ʼಗಾಂಧಿ ಕುಟುಂಬವು ಸಂವಿಧಾನವನ್ನು ತನ್ನ ಕುಟುಂಬಕ್ಕೆ ಸೇರಿದ ಆಸ್ತಿ ಎಂಬಂತೆ ಭಾವಿಸಿ, ಕಳೆದ 75 ವರ್ಷಗಳಿಂದಲೂ ಸಂಸತ್ತಿಗೆ ವಂಚಿಸುತ್ತಲೇ ಬಂದಿದೆ. ಕಾಂಗ್ರೆಸ್ ಕೂಡ ನೆಹರೂ-ಗಾಂಧಿ ಕುಟುಂಬವನ್ನು ಹೊಗಳುವುದುನ್ನು ಬಿಟ್ಟು ಮತ್ಯಾವ ಘನಕಾರ್ಯವನ್ನೂ ಮಾಡಿಲ್ಲ.’ ಹೀಗೆಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಚಾಟಿ ಬೀಸಿದ್ದಾರೆ.
ರಾಜ್ಯಸಭೆಯಲ್ಲಿ 2 ದಿನ ಗಳ ಕಾಲ ನಡೆದ ಸಂವಿಧಾನದ ಕುರಿತ ಚರ್ಚೆಗೆ ಮಂಗಳವಾರ ಉತ್ತರಿಸಿದ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿ, ಚುನಾವಣೆ ಸೋಲುವ ಭಯದಿಂದಾಗಿ 42ನೇ ತಿದ್ದುಪಡಿ ತಂದು ಲೋಕಸಭೆ, ವಿಧಾನಸಭೆಗಳ ಅವಧಿಯನ್ನು ಕಾಂಗ್ರೆಸ್ ವಿಸ್ತರಿಸಿತು. 55 ವರ್ಷದಲ್ಲಿ 77 ಬಾರಿ ಸಂವಿಧಾನಕ್ಕೆ ತಿದ್ದುಪಡಿ ತಂದಿದ್ದು ಜನರ ಹಿತಾಸಕ್ತಿಗಾಗಿ ಅಲ್ಲ, ಅದರ ಸ್ವಾರ್ಥಕ್ಕಾಗಿ ಎಂದಿದ್ದಾರೆ. ನಾವು 16 ವರ್ಷದಲ್ಲಿ 22 ತಿದ್ದುಪಡಿ ತಂದಿದ್ದೇವೆ. ಅದೆಲ್ಲವೂ ಬಡವರ್ಗವನ್ನು ಮೇಲೆತ್ತಲು, 370ನೇ ವಿಧಿ ರದ್ದುಗೊಳಿಸಲು, ಜಿಎಸ್ಟಿ ಪರಿಚಯದಂಥ ಅಭಿವೃದ್ಧಿ ಕೆಲಸಗಳಿಗಾಗಿ ಎಂದಿದ್ದಾರೆ.
ಜತೆಗೆ ಇವಿಎಂಗಳ ಬಗ್ಗೆ ಕಾಂಗ್ರೆಸ್ ಚಕಾರ ಎತ್ತುವುದನ್ನೇ ಗುರಿಯಾಗಿಸಿ ನಿಮಗೆ ಚುನಾವಣೆಯಲ್ಲಿ ಸೋತಾಗ ಮಾತ್ರ ಇವಿಎಂನಲ್ಲಿ ದೋಷ ಕಾಣಿಸು ವುದೇ? ದೋಷ ಸಾಬೀತುಪಡಿಸಿ ಎಂದು ಚು. ಆಯೋಗ ಹೇಳಿದರೆ ಮಾತ್ರ ಯಾರೂ ಮುಂದೆ ಬರಲಾರಿರಿ ಎಂದೂ ಲೇವಡಿ ಮಾಡಿದ್ದಾರೆ. ಓಲೈಕೆ, ವಂಶಾಡಳಿತ, ಭ್ರಷ್ಟಾಚಾರ ಬಿಟ್ಟುಬಿಟ್ಟರೆ ಜನ ಮತ್ತೆ ನಿಮ್ಮನ್ನು ಅಧಿಕಾರಕ್ಕೆ ತರುತ್ತಾರೆ ಎಂದು ಕಾಂಗ್ರೆಸ್ಗೆ ಕಿವಿ ಮಾತನ್ನೂ ಹೇಳಿದ್ದಾರೆ.
ಕಾಂಗ್ರೆಸ್ ಹಿಂದುಳಿದ ವರ್ಗಕ್ಕಾಗಿ ಎಂದಿಗೂ ಶ್ರಮಿಸಿಲ್ಲ. ಅದು ಮೀಸಲಾತಿ ವಿರೋಧಿ ಪಕ್ಷ, ಮೀಸಲು ಮಿತಿ ಹೆಚ್ಚಿಸಿ ಅದನ್ನು ಮುಸ್ಲಿಮರಿಗೆ ನೀಡಲು ಕಾಂಗ್ರೆಸ್ ತಂತ್ರ ರೂಪಿಸಿದೆ. ಮುಸ್ಲಿಂ ಪ್ರತ್ಯೇಕ ಕಾನೂನು ಜಾರಿ ಮೂಲ ಕವೇ ದೇಶದಲ್ಲಿ ಮೊದಲ ಬಾರಿಗೆ ಓಲೈಕೆ ರಾಜಕೀಯ ಆರಂಭವಾಯಿತು. ಮುಸ್ಲಿಂ ಕಾನೂನು ಸಂವಿಧಾನ ಕ್ಕಿಂತ ಮಿಗಿಲಾದುದೇ ಎಂದೂ ಸಚಿವ ಪ್ರಶ್ನಿಸಿದ್ದಾರೆ. ಜತೆಗೆ ಇಡೀ ದೇಶದಲ್ಲಿ ಬಿಜೆಪಿಯ ಕೇವಲ ಒಬ್ಬ ಸಂಸದ ಇದ್ದರೂ ಧರ್ಮದ ಆಧಾರದಲ್ಲಿ ಮೀಸಲು ನೀಡಲು ಬಿಡಲ್ಲ ಎಂದೂ ಶಾ ಹೇಳಿದ್ದಾರೆ.