ತಮ್ಮ ಸಿದ್ಧಾಂತ ಒಪ್ಪದವರೆಲ್ಲ ದೇಶದ್ರೋಹಿಗಳು ಎಂದು ಘೋಷಿಸುವ ಕಾರ್ಯಕ್ರಮ ಕಳೆದ ಒಂದು ದಶಕದಿಂದ, ದೇಶದ ಆಳುವವರ ಬೆಂಬಲದೊಂದಿಗೆ ಬಹಿರಂಗವಾಗಿಯೇ ನಡೆಯುತ್ತಿದೆ. ಯಾರು ದೇಶಭಕ್ತರು, ಯಾರು ದೇಶದ್ರೋಹಿಗಳು ಎಂದು ಮತೀಯ ಸಂಘಟನೆಗಳೇ ಪ್ರಮಾಣಪತ್ರ ನೀಡುವ ಕಾಲದಲ್ಲಿ ನಾವಿದ್ದೇವೆ. ಹೆಚ್ಚಿನ ವಿವರಗಳಿಗೆ ಓದಿ.. ಇಂದಿನ ಶ್ರೀನಿ ಕಾಲಂ
ನವರಾತ್ರಿಯ ಹಬ್ಬದ ದಿನಗಳವು. ಮಂಗಳೂರಿನ ಆ ಬೀದಿಯ ಬದಿಯಲ್ಲಿ, ಅಂಗಡಿ ಮುಂಗಟ್ಟುಗಳ ಮುಂದೆ ನಿಂತವರು, ನಡೆದುಹೋಗುತ್ತಿದ್ದವರು, ಎಲ್ಲರೂ ಅಲ್ಲೇನೋ ವಿಶೇಷ ಆಕರ್ಷಣೆಯಿರುವಂತೆ ತಿರು ತಿರುಗಿ ಬೀದಿಯತ್ತ ನೋಡುತ್ತಿದ್ದರು, ಬಿದ್ದು ಬಿದ್ದು ನಗುತ್ತಿದ್ದರು. ಕಾರಣ ಇಷ್ಟೇ- ಕೈಲಾಸದ ಶಿವ ಪಾರ್ವತಿ ಸೈಕಲ್ ನಲ್ಲಿ ನಗರ ಸುತ್ತಲು ಹೊರಟಿದ್ದರು. ರೈಡ್ ಮಾಡುತ್ತಿದ್ದುದು ಶಿವ. ಶಿವನ ಮುಂದೆ ರಾಡ್ ನ ಮೇಲೆ ಕುಳಿತಿದ್ದುದು ಪಾರ್ವತಿ. ಬಾಯ್ ಫ್ರೆಂಡ್ ಗೆ ಗರ್ಲ್ ಫ್ರೆಂಡ್ ಒತ್ತಿ ಕುಳಿತಂತೆ ಚೆಲುವೆ ಪಾರ್ವತಿ ಶಿವನಿಗೆ ಒತ್ತಿ ಕುಳಿತಿದ್ದಳು. ಪಾರ್ವತಿಯನ್ನು ಬಿಗಿದಪ್ಪಿ ಶಿವ ಸೈಕಲ್ ಹ್ಯಾಂಡಲ್ ಹಿಡಿದಿದ್ದ. ಬಹಳ ಅಪರೂಪದ ಸುಂದರ ದೃಶ್ಯವದು. ಬಗೆ ಬಗೆಯ ವೇಷ ಧರಿಸಿ ರಂಜಿಸಿ ಜನರಿಂದ ಹಣ ಕೇಳುವ ನವರಾತ್ರಿಯ ದಿನಗಳೇ ಆದರೂ, ಯಾರಲ್ಲೂ ಒಂದು ಪೈಸೆ ಕೇಳ ಹೋಗದೆ ಶಿವ ಸೈಕಲ್ ಓಡಿಸುತ್ತಿದ್ದ; ಸೈಕಲ್ ಸುಮ್ಮನೆ ಮಂಗಳೂರಿನ ಬೀದಿಯಲ್ಲಿ ವೇಗವಾಗಿ ಓಡುತ್ತಿತ್ತು.
ಇದರಿಂದ ಯಾರ ಭಾವನೆಗಳಿಗೂ ಧಕ್ಕೆಯಾಗಿರಲಿಲ್ಲ. ಯಾರೂ ಇದನ್ನು ದೇವರಿಗೆ ಅವಮಾನವಾಯಿತು, ಧರ್ಮ ನಾಶವಾಯಿತು ಎಂದು ಆಕ್ಷೇಪಿಸಿರಲಿಲ್ಲ. ಯುಎಪಿಎ, ಸೆಡಿಶನ್ ಕೇಸು ದಾಖಲಿಸಿ ಆ ಶಿವಪಾರ್ವತಿಯರನ್ನು ಬಂಧಿಸಿ ಜೈಲಿಗೆ ಅಟ್ಟಿರಲಿಲ್ಲ (ಕೆಲವು ತಿಂಗಳ ಹಿಂದೆ ಉತ್ತರ ಭಾರತದಲ್ಲಿ ಇಂತಹ ವೇಷ ಹಾಕಿದವರನ್ನು ಜೈಲಿಗೆ ಅಟ್ಟಲಾಯಿತು).
