Home ರಾಜ್ಯ ದಕ್ಷಿಣ ಕನ್ನಡ ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಲು ಸಿಪಿಐಎಂ ಒತ್ತಾಯ

ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಲು ಸಿಪಿಐಎಂ ಒತ್ತಾಯ

0

ಮಂಗಳೂರು ಮಹಾನಗರ ಪಾಲಿಕೆ ವಸತಿ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿರುವ ಸಾವಿರಾರು ಫಲಾನುಭವಿ ನಿವೇಶನರಹಿತರಿಗೆ ಕೂಡಲೇ ಮನೆ ನಿವೇಶನ ಒದಗಿಸಿಕೊಡಬೇಕೆಂದು ಮಂಗಳೂರು ಮಹಾನಗರ ಪಾಲಿಕೆ ಆಡಳಿತವನ್ನು ಹಾಗೂ ಶಾಸಕ ವೇದವ್ಯಾಸ ಕಾಮತ್ ರನ್ನು CPIM ಮಂಗಳೂರು ನಗರ ದಕ್ಷಿಣ ಸಮಿತಿ ಒತ್ತಾಯಿಸಿದೆ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಎಲ್ಲಾ ನಗರಗಳಲ್ಲಿ ಭೂಮಿಯ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಸಹ ಅಂತಹ ನಗರಗಳಲ್ಲಿ ಒಂದಾಗಿದೆ. ಭೂಮಿಗೆ ವಿಪರೀತ ಬೆಲೆ ಏರಿಸುವ ಮೂಲಕ ಭೂದಂಧೆಯಾಗಿ ಮಾರ್ಪಡಿಸಿರುವ ಮಂಗಳೂರು ನಗರದಲ್ಲಿ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ಜನತೆ ಭೂಮಿ ಖರೀದಿಸಿ ಮನೆ ನಿರ್ಮಿಸುವುದು ಕನಸಿನ ಮಾತಾಗಿದೆ ಎಂದು ಸಿಪಿಐಎಂ ಅಭಿಪ್ರಾಯ ಪಟ್ಟಿದೆ.

ನಗರ ಪಾಲಿಕೆ ಅಸ್ತಿತ್ವಕ್ಕೆ ಬಂದ ನಂತರ ಕಳೆದ 40 ವರ್ಷಗಳಲ್ಲಿ ಒಂದೇ ಒಂದು ತುಂಡು ಭೂಮಿಯನ್ನು ನಿವೇಶನ ರಹಿತರಿಗೆ ನೀಡದೆ ಸತಾಯಿಸಿದೆ. ಮಾತ್ರವಲ್ಲ ಪ್ರತೀ ವರುಷ ವಸತಿ ಯೋಜನೆಯ ಹೆಸರಲ್ಲಿ ಅರ್ಜಿಗಳನ್ನು ಪಡೆದು ನಿವೇಶನವನ್ನು ನೀಡದೆ ವಂಚಿಸಿದೆ. ಹೀಗೆ ಪಾಲಿಕೆ ಆಡಳಿತ ನಿವೇಶನ ನೀಡದೆ ವಂಚಿಸಿದ ಬಡ ಹಿಂದುಳಿದ ವರ್ಗದ ಕುಟುಂಬಗಳನ್ನು ಸಿಪಿಐಎಂ ಪಕ್ಷದ ನೇತೃತ್ವದಲ್ಲಿ ಹೋರಾಟ ಸಮಿತಿಗಳನ್ನು ರೂಪಿಸಿ ಕಳೆದ 10 ವರ್ಷಗಳ ಹಿಂದೆ ಸಂಘಟಿಸಿದ ಪ್ರಬಲ ಚಳುವಳಿಯ ಹಿನ್ನೆಲೆಯ ಭಾಗವಾಗಿ ಜಿಲ್ಲಾಡಳಿತ ಹಾಗು ಮನಪಾ ಹಲವಾರು ಕಡೆಗಳಲ್ಲಿ ಕನಿಷ್ಟ ನಿವೇಶಗಳನ್ನು ಗುರುತಿಸಿ G+3 ಮಾದರಿಯಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ಆಶ್ವಾಸನೆ ನೀಡಿತ್ತು. ಮಾತ್ರವಲ್ಲದೆ ಶಕ್ತಿನಗರದಲ್ಲಿ ನಿವೇಶನ ಕಾದಿರಿಸಿ ಗುದ್ದಲಿ ಪೂಜೆಯನ್ನೂ ಕೈಗೊಂಡ ಪಾಲಿಕೆ ಆಡಳಿತ ಈವರೆಗೆ ವಸತಿ ಕಾಮಗಾರಿಗಳನ್ನು ಕೈಗೊಳ್ಳದೆ ಬಡವರನ್ನು ವಸತಿ ಯೋಜನೆ ಹೆಸರಲ್ಲಿ ವಂಚಿಸಿದೆ ಎಂದು ಪಾಲಿಕೆಯನ್ನು ಆರೋಪಿಸಿದೆ.

ಇನ್ನು ಚುನಾವಣೆಯಲ್ಲಿ ಗೆದ್ದ ಬಿಜೆಪಿಯ ಶಾಸಕ ವೇದವ್ಯಾಸ ಕಾಮತ್ ರವರು ಅದೇ ಶಕ್ತಿನಗರದ ಜಾಗ ಅರಣ್ಯ ಇಲಾಖೆಗೆ ಸೇರಿದ್ದು ಅಂತ ತಕರಾರು ಎಬ್ಬಿಸಿ ಅದನ್ನೂ ಇಲ್ಲದ ಹಾಗೆ ಮಾಡಿ ನಿವೇಶನರಹಿತರ ಆಶಾಗೋಪುರವನ್ನೇ ನಾಶ ಮಾಡಿರುತ್ತಾರೆ. ಬಿಜೆಪಿ ಸರಕಾರದ ಅವಧಿಯ ಕಳೆದ 5 ವರ್ಷಗಳಲ್ಲಿ ನಿವೇಶನರಹಿತರಿಗಾಗಿ ಎಳ್ಳಷ್ಟೂ ಕಾಳಜಿಯಾಗಲಿ ಕನಿಷ್ಟ ನ್ಯಾಯ ಒದಗಿಸಲಾಗದ ಬಿಜೆಪಿ ಸರಕಾರ, ಹಾಗು ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಮತ್ತು ಪಾಲಿಕೆ ಆಡಳಿತ ಬಡಜನ ವಿರೋಧಿಯಾಗಿ ವರ್ತಿಸಿದೆ ಎಂದು ಸಿಪಿಐಎಂ ಗಂಭೀರವಾಗಿ ಆರೋಪಿಸಿದೆ.

ಸಧ್ಯ ಈ ಎಲ್ಲಾ ಅಂಶಗಳನ್ನು ಆಧಾರವಾಗಿಟ್ಟುಕೊಂಡು ರಾಜ್ಯ ಸರಕಾರ, ಪಾಲಿಕೆ ಆಡಳಿತ ಹಾಗೂ ಸ್ಥಳೀಯ ಶಾಸಕ ವೇದವ್ಯಾಸ ಕಾಮತ್ ಈ ಬಗ್ಗೆ ಕೂಡಲೇ ಎಚ್ಚೆತ್ತು ನಿವೇಶನ ರಹಿತರಿಗೆ ಮನೆ ನಿವೇಶನ ಒದಗಿಸಿ ಕೊಡುವಲ್ಲಿ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು, ಇಲ್ಲದಿದ್ದಲ್ಲಿ ನಿವೇಶನ ರಹಿತರ ಪರವಾಗಿ ಪ್ರಬಲ ಚಳುವಳಿಯನ್ನು ರೂಪಿಸಲು CPIM ಮಂಗಳೂರು ನಗರ ದಕ್ಷಿಣ ಸಮಿತಿಯು ನಿರ್ಧರಿಸಿದೆ ಎಂದು ಸಿಪಿಐಎಂ ಪಕ್ಷದ ಕಾರ್ಯದರ್ಶಿ ಸಂತೋಷ್ ಬಜಾಲ್ ರವರು ಆಗ್ರಹಿಸಿದ್ದಾರೆ.

You cannot copy content of this page

Exit mobile version