ಬೆಂಗಳೂರು: ದೆಹಲಿಯಲ್ಲಿ ಸುಮಾರು ಆರು ಗಂಟೆಗಳ ಕಾಲ ನಡೆದ ಹೈವೋಲ್ಟೇಜ್ ಸಭೆ ಮುಗಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾತ್ರಿ 12 ಗಂಟೆ ಸುಮಾರಿಗೆ HAL ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಅವರ ಸ್ವಾಗತಕ್ಕೆ ಸಚಿವರಾದ ಕೃಷ್ಣಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಜಮೀರ್ ಉಪಸ್ಥಿತರಿದ್ದರು.
ವಿಮಾನ ನಿಲ್ದಾಣದಿಂದ ನೇರವಾಗಿ ಸಿಎಂ ನಿವಾಸ ಕಾವೇರಿಗೆ ತೆರಳಿದ ಸಿದ್ದರಾಮಯ್ಯ ಅವರು, ಆಪ್ತ ಸಚಿವರೊಂದಿಗೆ ಮಿಡ್ನೈಟ್ ಮೀಟಿಂಗ್ ನಡೆಸಿದರು. ಪರಮೇಶ್ವರ್, ದಿನೇಶ್ ಗುಂಡೂರಾವ್, ಅಶೋಕ್ ಪಟ್ಟಣ್, ಎಂ.ಸಿ. ಸುಧಾಕರ್, ಕೃಷ್ಣಬೈರೇಗೌಡ, ಶಾಸಕ ರಿಜ್ವಾನ್ ಹಾಗೂ ಬೈರತಿ ಸುರೇಶ್ ಸಭೆಯಲ್ಲಿ ಭಾಗವಹಿಸಿದರು. ದೆಹಲಿ ಬೆಳವಣಿಗೆ ಮತ್ತು ಮುಂದಿನ ನಿರ್ಧಾರದ ಕುರಿತು ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.
ದೆಹಲಿಯಲ್ಲಿ ಏನು ನಡೆಯಿತು?
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್ ಮತ್ತು ರಣದೀಪ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸಿದ್ದರಾಮಯ್ಯ ಮತ್ತು ಡಿಸಿಎಂ ಶಿವಕುಮಾರ್ ಅವರೊಂದಿಗೆ ಪ್ರತ್ಯೇಕವಾಗಿ ಮಾತುಕತೆ ನಡೆಯಿತು. ಸಿದ್ದರಾಮಯ್ಯ ಅವರಿಗೆ ಹಲವು ಆಫರ್ಗಳನ್ನು ನೀಡಿದ ಬಳಿಕ ರಾಜೀನಾಮೆಗೆ ಒಪ್ಪಿಗೆ ಸಿಕ್ಕಿದೆ ಎನ್ನಲಾಗುತ್ತಿದೆ.
ಮುಂದೇನು?
ಇಂದು ರಾಜ್ಯಕ್ಕೆ ಆಗಮಿಸುವ ಸುರ್ಜೇವಾಲಾ ಮತ್ತು ವೇಣುಗೋಪಾಲ್ ಅವರು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ನಾಳೆ ಗುರುವಾರ ಕೊನೆಯ ಸಂಪುಟ ಸಭೆ ನಡೆಸಿ, ಶುಕ್ರವಾರ ಸುದ್ದಿಗೋಷ್ಠಿ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ.