ಜನರು ಈ ಶಿವಪಾರ್ವತಿಯರನ್ನು ‘ದೇವರ ವೇಷ’ ಎಂದು ಪರಿಗಣಿಸಿದ್ದರೇ ಹೊರತು ‘ದೇವರು’ ಎಂದು ಪರಿಗಣಿಸಿರಲಿಲ್ಲ. ತಮ್ಮ ಕಲ್ಪನೆಯ ದೇವರು ಅಷ್ಟು ದುರ್ಬಲನಲ್ಲ, ಕ್ಷುದ್ರ ಮನಸಿನವನಲ್ಲ, ಆತ ಇವೆಲ್ಲವುಗಳನ್ನೂ ಮೀರಿದ ಸರ್ವಶಕ್ತ, ಸರ್ವಾಂತರ್ಯಾಮಿ, ವಿಶಾಲ ಹೃದಯಿ, ಆತನಿಗೆ ಹುಲುಮಾನವರು ಏನೂ ಮಾಡಲಾರರು, ಆತನಿಗೆ ಅವರ ರಕ್ಷಣೆಯೂ ಬೇಕಾಗಿಲ್ಲ ಎಂಬುದು ಅವರಿಗೆ ಗೊತ್ತಿತ್ತು ಎಂದು ಕಾಣುತ್ತದೆ.
ದೇವರೂ ವಿಶಾಲ ಹೃದಯಿಯಾಗಿದ್ದ, ಆತನ ಭಕ್ತಾದಿಗಳೂ ವಿಶಾಲ ಹೃದಯಿಗಳಾಗಿದ್ದರು. ಅಂತಹ ಒಂದು ಉದಾರ ಮನಸಿನ ಕಾಲವಾದುದರಿಂದ ಹಬ್ಬಗಳ ಸಂದರ್ಭದಲ್ಲಿ ಊರ ಬೀದಿಗಳು ಕಣ್ಮನ ಸೆಳೆಯುವ ದೃಶ್ಯಾವಳಿಗಳಿಂದ ಥೇಟ್ ಸ್ವರ್ಗವೇ ಆಗಿಬಿಡುತ್ತಿದ್ದವು. ಮುವತ್ತಮೂರು ಕೋಟಿ ದೇವರುಗಳೆಲ್ಲ ಜನಸಾಮಾನ್ಯರ ಬೀದಿಗೆ ಬರುತ್ತಿದ್ದರು, ಜನರೊಂದಿಗೆ ಬೆರೆತು, ಹಾಡಿ ಕುಣಿದು, ಜನರನ್ನು ರಂಜಿಸಿ, ಅವರ ಕೈ ಕುಲುಕಿ ಹಬ್ಬಕ್ಕೆ ಕಳೆಗಟ್ಟಿಸಿ ಹೊರಟು ಹೋಗುತ್ತಿದ್ದರು. ಮತ್ತೆ ಅವರ ಆಗಮನ ಮುಂದಿನ ಹಬ್ಬಕ್ಕೆ. ನಮ್ಮ ದೇವರು ಇರಬೇಕಾದುದು ನಿಜವಾಗಿಯೂ ಹೀಗೆಯೇ ಅಲ್ಲವೇ?
ಎಂಥ ಚಂದದ ದಿನಗಳು!
