ವೈಚಾರಿಕರು, ಜಾತ್ಯತೀತರು ಎಂಬ ಹಣೆಪಟ್ಟಿ ಹೊತ್ತ ಕಾಂಗ್ರೆಸ್ ಪಕ್ಷದ ಮುಖಂಡರೇ ಇಂದು ಅದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡ ಘಟನೆ ಇಂದು ವಿಧಾನಸೌಧದ ಎದುರು ನಡೆದಿದೆ. ಸಿದ್ದರಾಮಯ್ಯ ನೇತೃತ್ವದ ಹೊಸ ಸರ್ಕಾರದ ಮೊಟ್ಟ ಮೊದಲ ಅಧಿವೇಶನದ ದಿನವೇ ಕಾಂಗ್ರೆಸ್ ಕಾರ್ಯಕರ್ತರು ವಿಧಾನಸೌಧದ ಎದುರು ಪೂಜೆ ಮಾಡಿ, ಗೋಮೂತ್ರ ಸಿಂಪಡನೆ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ.
ಕಾಂಗ್ರೆಸ್ ಮುಖಂಡ ಮನೋಹರ್ ಅವರ ನೇತೃತ್ವದಲ್ಲಿ ಈ ಪೂಜಾ ಕಾರ್ಯ ನಡೆದಿದೆ. ಈ ಬಗ್ಗೆ ಮಾಧ್ಯಮಗಳು ಅವರನ್ನು ಸಂಪರ್ಕಿಸಿದಾಗ ‘ಭ್ರಷ್ಟ ಬಿಜೆಪಿ ಆಡಳಿತದಿಂದ ವಿಧಾನಸೌಧ ಅಶುದ್ಧವಾಗಿತ್ತು. ಆ ಕಾರಣ ನಾವು ಶುದ್ಧೀಕರಣ ಮಾಡುತ್ತಿದ್ದೇವೆ’ ಎಂಬಂತೆ ಉತ್ತರಿಸಿದ್ದಾರೆ.
ಸಧ್ಯ ವೈಚಾರಿಕತೆ, ಸಂವಿಧಾನದ ಆಶಯಗಳ ಪರವಾಗಿ ಇರುವ ಸರ್ಕಾರ ಎಂದು ಘೋಷಿಸಿಕೊಳ್ಳುವ ಕಾಂಗ್ರೆಸ್ ಪಕ್ಷದ ಈ ನಡೆಯ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ. ಮೂಢನಂಬಿಕೆಗಳಿಗೆ ಇಂಬು ಕೊಡುವಂತಹ ಇಂತಹ ನಡೆಯಿಂದ ಸಮಾಜಕ್ಕೆ ಕಾಂಗ್ರೆಸ್ ಪಕ್ಷ ಕೊಡುವ ಸಂದೇಶವೇನು ಎಂಬುದು ಎಲ್ಲರ ಪ್ರಶ್ನೆಯಾಗಿದೆ.