ಬೆಂಗಳೂರು : ಪ್ರೌಢಶಾಲಾ ವಿದ್ಯಾರ್ಥಿಗಳು ಶಾಲೆಗೆ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಮುಖಪುಟದಲ್ಲಿ ಪ್ರಕಟಿಸಿ ವಿದ್ಯಾರ್ಥಿಗಳನ್ನು ದೂಷಿಸುತ್ತಿರುವುದರಿಂದ ವಿದ್ಯಾರ್ಥಿಗಳ ಮನಸ್ಸಿನ ಇನ್ನಷ್ಟು ಹಾನಿಗೆ ಕಾರಣವಾಗುತ್ತದೆ. ವಿದ್ಯಾರ್ಥಿಗಳ ಇಂತಹ ಬೆಳವಣಿಗೆಗೆ ಎಲ್ಲಾ ರೀತಿಯಲ್ಲೂ ಸರ್ಕಾರವೇ ಕಾರಣವಾಗಿದೆ ಎಂದು ಹಲವು ತಜ್ಞರು ಬುಧವಾರದ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಶಾಲೆಗೆ ಮೊಬೈಲ್ ತರುವ ಬಗ್ಗೆ ಪರಿಶೀಲನೆ ನಡೆಸುವಾಗ ಪುಸ್ತಕಗಳ ಜೊತೆ ಕಾಂಡೋಮ್ಸ್, ಗರ್ಭಪಾತ ಗುಳಿಗೆ, ನೀರಿನ ಬಾಟಲ್ ಗಳಲ್ಲಿ ಮದ್ಯ ಮಿಶ್ರಿತ ನೀರು ಇತ್ಯಾದಿಗಳು ಸಿಕ್ಕಿರುವ ವಿಷಯವನ್ನು ಮಾಧ್ಯಮಗಳು ಬುಧವಾರದಂದು ಮುಖಪುಟದಲ್ಲಿ ಪ್ರಕಟಿಸಿದ್ದು, ವಿದ್ಯಾರ್ಥಿಗಳನ್ನೇ ಅಪರಾಧಿ ಸ್ಥಾನದಲ್ಲಿ ದೂಷಿಸುತ್ತಿವೆ.
ಈ ವಿರುದ್ಧ ಜಂಟಿ ಪತ್ರಿಕಾ ಹೇಳಿಕೆ ಕೊಟ್ಟಿರುವ ವಿ.ಪಿ ಶಿಕ್ಷಣ ತಜ್ಞರಾದ ಪ್ರೊ.ಡಾ. ನಿರಂಜನಾರಾಧ್ಯ, ಡಾ.ಶ್ರೀನಿವಾಸ ಕಕ್ಕಿಲ್ಲಾಯ(ವೈದ್ಯಕೀಯ ತಜ್ಞರು), ಡಾ. ಜಿ . ರಾಮಕೃಷ್ಣ, ಡಾ. ಕೆ ಎಂ ಮರಳುಸಿದ್ದಪ್ಪ, ಪ್ರೊ. ಎಸ್ ಜಿ ಸಿದ್ಧರಾಮಯ್ಯ, ಪ್ರೊ.ಕಾಳೇಗೌಡ ನಾಗವಾರ, ಡಾ. ವಸುಂಧರಾ ಭೂಪತಿ, ಬಿ.ಎನ್ ಯೋಗಾನಂದ, ಡಾ.ವಿಜಯ ಮತ್ತು ಸುರೇಂದ್ರ ರಾವ್ ಅವರು, “ವಿದ್ಯಾರ್ಥಿಗಳ ಇಂತಹ ಬೆಳವಣಿಗೆಗೆ ಎಲ್ಲಾ ರೀತಿಯಲ್ಲೂ ಸರ್ಕಾರವೇ ಕಾರಣ” ಎಂದು ತಿಳಿಸಿದ್ದಾರೆ.
ʼಇಂದು ಮಕ್ಕಳ ಶಿಕ್ಷಣದ ಕ್ರಮ ಹಾಗೂ ವಿಧಾನಗಳ ಬಗ್ಗೆ ಕುಟುಂಬ, ಸಮಾಜ ಹಾಗೂ ಸರಕಾರಗಳು ಗಂಭೀರವಾಗಿ ಯೋಚಿಸುವುದಕ್ಕೆ ಇದು ಪ್ರಚೋದನೆಯಾಗಬೇಕು ಎನ್ನುವುದು ನಿಜವಾದರೂ, ಈ ಬಗ್ಗೆ ಭಾವೋದ್ರೇಕದಿಂದ ವರದಿ ಮಾಡುವುದು ಮತ್ತು ಮಕ್ಕಳನ್ನೇ ದೂಷಿಸುವುದು ಅಪೇಕ್ಷಣೀಯವಲ್ಲ, ಅದರಿಂದ ಮಕ್ಕಳಿಗೆ ಇನ್ನಷ್ಟು ಹಾನಿಯೇ ಆಗಬಹುದುʼ ಎಂದು ಹೇಳಿದ್ದಾರೆ.
ಹಲವು ರೀತಿಯಲ್ಲಿ ಇಂಥಹ ಬೆಳವಣಿಗೆಗಳಿಗೆ ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕಾರಣವಾಗಿರುವ ಸರ್ಕಾರವೇ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವುದು ಎಲ್ಲಕ್ಕಿಂತ ತುರ್ತು ಅಗತ್ಯವಾಗಿದೆ ಎಂದು ತಿಳಿಸಿದ್ದಾರೆ.
ಮೊದಲನೆಯದಾಗಿ, ʼಕೋವಿಡ್ ಕಾಲದಲ್ಲಿ ಒಂದೆರಡು ವರ್ಷ ಶಾಲೆಗಳನ್ನು ಅವೈಜ್ಞಾನಿಕವಾಗಿ ಮುಚ್ಚಿದ್ದರಿಂದ ಮಕ್ಕಳ ಮಾನಸಿಕ, ದೈಹಿಕ, ಬೌದ್ಧಿಕ ಆರೋಗ್ಯ ಹಾಗೂ ಬೆಳವಣಿಗೆಗಳ ಮೇಲೆ ಗಂಭೀರ ಪರಿಣಾಮಗಳಾಗುತ್ತವೆ ಮತ್ತು ಶಾಲೆಗಳಲ್ಲಿ ಮಕ್ಕಳ ಮೇಲೆ ನಿಗಾವಣೆಯಿಲ್ಲದೆ ಸಮಸ್ಯೆಗಳಾಗುತ್ತವೆ ಎಂದು ನಾವು ಕೆಲವರು ಜೂನ್ 2020ರಿಂದಲೇ ಪದೇ ಪದೇ ಎಚ್ಚರಿಕೆ ನೀಡಿದ್ದೆವು. ಮಕ್ಕಳಿಗೆ ನೇರ ಶಿಕ್ಷಣವಷ್ಟೇ ನೀಡಬೇಕೆಂದೂ, ಮೊಬೈಲ್ ಸಾಧನಗಳ ಮೂಲಕ ಆನ್ ಲೈನ್ ಪಾಠಗಳನ್ನು ಮಾಡುವುದು ಹಲತರದ ತೊಂದರೆಗಳನ್ನುಂಟು ಮಾಡಲಿವೆ ಎಂದೂ ಎಚ್ಚರಿಸಿದ್ದೆವು. ಅವನ್ನೆಲ್ಲ ಕಡೆಗಣಿಸಿ ಮಾಡಬಾರದ್ದನ್ನು ಮಾಡಿದ್ದರ ದುಷ್ಪರಿಣಾಮಗಳನ್ನೇ ಈಗ ಕಾಣುತ್ತಿದ್ದೇವೆ. ಇವುಗಳಿಗೆ ಕಾರಣರಾದ ಆಡಳಿತ, ಶಾಲಾ ವ್ಯವಸ್ಥಾಪಕರು ಮುಂತಾದವರು ಹೊಣೆ ಹೊರಬೇಕಲ್ಲದೆ ಮಕ್ಕಳನ್ನು ದೂಷಿಸಿ ದೊಡ್ಡದಾಗಿ ಚರ್ಚಿಸುವುದು ಅನ್ಯಾಯವಾಗುತ್ತದೆʼ ಎಂದು ಸರ್ಕಾರದ ಬೇಜವಾಬ್ದಾರಿಯ ಬಗ್ಗೆ ತಿಳಿಸಿದ್ದಾರೆ.
ಎರಡನೆಯದಾಗಿ, ಬಹಳ ವರ್ಷಗಳಿಂದಲೂ ಹಲವು ಪ್ರಗತಿಪರರು, ಶಿಕ್ಷಣ ತಜ್ಞರು ಮತ್ತು ವೈದ್ಯಕೀಯ ಕ್ಷೇತ್ರದ ಗಣ್ಯರು ಶಾಲೆಗಳಲ್ಲಿ ಮಕ್ಕಳಿಗೆ ಲೈಂಗಿಕ ಶಿಕ್ಷಣವನ್ನು ನೀಡಬೇಕೆಂದು ಒತ್ತಾಯಿಸುತ್ತಲೇ ಬಂದಿದ್ದಾರೆ. ಮಕ್ಕಳು ಹದಿಹರಯದಲ್ಲಿ ತಮ್ಮ ಶಾರೀರಿಕ ಹಾಗು ಮಾನಸಿಕ ಬೆಳವಣಿಗೆಗಳನ್ನು ವೈಜ್ಞಾನಿಕವಾಗಿ ಅರ್ಥೈಸಿಕೊಂಡರೆ ಯಾವುದೇ ಗೊಂದಲ ಹಾಗು ಆತಂಕಗಳಿಗೆ ಈಡಾಗದೆ ಅವನ್ನು ನಿಭಾಯಿಸಲು ಶಕ್ತರಾಗುತ್ತಾರೆ. ಆದರೆ, ನಮ್ಮ ಸರ್ಕರಗಳು ಲೈಂಗಿಕ ಶಿಕ್ಷಣವನ್ನು ಅವೈಜ್ಞಾನಿಕ ಹಾಗು ಮಡಿವಂತಿಕೆಯ ದೃಷ್ಟಿಯಿಂದ ನೋಡುವ ಮೂಲಕ ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ವಿರೋಧಿಸಿದ ಕಾರಣ ಇಂದು ಮಕ್ಕಳು ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎಂಬ ಗೊಂದಲಕ್ಕೆ ಸಿಲುಕುತ್ತಿರುವುದು ಮತ್ತು ಪ್ರಯೋಗಗಳಿಗೆ ಮುಂದಾಗುವಂತಾಗಿದೆ ಎಂದು ಹೇಳಿದ್ದಾರೆ.
