚರ್ಚೆ
ಆಮ್ಲಜನಕ ದುರಂತದಲ್ಲಿ ತಪ್ಪಿತಸ್ಥರ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.
ಅಲ್ಪಸಂಖ್ಯಾತರ ನಾಯಕರ ಉಪಸ್ಥಿತಿಯಲ್ಲಿ ತೀರ್ಮಾನವಾಗಿತ್ತು
ಅಲ್ಪಸಂಖ್ಯಾತರನ್ನು ಕಡೆಗಣಿಸುತ್ತಿರುವ ಬಗ್ಗೆ ಅಲ್ಪಸಂಖ್ಯಾತರು ಹೈಕಮಾಂಡ್ ಅವರಿಗೆ ಪತ್ರ ಬರೆದಿರುವ ಬಗ್ಗೆ ಮಾತನಾಡಿ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುವಾಗ ಅಲ್ಪಸಂಖ್ಯಾತರ ನಾಯಕರು ಉಪಸ್ಥಿತರಿದ್ದರು. ಅವರೆದುರೇ ತೀರ್ಮಾನವಾಗಿತ್ತು, ನಂತರ ಅವರು ವಿರೋಧ ಮಾಡಿದರು ಎಂದರು.
ಕಾಂಗ್ರೆಸ್ ಗೆಲ್ಲಲಿದೆ
ದಾವಣಗೆರೆ ಮತ್ತು ಬಾಗಲಕೋಟೆ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
