Home ಜನ-ಗಣ-ಮನ ಧರ್ಮ- ಸಂಸ್ಕೃತಿ ದೈವ ಪಾತ್ರಿ ಧರ್ಮ ಚಾವಡಿಯ ಒಳ ನುಗ್ಗಿದಾಗ…

ದೈವ ಪಾತ್ರಿ ಧರ್ಮ ಚಾವಡಿಯ ಒಳ ನುಗ್ಗಿದಾಗ…

0

ಸಂತೋಷ ಪ್ರದರ್ಶಿಸಿ, ನರ್ತಿಸುತ್ತಾ  ‘ಧರ್ಮ ಚಾವಡಿ’ ಯ ಮೆಟ್ಟಲು ಬಳಿ ಹೋಗಿ ಚಾವಡಿಯೊಳಗೆ ನುಗ್ಗಿಯೇ ಬಿಡ್ತು ರಾಜನ್ ದೈವ!. ಮುಂದೇನಾಯ್ತು ಓದಿ ಹಿರಿಯ ಸಂಶೋಧಕಿ ಡಾ. ಇಂದಿರಾ ಹೆಗ್ಗಡೆಯವರ ಕ್ಷೇತ್ರ ಕಾರ್ಯದ ಒಂದು ಅನುಭವ.

ನಾನು ಮತ್ತು ನನ್ನ ನಾದಿನಿ ಕಸ್ತೂರಿ ಈ ಸುತ್ತಲ್ಲಿ ಒಂದು ರಾಜ ಗುತ್ತು ಕಡೆ ಹೊರಟೆವು. ನಮ್ಮ ಮಾರುತಿ 800 ಕಾರು ಒಂದು ಗುಡ್ಡದ ಬದಿಯ ರಸ್ತೆಯಲ್ಲಿ ನಿಂತಿತು. ನಮ್ಮ ರಸ್ತೆಯ ಎಡ ಬದಿ ಗುಡ್ಡ. ಮುಂದೆ ಆಳ ಕಣಿವೆ. ಅದರಾಚೆ ಬಲಬದಿಯಲ್ಲಿ  ಗುಡ್ಡ. ಗುಡ್ಡ ಇಳಿದೆವು. ನೇತ್ರಾವತಿ ಬೈಲು ದಾಟಿ ಮತ್ತೆ ಹತ್ತಿದೆವು ಗುಡ್ಡ! ಗುಡ್ಡದ ತುದಿಯಲ್ಲಿ ಗುತ್ತು! ಕೆಳಗಡೆ ಬೈಲು ಗದ್ದೆಗಳು! ಇಡಿಯ ನೇತ್ರಾವತಿಯ ಬೈಲನ್ನು ಒಂದೇ ಕಣ್ಣಳತೆಯಲ್ಲಿ ನೋಡಬಹುದಿಲ್ಲಿ! ಎದುರು ಗುಡ್ಡೆಯಲ್ಲಿ ನಿಂತ ನಮ್ಮ ಕಾರು ಕೂಡಾ ಕಾಣುತ್ತಿತ್ತು!

ಕೆಳಗೆ ಬೈಲಲ್ಲಿ ಗದ್ದೆಗಳು. ಸುಂದರ ನೋಟ!  ನೇತ್ರಾವತಿ ಈ ಬೈಲು ಭೂಮಿಯಲ್ಲಿ ಒಮ್ಮೊಮ್ಮೆ ದೊಡ್ಡ ಸರೋವರ ಸೃಷ್ಟಿಸುತ್ತಾಳೆ. ಈ ಬೈಲು ಭಾಗದಲ್ಲಿ ನೆರೆತುಂಬಿದಾಗ ಇದೇ ಗುಡ್ಡದ ಮೇಲೆ ಅಭೂತಪೂರ್ವ ನೋಟ ಸೆರೆಯಾಗಬಹುದು. ಆದರೆ ರೈತರ ಗದ್ದೆ, ನೇಜಿ, ಹಸು, ಕರು, ಕೋಣ, ಗೊಬ್ಬರ -ಇತ್ಯಾದಿಗಳನ್ನು ರಕ್ಷಿಸುವುದು ಹೇಗೆ?