ಇನ್ನೊಬ್ಬರ ಸ್ವಾತಂತ್ರ್ಯಕ್ಕೆ ಅಡ್ಡಿ ಮಾಡದೆ ನಾವು ಏನನ್ನು ಬೇಕಾದರೂ ಮಾಡಬಹುದಾದ, ಯಾವುದೇ ವಸ್ತುವಿಷಯವನ್ನು ಇರಿಸಿಕೊಂಡು ಯಕ್ಷಗಾನ, ನಾಟಕ ಆಡಬಹುದಾದ, ಸೃಜನಶೀಲ ಕಲಾವಿದರಿಗೆ ಯಾವತ್ತೂ ಪ್ರಿಯನಾದ ಗಣೇಶನನ್ನು ಹೇಗೆ ಬೇಕಾದರೂ ಕಲಾತ್ಮಕವಾಗಿ ಚಿತ್ರಿಸಬಹುದಾದ, ಆತನನ್ನು ಗಾಳಿಪಟವಾಗಿಸಿ ಆಕಾಶಕ್ಕೆ ಹಾರಿಬಿಡಬಹುದಾದ, ಕತೆ ಕಾದಂಬರಿಗಳನ್ನು ರಚಿಸುವಾಗ ಯಾರ ಭಾವನೆಗೆ ನೋವುಂಟಾಗುತ್ತದೋ ಎಂಬ ಅಳುಕಿಲ್ಲದೆ ಕೃತಿಗಳನ್ನು ರಚಿಸಬಹುದಾಗಿದ್ದ, ಕಾವ್ಯವನ್ನು ಕಾವ್ಯವಾಗಿ ನೋಡುತ್ತಿದ್ದ, ಚಿತ್ರವನ್ನು ಚಿತ್ರವಾಗಿ ನೋಡುತ್ತಿದ್ದ, ಸಿನಿಮಾವನ್ನು ಸಿನಿಮಾವಾಗಿ ನೋಡುತ್ತಿದ್ದ ಎಷ್ಟು ಚಂದದ ಒಂದು ಕಾಲ ಇತ್ತು!
ಬಹಳ ಹಿಂದೆ ಅಲ್ಲ, ಕೇವಲ ನಾಲ್ಕೈದು ದಶಕಗಳ ಹಿಂದೆ. ಅಂತಹ ಕಾಲದಲ್ಲಿಯೇ ಗೌರೀಶ್ ಕಾಯ್ಕಣಿ ‘ವಾಲ್ಮೀಕಿ ತೂಕಡಿಸಿದಾಗ’ ಎಂಬ ಪುಸ್ತಕ ಬರೆದರು, ಎ ಎನ್ ಮೂರ್ತಿ ರಾಯರು ‘ದೇವರು’ ಎಂಬ ಪುಸ್ತಕ ಬರೆದು ಸರ್ವಶಕ್ತನಾದ ದೇವನೊಬ್ಬ ಇರಬೇಕಾಗಿತ್ತು ಎಂದು ಬರೆದರು, ‘ನಮ್ಮ ಅಳತೆಯನ್ನು ಮೀರಲಾರದ ದೇವರು’ ಎಂದರು ಕಾರಂತರು, ‘ಗುಡಿ ಚರ್ಚು ಮಸಜೀದುಗಳನ್ನು ಬಿಟ್ಟು ಹೊರಬನ್ನಿ’ ಎಂದರು ಕುವೆಂಪು, ‘ಎಲ್ಲೋ ಹುಡುಕಿದೆ ಇಲ್ಲದ ದೇವರ’ ಎಂದರು ಜಿ ಎಸ್ ಶಿವರುದ್ರಪ್ಪ. ಇವರ್ಯಾರೂ ದೇವರನ್ನಾಗಲೀ, ಧರ್ಮವನ್ನಾಗಲೀ ಅವಮಾನಿಸಲಿಲ್ಲ. ಬದಲಿಗೆ ಅವುಗಳ ಬಗೆಗಿನ ನಮ್ಮ ವಿವೇಕವನ್ನು ತಿದ್ದಿದರು.
ಆದರೆ ಕಳೆದ ಶತಮಾನದ ಉತ್ತರಾರ್ಧದಲ್ಲಿ ಮತೀಯ ಶಕ್ತಿಗಳ ಕೈ ಮೇಲಾಗಲಾರಂಭಿಸಿತು. ಸಾಂವಿಧಾನಿಕವಾದ ಯಾವ ಅಧಿಕಾರವೂ ಇಲ್ಲದ ಜನಾಂಗದ್ವೇಷಿ ಸಂಘಟನೆಗಳು ಬೀದಿಯಲ್ಲಿ ಕಾವಲು ಕಾಯುತ್ತಾ ಯಾರು ಏನನ್ನು ಮಾಡಬೇಕು, ಏನನ್ನು ಮಾಡಬಾರದು, ಯಾರೊಂದಿಗೆ ಓಡಾಡಬಹುದು, ಯಾರನ್ನು ಮದುವೆಯಾಗಬಹುದು ಹೀಗೆ ಎಲ್ಲವನ್ನೂ ನಿರ್ದೇಶಿಸಲಾರಂಭಿಸಿದರು. ಮತೀಯ ದ್ವೇಷ ಇನ್ನಿಲ್ಲದಂತೆ ವಿಜೃಂಭಿಸಿತು. ಬಾಬರಿಮಸೀದಿ-ರಾಮಮಂದಿರ ಚಳುವಳಿಯು ದೇಶದ ಸಾಮಾಜಿಕ ಬದುಕಿನಲ್ಲಿ ಅಲ್ಲೋಲ ಕಲ್ಲೋಲ ಉಂಟು ಮಾಡಿತು. ಅಲ್ಪಸಂಖ್ಯಾತರಿಗೆ, ‘ನೀವು ನಮ್ಮವರಲ್ಲ, ಇಲ್ಲಿ ಬದುಕುವುದಾದರೆ ನಾವು ಹೇಳಿದಂತೆ ಕೇಳಬೇಕು’ ಎಂದು ಬಹಿರಂಗ ಫರ್ಮಾನು ಹೊರಡಿಸಲಾರಂಭಿಸಿದವು.
