ಬೆಂಗಳೂರು: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾನುವಾರ ತೀವ್ರವಾಗಿ ಖಂಡಿಸಿದ್ದು, ‘ಮಾನವೀಯತೆ ಗೆಲ್ಲಲಿ’ ಎಂದು ಆಶಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್ ಅವರು, ಇರಾನ್ನ ಶಾಲೆಯೊಂದರ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯಲ್ಲಿ 80ಕ್ಕೂ ಹೆಚ್ಚು ಶಾಲಾ ಮಕ್ಕಳು ಸಾವನ್ನಪ್ಪಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಈ ಯುದ್ಧ ಸರಿಯಲ್ಲ. ಯಾವುದೇ ತಪ್ಪಿಲ್ಲದ ಶಾಲಾ ಮಕ್ಕಳ ಮೇಲೆ ಏಕೆ ದಾಳಿ ಮಾಡಬೇಕು? ಇದು ಅತ್ಯಂತ ಖಂಡನೀಯ. ದುಬೈ ಮತ್ತು ಮಧ್ಯಪ್ರಾಚ್ಯದ ಇತರ ಭಾಗಗಳಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಿಸುವ ಸಮಯ” ಎಂದು ಅವರು ಹೇಳಿದರು.
ಕನ್ನಡಿಗರು, ಕೇರಳದವರು ಮತ್ತು ಇತರ ರಾಜ್ಯಗಳ ಭಾರತೀಯರನ್ನು ರಕ್ಷಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಮನವಿ ಮಾಡಿದರು.
“ನಮ್ಮ ಶಾಸಕರಾದ ಎ.ಸಿ. ಶ್ರೀನಿವಾಸ, ಭರತ್ ರೆಡ್ಡಿ ಮತ್ತು ಅವರ ಕುಟುಂಬ ಹಾಗೂ ಎಂಎಲ್ಸಿ ಭೋಜೇಗೌಡ ಅವರು ದುಬೈನಲ್ಲಿ ಸಿಲುಕಿಕೊಂಡಿದ್ದಾರೆ,” ಎಂದು ಅವರು ಮಾಹಿತಿ ನೀಡಿದರು.
ಮಧ್ಯಪ್ರಾಚ್ಯದಲ್ಲಿರುವ ಕನ್ನಡ ಸಂಘಟನೆಗಳು ಸಂಕಷ್ಟದಲ್ಲಿರುವವರಿಗೆ ಧೈರ್ಯ ತುಂಬಬೇಕು ಎಂದ ಅವರು, “ವಿಶ್ವದಲ್ಲಿ ಶಾಂತಿ ನೆಲೆಸಬೇಕು. ಯಾವುದೇ ಸಾವು-ನೋವು ಸಂಭವಿಸದಿರಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮಾನವೀಯತೆ ಜಯಿಸಲಿ ಎಂದು ಆಶಿಸುತ್ತೇನೆ. ಗಂಗಾಧರ ಅಜ್ಜಯ್ಯ ಅವರು ಹೇಳಿದಂತೆ ವಿಶ್ವ ಶಾಂತಿ ಕೇವಲ ವಿಶ್ವ ಮಾನವೀಯತೆಯಿಂದ ಮಾತ್ರ ಸಾಧ್ಯ. ಅಮೆರಿಕ ಯುದ್ಧವನ್ನು ನಿಲ್ಲಿಸಬೇಕು. ಇದು ಭಾರತದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು,” ಎಂದು ಎಚ್ಚರಿಸಿದರು.
