ಬೆಂಗಳೂರು: ನ್ಯೂ ಭಾರತ್ ಇಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) ರಸ್ತೆಯಲ್ಲಿ ಕಳಪೆ ಕಾಮಗಾರಿ ನಡೆದಿರುವ ಹಿನ್ನಲೆ ಬಿಬಿಎಂಪಿಯ ಇಬ್ಬರು ಎಂಜನಿಯರ್ಗಳನ್ನು ಅಮಾನತು ಮಾಡಲಾಗಿದೆ.
ಅಮಾನತು ಆಗಿರುವ ಅಧಿಕಾರಿಗಳು, ಸಹಾಯಕ ಕಾರ್ಯಪಾಲಕ (Assistant Executive Engineer) ಎಂಜನಿಯರ್ ಎಂ.ಸಿ.ಕೃಷ್ಣೆಗೌಡ ಹಾಗೂ ಬಿಬಿಎಂಪಿ ರಸ್ತೆ ಅಭಿವೃದ್ಧಿ ವಿಭಾಗದ ವಿಷಕಂಠ ಮೂರ್ತಿ ಎಂದು ತಿಳಿದುಬಂದಿದೆ.
ಮಾಹಿತಿ ಪ್ರಕಾರ ಕಳೆದ ತಿಂಗಳು ಇಲಾಖೆಗಳ ಆಂತರಿಕ ಸಮನ್ವಯ ಸಮಿತಿ ಸಭೆಯೊಂದರಲ್ಲಿ ಸಂಚಾರಿ ಪೊಲೀಸರು ಕಳಪೆ ಕಾಮಗಾರಿ ನಡೆದಿರುವ ಬಗ್ಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲೆ ಮೂಲ ಸೌಕರ್ಯ ವಿಭಾಗದ ಮುಖ್ಯ ಎಂಜನಿಯರ್ ಬಿ.ಎಸ್.ಪ್ರಹ್ಲಾದ್ ಅವರು ಅವರು ಅಮಾನತು ಆದೇಶ ಹೊರಡಿಸಿದ್ದಾರೆ.
ಸಂಚಾರಿ ಪೊಲೀಸ್ ದೂರಿನ ಮೇಲೆ ರಸ್ತೆ ಕಾಮಗಾರಿಯನ್ನು ಪರಿಶೀಲನೆ ನಡೆಸಿದ್ದು, ಈ ವೇಳೆ ಕಾಮಗಾರಿಯಲ್ಲಿ ಲೋಪ ಕಂಡುಬಂದಿದೆ. ರಸ್ತೆ ಕಾಮಗಾರಿಯ ವೇಳೆ ಮೂಲ ಸೌಕರ್ಯದಿಂದ ಕೆಲವು ಸೂಚನೆ ನೀಡಿದ್ದರೂ ಅಧಿಕಾರಿಗಳು ಪಾಲನೆ ಮಾಡಿರಲಿಲ್ಲ ಎಂದು ದೂರಲಾಗಿದ್ದು, ದೂರನ್ನು ಗಂಭೀರವಾಗಿ ಪರಿಗಣಿಸದ ಕಾರಣಕ್ಕೆ ಅಧಿಕಾರಿಗಳನ್ನು ಅಮಾನತು ಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.