ಶುರುವಾಯಿತು ನಿರ್ಬಂಧದ ಪರ್ವ
ಮತ್ತೆ ಕರಾವಳಿಯ ವಿಷಯಕ್ಕೆ ಬರುವುದಾದರೆ, ನವರಾತ್ರಿಯಲ್ಲಿ ದೇವರ ವೇಷ ಹಾಕಬಾರದು ಎಂದು ತಾಕೀತು ಮಾಡಿದರು. ದೇವರೆಲ್ಲ ಮಾಯವಾಗಿ ಚಂಡ ಮುಂಡರಂತಹ ಒಂದಿಬ್ಬರು ರಕ್ಕಸರು ಮಾತ್ರ ಉಳಿದು ಕೊಂಡರು. ಜಾತಿ ಸಂಬಂಧಿತ ಒಂದು ವೇಷ ಇತ್ತು. ಜಾತಿಸಂಘಟನೆಯವರು ಅದನ್ನು ಆಕ್ಷೇಪಿಸಿದ್ದರಿಂದ ಅದು ನಿಂತು ಹೋಯಿತು. ಈಗ ನವರಾತ್ರಿಗೆ ಕಳೆಯಿಲ್ಲ. ಬರೇ ನೀರಸ.
‘ಈ ನಲ್ಕೆದಾಯೆ’ ಎಂಬ ಎಂಬ ಒಂದು ಪ್ರಸಿದ್ಧ ನಾಟಕವಿತ್ತು. ಅದನ್ನು ಜಾತಿ ಸಂಘಟನೆಯ ಆಕ್ಷೇಪದ ಕಾರಣ ನಿಲ್ಲಿಸಲಾಯಿತು. ʼಏಸು ಮಹಾತ್ಮೆʼ ಯಕ್ಷಗಾನ ನಿಲ್ಲಿಸಲಾಯಿತು. ʼಟಿಪ್ಪೂ ಸುಲ್ತಾನ್ʼ ನಾಟಕ ಆಡುವಂತಿಲ್ಲ. ‘ಗಾಂಧಿ ಬಂದ’ ಕಾದಂಬರಿಗೆ ವಿರೋಧ ಬಂತು. ಪ್ರಗತಿಪರ ಚಿಂತಕರು ಭಾಷಣ ಮಾಡುವಂತಿಲ್ಲ. ಕಾರ್ನಾಡರ ನಾಟಕ ಆಡುವಂತಿಲ್ಲ. ಹೀಗೆ ಪರಧರ್ಮ ದ್ವೇಷ, ಅಸಹನೆಯ ರಾಜಕಾರಣದ ಪರಿಣಾಮ ಅತ್ಯಂತ ಉದಾರವಾದಿ ಸಮಾಜವೊಂದು ಪತನಮುಖಿಯಾಯಿತು.
ಹಿಂದೊಮ್ಮೆ ಜನರಲ್ಲಿ ಪ್ರಗತಿಪರ ಚಿಂತನೆಗಳನ್ನು ಪಸರಿಸುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿದ್ದವು. ಈಗ ಅವು ಮತೀಯವಾದಿ ಚಟುವಟಿಕೆಗಳನ್ನು ಹರಡುವ ಅತಿದೊಡ್ಡ ಅಸ್ತ್ರಗಳು. ಮಸೀದಿಗಳಲ್ಲಿ ಶಿವಲಿಂಗ ಹುಡುಕುವ ಕೆಲಸದಲ್ಲಿ ಅವೇ ಮುಂದು. ಸಾಲದೆಂಬಂತೆ, ಸಮೂಹ ನಾಶಕ ಅಸ್ತ್ರದಂತೆ ಕೆಲಸ ಮಾಡುವ ಸಾಮಾಜಿಕ ಮಾಧ್ಯಮಗಳು ಈಗ ಎಲ್ಲ ಕೈಗೆ ಸಿಕ್ಕಿವೆ. ಕತ್ತಿಯನ್ನು ನೀವು ಕೃಷಿಯ ಕೆಲಸದಂತಹ ಉದ್ಧಾರದ ಕೆಲಸಕ್ಕೂ ಬಳಸಬಹುದು, ಕೊಲ್ಲಲೂ ಬಳಸಬಹುದು. ಈ ಸಾಮಾಜಿಕ ಮಾಧ್ಯಮಗಳು ಕೊಲ್ಲುವ ಕೆಲಸಕ್ಕೆ ಬಳಕೆಯಾಗುತ್ತಿರುವುದೇ ಹೆಚ್ಚು.
