Home ದೇಶ ಲೋಕಸಭೆ ಚುನಾವಣೆ: ಪ್ರಣಾಳಿಕೆ ಬಿಡುಗಡೆ ಮಾಡಿದ ಸಿಪಿಎಂ, UAPA, PMLA ಮತ್ತು CAA ರದ್ದುಪಡಿಸುವುದಾಗಿ ಭರವಸೆ

ಲೋಕಸಭೆ ಚುನಾವಣೆ: ಪ್ರಣಾಳಿಕೆ ಬಿಡುಗಡೆ ಮಾಡಿದ ಸಿಪಿಎಂ, UAPA, PMLA ಮತ್ತು CAA ರದ್ದುಪಡಿಸುವುದಾಗಿ ಭರವಸೆ

0

ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಎಂ) ಗುರುವಾರ ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಮತ್ತು ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಸೇರಿದಂತೆ ಎಲ್ಲಾ ‘ಕಠಿಣ’ ಕಾನೂನುಗಳನ್ನು ರದ್ದು ಮಾಡುವುದಾಗಿ ಭರವಸೆ ನೀಡಿದೆ.

ಪ್ರಣಾಳಿಕೆ ಬಿಡುಗಡೆ ಮಾಡಿದ ಯೆಚೂರಿ, ಕಾರಟ್, ಬಸು

ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಪ್ರಕಾಶ್ ಕಾರಟ್, ಬೃಂದಾ ಕಾರಟ್ ಮತ್ತು ನೀಲೋತ್ಪಲ್ ಬಸು ಅವರು ಪಕ್ಷದ ಇತರ ಸದಸ್ಯರೊಂದಿಗೆ 2024ರ ಲೋಕಸಭೆ ಚುನಾವಣೆಗೆ ಪಕ್ಷದ ಪ್ರಣಾಳಿಕೆಯನ್ನು ಇಂದು ನವದೆಹಲಿಯ ಪಕ್ಷದ ಪ್ರಧಾನ ಕಚೇರಿಯಲ್ಲಿ ಬಿಡುಗಡೆ ಮಾಡಿದರು. ಬಿಜೆಪಿಯನ್ನು ಸೋಲಿಸಲು, ಎಡಪಕ್ಷಗಳನ್ನು ಬಲಪಡಿಸಲು ಮತ್ತು ಕೇಂದ್ರದಲ್ಲಿ ಪರ್ಯಾಯ ಜಾತ್ಯತೀತ ಸರ್ಕಾರ ರಚನೆಯನ್ನು ಖಚಿತಪಡಿಸಿಕೊಳ್ಳಲು ಸಿಪಿಎಂ ಪಕ್ಷಕ್ಕೆ ಮತ ನೀಡುವಂತೆ ಅದು ಮತದಾರರಿಗೆ ಮನವಿ ಮಾಡಿದೆ. ಪಕ್ಷವು ತನ್ನ ಪ್ರಣಾಳಿಕೆಯಲ್ಲಿ, ರಾಜಕೀಯದಿಂದ ಧರ್ಮ ಪ್ರತ್ಯೇಕ ಎಂಬ ತತ್ವಕ್ಕಾಗಿ ಶಕ್ತಿಯುತವಾಗಿ ಹೋರಾಡುವುದಾಗಿ ಭರವಸೆ ನೀಡಿದೆ.

‘ಶ್ರೀಮಂತ ವರ್ಗದವರಿಗೆ ತೆರಿಗೆ ವಿಧಿಸಲಾಗುವುದು’

ಯುಎಪಿಎ ಮತ್ತು ಪಿಎಂಎಲ್ಎಯಂತಹ ಎಲ್ಲಾ ಕಠಿಣ ಕಾನೂನುಗಳನ್ನು ರದ್ದುಗೊಳಿಸುವ ವಿಷಯದಲ್ಲಿ ಸಿಪಿಎಂ ದೃಢವಾಗಿದೆ. ಪೌರತ್ವ (ತಿದ್ದುಪಡಿ) ಕಾಯ್ದೆ, 2019 ಅನ್ನು ರದ್ದುಗೊಳಿಸಲು ಬದ್ಧವಾಗಿರುವುದರ ಜೊತೆಗೆ, ದ್ವೇಷ ಭಾಷಣ ಮತ್ತು ಅಪರಾಧಗಳ ವಿರುದ್ಧ ಕಾನೂನಿಗಾಗಿ ಹೋರಾಡುವುದಾಗಿ ಪಕ್ಷ ಹೇಳಿದೆ. ದೇಶದ ಶ್ರೀಮಂತ ವರ್ಗಕ್ಕೆ ತೆರಿಗೆ ವಿಧಿಸುವುದಾಗಿ ಮತ್ತು ಸಾಮಾನ್ಯ ಸಂಪತ್ತಿನ ತೆರಿಗೆ ಮತ್ತು ಆನುವಂಶಿಕ ಆಸ್ತಿ ತೆರಿಗೆಯ ಬಗ್ಗೆ ಕಾನೂನು ತರುವುದಾಗಿ ಸಿಪಿಎಂ ಭರವಸೆ ನೀಡಿದೆ.

ಪಕ್ಷವು ನಗರ ಉದ್ಯೋಗ ಖಾತ್ರಿ ಕಾನೂನನ್ನು ತರುತ್ತದೆ

ನರೇಗಾ ಯೋಜನೆಗೆ ಬಜೆಟ್ ಹಂಚಿಕೆಯನ್ನು ದ್ವಿಗುಣಗೊಳಿಸಬೇಕು ಮತ್ತು ನಗರ ಉದ್ಯೋಗವನ್ನು ಖಾತರಿಪಡಿಸುವ ಹೊಸ ಕಾನೂನನ್ನು ಜಾರಿಗೊಳಿಸಬೇಕು ಎಂದು ಎಡಪಕ್ಷ ಹೇಳಿದೆ. ದೇಶದ 18ನೇ ಲೋಕಸಭೆಗೆ ಏಪ್ರಿಲ್ 19ರಿಂದ ಚುನಾವಣೆ ಆರಂಭವಾಗಲಿದೆ. ಇದರ ನಂತರ, ಏಪ್ರಿಲ್ 26, ಮೇ 7, 13 ಮೇ, 20 ಮೇ, 25 ಮೇ ಮತ್ತು ಜೂನ್ 1ರಂದು ಇನ್ನೂ ಆರು ಹಂತಗಳಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದೆ.

You cannot copy content of this page

Exit mobile version