Monday, June 17, 2024

ಸತ್ಯ | ನ್ಯಾಯ |ಧರ್ಮ

ಜಾತಿ ತಾರತಮ್ಯದ ಹಾಗು ಶೋಷಿತ ದಲಿತ ಸಮುದಾಯವನ್ನು ಅಪಮಾನಿಸುವ ಗಾದೆಗಳ ಬಳಕೆ – 19 ರಂದು ರಾಜ್ಯದಾದ್ಯಂತ ಪ್ರತಿಭಟನೆಗೆ ಸಿಪಿಐಎಂ ಕರೆ

ಬೆಂಗಳೂರು: ದಲಿತ ಸಮುದಾಯವನ್ನು ಅಪಮಾನಿಸುವ, ಜಾತಿ ದೌರ್ಜನ್ಯದ ಗಾದೆಯನ್ನು ಸಾರ್ವಜನಿಕವಾಗಿ ಬಳಸಿ ನಿಂದಿಸಿದ ನಟ ಉಪೇಂದ್ರ ಹಾಗು ಮಂತ್ರಿ ಮಲ್ಲಿಕಾರ್ಜುನರವರ ತಪ್ಪು ನಡೆಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ದ ಕರ್ನಾಟಕ ರಾಜ್ಯ ಸಮಿತಿ ರಾಜ್ಯದಾದ್ಯಂತ ಪ್ರತಿಭಟನೆಗೆ ಕರೆ ನೀಡಿದೆ.

“ದಲಿತ ಸಮುದಾಯವನ್ನು ಅಪಮಾನಿಸುವ, ಜಾತಿ ದೌರ್ಜನ್ಯದ ಗಾದೆಯನ್ನು ಸಾರ್ವಜನಿಕವಾಗಿ ಬಳಸಿ ನಿಂದಿಸಿದ ನಟ ಉಪೇಂದ್ರ ಹಾಗು ಮಂತ್ರಿ ಮಲ್ಲಿಕಾರ್ಜುನರವರ ತಪ್ಪು ನಡೆಯನ್ನು ಭಾರತ ಕಮ್ಯುನಿಸ್ಟ್ ಪಕ್ಷ ( ಮಾರ್ಕ್ಸವಾದಿ ) ದ ಕರ್ನಾಟಕ ರಾಜ್ಯ ಸಮಿತಿ ಬಲವಾಗಿ ಖಂಡಿಸುತ್ತದೆ. ಮೇಲ್ಜಾತಿ ಹಾಗೂ ಅದರ ಬಲಾಢ್ಯ ವರ್ಗಗಳು ಬಳಸುವ ಈ ದೌರ್ಜನ್ಯದ ಗಾದೆ ಕೇವಲ ಕೆಲ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ನಿಂದಿಸುತ್ತಿಲ್ಲ, ಬದಲಿಗೆ ಇಡೀ ಸಮುದಾಯವನ್ನೇ ನಿಂದಿಸುತ್ತದೆ‌ ಮತ್ತು ಅಪಮಾನಿಸುತ್ತದೆ.” ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.


ಘನ ನ್ಯಾಯಾಲಯವೂ ಕೂಡಾ,ಇಡೀ ದಲಿತ ಸಮುದಾಯವನ್ನೇ ಗುರಿಯಾಗಿಸಿ, ನಿಂದನೆಯನ್ನು, ಅಪಮಾನವನ್ನು ಮಾಡುವ ಈ ದೌರ್ಜನ್ಯದ ಗಾದೆಯ ಪ್ರಯೋಗವನ್ನು, ಕೇವಲ ಗಾದೆಯ ಬಳಕೆಯೆಂದು ಲಘುವಾಗಿ ಪರಿಗಣಿಸಿರುವುದು ಆಶ್ಚರ್ಯಕರ ಮತ್ತು ವಿಷಾಧನೀಯವಾಗಿದೆ ಎಂದು ಸಿಪಿಐಎಂ ಠೀಕಿಸಿದೆ.
ಈ ರೀತಿಯ ಗಾದೆಯನ್ನು ಸಾರ್ವಜನಿಕವಾಗಿ ಬಳಸುವ ಮೂಲಕ ಒಂದು ಸಮುದಾಯವನ್ನು ನಿಂದಿಸಬಹುದೇ? ಅಪಮಾನಿಸ ಬಹುದೇ? ನೋವುಂಟು ಮಾಡಬಹುದೇ? ಎಂದು ಸಿಪಿಐಎಂ ಪ್ರಶ್ನಿಸಿದೆ.

“ನ್ಯಾಯಾಲಯದ ಅಭಿಪ್ರಾಯ ಪ್ರಕಟಣೆಯ ನಂತರ, ನಾಯಕ ನಟ ಉಪೇಂದ್ರರು ಹಾಗೂ ಮಂತ್ರಿಗಳು ಬಳಸಿದ ಗಾದೆಯನ್ನು ಎತ್ತಿ ಹಿಡಿದು ಜಾತಿ ತಾರತಮ್ಯ ಹಾಗೂ ದೌರ್ಜನ್ಯ ಮೆರೆವ ಖಂಡನೀಯ ಬೆಂಬಲಗಳು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುತ್ತಿವೆ. ಅವುಗಳನ್ನು ತಡೆಯಲು ಅಗತ್ಯ ಕ್ರಮವಹಿಸುವಂತೆ ರಾಜ್ಯ ಸರಕಾರವನ್ನು ಸಿಪಿಐಎಂ ಒತ್ತಾಯಿಸುತ್ತದೆ‌.” ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಅದೇ ರೀತಿ, ಘನ ನ್ಯಾಯಾಲಯವು ಹೇಳಿಕೆಯನ್ನು ಪುನರ್ ಪರಿಶೀಲಿಸುವಂತೆ ಪಕ್ಷವು ಮನವಿ ಮಾಡಿದೆ.

