ಬೆಂಗಳೂರು: ತಮಿಳುನಾಡಿಗೆ ನೀರು ಬಿಡುವ ವಿಷಯದ ಕುರಿತು ಈಗಾಗಲೇ ಸರ್ವ ಪಕ್ಷಗಳ ಸಭೆ ಕರೆಯುವುದಾಗಿ ಘೋಷಿಸಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಕೇಂದ್ರ ಜಲ ಸಂಪನ್ಮೂಲ ಸಚಿವರನ್ನು ಸಹ ಭೇಟಿಯಾಗುವುದಾಗಿ ತಿಳಿಸಿದ್ದರು.
ಈ ಬೆಳವಣಿಗೆಗಳ ನಡುವೆಯೇ ಮುಖ್ಯಮಂತ್ರಿಯವರು ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಾಗದಿರುವ ಕರ್ನಾಟಕದ ಅಸಹಾಯಕತೆಯನ್ನು ವಿವರಿಸಿ ಕೇಂದ್ರ ಜಲ ಸಂಪನ್ಮೂಲ ಸಚಿವರಾದ ಗಜೇಂದ್ರ ಸಿಂಗ್ ಶೇಖಾವತ್ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ.
ಈ ಪತ್ರದಲ್ಲಿ ಅವರು ಕಾವೇರಿ ನದಿ ನೀರನ್ನು ರೈತರು ಕೃಷಿಗೆ, ಜನಸಾಮಾನ್ಯರು ಮತ್ತು ಜಾನುವಾರುಗಳು ಕುಡಿಯುವ ಸಲುವಾಗಿ ನಂಬಿಕೊಂಡಿದ್ದು, ಈ ಹಂತದಲ್ಲಿ ನೀರು ಬಿಟ್ಟರೆ ರಾಜ್ಯದ ಈ ಭಾಗದ ಜನರಿಗೆ ನೀರಿನ ಕೊರತೆ ಕಾಡಲಿದೆ ಎಂದು ತಿಳಿಸಿದ್ದಾರೆ.
ಹೀಗಿರುವಾಗ ಪ್ರಾಧಿಕಾರದ ಆದೇಶಕ್ಕೆ ಅನುಗುಣವಾಗಿ ನೀರು ಬಿಡುವುದು ಅಸಾಧ್ಯವಾಗಿದ್ದು. ಕಾವೇರಿ ನದಿ ನೀರು ನಿಯಂತ್ರಣ ಸಮಿತಿಗೆ ತನ್ನ ಆದೇಶವನ್ನು ಪರಿಶೀಲಿಸುವಂತೆ ಕೋರಬೇಕೆಂದು ಮುಖ್ಯಮಂತ್ರಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಕರ್ನಾಟವು ಇದುವರೆಗೆ ಪ್ರಾಧಿಕಾರದ ಎಲ್ಲಾ ಆದೇಶಗಳನ್ನು ಪಾಲಿಸಿದ್ದು, ಪ್ರಸ್ತುತ ಕಾವೇರಿ ನದಿ ಪಾತ್ರದ ಪ್ರದೇಶಗಳಲ್ಲಿ ಬರದ ವಾತಾವರಣವಿದೆ. ಹೀಗಿರುವಾಗ ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕದಲ್ಲಿ ನೀರಿನ ಬಿಕ್ಕಟ್ಟು ಇನ್ನಷ್ಟು ಹೆಚ್ಚಲಿದೆ ಎಂದು ಸಿ ಎಮ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಮುಂದಿನ 15 ದಿನಗಳ ತನಕ ನೀರು ಬಿಡುವಂತೆ ನೀಡಿರುವ ಆದೇಶವನ್ನು ಮರುಪರಿಶೀಲಿಸುವಂತೆ ಮನವಿ ಸಲ್ಲಿಸಬೇಕೆಂದು ಕೋರಲಾಗಿದೆ.
ಈ ನಡುವೆ ಇಂದು ಮಂಡ್ಯ ಸುತ್ತಮುತ್ತ ಕಾವೇರಿ ನೀರಿನ ಕುರಿತಾಗಿ ಬಿರುಸಿನ ಹೋರಾಟಗಳು ನಡೆದವು. ಪ್ರಸ್ತುತ ವಿವಾದದ ಚೆಂಡು ಹೋಗಿ ಕೇಂದ್ರದ ಅಂಗಳದಲ್ಲಿ ಬಿದ್ದಿದ್ದು ಅದರ ನಿಲುವು ಏನೆನ್ನುವುದರ ಮೇಲೆ ಕಾವೇರಿ ನದಿ ನೀರಿನ ವಿಷಯ ನಿರ್ಧಾರವಾಗಲಿದೆ.