Monday, June 9, 2025

ಸತ್ಯ | ನ್ಯಾಯ |ಧರ್ಮ

ಬೆಂಗಳೂರು: ಕಾಂಗ್ರೆಸ್ ಎಂಎಲ್‌ಸಿಗಳಿಂದ ವಿಧಾನ ಪರಿಷತ್ ವಿಪಕ್ಷ ನಾಯಕ ಮತ್ತು ಬಿಜೆಪಿ ಮುಖ್ಯ ಸಚೇತಕರ ವಿರುದ್ಧ ದೂರು

ಬೆಂಗಳೂರು, ಜೂನ್ 3, 2025: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಹಾಗೂ ಬಿಜೆಪಿ ಮುಖ್ಯ ಸಚೇತಕ ಎನ್. ರವಿಕುಮಾರ್ ವಿರುದ್ಧ ಶಿಸ್ತು ಕ್ರಮಕ್ಕೆ ಒತ್ತಾಯಿಸಿ, ಕಾಂಗ್ರೆಸ್ ಎಂಎಲ್‌ಸಿಗಳ ತಂಡವು ಸೋಮವಾರ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ದೂರು ಸಲ್ಲಿಸಿದೆ.

ಸಲೀಂ ಅಹ್ಮದ್, ಕೆ. ಗೋವಿಂದರಾಜು, ದಿನೇಶ್ ಗೂಳಿಗೌಡ, ರವಿ, ಪುಟ್ಟಣ್ಣ ಸೇರಿದಂತೆ ಪರಿಷತ್ ಸದಸ್ಯರು ಸಭಾಪತಿಯ ಕಚೇರಿಗೆ ತೆರಳಿ, ಇಬ್ಬರೂ ಮಾಡಿದ ಭಾಷಣದ ತುಣುಕುಗಳನ್ನು ಒಳಗೊಂಡ ಪೆನ್‌ಡ್ರೈವ್ ಮತ್ತು ಮನವಿ ಪತ್ರವನ್ನು ಸಲ್ಲಿಸಿದರು. ಎನ್. ರವಿಕುಮಾರ್ ಜಿಲ್ಲಾಧಿಕಾರಿಯವರ ವಿರುದ್ಧ ಅವಾಚ್ಯ ಶಬ್ದಗಳನ್ನು ಬಳಸಿದ್ದರೆ, ಛಲವಾದಿ ನಾರಾಯಣ ಸ್ವಾಮಿ ಸಚಿವ ಪ್ರಿಯಾಂಕ್ ಖರ್ಗೆಯವರನ್ನು ಟೀಕಿಸಿದ್ದಾರೆ. ಬಿಜೆಪಿ ಈ ಹೇಳಿಕೆಗಳನ್ನು ಸಮರ್ಥಿಸಿಕೊಳ್ಳುವ ಬದಲು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದ್ದು, ರವಿಕುಮಾರ್ ಅವರ ದುರಹಂಕಾರದ ಮಾತಿಗೆ ಕ್ರಮ ಜರುಗಿಸುವಂತೆ ಆಗ್ರಹಿಸಿದೆ.

ದೂರನ್ನು ಸ್ವೀಕರಿಸಿದ ಸಭಾಪತಿ ಹೊರಟ್ಟಿ, ಸುದ್ದಿಗಾರರೊಂದಿಗೆ ಮಾತನಾಡಿ, “ಕಾಂಗ್ರೆಸ್ ಸದಸ್ಯರು ನೀಡಿದ ದೂರನ್ನು ಪರಿಶೀಲಿಸುತ್ತೇನೆ. ಕಾನೂನು ಚೌಕಟ್ಟಿನ ಹೊರಗೆ ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಈ ಪ್ರಕರಣ ನ್ಯಾಯಾಲಯದಲ್ಲಿ ಸಮಾನಾಂತರವಾಗಿ ವಿಚಾರಣೆಯಲ್ಲಿದೆ. ಹೀಗಾಗಿ ಅದಕ್ಕೆ ಅಡ್ಡಿಯಾಗದಂತೆ ವರ್ತಿಸಬೇಕಾಗಿದೆ,” ಎಂದರು.

ಇದೇ ವೇಳೆ, ಕಾಂಗ್ರೆಸ್ ಸದಸ್ಯ ಪುಟ್ಟಣ್ಣ ಅವರು ಛಲವಾದಿ ನಾರಾಯಣ ಸ್ವಾಮಿ ವಿರುದ್ಧ ಸ್ಪೀಕರ್‌ಗೆ ಹಕ್ಕುಚ್ಯುತಿ ದೂರು ನೀಡಿ, ಅವರ ಸದಸ್ಯತ್ವವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. “ನಾನು ಬಳಸದ ಶಬ್ದವನ್ನು ಬಳಸಿದ್ದೇನೆ ಎಂದು ಆರೋಪಿಸಿ, ನಾರಾಯಣ ಸ್ವಾಮಿ ಒಂದು ದಿನದ ಕಲಾಪವನ್ನು ವ್ಯರ್ಥಗೊಳಿಸಿದ್ದಾರೆ. ನನ್ನ ಹೇಳಿಕೆಯ ಪೂರ್ಣ ವೀಡಿಯೋ ತುಣುಕನ್ನು ಸಲ್ಲಿಸಿದ್ದೇನೆ. ಈ ಆರೋಪದಿಂದ ನನ್ನ ಹಕ್ಕು ಉಲ್ಲಂಘನೆಯಾಗಿದೆ. ಆದ್ದರಿಂದ ಕ್ರಮ ಕೈಗೊಳ್ಳಬೇಕು,” ಎಂದು ಆಗ್ರಹಿಸಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page