ಬೈಲನ್ನು ಅಸ್ವಾದಿಸುವುದನ್ನು ಬಿಟ್ಟು ಪ್ರೇಮಕ್ಕಳ ಶಾಖೆಗೆ ಹೋದೆವು. ಪರಂಪರೆಯ ಗುತ್ತುಗಳಲ್ಲಿ ಇರುವಂತೆ ಇಲ್ಲೂ ಹಿರಿ ತಲೆಮಾರುಗಳಲ್ಲಿ ಭಾಗವಾಗಿದ್ದ ಕೆಲವು ಶಾಖೆಗಳಿದ್ದುವು. ಬೂತೊಟ್ಯ ಇದ್ದ ಚಾವಡಿಯಲ್ಲಿ ಕಟ್ಟು ಕಟ್ಟಳೆ ನಿಷೇಧಗಳು ಹೆಚ್ಚು! ಅಂತಹ ನಿಷೇಧಕ್ಕೆ ಸಂಬಂಧ ಪಟ್ಟ ವಿಷಯವನ್ನು  ಹೇಳಿದವರು ಪ್ರೇಮಕ್ಯ.

ಇದು ಧರ್ಮನೇಮ ನಡೆಸಿದ ಮನೆ/ಗುತ್ತು.  ‘ನನಗೆ ಹಾಲು ಕುಡಿಸಿದ ಗುತ್ತು!’ ಎಂದು ಭೂತ/ದೈವಗಳು ಅನೇಕ ಕಡೆ ಹೊಗಳುತ್ತವೆ. ಧರ್ಮ ನೇಮ ಅಂದರೆ ಈ ರಾಜನ್ ದೈವಗಳಿಗೆ ಉಕ್ಕಿಬರುತ್ತದೆ ಉಲ್ಲಾಸ ಸಂತೋಷ. ಧರ್ಮನೇಮದ ಚಪ್ಪರದಡಿಯಲ್ಲಿ ಗಗ್ಗರದೆಚ್ಚಿಯ ಸೊಗಸು, ಪಂಬದೆಚ್ಚಿಯ ಗಾಂಭೀರ್ಯ ಆಗ ನೋಡಬೇಕು! ಸಂತೋಷವನ್ನು ಹೊರಹಾಕುವ ಅರಬಾಟದ ಪರಿಯೂ ಅಪರೂಪ! ಆ ಗಾಂಭೀರ್ಯಕ್ಕೆ ತಲೆಬಾಗಬೇಕು!

ಹೀಗೆ ಆ ಗುತ್ತಿನಲ್ಲಿಯೂ ಒಮ್ಮೆ ಧರ್ಮ ನೇಮ ನಡೆಯಿತು. ಅಂದಿನ ಧರ್ಮನೇಮದಲ್ಲೂ ಪಂಬದೆಚ್ಚಿಯ ನರ್ತನ, ಅರಬಾಟ ಗಾಂಭೀರ್ಯ ಇತ್ತು. ಇಂತಹ ಉಲ್ಲಾಸದ ಅರಬಾಟ ಹೆಚ್ಚಾದಷ್ಟು ಬೂತ/ದೈವಗಳು ಖುಷಿಪಟ್ಟಿವೆ ಎಂದು ತಿಳಿಯಲಾಗುತ್ತದೆ. ಬೂತ ಧರ್ಮ ನೇಮವನ್ನು ಮನತುಂಬಿ ಸ್ವೀಕರಿಸಿದೆ ಎಂದು ಆಗ ಭಾವಿಸಲಾಗತ್ತದೆ. ಅಂದೂ ‘ಪಂಬದೆಚ್ಚಿ’ ಯಲ್ಲಿ ಕುಮ್ಮುಚೆಟ್ಟು ನೆಗೆದು (ಹಾರಿ, ಹಾರಿ) ನರ್ತಿಸುತ್ತದೆ ಈ ಬೂತ! ಹೀಗೆ ಸಂತೋಷ ಪ್ರದರ್ಶಿಸಿ, ನರ್ತಿಸುತ್ತಾ  ‘ಧರ್ಮ ಚಾವಡಿ’ ಯ ಮೆಟ್ಟಲು ಬಳಿ ಹೋಗಿ ಚಾವಡಿಯೊಳಗೆ ನುಗ್ಗಿಯೇ ಬಿಡ್ತು ರಾಜನ್ ದೈವ! ಪಾತ್ರಿ!  ರೆಪ್ಪೆ ಮಿಟುಕಿಸುವುದರೊಳಗೆ ನಡೆದ ಈ ಕಣ್ಣ ಮುಂದಿನ ಘಟನೆ ಕಂಡು ನೆರೆದ ಸಭೆ, ‘ಹೋ…!’ ಎಂದು ಬೊಬ್ಬಿಟ್ಟಿತು- ಮನೆಗೆ ಬೆಂಕಿ ಬಿದ್ದಂತೆ! ಆ ಕ್ಷಣದವರೆಗೆ ಪಂಬದೆಚ್ಚಿಯ ಮುಂದೆ ಕೈಜೋಡಿಸಿ ‘ಶರಣು’ ಎಂದಿದ್ದ ಆ ಚಾವಡಿ ಕುಟುಂಬ ಸದಸ್ಯರ ‘ಪಿಸಿರು’ (ಸಿಟ್ಟು) ನೆತ್ತಿ ಹತ್ತಿತು! ಆಗ ಅವರ ಮುಂದೆ ಕಂಡಿದ್ದು ಪಂಬದ! ಬರೇ ಪಂಬದ! ಎಲ್ಲರ ಕಿರುಚಾಟ ಅಬ್ಬರಕ್ಕೆ ರಾಜನ್ ದೈವ ಹೆದರಿ ಓಡಿತ್ತು!  ಮಾಯೆಯೇ ಹೆದರಿ ಮಾಯೆಗೆ ಸರಿದಿತ್ತು! ಪಂಬದ ಈಗ ರಸ ಹೀರಿದ ಕಬ್ಬು!

ಪಂಬದ ಚಾವಡಿ ಹತ್ತಿ ಆಗಿದೆ. ಮುಂದೆನು!

ಆಗಿನ್ನೂ ಪುರೋಹಿತಶಾಹಿ ಬಂಟರ ಮೇಲೆ ಅಷ್ಟಾಗಿ ಪ್ರಭಾವ ಬೀರಿಲ್ಲ. ಹೀಗಾಗಿ ಬ್ರಾಹ್ಮಣ ಅರ್ಚಕರನ್ನು ಬೂಲ್ಯ ನೀಡಿ ಕರೆಯಲಿಲ್ಲ. ಅವರಿಂದ ಕಲಶ ಪರಿಹಾರ ಮಾಡಿಸಲಿಲ್ಲ.  ಬ್ರಾಹ್ಮಣ ಅರ್ಚಕರೂ ತುಳುವ ಕಟ್ಟು ಕಟ್ಟಲೆಯ ಮಧ್ಯೆ ಪ್ರವೇಶಿಸಲಿಲ್ಲ.ತುಳುವ ಕಟ್ಟು ಕಟ್ಟಳೆಯಂತೆ ಸತ್ಯ/ಧರ್ಮಚಾವಡಿಯ ಎಲ್ಲರನ್ನೂ -ಬೂತಗಳನ್ನು ಮನುಷ್ಯರನ್ನು ಮನೆಯಿಂದ ಹೊರಹಾಕಿದರು ಗಡಿ ಹಿಡಿದ ಗುರಿಕಾರರು. ಮನೆ ಖಾಲಿ ಮಾಡಿದರು. ಮನೆಯನ್ನು ಒಂದು ತಿಂಗಳು ಖಾಲಿ ಬಿಟ್ಟರು. ಒಂದು ತಿಂಗಳು ಧರ್ಮ ಚಾವಡಿಯ ಒಲೆ ಉರಿಯಲಿಲ್ಲ, ಹೊಗೆ ಏಳಲಿಲ್ಲ. ಒಂದು ತಿಂಗಳ ಬಳಿಕ ಮನೆಗೆ ಸುಣ್ಣ ಬಣ್ಣ ಮಾಡಿ ಮನೆ ಮಂದಿಯನ್ನೂ ಸಂಸಾರದ ನಡುವೆ ಇರಬೇಕಾಗಿದ್ದ ಬೂತಗಳನ್ನೂ ಮತ್ತೆ ಚಾವಡಿಗೆ ತಂದು ನಂಬಿದರು!

(ಕ್ಷೇತ್ರ ಕಾರ್ಯದಲ್ಲಿ ಕಂಡಿದ್ದು, ಕೇಳಿದ್ದು)

ಡಾ. ಇಂದಿರಾ ಹೆಗ್ಗಡೆ
ಹಿರಿಯ ಸಂಶೋಧಕರು, ಲೇಖಕರು.

You cannot copy content of this page

Exit mobile version