ಸರ್ಕಾರವು ಈಗಲಾಗದರೂ ಎಚ್ಚೆತ್ತು ಶಾಲೆಗಳಲ್ಲಿ ಲೈಂಗಿಕ ಶಿಕ್ಷಣವನ್ನು ನೀಡಲು ಮುಂದಾಗುವುದು ಸರಿಯಾದ ಕ್ರಮವೆಂದು ನಾವು ಭಾವಿಸುತ್ತೇವೆ. ಈಗಾಗಲೇ ಹಲವು ದೇಶಗಳಲ್ಲಿ ಇದು ಜಾರಿಯಲ್ಲಿದ್ದು ಅಂತರಾಷ್ಟ್ರೀಯ ಸಂಸ್ಥೆಗಳಾದ ಯುನಿಸೆಫ್ ಮತ್ತು ಯುನೆಸ್ಕೊ ಸಂಸ್ಥೆಗಳು ಇದಕ್ಕೆ ಸೂಕ್ತ ಪಠ್ಯಕ್ರಮ ಹಾಗು ಮಾಡ್ಯೂಲ್ ಗಳನ್ನು ತಯಾರಿಸಿವೆ, ಅವನ್ನೇ ಇಲ್ಲೂ ಬಳಸಲು ಸಾಧ್ಯವಿದೆ ಎಂದು ಸರ್ಕಾರ ಎಚ್ಚೆತ್ತುಕೊಳ್ಳುವ ಬಗ್ಗೆ ತಿಳಿಸಿದ್ದಾರೆ.
ಮೂರನೆಯದಾಗಿ, ಇಂಥಹ ಸಂದರ್ಭಗಳಲ್ಲಿ ಸೂಕ್ಷ್ಮವಾಗಿ ಮತ್ತು ತಜ್ಞತೆಯನ್ನು ಹೊಂದಿರುವವರ ಮಾರ್ಗದರ್ಶನದಲ್ಲಿ ಪರಿಹಾರೋಪಾಯಗಳನ್ನು ಕಂಡುಕೊಳ್ಳಬೇಕೇ ಹೊರತು ರಜೆ ನೀಡಿ ಕೌನ್ಸಿಲಿಂಗ್ ಗೆ ಕಳಿಸುತ್ತೇವೆಂದು ಬಹಿರಂಗವಾಗಿ ಸಾರಿ ಹೇಳುವುದು ಅಥವಾ ಸಲಹೆ ನೀಡುವುದು ಅತ್ಯಂತ ಅವಿವೇಕದ ನಿರ್ಧಾರವಾಗುತ್ತದೆ. ಅಂಥಹ ಮಕ್ಕಳನ್ನು ಗುರುತಿಸಿ, ಅವರ ಗೌಪ್ಯತೆಯನ್ನು ಕಾಪಾಡಿ ತಜ್ಞರ ಸಹಾಯದಿಂದ ಅವರು ಅದನ್ನು ಅರ್ಥೈಸಿಕೊಳ್ಳಲು ಮತ್ತು ಅವುಗಳಿಂದಾಗಬಹುದಾದ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಳ್ಳಲು ನೆರವಾಗಬೇಕೇ ಹೊರತು ಅದನ್ನು ಸಾರ್ವಜನಿಕವಾಗಿ ಚರ್ಚಿಸುವುದಾಗಲಿ ಅಥವಾ ಸುದ್ದಿಯಾಗಿ ವೈಭವೀಕರಿಸುವುದಾಗಲಿ ಮಕ್ಕಳ ಮಾನಸಿಕ ಆರೋಗ್ಯಕ್ಕೂ, ಜೀವಕ್ಕೂ ಅಪಾಯ ತಂದೊಡ್ಡುವ ಸಾಧ್ಯತೆಯಿದೆಯೆಂದು ಸಮಾಜ ಹಾಗು ಸರ್ಕಾರ ಅರಿಯಬೇಕಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.