ಪಕ್ಷದ ಪ್ರಕಟಣೆಯು ಚಲನ ಚಿತ್ರರಂಗದ ಜನಪ್ರಿಯ ನಾಯಕ ನಟನ ಹಾಗೂ ಮಂತ್ರಿ ಮಲ್ಲಿಕಾರ್ಜುನರವರ ಹೇಳಿಕೆ ಅವರ ಅಭಿಮಾನಿಗಳು, ಬೆಂಬಲಿಗರು ಮತ್ತು ರಾಜ್ಯದ ಜನತೆಯ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತವೆಂಬುದನ್ನು ಗಮನಿಸಬೇಕಾಗಿದೆ‌ ಎಂದಿದೆ.


ನಟ ಉಪೇಂದ್ರರವರು ಹಾಗೂ ಮಂತ್ರಿಗಳು ಅವರಿಗೆ ಅರಿವಿಲ್ಲದೇ ಅಥವಾ ಯಾರನ್ನು ನಿಂದಿಸುವ ದುರುದ್ದೇಶವಿಲ್ಲದೇ ವಾಡಿಕೆಯಂತೆ ಬಳಸಿದ್ದು ನಿಜವಾದಲ್ಲಿ, ಅವರು ಸಾರ್ವಜನಿಕವಾಗಿ ದಮನಿತ ಸಮುದಾಯ ಹಾಗೂ ರಾಜ್ಯದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಸಿಪಿಐಎಂ ಒತ್ತಾಯಿಸಿದೆ‌.

ಸಮಾಜದಲ್ಲಿನ ಮೇಲ್ಜಾತಿ ಹಾಗೂ ಮೇಲ್ವರ್ಗಗಳು, ಸಾವಿರಾರು ವರ್ಷಗಳಿಂದ, ಮಹಿಳೆಯರನ್ನು ಹಾಗು ದಲಿತ ಮತ್ತು ಹಿಂದುಳಿದ ಜಾತಿ ಸಮುದಾಯಗಳನ್ನು ಗುರಿಯಾಗಿಸಿ, ನಿಂದಿಸುವ ಹಾಗೂ ಅಪಮಾನಿಸಿ ದೌರ್ಜನ್ಯ ಎಸಗುವ ಬೈಗಳು ಮತ್ತು ಹಲವು ಗಾದೆಗಳನ್ನು ಜಾತಿ ಹಾಗು ಲಿಂಗ ತಾರತಮ್ಯ ಹಾಗೂ ದೌರ್ಜನ್ಯ ಮೆರೆಯುವ ಭಾಗವಾಗಿ ಚಾಲ್ತಿಯಲ್ಲಿಟ್ಟು ಮುಂದುವರೆಸುತ್ತಿರುವುದು ಮತ್ತು ವಾಡಿಕೆಯಾಗಿಸಿರುವುದು ಅಕ್ಷಮ್ಯ ಅಪರಾಧವಾಗಿದೆ.

ಈಗಲೂ ಈ ಖಂಡನೀಯ ದೌರ್ಜನ್ಯದ ಅಪಮಾನಗಳನ್ನು ದಿನ ನಿತ್ಯ, ಪ್ರತಿ ಕ್ಷಣ, ರಾಜ್ಯದ, ದೇಶದ ಎಲ್ಲ ಮಹಿಳಾ ಮತ್ತು ಶೂದ್ರ ಹಾಗೂ ದಲಿತ ಸಮುದಾಯಗಳು, ಮೇಲ್ಜಾತಿ ಹಾಗೂ ಮೇಲ್ಬರ್ಗಗಳಿಂದ ಅನುಭವಿಸುತ್ತಲೆ ಇವೆ.


ಈ ದೌರ್ಜನ್ಯದ ಕುರಿತಂತೆ ರಾಜ್ಯದ ಜನತೆ ಪ್ರತಿರೋಧಿಸುವುದು ಮತ್ತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಅಗತ್ಯವಿದೆ. ಎಂದು ವಿವರಿಸಿದ ಸಿಪಿಐಎಂ, ರಾಜ್ಯದಾದ್ಯಂತ 19 ರಂದು ಜಾತಿದೌರ್ಜನ್ಯ ಹಾಗೂ ಅಸ್ಪೃಶ್ಯಾಚರಣೆ ಮತ್ತು ಲಿಂಗ ತಾರತಮ್ಯದ ಭೂತ ದಹಿಸುವ ಮೂಲಕ ಪ್ರತಿಭಟನೆ ನಡೆಸಲು ಜನತೆ ಹಾಗೂ ಘಟಕಗಳಿಗೆ ಕರೆ ನೀಡಿದೆ.

ಮಹಿಳೆಯರು ಹಾಗೂ ಶೂದ್ರ ಹಾಗೂ ದಲಿತ ಸಮುದಾಯಗಳನ್ನು ನಿಂದಿಸಿ ಅಪ‌ಮಾನಿಸುವ ಪದಗಳನ್ನ, ಗಾದೆಗಳನ್ನು, ಬೈಗಳನ್ನು ಬಳಸದಂತೆ ನಾಗರೀಕ ಸಮಾಜ ಜಾಗೃತಿ ಮತ್ತು ಎಚ್ಚರವನ್ನು ವಹಿಸಬೇಕು ಮತ್ತು ಆ ಮೂಲಕ ಜಾತಿ ಹಾಗೂ ಲಿಂಗ ತಾರತಮ್ಯ ನಿವಾರಣೆಯ ಹೋರಾಟಕ್ಕೆ ಬಲವನ್ನು ತುಂಬ ಬೇಕೆಂದು ಸಿಪಿಐಎಂ ಕರೆ ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು