Friday, June 20, 2025

ಸತ್ಯ | ನ್ಯಾಯ |ಧರ್ಮ

ರಾಜ್ಯದಲ್ಲಿ ಮುಂದುವರೆದ ಅನೈತಿಕ ಪೊಲೀಸ್ ಗಿರಿ : ದೌರ್ಜನ್ಯವೆಸಗಿದವರ ಮೇಲೆ ಸರ್ಕಾರದ ಕ್ರಮವೇನು?

ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಬಹುತೇಕ ಕಡೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಿದ್ದ ಅನೈತಿಕ ಪೊಲೀಸ್ ಗಿರಿ ಈಗ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೂ ಮುಂದುವರೆದಿದೆ. ಕಳೆದ ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸಿದ್ದ ಬಾದಾಮಿಯಲ್ಲೇ ಉತ್ತರ ಪ್ರದೇಶ ಮಾದರಿ ಕ್ರೌರ್ಯ ನಡೆದಿದ್ದು, ಯುವಕನನ್ನು ಮರಕ್ಕೆ ಕಟ್ಟಿ ಹಾಕಿ ದೌರ್ಜನ್ಯ ನಡೆಸಲಾಗಿದೆ.

ಘಟನೆಯ ವಿವರ : ಬಕ್ರೀದ್‌ ಹಬ್ಬದ ಸಂದರ್ಭದಲ್ಲಿ ಗೋಹತ್ಯೆ ಮಾಡಲು ಬಂದಿರಬಹುದು ಎಂಬ ನೆಪದಲ್ಲಿ ಯುವಕನೊಬ್ಬನನ್ನು ಮರಕ್ಕೆ ಕಟ್ಟಿ ಹಾಕಿ ಸ್ಥಳೀಯ ಸಾರ್ವಜನಿಕರು ಥಳಿಸಿದ್ದಾರೆ. ಹಿಂದುತ್ವದ ಸಂಘಟನೆಗೆ ಸೇರಿರಬಹುದಾದ ಕೆಲವು ಗೂಂಡಾಗಳು ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಯುವಕನನ್ನು ಹಿಡಿದು ಆತನನ್ನು ಮೇಲಿಂದ ಮೇಲೆ ಪ್ರಶ್ನಿಸಿ ಇಕ್ಕಟ್ಟಿಗೆ ಸಿಕ್ಕಿಸಿದ್ದಾರೆ.

ಅನಿರೀಕ್ಷಿತ ಬೆಳವಣಿಗೆಯಿಂದ ಗಲಿಬಿಲಿಗೆ ಒಳಗಾದ ಯುವಕ ಏನು ಹೇಳಲೂ ಬಾರದೆ ಉತ್ತರಿಸಲು ತಡಬಡಾಯಿಸಿದ್ದು ವೈರಲ್ ಆಗಿರುವವಿಡಿಯೋದಲ್ಲಿ ಗಮನಿಸಬಹುದು. ಅನುಮಾನಾಸ್ಪದ ಯುವಕನನ್ನು ಕಟ್ಟಿಹಾಕಿರುವ ವಿಡಿಯೋ ವೈರಲ್‌ ಆಗಿದ್ದು, ವಿಜಯವಾಣಿ ಪತ್ರಿಕೆ ಈ ಯುವಕನನ್ನು ಕಟ್ಟಿಹಾಕಿರುವ ಚಿತ್ರವನ್ನು ಪ್ರಕಟಿಸಿದೆ.

ಬಾದಾಮಿಯ ಖಾಜಿ ಎಂಬುವವರ ತೋಟದಲ್ಲಿ ಈ ಘಟನೆ ನಡೆದಿದ್ದು,ಯುವಕನ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ. ಮೇಲ್ನೋಟಕ್ಕೆ ಯುವಕ ಮುಸ್ಲಿಂ ಎಂದು ಕಂಡುಬಂದಿದೆ. ಉತ್ತರಪ್ರದೇಶ, ಬಿಹಾರಗಳಲ್ಲಿ ನಡೆಯುವ ಮಾದರಿಯ ದೌರ್ಜನ್ಯ ಇದಾಗಿದ್ದು ಕರ್ನಾಟಕದಲ್ಲಿ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ.

ಆ ಯುವಕ ತಪ್ಪು ಮಾಡಿರಲಿ ಅಥವಾ ಮಾಡದೇ ಇರಲಿ, ವಿಚಾರಿಸಲು ಪೊಲೀಸರಿದ್ದಾರೆ, ಕೋರ್ಟ್ ಇದೆ, ಕಾನೂನು ಇದೆ. ಅಂತಹ ಅನುಮಾನ ಏನೇ ಕಂಡುಬಂದರೂ ಆತನನ್ನು ತಕ್ಷಣ ಪೊಲೀಸರಿಗೆ ಒಪ್ಪಿಸುವುದು ಬಿಟ್ಟು, ಕಾನೂನು ಕೈಗೆ ತಗೆದುಕೊಳ್ಳಲು ಇವರು ಯಾರು ಎಂಬ ಬಗ್ಗೆ ಮಾತುಗಳು ಕೇಳಿ ಬಂದಿವೆ.

ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ ಇಂತದ್ದಕ್ಕೆ ಕಡಿವಾಣ ಹಾಕಬಹುದು ಎಂಬ ನಿರೀಕ್ಷೆ ಹಲವು ಮಂದಿಗೆ ಇತ್ತು. ಆದರೆ ಈ ಅವಧಿಯಲ್ಲೂ ಇದು ಮುಂದುವರೆದಿದ್ದು, ಜನಸಾಮಾನ್ಯರಲ್ಲಿ ಆತಂಕ ಹೆಚ್ಚಿಸಿದೆ. ಸರ್ಕಾರ ಇಂತಹ ಅನೈತಿಕ ಪೊಲೀಸ್ ಗಿರಿ ನಡೆಸುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕ ವಲಯದಿಂದ ವಲಯದಿಂದ ಕೇಳಿಬರುತ್ತಿರುವ ಆಗ್ರಹವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page