ಆಳುವವರ ಆಶೀರ್ವಾದದೊಂದಿಗೆ ಮತೀಯ ದ್ವೇಷ ಯಾವ ಮಟ್ಟಿಗೆ ತಲಪಿದೆ ಎಂದರೆ ಈಗ ಇಲ್ಲಿ ಯಾವುದನ್ನು ಬೇಕಾದರೂ ವಿವಾದ ಮಾಡಬಹುದು. ನಿಮ್ಮಲ್ಲಿ ದ್ವೇಷ ಇದೆಯೋ ಆಮೇಲೆ ಅದಕ್ಕೆ ನೂರು ಕಾರಣಗಳು ಸಿಗುತ್ತಾ ಹೋಗುತ್ತವೆ. ಇವರೀಗ ಬಣ್ಣಗಳನ್ನೂ ಬಿಟ್ಟಿಲ್ಲ, ನಮ್ಮ ಬಾವುಟದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಒಂದಕ್ಕೊಂದು ಅಂಟಿಕೊಂಡು ಕುಳಿತಿವೆ; ದೇಶದ ಮತೀಯ ಸೌಹಾರ್ದ ರೂಪಕದಂತಿದೆ. ಆದರೆ ಈಗ ಬಣ್ಣವನ್ನೂ ನಿರ್ದಿಷ್ಟ ಮತಧರ್ಮಕ್ಕೆ ಕಟ್ಟಿ ಹಾಕಲಾಗಿದೆ. ʼಇದು ನಮ್ಮ ಬಣ್ಣ, ಅದು ಅವರ ಬಣ್ಣ. ನಮ್ಮ ಬಣ್ಣ ಮಾತ್ರ ಇರಬೇಕು, ಅವರ ಬಣ್ಣ ಇರಕೂಡದು, ರೈಲ್ವೇ ನಿಲ್ದಾಣಕ್ಕೆ ಹಸಿರು ಹಾಕಿದ್ದಾರೆ, ಅದು ಮಸೀದಿಯ ಬಣ್ಣ ಕೂಡಲೇ ಅದನ್ನು ಕಿತ್ತು ಹಾಕಬೇಕು!ʼ ಬಣ್ಣದ ರಾಜಕಾರಣದ ಇತ್ತೀಚಿನ ಉದಾಹರಣೆ ʼಪಠಾಣ್ʼ ಸಿನಿಮಾ ವಿವಾದ.
ಬಣ್ಣಗಳಿಗೂ ಮತಧರ್ಮ?!
ಶಾರೂಕ್ ಖಾನ್, ದೀಪಿಕಾ ಪಡುಕೋಣೆ ಅಭಿನಯದ ಹಿಂದಿ ಸಿನಿಮಾ ಪಠಾಣ್ ಇನ್ನೂ ಬಿಡುಗಡೆಯೇ ಆಗಿಲ್ಲ. ಅದರ ಒಂದು ಹಾಡಿನಲ್ಲಿರುವ ದೃಶ್ಯವನ್ನು ಹಿಡಿದುಕೊಂಡು, ಅದು ಒಂದು ರಾಷ್ಟ್ರೀಯ ಸಮಸ್ಯೆಯೇನೋ ಎಂಬಂತೆ ಗುಲ್ಲೆಬ್ಬಿಸಲಾಗಿದೆ. ʼಅಲ್ಲಿ ಕೇಸರಿ ಬಣ್ಣಕ್ಕೆ ಅವಮಾನ ಮಾಡಲಾಗಿದೆ, ಅದನ್ನು ಬ್ಯಾನ್ ಮಾಡಬೇಕು, ಪ್ರದರ್ಶಿಸಿದರೆ ಥಿಯೇಟರ್ ಸುಟ್ಟು ಹಾಕುತ್ತವೆʼ ಎಂದು ಬೆದರಿಕೆ ಒಡ್ಡಲಾಗಿದೆ. ಮಧ್ಯಪ್ರದೇಶ ಸರಕಾರದ ಗೃಹಮಂತ್ರಿ ನರೋತ್ತಮ ಮಿಶ್ರಾ ಅಂತೂ ತಾನೇ ಈ ದೇಶದ ಸಂವಿಧಾನ, ಕಾನೂನು ಎಂಬಂತೆ ಪೋಸು ನೀಡುತ್ತಾ, ʼಈ ಸಿನಿಮಾದಿಂದ ಧರ್ಮಕ್ಕೆ ಅವಮಾನವಾಗಿದೆ, ದೀಪಿಕಾ ಪಡುಕೋಣೆ ಜೆ ಎನ್ ಯು ಹೋರಾಟಕ್ಕೆ ಹೋಗಿದ್ದಳು, ಆಕೆ ತುಕುಡೆ ತುಕುಡೆ ಗ್ಯಾಂಗ್ ನ ಬೆಂಬಲಿಗಳು, ಮಧ್ಯಪ್ರದೇಶದಲ್ಲಿ ಸಿನಿಮಾ ಪ್ರದರ್ಶನಕ್ಕೆ ಅವಕಾಶ ನೀಡುವುದಿಲ್ಲʼ ಎಂದೆಲ್ಲ ಹೇಳಿಕೆ ಕೊಟ್ಟಿದ್ದಾರೆ. ಖ್ಯಾತ ಪತ್ರಕರ್ತೆ ಶೋಭಾ ಡೇ ಹೇಳುವಂತೆ, ‘ಯಾರೋ ಹೇಳಿಕೆ ನೀಡಿದರೆ ಪರವಾಗಿಲ್ಲ, ಒಂದು ರಾಜ್ಯದ ಒಬ್ಬ ಮಂತ್ರಿಯೇ ಹೀಗೆ ಹೇಳಿಕೆ ನೀಡುತ್ತಾನೆ ಎಂದರೆ ಏನು ಹೇಳೋಣ?’ ‘ಒಬ್ಬ ಜವಾಬ್ದಾರಿಯುತ ಮಂತ್ರಿಗೆ ಅಭಿನೇತ್ರಿಯೊಬ್ಬರ ಬಟ್ಟೆ ನೋಡುತ್ತ ಕೂರುವಷ್ಟು ಪುರುಸೊತ್ತಿರುತ್ತದೆಯೇ?’ ಎಂದು ಪ್ರಶ್ನಿಸಿದ್ದಾರೆ ಖ್ಯಾತ ಅಭಿನೇತ್ರಿ ಮತ್ತು ಸಾಮಾಜಿಕ ಚಿಂತಕಿ ಸ್ವರ ಭಾಸ್ಕರ್.
ತಮ್ಮ ಸಿದ್ಧಾಂತ ಒಪ್ಪದವರೆಲ್ಲ ದೇಶದ್ರೋಹಿಗಳು ಎಂದು ಘೋಷಿಸುವ ಕಾರ್ಯಕ್ರಮ ಕಳೆದ ಒಂದು ದಶಕದಿಂದ, ದೇಶದ ಆಳುವವರ ಬೆಂಬಲದೊಂದಿಗೆ ಬಹಿರಂಗವಾಗಿಯೇ ನಡೆಯುತ್ತಿದೆ. ಯಾರು ದೇಶಭಕ್ತರು, ಯಾರು ದೇಶದ್ರೋಹಿಗಳು ಎಂದು ಮತೀಯ ಸಂಘಟನೆಗಳೇ ಪ್ರಮಾಣಪತ್ರ ನೀಡುವ ಕಾಲದಲ್ಲಿ ನಾವಿದ್ದೇವೆ. ಸರಕಾರವನ್ನು ಪ್ರಶ್ನಿಸುವವರೆಲ್ಲ ದೇಶದ್ರೋಹಿಗಳೂ, ಅರ್ಬನ್ ನಕ್ಸಲರು. ಜೆ ಎನ್ ಯು ನ ವಿದ್ಯಾರ್ಥಿಗಳಲ್ಲಿ ಯಾರು ಬಲಪಂಥೀಯ ಸಿದ್ಧಾಂತ ವಿರೋಧಿಸುತ್ತಾರೋ, ಸರಕಾರವನ್ನು ವಿರೋಧಿಸುತ್ತಾರೋ, ಅವರು ‘ತುಕುಡೆ ತುಕುಡೆ ಗ್ಯಾಂಗ್’. ಪ್ರಜಾಸತ್ತಾತ್ಮಕವಾಗಿ ಶಾಂತಿಯುತವಾಗಿ ಆ ವಿದ್ಯಾರ್ಥಿಗಳು ಮಾಡುತ್ತಿರುವ ಹೋರಾಟಕ್ಕೆ ಯಾರು ನೈತಿಕ ಬೆಂಬಲ ಸೂಚಿಸುತ್ತಾರೋ ಅವರೂ ‘ತುಕುಡೆ ತುಕುಡೆ ಗ್ಯಾಂಗ್’. ಈವತ್ತು ಸ್ವರ ಭಾಸ್ಕರ್, ದೀಪಿಕಾ ಪಡುಕೋಣೆ, ರಿಚಾ ಛಡ್ಡಾ ಮೊದಲಾದರನ್ನು ವಿರೋಧಿಸಲು ಕಾರಣ ಅವರು ಬಲಪಂಥೀಯರ ವಿಭಜನಕಾರಿ ಸಿದ್ಧಾಂತವನ್ನು ಒಪ್ಪದಿರುವುದು.
ಇನ್ನು, ನಾಸಿರುದ್ದೀನ್ ಶಾ, ಸಲ್ಮಾನ್ ಖಾನ್, ಅಮೀರ್ ಖಾನ್, ಶಾರೂಕ್ ಖಾನ್ ವಿರುದ್ಧದ ವಿರೋಧಕ್ಕೆ ಕಾರಣ ಅವರ ಮತಧರ್ಮ. ಸರಕಾರವೇ ಸಿಎಎ ಮೂಲಕ ದೇಶದ ಒಂದು ಪ್ರಮುಖ ಸಮುದಾಯಕ್ಕೆ ‘ನೀವು ಈ ದೇಶದಲ್ಲಿ ಎರಡನೆ ದರ್ಜೆಯ ಪ್ರಜೆಗಳು’ ಎಂಬ ಸಂದೇಶವನ್ನು ಕಳುಹಿಸಿದ ಮೇಲೆ ಈ ಸರಕಾರದ ಬೆಂಬಲಿಗರು ಅದೇ ಸಿದ್ಧಾಂತ ಮುಂದುವರಿಸುವುದರಲ್ಲಿ ಅಚ್ಚರಿಯೇನಿದೆ? ಕೆಲವೇ ಸಮಯದ ಹಿಂದೆ ಅಮೀರ್ ಖಾನ್ ನ ʼಲಾಲ್ ಸಿಂಗ್ ಛಡ್ಡಾʼ ಸಿನಿಮಾ ಬಿಡುಗಡೆಯಾದಾಗ ‘ಬಾಯ್ಕಾಟ್ ಗ್ಯಾಂಗ್’ ಹೀಗೆಯೇ ಗುಲ್ಲೆಬ್ಬಿಸಿತ್ತು. ಮತೀಯ ರಾಜಕಾರಣದಿಂದ ಒಂದು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಲಾಭವಿರುವುದರಿಂದ ಅದಕ್ಕೆ ಸದ್ಯ ವಿರಾಮ ಬೀಳುವ ಸೂಚನೆಯಂತೂ ಕಾಣಿಸುತ್ತಿಲ್ಲ.
ನಷ್ಟ ಯಾರಿಗೆ?
ಅದೆಲ್ಲ ಸರಿ, ಇಂತಹ ಪ್ರತಿಗಾಮಿ ಚಟುವಟಿಕೆಗಳಿಂದ ದೇಶದ ಒಟ್ಟು ಜನಬದುಕಿನ ಮೇಲೆ ಮತ್ತು ಅಂತಾರಾಷ್ಟ್ರೀಯವಾಗಿ ದೇಶದ ಇಮೇಜಿಗೆ ಆಗುತ್ತಿರುವ ಧಕ್ಕೆಯ ಬಗ್ಗೆ ಮಾತನಾಡ ಬೇಕಾದವರು ಯಾರು? ಸಿನಿಮಾ ಉದ್ಯಮ ಕೂಡಾ ದೇಶದ ದೊಡ್ಡ ಉದ್ಯಮಗಳಲ್ಲಿ ಒಂದು. ಶತಮಾನ ಕಾಲದಿಂದ ಅದು ಲಕ್ಷಾಂತರ ಮಂದಿಗೆ ಉದ್ಯೋಗ ಕೊಟ್ಟಿದೆ, ಕೋಟ್ಯಂತರ ರುಪಾಯಿ ತೆರಿಗೆ ಹಣ ತಂದು ಬೊಕ್ಕಸವನ್ನು ತುಂಬುತ್ತದೆ. ಸಾಮಾಜಿಕ ಮಾಧ್ಯಮಗಳನ್ನು ಬಳಸಿಕೊಂಡು ಮತೀಯ ದುರುದ್ದೇಶದಿಂದ ಇಂತಹ ಉದ್ಯಮಗಳಿಗೆ ಪೆಟ್ಟು ಕೊಟ್ಟರೆ ಅಂತಿಮವಾಗಿ ನಷ್ಟ ಯಾರಿಗೆ? ‘ಇದು ಸರಿಯಲ್ಲ, ನಿಲ್ಲಿಸಿ’, ಎಂದು ಒಂದು ಮಾತನ್ನು ʼಸಬ್ ಕಾ ಸಾತ್ʼ ಎಂದು ಹೇಳಿಕೊಂಡಿರುವ ಸರಕಾರದ ಮುಖ್ಯಸ್ಥರು ಹೇಳಬೇಡವೇ? ಹೇಳಬೇಕು ಎಂದು ದೇಶ ಆಶಿಸುತ್ತದೆ. ಯಾಕೆಂದರೆ ಅವರ ಮಾತಿಗೆ ಅಂತಹ ಒಂದು ತೂಕ ಇದೆ. ಆದರೆ ಹೇಳದಿರುವುದು ದುರಂತ!
ಹಾಗೆ ನೋಡಿದರೆ, ಬಣ್ಣಗಳ ರಾಜಕಾರಣ ಶುರುವಾದುದು ಈಗಲ್ಲ. ಈ ಸೂಚನೆ ಸಿಕ್ಕ ಕಾಲು ಶತಮಾನ ಹಿಂದೆಯೇ ಈ ಕುರಿತು ನಾನೊಂದು ಕವಿತೆ ಬರೆದಿದ್ದೆ. ಅದು ಕೆಳಗಿದೆ. ಅದನ್ನು ಓದುತ್ತಾ ಇದೇ ರೀತಿಯಲ್ಲಿ ಮುಂದೆ ಹೋದರೆ ನಾವು ಎಲ್ಲಿಗೆ ತಲಪಿಯೇವು ಎಂದು ಗಂಭೀರವಾಗಿ ಯೋಚಿಸಿ.
ಅಸ್ಪೃಶ್ಯ ಬಣ್ಣಗಳು
ಆಗ ಹೀಗಿತ್ತು-
ಬಣ್ಣಗಳಿಗೆ ಗುಣವಿರಲಿಲ್ಲ, ವಾಸನೆಯಿರಲಿಲ್ಲ
ಖಾಲಿ ಕಾಗದದ ಮೇಲೆ ಗೀಚುವುದಕ್ಕೆ,
ಗೋಡೆಯ ಮೇಲೆಲ್ಲ ರಾಚುವುದಕ್ಕೆ,
ಬಾವುಟವಾಗಿಸಿ ಬಾನಿಗೆ ಚಾಚುವುದಕ್ಕೆ,
ಭಯವಿರಲಿಲ್ಲ, ಹಿಂಜರಿಕೆಯೂ ಇರಲಿಲ್ಲ
ಮಗುವಿನಂಥ ಆ ಬಾಲ್ಯದ ಬಣ್ಣಗಳಿಗೆ
ರಾಗದ್ವೇಷಗಳಿರಲಿಲ್ಲ, ಸೋಗುಗಳೂ ಇರಲಿಲ್ಲ;
ಬದುಕು ಕಾಮನ ಬಿಲ್ಲಿನ ಭಿನ್ನ ಭಿನ್ನ ವರ್ಣ
ಹೇಗೆ ಬೆರೆತರೂ
ಬೆಳ್ಳಗಾಗಿತ್ತು, ಬೆಳಕು ಮೂಡಿತ್ತು
ಈಗ ಹಾಗಾಗುವುದಿಲ್ಲ ನೋಡಿ-
ನಿಸರ್ಗದ ಅಚ್ಚ ಹಸುರಿಗೆ
ದೇಶಧ್ವಜದ ಸ್ವಚ್ಛ ಕೇಸರಿಗೆ ಕೂಡಾ
ಮತಧರ್ಮಗಳ ವಾಸನೆಯಿದೆ;
ಇಲ್ಲಿ ನನ್ನ ನೆಲದಲ್ಲೀಗ
ಬಣ್ಣಗಳೂ ಬಡಿದಾಡುತ್ತವೆ,
ಕನಸಿನಲ್ಲೂ ಕಾಡುತ್ತವೆ
ಹೇಗೆ ಬೆರೆಸಿದರೂ ಕೂಡಾ
ಭೀಕರ ಕಲಬೆರಕೆಯಾಗುತ್ತದೆ;
ರಕ್ತದ ಕೆಂಪು ಮಾತ್ರ
ಕೊನೆಗೆ ಉಳಿದುಕೊಳ್ಳುತ್ತದೆ!
ಹೇಗೆ ಬೆರೆಸಿದರೂ ಕೂಡಾ ಭೀಕರ ಕಲಬೆರಕೆಯಾಗುತ್ತದೆ;
ರಕ್ತದ ಕೆಂಪು ಮಾತ್ರ ಕೊನೆಗೆ ಉಳಿದುಕೊಳ್ಳುತ್ತದೆ!
ಶ್ರೀನಿವಾಸ ಕಾರ್ಕಳ
ಚಿಂತಕರು, ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ಸಾಹಿತ್ಯ ಕೃಷಿಯಲ್ಲೂ ತೊಡಗಿಕೊಂಡವರು.